ಎಪಿಜೆ ಅಬ್ದುಲ್‌ ಕಲಾಂರ 5ನೇ ಪುಣ್ಯತಿಥಿ; 'ಮಿಸೈಲ್‌ ಮ್ಯಾನ್‌' ಎಂಬ ದೈತ್ಯವನ್ನು ನೆನೆಯದಿರಲಾದೀತೆ?

ಹೊಸದಿಲ್ಲಿ: ಡಾ. ಎ.ಪಿ.ಜೆ. .. ಈ ಹೆಸರು ಕೇಳಿದ ತಕ್ಷಣ ಸಣ್ಣ ಪುಟಾಣಿಗಳಿಂದ ಹಿಡಿದು ದೊಡ್ಡವರ ತನಕ ಗೌರವದ ಭಾವನೆ ಮೂಡುತ್ತೆ. ಭಾರತ ಕಂಡ ಮಹಾನ್ ವಿಜ್ಞಾನಿ, ದೇಶದ ರಾಷ್ಟ್ರಪತಿಯಾಗಿದ್ದ ಕಲಾಂ ಮಕ್ಕಳ ಅಚ್ಚುಮೆಚ್ಚಿನ ತಾತ..! ಮಗುವಿನ ಹೃದಯದ ಈ ಶ್ರೇಷ್ಟ ವ್ಯಕ್ತಿತ್ವ ತನ್ನ ದೇಹವನ್ನು ತ್ಯಜಿಸಿ ಇವತ್ತಿಗೆ ಐದು ವರ್ಷ. ಇಡೀ ದೇಶವೇ ಇಷ್ಟಪಡುವ ಕಲಾಂ ಸಾಹೇಬರನ್ನು ಈ ದಿನ ನೆನಪಿಸಿಕೊಳ್ಳಬೇಕಾದ್ದು ನಮ್ಮ ಕರ್ತವ್ಯವೂ ಹೌದು. ‘ಮಕ್ಕಳೇ ಕನಸು ಕಾಣಿರಿ’ ಅನ್ನುವ ಅದ್ಭುತವಾದ ಸಂದೇಶವನ್ನು ಕೊಟ್ಟಂತಹ ಅಬ್ದುಲ್ ಕಲಾಂ ಅವರು ಮಕ್ಕಳ ಪಾಲಿನ ಪ್ರೇರಣೆಯೂ ಹೌದು. ತನ್ನೊಳಗೆ ಸದಾ ಮಗುವಿನ ಮನಸ್ಸನ್ನು ಜೀವಂತವಾಗಿರಿಸುತ್ತಿದ್ದ ಕಲಾಂ, ‘ಮಕ್ಕಳು ಸಣ್ಣವರಿರೋವಾಗ ನಾಣು ವಿಜ್ಞಾನಿಯಾಗುತ್ತೇನೆ ಎಂದು ಹೇಳುತ್ತಾರೆ. ಆದರೆ ಎಷ್ಟು ಜನ ವಿಜ್ಞಾನಿಗಳಲ್ಲಿ ಮಗುವಿನ ಮನಸ್ಸಿರುತ್ತದೆ’ ಎಂದು ಹೇಳಿ ವಿಜ್ಞಾನಿಗಳನ್ನೇ ಜಿಜ್ಞಾಸೆಗೆ ಒಡ್ಡಿದವರು. ಸಾಮಾನ್ಯ ಕುಟುಂಬವೊಂದರಲ್ಲಿ ಜನಿಸಿ ಶ್ರದ್ಧೆ ಮತ್ತು ಏಕಾಗ್ರತೆಯ ಕಲಿಕೆಯಿಂದ ಅತ್ಯುನ್ನತ ಸ್ಥಾನ ತಲುಪಿದ ಅಣ್ವಸ್ತ್ರ ಪರೀಕ್ಷೆಯ ರೂವಾರಿಗಳಲ್ಲೊಬ್ಬರಾದ ಇವರು ಮಿಸೈಲ್‌ ಮ್ಯಾನ್ ಎಂದೇ ಪ್ರಖ್ಯಾತಿ. 2015 ಜುಲೈ 27ರಂದು ತನ್ನ 84ನೇ ವಯಸ್ಸಿನಲ್ಲಿ ಮರಣವನ್ನಪ್ಪಿದ ಅಬ್ದುಲ್‌ ಕಲಾಂ, ಅಕ್ಟೋಬರ್‌ 15, 1931 ರಂದು ತಮಿಳುನಾಡಿನ ರಾಮೇಶ್ವರಂನಲ್ಲಿ ಜನಿಸಿದರು. ಅವುಲ್ ಫಕೀರ್ ಜೈಲುಬ್ದೀನ್ ಅಬ್ದುಲ್ ಕಲಾಂ ಇವರ ಪೂರ್ತಿಹೆಸರು. ಕಲಾಂ ಅವರ ಐದನೇ ಪುಣ್ಯತಿಥಿಯ ಈ ದಿನ ಅವರ ಬಗೆಗಿನ ಕೆಲವೊಂದು ಅಪರೂಪದ ಮಾಹಿತಿಗಳು ಇಲ್ಲಿವೆ. ತಮಿಳುನಾಡಿನ ತಿರುಚಿಯಲ್ಲಿರೋ ಸೈಂಟ್ ಜೋಸೆಫ್ ಕಾಲೇಜಿನಲ್ಲಿ ವಿಜ್ಞಾನ ವಿಷಯದಲ್ಲಿ ಪದವಿ ಪಡೆದ ಅಬ್ದುಲ್ ಕಲಾಂ 1957ರಲ್ಲಿ ಮದ್ರಾಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಏರೋನಾಟಿಕಲ್ ಇಂಜಿನಿಯರಿಂಗ್ ವಿಷಯದಲ್ಲಿ ಉನ್ನತ ಶಿಕ್ಷಣ ಮಾಡಿದರು. ಬಳಿಕ ವಿಜ್ಞಾನಿಯಾಗಿ ದೇಶಕ್ಕೆ ಸೇವೆ ಸಲ್ಲಿಸಲು ಮುಂದಾದ ಕಲಾಂ ರೋಹಿಣಿ ಉಪಗ್ರಹವನ್ನು ಭೂಕಕ್ಷೆಗೆ ಹಾರಿಸಿದ ಭಾರತದ ಮೊತ್ತ ಮೊದಲ ಉಪಗ್ರಹ ಉಡಾವಣಾ ವಾಹಕ ಎಸ್‌ಎಲ್‌ವಿ III ಗೆ ಇವರದೇ ನೇತೃತ್ವ. ಅಗ್ನಿ ಮತ್ತು ಪೃಥ್ವಿ ಕ್ಷಿಪಣಿಗಳನ್ನು ಅಭಿವೃದ್ಧಿಪಡಿಸಿ ಕಾರ್ಯರೂಪಕ್ಕೆ ತಂದ ಕೀರ್ತಿ ಕೂಡ ಕಲಾಂ ಅವರಿಗೆ ಸಲ್ಲುತ್ತದೆ. ಒಟ್ಟು ಸುಮಾರು ಎರಡು ದಶಕಗಳ ಕಾಲ ಇಸ್ರೋನಲ್ಲಿ ಸೇವೆ ಸಲ್ಲಿಸಿದ ಕಲಾಂ, ಡಿಆರ್‌ಡಿಓನಲ್ಲಿ ಆಧುನಿಕ ಕ್ಷಿಪಣಿ ಅಭಿವೃದ್ಧಿಪಡಿಸುವ ಜವಾಬ್ದಾರಿಯನ್ನೂ ಹೊತ್ತುಕೊಂಡಿದ್ದರು. 2002ರಿಂದ 2007ರ ತನಕ ಭಾರತದ ರಾಷ್ಟ್ರಪತಿಯಾಗಿದ್ದ ಅಬ್ದುಲ್ ಕಲಾಂ ಪಡೆದ ಒಟ್ಟು ಗೌರವ ಡಾಕ್ಟರೇಟ್‌ಗಳ ಸಂಖ್ಯೆ 48 ಅಂದ್ರೆ ನಂಬಲೇಬೇಕು. ಇಂತಹ ಮಹಾನ್ ವ್ಯಕ್ತಿ ವಿಜ್ಞಾನ ಲೋಕ ಮಾತ್ರವಲ್ಲದೇ ಗ್ರಾಮೀಣ ಆರೋಗ್ಯ ಕ್ಷೇತ್ರದಲ್ಲಿ ಪುನರುತ್ಥಾನ ತರಲು ಶ್ರಮಿಸಿದ್ದಾರೆ. ಹೃದಯರೋಗ ತಜ್ಞ ಸೋಮರಾಜು ಎಂಬುವರ ಜೊತೆ ಸೇರಿ ಕಡಿಮೆ ಬೆಲೆಯ ಸ್ಟಂಟ್‌ ಅಭಿವೃದ್ಧಿಪಡಿಸಿದ್ದಾರೆ. ವಿಶೇಷ ಅಂದ್ರೆ 2018ರಲ್ಲಿ ತಯಾರಾದ ಜಾನ್ ಅಬ್ರಹಾಂ ನಟನೆಯ ‘ಪರಮಾಣು: ದಿ ಸ್ಟೋರಿ ಆಫ್‌ ಪೋಕ್ರಾನ್‌’ ಚಿತ್ರಕ್ಕೆ ಕಲಾಂ ಅವರೇ ಸ್ಪೂರ್ತಿಯಾಗಿದ್ದಾರೆ. ಮಕ್ಕಳೆಂದರೆ ಅತಿಯಾಗಿ ಇಷ್ಟಪಡುವ ಕಲಾಂ ಅವರು ಕೆಲವು ಶಾಲೆಗಳಲ್ಲಿ ಮಕ್ಕಳಿಗೆ ಪಾಠವನ್ನೂ ಮಾಡಿದ್ದರು. ಈ ವೇಳೆ ಮಕ್ಕಳೊಂದಿಗೆ ಬೆರೆತು ತಾನೂ ಮಗುವಾಗಿದ್ದರು. ರಾಜಕೀಯ ನಾಯಕರು ಪಕ್ಷಾತೀತವಾಆಗಿ ಇಷ್ಟಪಡುವ ಈ ಮಹಾನ್ ಚೇತನಕ್ಕೆ ಅವರ ಐದನೆಯ ಪುಣ್ಯತಿಥಿಯಂದು ಗೌರವದ ನಮನ.


from India & World News in Kannada | VK Polls https://ift.tt/3g2OPlT

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...