ಹೊಸದಿಲ್ಲಿ: ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ನೀಡುವ ಪ್ರದರ್ಶನವು ಭಾರತ ತಂಡದಲ್ಲಿ ಮುಂದುವರಿಯುತ್ತಾರೆಯೇ ಅಥವಾ ಇಲ್ಲವೇ ಎಂಬುದನ್ನು ನಿರ್ಧರಿಸಲಿದೆ ಎಂದು ಆಸ್ಟ್ರೇಲಿಯಾದ ಮಾಜಿ ಆಲ್ರೌಂಡರ್ ಹೇಳಿದ್ದಾರೆ. ಮಾರ್ಚ್ 29ರಿಂದ ಮೇ 24ರವರೆಗೆ ನಡೆಯ ಬೇಕಿದ್ದ ಐಪಿಎಲ್ 2020 ಟೂರ್ನಿಯನ್ನು ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಬಿಸಿಸಿಐ ತನ್ನ ಮುಂದಿನ ಆದೇಶದ ವರೆಗೆ ರದ್ದು ಪಡಿಸಿತ್ತು. ಇದರೊಂದಿಗೆ ಐಪಿಎಲ್ ಮೂಲಕ ಸ್ಪರ್ಧಾತ್ಮಕ ಕ್ರಿಕೆಟ್ಗೆ ಕಮ್ಬ್ಯಾಕ್ ಮಾಡುವುದನ್ನು ಎದುರು ನೋಡುತ್ತಿದ್ದ ಭಾರತ ತಂಡದ ಮಾಜಿ ನಾಯಕ ಎಂಎಸ್ ಧೋನಿ ಅವರ ಭವಿಷ್ಯ ಕೂಡ ಅತಂತ್ರವಾಗಿತ್ತು. ಕಳೆದ ವರ್ಷ ಇಂಗ್ಲೆಂಡ್ ಮತ್ತು ವೇಲ್ಸ್ ಆತಿಥ್ಯದಲ್ಲಿ ನಡೆದ ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡ ನ್ಯೂಜಿಲೆಂಡ್ ವಿರುದ್ಧ ಸೆಮಿಫೈನಲ್ನಲ್ಲಿ ಮುಗ್ಗರಿಸಿತ್ತು. ಅಂದು ಕ್ರಿಕೆಟ್ ಲೋಕದಿಂದ ಕಣ್ಮರೆಯಾದ ಧೋನಿ ಈವರೆಗೆ ಅಂಗಣದಲ್ಲಿ ಕಾಣಿಸಿಕೊಂಡಿಲ್ಲ. ಆದರೆ, ಐಪಿಎಲ್ ಆಡುವ ಮೂಲಕ ತಮ್ಮ ಫಿಟ್ನೆಸ್ ಸಾಬೀತು ಪಡಿಸಿ ಮುಂಬರುವ ಟಿ20 ವಿಶ್ವಕಪ್ ಆಡುವ ಲೆಕ್ಕಾಚಾರ ಹೊಂದಿದ್ದರು. ಆದರೀಗ ವಿಶ್ವಕಪ್ ಟೂರ್ನಿಯನ್ನು 2022ಕ್ಕೆ ಮುಂದೂಡಲಾಗಿದ್ದು ಆ ಅವಧಿಯಲ್ಲಿ ಐಪಿಎಲ್ ಟೂರ್ನಿ ನಡೆಯಲಿದೆ. ಹೀಗಾಗಿ 2021ರಲ್ಲಿ ಭಾರತದ ಆತಿಥ್ಯದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಟೀಮ್ ಇಂಡಿಯಾ ಪರ ಧೋನಿ ಆಡಬೇಕಾದರೆ ಈ ಬಾರಿಯ ಐಪಿಎಲ್ ಮತ್ತು 2021ರ ಐಪಿಎಲ್ ಟೂರ್ನಿಗಳಲ್ಲಿ ನೀಡುವ ಪ್ರದರ್ಶನ ನಿರ್ಣಾಯಕ ಆಗಲಿವೆ. "ಸದ್ಯಕ್ಕೆ ಟೀಮ್ ಇಂಡಿಯಾ ಸೆಲೆಕ್ಟರ್ಸ್ ರಿಷಭ್ ಪಂತ್ ಮತ್ತು ಕೆಎಲ್ ರಾಹುಲ್ ಅವರನ್ನು ವಿಕೆಟ್ಕೀಪರ್ ಬ್ಯಾಟ್ಸ್ಮನ್ ಸ್ಥಾನಕ್ಕೆ ನೆಚ್ಚಿಕೊಂಡಿದ್ದಾರೆ. ಒಂದು ವೇಳೆ ಧೋನಿ ಐಪಿಎಲ್ನಲ್ಲಿ ಭರ್ಜರಿ ಪ್ರದರ್ಶನ ನೀಡಿದರೆ ಮಾತ್ರವೇ ಅವರಿಗೆ ಟೀಮ್ ಇಂಡಿಯಾ ಬಾಗಿಲು ತೆರೆಯಲಿದೆ. ಇಲ್ಲವಾದರೆ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಮರಳಲು ಅವರಿಗೆ ಎಲ್ಲ ಬಾಗಿಲು ಮುಚ್ಚಿದಂತೆ. ಅಂದಹಾಗೆ ಕೊರೊನಾ ವೈರಸ್ ಕಾರಣ ಕ್ರಿಕೆಟ್ಗೆ ದೀರ್ಘಕಾಲದ ವಿರಾಮ ಬಿದ್ದಿದ್ದು, ಇದರ ಸಂಪೂರ್ಣ ಲಾಭ ಪಡೆದು ಫಿಟ್ನೆಸ್ ಗಳಿಸಲು ಧೋನಿಗೆ ಸಾಧ್ಯವಾಗಿದೆ. ಆದರೆ, 40ರ ವಯಸ್ಸಿನಲ್ಲಿ ಕಮ್ಬ್ಯಾಕ್ ಮಾಡುವುದು ಸುಲಭವಲ್ಲ," ಎಂದು ಡೀನ್ ಜೋನ್ಸ್ ಟೈಮ್ಸ್ ಆಫ್ ಇಂಡಿಯಾಗೆ ಹೇಳಿದ್ದಾರೆ. ಧೋನಿ ಅನುಪಸ್ಥಿತಿಯಲ್ಲಿ ರಿಷಭ್ ಪಂತ್ ಮತ್ತು ಕೆಎಲ್ ರಾಹುಲ್ ಭಾರತ ತಂಡದ ಪರ ಹೆಚ್ಚು ಕೀಪಿಂಗ್ ಜವಾಬ್ದಾರಿ ನಿಭಾಯಿಸಿದ್ದಾರೆ. ಅದರಲ್ಲೂ ಪಂತ್ ತಮಗೆ ಸಿಕ್ಕ ಅವಕಾಶಗಳಲ್ಲಿ ಸ್ಥಿರ ಪ್ರದರ್ಶನ ನೀಡಲಾಗದೆ ಪ್ಲೇಯಿಂಗ್ ಇಲೆವೆನ್ನಲ್ಲಿ ಸ್ಥಾನ ಕಳೆದುಕೊಂಡಿದ್ದು, ಒಡಿಐ ಮತ್ತು ಟಿ20-ಐಗೆ ಕೆಎಲ್ ರಾಹುಲ್ ನೂತನ ಕೀಪರ್ ಆಗಿ ಹೊರಹೊಮ್ಮಿದ್ದಾರೆ. "ಎಂಎಸ್ ಧೋನಿ ಸೂಪರ್ ಸ್ಟಾರ್ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ. ಇಂತಹ ಶ್ರೇಷ್ಠ ಆಟಗಾರರೊಗೆ ಅವರಿಚ್ಛೆಯಂತೆ ಆಡಲು ಬಿಡಬೇಕು. ಈಗ ವಿಕೆಟ್ ಕೀಪಿಂಗ್ ಸಲುವಾಗಿ ಕೆಎಲ್ ರಾಹುಲ್ ಮತ್ತು ಪಂತ್ ಕಡೆಗೆ ಹೆಚ್ಚು ಒಲವಿರಬಹುದು. ಆದರೆ, ಟೀಮ್ ಇಂಡಿಯಾಗೆ ಬೇಕಿರುವುದು ಫಿನಿಷರ್. ಅಂದಹಾಗೆ ಆ ಫಿನಿಷರ್ ಯಾರು? ಹಾರ್ದಿಕ್ ಪಾಂಡ್ಯ ಅವರಲ್ಲಿ ಆ ಫಿನಿಷರ್ ಆಗುವ ಸಾಮರ್ಥ್ಯವಿದೆ," ಎಂದು ಜೋನ್ಸ್ ಅಭಿಪ್ರಾಯ ಪಟ್ಟಿದ್ದಾರೆ. ಹದಿಮೂರನೇ ಆವೃತ್ತಿಯ ಐಪಿಎಲ್ ಟೂರ್ನಿಯು ಸೆಪ್ಟೆಂಬರ್ 19ರಿಂದ ನವೆಂಬರ್ 8ರವರೆಗೆ 51 ದಿನಗಳ ಕಾಲ ಯುಎಇ ಅಂಗಣದಲ್ಲಿ ನಡೆಯುವುದು ಖಾತ್ರಿಯಾಗಿದೆ. ಎಲ್ಲ ಫ್ರಾಂಚೈಸಿ ತಂಡಗಳು ಆಗಸ್ಟ್ 20ರಿಂದ ತಮ್ಮ ಶಿಬಿರ ಆರಂಭಿಸಲಿವೆ.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2BwY0fC