ಟಿ.ಶಿವರಾಜ್ ರಾಮನಗರ ಭೀತಿ ರಾಜ್ಯದಲ್ಲಿ ರೋಗ ಉಲ್ಬಣಕ್ಕೆ ಕಾರಣವಾಗುವ ಅಪಾಯ ಸೃಷ್ಟಿಸಿದೆ. ಕೊರೊನಾ ಮತ್ತು ಕ್ಷಯ ರೋಗಗಳ ಪ್ರಾಥಮಿಕ ಲಕ್ಷಣಗಳು ಒಂದೇ ರೀತಿ ಇರುವುದರಿಂದ ಕ್ಷಯದ ಸೋಂಕಿಗೆ ಒಳಗಾದವರು ಕಫ ಪರೀಕ್ಷೆಗೆ ಹಿಂದೇಟು ಹಾಕುತ್ತಿದ್ದಾರೆ. ತಮ್ಮನ್ನು ಕೊರೊನಾ ಸೋಂಕಿತರು ಎಂದು ಕೋವಿಡ್ ಚಿಕಿತ್ಸಾ ಕೇಂದ್ರಕ್ಕೆ ಸ್ಥಳಾಂತರಿಸಬಹುದು ಇಲ್ಲವೇ ಕ್ವಾರಂಟೈನ್ಗೆ ಒಳಪಡಿಸಬಹುದು. ಹೀಗಾದರೆ ಒಂದು ರೀತಿಯ ಸಾಮಾಜಿಕ ಬಹಿಷ್ಕಾರಕ್ಕೆ ಒಳಗಾಗಬೇಕಾಗುತ್ತದೆ ಎಂಬ ಅಜ್ಞಾನ ಇದಕ್ಕೆ ಕಾರಣ. ಇದರಿಂದ ಕ್ಷಯದ ಸೋಂಕಿಗೆ ಒಳಗಾದವರು ಪರೀಕ್ಷೆ ಮಾಡಿಸಿಕೊಂಡು ಚಿಕಿತ್ಸೆ ಪಡೆಯುವ ಬದಲು ಮನೆಯಲ್ಲೇ ನರಳಾಡುತ್ತಿರುವ ಪ್ರಸಂಗಗಳು ನಡೆಯುತ್ತಿವೆ. ಹಾಗಾಗಿ ಆಶಾ ಕಾರ್ಯಕರ್ತೆಯರ ಮೂಲಕ ಮನೆಮನೆ ಸರ್ವೆ ಮಾಡಿಸುವುದಾಗಿ ಸರಕಾರ ಹೇಳುತ್ತಿದೆಯಾದರೂ ಲಕ್ಷಣ ಇರುವವರು ತಪಾಸಣೆಗಾಗಿ ಆಸ್ಪತ್ರೆಗೆ ಬರದೇ ಕ್ಷಯ ರೋಗಿಗಳನ್ನು ಪತ್ತೆ ಹಚ್ಚಲು ಸರಕಾರದ ಬಳಿ ಸೂಕ್ತ ಸೌಲಭ್ಯವಿಲ್ಲದಿರುವುದು ಆತಂಕ ಮೂಡಿಸಿದೆ. ರಾಜ್ಯಕ್ಕೆ ಒಂದೇ ಸಂಚಾರಿ ಪ್ರಯೋಗಾಲಯ ಕ್ಷಯ ರೋಗ ನಿರ್ಮೂಲನೆ ಉದ್ದೇಶದಿಂದ ಸರಕಾರವು ಕ್ಷಯ ರೋಗ ಪತ್ತೆ ಮಾಡುವ ಸಿಬಿನಾಟ್ ಸ್ಕ್ಯಾನಿಂಗ್ ಯಂತ್ರವನ್ನು ರಾಜ್ಯದ ಎಲ್ಲಜಿಲ್ಲಾಸ್ಪತ್ರೆಗಳಿಗೂ ಪೂರೈಸಿದೆ. ಜಿಲ್ಲಾಸ್ಪತ್ರೆಗೆ ಬರಲು ಕಷ್ಟವಾಗುವ ಹಾಗೂ ಆಸ್ಪತ್ರೆಗಳ ಮೆಟ್ಟಿಲನ್ನೇ ಹತ್ತಲು ಇಷ್ಟಪಡದ ಜನರನ್ನು ಕ್ಷಯ ರೋಗ ತಪಾಸಣೆಗೆ ಒಳಪಡಿಸಲು ಒಂದು ಸಂಚಾರಿ ಪ್ರಯೋಗಾಲಯವನ್ನು ಆರಂಭಿಸಿದೆ. ಈ ಪ್ರಯೋಗಾಲಯ ಪ್ರತಿ ತಿಂಗಳೂ ಒಂದೊಂದು ಜಿಲ್ಲೆಯಾದ್ಯಂತ ಸುತ್ತಾಡಿ ಕ್ಷಯ ರೋಗಿಗಳನ್ನು ಪತ್ತೆ ಹಚ್ಚುತ್ತಿದೆ. ಸಂಚಾರಿ ಪ್ರಯೋಗಾಲಯ ಇದೇ ಮೇನಲ್ಲಿ ರಾಮನಗರ ಜಿಲ್ಲೆಯ ಗ್ರಾಮೀಣ ಭಾಗದ ಮನೆಮನೆಗೆ ತೆರಳಿ ಪರೀಕ್ಷೆಗಳನ್ನು ನಡೆಸಿ, ಜಿಲ್ಲೆಯಲ್ಲಿ 101 ಕ್ಷಯ ರೋಗಿಗಳನ್ನು ಪತ್ತೆ ಹಚ್ಚಿತ್ತು. ಈ ಸಂಚಾರಿ ಪ್ರಯೋಗಾಲಯ ಇನ್ನೊಮ್ಮೆ ಜಿಲ್ಲೆಗೆ ಬರಲು ಎರಡೂವರೆ ವರ್ಷ ಬೇಕು. ಇದು ರಾಮನಗರ ಜಿಲ್ಲೆಯೊಂದರ ಕತೆಯಲ್ಲ. ರಾಜ್ಯದ ಎಲ್ಲ ಜಿಲ್ಲೆಗಳ ಹಣೆ ಬರಹವೂ ಇದೆ ಆಗಿದೆ. ಆದ್ದರಿಂದ ಕ್ಷಯ ರೋಗ ಉಲ್ಬಣಿಸುವ ಅಪಾಯ ಎದುರಾಗಿದೆ. ಜೀವಕ್ಕೆ ಅಪಾಯಕಾರಿ ಕ್ಷಯವು 'ಮೈಕೊ ಬ್ಯಾಕ್ಟೀರಿಯಮ್ ಟ್ಯುಬರ್ಕ್ಯುಲೋಸಿಸ್' ಎಂಬ ರೋಗಾಣುವಿನಿಂದ ಬರುತ್ತದೆ. ಕ್ಷಯ ಕೂಡ ಸಾಂಕ್ರಾಮಿಕ ರೋಗವಾಗಿದ್ದು, ರೋಗಿಯು ಕೆಮ್ಮಿದಾಗ ಅಥವಾ ಸೀನಿದಾಗ ಮೂಗು ಹಾಗೂ ಬಾಯಿಯಿಂದ ಸಿಡಿದ ಕಣಗಳೊಂದಿಗೆ ಹೊರ ಬರುವ ವೈರಾಣುಗಳು ಎದುರಿಗೆ ಸಿಗುವ ವ್ಯಕ್ತಿಯ ಬಾಯಿ, ಮೂಗಿನ ಮೂಲಕ ದೇಹ ಪ್ರವೇಶಿಸುತ್ತದೆ. ಕ್ಷಯದ ವೈರಾಣುಗಳು ಗಾಳಿಯಲ್ಲಿಯೇ ಸುಮಾರು 43 ನಿಮಿಷದವರೆಗೆ ಇರುತ್ತದೆ. ಎರಡು ವಾರಕ್ಕಿಂತ ಹೆಚ್ಚು ಅವಧಿಯ ಕೆಮ್ಮು, ರಾತ್ರಿ ವೇಳೆ ಜ್ವರ, ಬೆವರುವುದು, ಕಫದಲ್ಲಿ ರಕ್ತ, ಎದೆನೋವು, ಹಸಿವಾಗದೆ ಇರುವುದು, ತೂಕ ಇಳಿಕೆಯಾಗುವುದು ಕ್ಷಯ ರೋಗದ ಲಕ್ಷಣಗಳು. ರಕ್ತಹೀನತೆ, ಮಧುಮೇಹ, ಡಯಾಲಿಸಿಸ್ಗೆ ಒಳಪಡುವವರು, ಎಚ್ಐವಿ ಸೋಂಕಿತರು ಮೊದಲಾದ ದುರ್ಬಲ ರೋಗನಿರೋಧಕ ಶಕ್ತಿ ಇರುವವರಿಗೆ ಬಹುಬೇಗ ತಗುಲು ಪ್ರಾಣ ಕಳೆದುಕೊಳ್ಳಲು ಕಾರಣವಾಗುತ್ತದೆ. ಭಯ ಬೇಡ, ಚಿಕಿತ್ಸೆಗೆ ಬನ್ನಿ ರಾಜ್ಯದ ಎಲ್ಲ ಜಿಲ್ಲಾಸ್ಪತ್ರೆಗಳು, ವೈದ್ಯಕೀಯ ಕಾಲೇಜು ಆಸ್ಪತ್ರೆಗಳಲ್ಲಿಕ್ಷಯ ರೋಗ ಪತ್ತೆ ಸೌಲಭ್ಯವಿದೆ. ರೋಗ ಪರೀಕ್ಷೆ ಹಾಗೂ ಚಿಕಿತ್ಸೆ ಸಂಪೂರ್ಣ ಉಚಿತ. ಜತೆಗೆ ರೋಗಿ ಪೌಷ್ಟಿಕ ಆಹಾರ ಸೇವಿಸಲೆಂದೇ ಮಾಸಿಕ 500 ರೂ. ಧನ ಸಹಾಯವೂ ಲಭ್ಯವಿದೆ. ಆದ್ದರಿಂದ, ಆರೋಗ್ಯ ತೊಂದರೆ ಇರುವವರು ಭಯಬಿಟ್ಟು ಪರೀಕ್ಷೆ ಒಳಪಡಬೇಕಾಗಿದೆ. ಈ ಬಗ್ಗೆ ಜನರಲ್ಲಿಜಾಗೃತಿ ಮೂಡಿಸುವ ಕೆಲಸ ಆಗಬೇಕಿದೆ. ಕ್ಷಯ ರೋಗಿಗಳು ಈಗ ಆಸ್ಪತ್ರೆಗೆ ಬರುತ್ತಿಲ್ಲ. ಹೀಗಾಗಿ ಆಶಾ ಕಾರ್ಯಕರ್ತೆಯರ ಮೂಲಕ ಮನೆಮನೆ ಸರ್ವೆ ಮಾಡಿಸಿ, ಟಿಬಿ ಲಕ್ಷಣ ಇರುವವರಿಗೆ ಸಿಬಿನಾಟ್ ಮೂಲಕ ಪರೀಕ್ಷೆ ನಡೆಸಲಾಗುವುದು. ಸಂಚಾರಿ ಲ್ಯಾಬ್ ವಾಹನ ರಾಜ್ಯದಲ್ಲಿಒಂದೇ ಇದೆ. ಹೆಚ್ಚಿನ ವಾಹನ ನೀಡುವಂತೆ ಸಿಟಿಡಿಗೆ ಮನವಿ ಮಾಡಿದ್ದೇವೆ. - ರಮೇಶ್ ಚಂದ್ರರೆಡ್ಡಿ, ಜಂಟಿ ನಿದೇರ್ಶಕ, ರಾಜ್ಯ ಕ್ಷಯ ರೋಗ ನಿಯಂತ್ರಣ ಕೇಂದ್ರ, ಬೆಂಗಳೂರು
from India & World News in Kannada | VK Polls https://ift.tt/32Yudrd