ಕಾಂಗ್ರೆಸ್ - ಜೆಡಿಎಸ್ ಸಮ್ಮಿಶ್ರ ಸರ್ಕಾರ ಪತನವಾಗಿ ಬಿಎಸ್ ಯಡಿಯೂರಪ್ಪ ನೇತೃತ್ವದಲ್ಲಿ ರಚನೆಯಾದ ಬಿಜೆಪಿ ಸರ್ಕಾರಕ್ಕೆ ಇದೀಗ ಒಂದು ವರ್ಷ ತುಂಬಿದೆ. ಈ ಒಂದು ವರ್ಷ ಸಿಎಂ ಬಿಎಸ್ವೈಗೆ ಪಾಲಿಗೆ ಸವಾಲುಗಳ ಮೇಲೆ ಸವಾಲುಗಳನ್ನು ಎದುರಿಸಬೇಕಾಗಿ ಬಂದ ಕಠಿಣ ಸಂದರ್ಭವಾಗಿತ್ತು ಎಂಬುವುದರಲ್ಲಿ ಸಂಶಯವಿಲ್ಲ. ಸರ್ಕಾರ ರಚನೆಯಾಗಿ ಪೂರ್ಣ ಪ್ರಮಾಣದ ಸಚಿವ ಸಂಪುಟ ರಚನೆಯಾಗುವ ಮೊದಲೇ ರಾಜ್ಯದಲ್ಲಿ ಕಾಣಿಸಿಕೊಂಡ ಭೀಕರ ನೆರೆ, ಇದಾದ ಬಳಿಕ ಉಪ ಚುನಾವಣೆ, ಪಕ್ಷದಲ್ಲಿ ತಲೆಧೋರಿದ್ದ ಆಂತರಿಕ ಭಿನ್ನಮತ ಇದೀಗ ಕೊರೊನಾ ಸೋಂಕು. ಕಳೆದ ಒಂದು ವರ್ಷದ ಅಧಿಕಾರವಧಿ ಬಿಎಸ್ವೈ ಪಾಲಿಗೆ ನಿಜ್ಕಕೂ ಸವಾಲಿನ ಸಂಗತಿಯಾಗಿತ್ತು. ಈ ಸವಾಲನ್ನು ಹೇಗೆ ನಿಭಾಯಿಸಿದರು, ಪ್ರವಾಹ, ಕೊರೊನಾ ನಿರ್ವಹಣೆಯಲ್ಲಿ ಬಿಎಸ್ವೈ ಸಫಲರಾಗಿದ್ದಾರಾ? ವಿರೋಧ ಪಕ್ಷಗಳ ಅಭಿಪ್ರಾಯ ಏನಿದೆ ಈ ಕುರಿತಾದ ಒಂದು ವರದಿ ಇಲ್ಲಿದೆ. ಮೇಲ್ಮನೆ ನಾಮಕರಣ ಮುಗಿಯಿತು, ಬಿಎಸ್ವೈ ಮುಂದಿದೆ ಈಗ ಸಂಪುಟ ಸರ್ಜರಿ ಸವಾಲುಬೆಂಗಳೂರಿನಲ್ಲಿ 3 ಸಾವಿರಕ್ಕೂ ಅಧಿಕ ಕೊರೊನಾ ಸೋಂಕಿತರು ನಾಪತ್ತೆ: ಹುಡುಕಾಟ ಆರಂಭ!
ಸಮ್ಮಿಶ್ರ ಸರ್ಕಾರ ಪತನವಾಗಿ ಬಿಜೆಪಿ ಸರ್ಕಾರ ರಚನೆಯಾಗಿ ಬಿಎಸ್ ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ ಮಾಡಿದ ಬೆನ್ನಲ್ಲೇ ಅತೀ ದೊಡ್ಡ ಸವಾಲು ಅವರ ಮುಂದೆ ಬಂದು ನಿಂತಿತ್ತು. ರಾಜ್ಯದ ಸುಮಾರು 10 ಜಿಲ್ಲೆಗಳಲ್ಲಿ ಭೀಕರ ನೆರೆ ಕಾಣಿಸಿಕೊಂಡಿತ್ತು. ಉತ್ತರ ಕರ್ನಾಟಕ, ಕರಾವಳಿ, ಮಲೆನಾಡು ಭಾಗಗಳು ಸೇರಿದಂತೆ 10 ಜಿಲ್ಲೆಗಳಲ್ಲಿ ಕಾಣಿಸಿಕೊಂಡ ಪ್ರವಾಹದಿಂದಾಗಿ ಭಾರೀ ಪ್ರಮಾಣದ ಹಾನಿ ಸಂಭವಿಸಿತ್ತು. ಪ್ರವಾಹದಿಂದಾಗಿ 80,590 ಕ್ಕೂ ಅಧಿಕ ಹೆಕ್ಟೇರ್ ಭೂಮಿಯಲ್ಲಿ ಬೆಳೆ ಹಾನಿಯಾಗಿತ್ತು. ಸುಮಾರು 96 ಹಳ್ಳಿಗಳಲ್ಲಿ 8,000 ಹೆಚ್ಚಿನ ಸಂಖ್ಯೆಯ ಜನರು ಸಂಕಷ್ಟ ಎದುರಿಸಿದ್ದರು. ಸುಮಾರು 1,050 ಕಿ.ಮೀ.ನಷ್ಟು ರಸ್ತೆ ಜಾಲ ಮತ್ತು 140 ಸೇತುವೆಗಳು ಮತ್ತು ಚೆಕ್ ಡ್ಯಾಮ್ಗಳಿಗೆ ಹಾನಿಯಾಗಿತ್ತು. ಈ ಸಂಕಷ್ಟದ ಸಂದರ್ಭವನ್ನು ನಿಭಾಯಿಸುವುದು, ಸಂತ್ರಸ್ತರಿಗೆ ಸೂಕ್ತ ಪರಿಹಾರ ನೀಡುವುದು, ವಿರೋಧ ಪಕ್ಷಗಳ ಟೀಕೆಗಳಿಗೆ ಉತ್ತರ ಕೊಡುವುದು ಬಿಎಸ್ವೈ ಮುಂದಿದ್ದ ದೊಡ್ಡ ಸವಾಲಾಗಿತ್ತು. ಸಂಪುಟ ವಿಸ್ತರಣೆ ಆಗದಿದ್ದ ಆ ಸಂದರ್ಭದಲ್ಲಿ ಯಡಿಯೂರಪ್ಪ ಏಕಾಂಕಿಯಾಗಿ ಹಲವು ಜಿಲ್ಲೆಗಳಿಗೆ ಪ್ರವಾಸ ಮಾಡಿ ನೆರೆ ಸಂದರ್ಭವನ್ನು ನಿಭಾಯಿಸುವ ಪ್ರಯತ್ನ ನಡೆಸಿದರು. ನೆರೆ ನಿರ್ವಹಣೆಯಲ್ಲಿ ಸರ್ಕಾರ ಎಡವಿದೆ ಎಂಬ ಆರೋಪ ವಿರೋಧ ಪಕ್ಷಗಳಿಂದ ಕೇಳಿಬರುತ್ತಲೇ ಇತ್ತು. ಆದರೆ ಬಿಎಸ್ವೈ ನೆರೆ ನಿರ್ವಹಣೆಯನ್ನು ಸಮರ್ಥವಾಗಿ ನಿಭಾಯಿದ್ದೇವೆ ಎಂದು ಹೇಳುತ್ತಿದ್ದಾರೆ.
ಈ ನಡುವೆ ಕಾಂಗ್ರೆಸ್, ಜೆಡಿಎಸ್ಗೆ ಕೈಕೊಟ್ಟ ಕಮಲ ಪಾಳಯಕ್ಕೆ ಸೇರಿಕೊಂಡು ಅನರ್ಹಗೊಂಡು ಉಪಚುನಾವಣೆಯನ್ನು ಎದುರಿಸಿದ್ದ ಅಭ್ಯರ್ಥಿಗಳನ್ನು ಗೆಲ್ಲಿಸುವ ದೊಡ್ಡ ಹೊಣೆಗಾರಿಕೆ ಬಿಎಸ್ವೈ ಮೇಲಿತ್ತು. ಸರ್ಕಾರದ ಅಳಿವು ಉಳಿವಿನ ಪ್ರಶ್ನೆ ಇದಾಗಿದ್ದರಿಂದ ಪಕ್ಷದ ಜೊತೆಗೆ ವೈಯಕ್ತಿಕವಾಗಿಯೂ ಬಿಎಸ್ವೈಗೆ ಇದೊಂದು ದೊಡ್ಡ ಸವಾಲಾಗಿತ್ತು. ಒಟ್ಟು 15 ಕ್ಷೇತ್ರಗಳ ಪೈಕಿ 12 ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸುವಲ್ಲಿ ಬಿಎಸ್ವೈ ಯಶಸ್ವಿಯಾದರು. ಬಿಎಸ್ವೈಗೆ ಪ್ರಯತ್ನಕ್ಕೆ ದೆಹಲಿ ಹೈಕಮಾಂಡ್ನಿಂದಲೂ ಮೆಚ್ಚುಗೆ ವ್ಯಕ್ತವಾಗಿತ್ತು. ಸ್ವತಃ ಪ್ರಧಾನಿ ನರೇಂದ್ರ ಮೋದಿ ಕೂಡಾ ಮೆಚ್ಚುಗೆ ಸೂಚಿಸಿದ್ದರು.
ಪಕ್ಷದ ಹೊರಗಡೆ ನಡೆಯುವ ಹೋರಾಟದ ಜೊತೆಗೆ ಪಕ್ಷದಲ್ಲಿ ಆಂತರಿಕವಾಗಿ ತಲೆಧೋರಿದ್ದ ಭಿನ್ನಮತವನ್ನು ನಿಭಾಯಿಸುವುದು ಕೂಡಾ ಬಿಎಸ್ವೈ ಪಾಲಿಗೆ ಸವಾಲಿನ ಸಂಗತಿಯಾಗಿತ್ತು. ಪಕ್ಷದಲ್ಲಿ ಎರಡು ಬಣಗಳು ಕಾಣಿಸಿಕೊಂಡಿದ್ದವು. ಮೂಲಕ ವರ್ಸಸ್ ವಲಸಿಗ ಎಂಬ ಚರ್ಚೆಗಳು ಆರಂಭವಾಗಿದ್ದವು. ಸಂಪುಟ ವಿಸ್ತರಣೆಯ ವೇಳೆ ಸಚಿವ ಸ್ಥಾನಕ್ಕಾಗಿ ಭಾರೀ ಪ್ರಮಾಣದ ಲಾಬಿಗಳು ನಡೆದಿದ್ದವು. ಬಿಎಸ್ವೈ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದವರೇ ಬಹಿರಂಗವಾಗಿ ವಿರೋಧಿ ಹೇಳಿಕೆಗಳನ್ನು ನೀಡಲು ಆರಂಭಿಸಿದ್ದರು. ಇದು ಒಂದು ರೀತಿಯಲ್ಲಿ ಮುಜುಗರದ ಸನ್ನಿವೇಶವನ್ನು ಸೃಷ್ಟಿಸಿತ್ತು. ಈ ನಡುವೆ ರಾಜ್ಯಸಭೆಗೆ ಅಭ್ಯರ್ಥಿ ಆಯ್ಕೆಯಲ್ಲಿ ಹೈಕಮಾಂಡ್ ಕೈ ಮೇಲಾಗಿ ಬಿಎಸ್ವೈಗೆ ಹಿನ್ನಡೆಯಾಗಿದ್ದು ರಾಜಕೀಯ ವಲಯದಲ್ಲಿ ಭಾರೀ ಚರ್ಚೆಯನ್ನು ಹುಟ್ಟುಹಾಕಿತ್ತು. ಆದರೆ ಇದಾದ ಬಳಿಕ ವಿಧಾನಪರಿಷತ್ ಅಭ್ಯರ್ಥಿ ಆಯ್ಕೆಯಲ್ಲಿ ತಮ್ಮ ಹಿಡಿತವನ್ನು ಬಿಗಿಗೊಳಿಸುವುದರಲ್ಲಿ ಬಿಎಸ್ವೈ ಸಫಲರಾದರು.
ಇದೀಗ ಮತ್ತೊಂದು ಸವಾಲು ಬಿಎಸ್ವೈ ಪಾಲಿಗೆ ಎದುರಾಗಿದೆ. ಅದುವೇ ಕೊರೊನಾ ಸೋಂಕು. ರಾಜ್ಯದಲ್ಲಿ ಕೊರೊನಾ ಸೋಂಕು ನಿಯಂತ್ರಣ ಮೀರಿ ಹರಡುತ್ತಿದೆ. ಆದರೆ ಇದನ್ನು ನಿರ್ವಹಣೆ, ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಸರ್ಕಾರ ವಿಫಲವಾಗಿದೆ ಎಂಬ ಟೀಕೆಗಳು ಕೇಳಿ ಬರುತ್ತಿದೆ. ಕೊರೊನಾ ಅವಧಿಯಲ್ಲಿ ಸರ್ಕಾರದ ನಿರ್ಧಾರಗಳು, ಸಚಿವರ ನಡುವಿನ ಗೊಂದಲ, ಪರಿಹಾರ ನೀಡುವಲ್ಲಿನ ಎಡವಟ್ಟು, ಪದೇ ಪದೇ ಬದಲಾಗುತ್ತಿರುವ ಸರ್ಕಾರದ ನಡೆಗಳು ಹಾಗೂ ಇದೀಗ ಕೇಳಿಬರುತ್ತಿರುವ ಭ್ರಷ್ಟಾಚಾರದ ಆರೋಪ ಬಿಎಸ್ವೈ ಸರ್ಕಾರಕ್ಕೆ ಹಿನ್ನೆಡೆಯಾಗಿದೆ. ಸರ್ಕಾರದ ವಿರುದ್ಧ ಜನಾಭಿಪ್ರಾಯವನ್ನು ರೂಪಿಸಲು ವಿರೋಧ ಪಕ್ಷಗಳು ವಿವಿಧ ಸ್ವರೂಪದಲ್ಲಿ ಪ್ರಯತ್ನಗಳನ್ನು ನಡೆಸುತ್ತಿವೆ. ಆದರೆ ಇವೆಲ್ಲವನ್ನು ಹೇಗೆ ಬಿಎಸ್ವೈ ನಿಭಾಯಿಸುತ್ತಾರೆ ಎಂಬುವುದು ಸದ್ಯದ ಕುತೂಹಲ. ಒಟ್ಟಿನಲ್ಲಿ ಬಿಎಸ್ವೈ ಸರ್ಕಾರಕ್ಕೆ ಒಂದು ವರ್ಷ ತುಂಬಿದ್ದು, ಸರ್ಕಾರ ವಿಫಲತೆಯಿಂದ ಕೂಡಿದೆ ಎಂದು ವಿಪಕ್ಷಗಳ ವಾದಗಳ ನಡುವೆಯೂ ಸವಾಲುಗಳನ್ನು ಸಮರ್ಥವಾಗಿ ಎದುರಿಸಿ ಉತ್ತಮ ಆಡಳಿತ ನೀಡಿದ್ದೇನೆ ಎಂಬ ಖುಷಿಯಲ್ಲಿದ್ದಾರೆ ಬಿಎಸ್ವೈ.
from India & World News in Kannada | VK Polls https://ift.tt/2BwB67X