ಹೊಸದಿಲ್ಲಿ: ಕನ್ನಡಿಗರ ಹೆಮ್ಮೆ ಭಾರತ ತಂಡದ ಮಾಜಿ ನಾಯಕ ಅನಿಲ್ ಕುಂಬ್ಳೆ ಈಗಲೂ ಕೂಡ ಟೆಸ್ಟ್ ಕ್ರಿಕೆಟ್ ಮತ್ತು ಏಕದಿನ ಕ್ರಿಕೆಟ್ನಲ್ಲಿ ಟೀಮ್ ಇಂಡಿಯಾ ಪರ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ದಾರೆ. ಏಕದಿನದಲ್ಲಿ 271 ಪಂದ್ಯಗಳಲ್ಲಿ 337 ವಿಕೆಟ್ ಮತ್ತು 139 ಟೆಸ್ಟ್ಗಳಲ್ಲಿ 619 ವಿಕೆಟ್ಗಳನ್ನು ಪಡೆದ ಹೆಗ್ಗಳಿಕೆ 'ಜಂಬೋ' ಖ್ಯಾತಿಯ ಮಾಜಿ ಲೆಗ್ಸ್ಪಿನ್ನರ್ ಅವರದ್ದು. ಇನ್ನು ಟೆಸ್ಟ್ ಕ್ರಿಕೆಟ್ನ ಇನಿಂಗ್ಸ್ ಒಂದರಲ್ಲಿ 10 ವಿಕೆಟ್ಗಳನ್ನು ಪಡೆದ ಭಾರತದ ಏಕಮಾತ್ರ ಬೌಲರ್ ಅನಿಲ್. ಪಾಕಿಸ್ತಾನ ವಿರುದ್ಧ ದಿಲ್ಲಿಯ ಫಿರೋಝ್ ಶಾ ಕೋಟ್ಲಾ ಕ್ರೀಡಾಂಗಣದಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಇನಿಂಗ್ಸ್ನ ಎಲ್ಲಾ ವಿಕೆಟ್ಗಳನ್ನು ಕಿತ್ತು ಟೆಸ್ಟ್ನಲ್ಲಿ ಈ ಸಾಧನೆ ಮಾಡಿದ ವಿಶ್ವದ ಎರಡನೇ ಬೌಲರ್ ಎನಿಸಿಕೊಂಡಿದ್ದರು. ಅಂದಹಾಗೆ ಕುಂಬ್ಳೆಗೆ ಯಾರಾದರು ಬ್ಯಾಟ್ಸ್ಮನ್ ಕಾಡಿದ್ದರೆ? ಜಿಂಬಾಬ್ವೆಯ ಮಾಜಿ ಕ್ರಿಕೆಟಿಗ ಪಾಮಿ ಎಂಬಾಂಗ್ವಾ ಇನ್ಸ್ಟಾಗ್ರಾಮ್ ಲೈವ್ ಸಂದರ್ಶನದ ವೇಳೆ ಕುಂಬ್ಳೆ ಅವರನ್ನು ಈ ಪ್ರಶ್ನೆ ಕೇಳಿದ್ದರು. ಇದಕ್ಕೆ ಕುಂಬ್ಳೆ ನೀಡಿದ ಉತ್ತರ ಕೂಡ ಬಹಳ ಆಸಕ್ತಿಕರವಾಗಿತ್ತು. ಟೀಮ್ ಇಂಡಿಯಾದಲ್ಲಿ ಕುಂಬ್ಳೆ ಸಮಕಾಲೀನರಾಗಿ ವಿಶ್ವ ಕ್ರಿಕೆಟ್ನ ದಿಗ್ಗಜ ಬ್ಯಾಟ್ಸ್ಮನ್ಗಳ ದಂಡೇ ಇದಿದ್ದರಿಂದ, ನೆಟ್ಸ್ನಲ್ಲಿ ಅವರೆದುರು ಬೌಲಿಂಗ್ ಮಾಡಿ ಬಹುದೊಡ್ಡ ಲಾಭ ಪಡೆದುಕೊಂಡಿದ್ದಾಗಿ ಹೇಳಿಕೊಂಡಿದ್ದಾರೆ. "ನಾನು ಬೌಲಿಂಗ್ ಮಾಡಲು ಕಷ್ಟಪಟ್ಟಂತಹ ಬ್ಯಾಟ್ಸ್ಮನ್ಗಳು ಇದ್ದಾರೆ. ಆದರೆ ಆ ಕಾಲದ ಶ್ರೇಷ್ಠ ಬ್ಯಾಟ್ಸ್ಮನ್ಗಳು ಬಹುಪಾಲು ನಮ್ಮ ತಂಡದಲ್ಲೇ ಇದ್ದರು. ಸಚಿನ್ ತೆಂಡೂಲ್ಕರ್, ಸೌರವ್ ಗಂಗೂಲಿ, , ವಿವಿಎಸ್ ಲಕ್ಷ್ಮಣ್ ಮತ್ತು ವೀರೇಂದ್ರ ಸೆಹ್ವಾಗ್ ಇವರೆಲ್ಲರ ಎದುರು ನೆಟ್ಸ್ನಲ್ಲಿ ಬೌಲಿಂಗ್ ಮಾಡಿದ್ದೇನೆ. ಬಳಿಕ ಈ ಆಟಗಾರರ ಎದುರು ಮ್ಯಾಚ್ನಲ್ಲಿ ಬೌಲಿಂಗ್ ಮಾಡುವಂತಿಲ್ಲ ಎಂದು ನಿಟ್ಟುಸಿರು ಬಿಟ್ಟಿದ್ದೇನೆ," ಎಂದು ಟೀಮ್ ಇಂಡಿಯಾ ನೆಟ್ಸ್ನಲ್ಲಿ ದಿಗ್ಗಜರೆದುರು ಬೌಲಿಂಗ್ ಮಾಡಿ ಪಡೆದಂತಹ ಅನುಭವವನ್ನು ಕುಂಬ್ಳೆ ಹಂಚಿಕೊಂಡಿದ್ದಾರೆ. ಇದೇ ವೇಳೆ ತಮ್ಮನ್ನು ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಕಾಡಿದ ಬ್ಯಾಟ್ಸ್ಮನ್ ಆಗಿ ವೆಸ್ಟ್ ಇಂಡೀಸ್ನ ಮಾಜಿ ನಾಯಕ ಬ್ರಿಯಾನ್ ಲಾರಾ ಅವರನ್ನು ಕುಂಬ್ಳೆ ಹೆಸರಿಸಿದ್ದಾರೆ. "ಟೀಮ್ ಇಂಡಿಯಾ ನೆಟ್ಸ್ನಲ್ಲಿ ಸಿಗುವ ಅನುಭವ ವಿಶೇಷವಾದದ್ದು. ಅಂದಹಾಗೆ ವಿಶ್ವ ಕ್ರಿಕೆಟ್ನಲ್ಲಿ ಹಲವು ಬ್ಯಾಟ್ಸ್ಮನ್ಗಳ ಎದುರು ಬೌಲಿಂಗ್ ಮಾಡುವುದು ಕಷ್ಟವಾಗಿತ್ತು. ಬ್ರಿಯಾನ್ ಲಾರಾ ಅವರಲ್ಲಿ ಅಗ್ರಗಣ್ಯರು. ಒಂದೇ ರೀತಿಯ ಎಸೆತಕ್ಕೆ ಅವರ ಬಳಿ ನಾಲ್ಕು ಬಗೆಯೆ ಹೊಡೆತಗಳಿರುತ್ತಿತ್ತು. ಹೀಗಾಗಿ ಅವರಿಗೆ ಬೌಲಿಂಗ್ ಮಾಡುವುದು ಬಹಳ ಸವಾಲಿನ ಸಂಗತಿ. ಆತನನ್ನು ಮುಂದಿನ ಎಸೆತದಲ್ಲಿ ಔಟ್ ಮಾಡಬಲ್ಲೆ ಎಂದು ಬೌಲಿಂಗ್ ಮಾಡಿದ್ದರೆ ತಮ್ಮ ಹೊಡೆತ ಬದಲಾಯಿಸಿ ಬೇರೆ ವಿಭಾಗದಲ್ಲಿ ರನ್ ಗಳಿಸಿರುತ್ತಿದ್ದರು," ಎಂದು ವಿವರಿಸಿದ್ದಾರೆ. ಅನಿಲ್, 2007ರಿಂದ 2008ರವರೆಗೆ ಭಾರತ ತಂಡದ ನಾಯಕನಾಗಿಯೂ ಮಿಂಚಿದ್ದಾರೆ. 2016ರಲ್ಲಿ ಟೀಮ್ ಇಂಡಿಯಾದ ಮುಖ್ಯ ಕೋಚ್ ಹುದ್ದೆ ಕೂಡ ಪಡೆದಿದ್ದ ಅನಿಲ್, ಕ್ಯಾಪ್ಟನ್ ವಿರಾಟ್ ಕೊಹ್ಲಿ ಜೊತೆಗಿನ ಭಿನ್ನಾಭಿಪ್ರಾಯಗಳ ಕಾರಣ 2017ರಲ್ಲಿ ಟೀಮ್ ಇಂಡಿಯಾ ಚಾಂಪಿಯನ್ಸ್ ಟ್ರೋಫಿ ಫೈನಲ್ನಲ್ಲಿ ಪಾಕಿಸ್ತಾನ ವಿರುದ್ಧ ಸೋತ ನಂತರ ಕೋಚ್ ಸ್ಥಾನದಿಂದ ಕೆಳಗಿಳಿದಿದ್ದರು.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3hDMHSg