ಬೆಂಗಳೂರು: ಮಂಡ್ಯದಲ್ಲಿ ಕೆರೆ, ಕಾಲುವೆಗಳನ್ನು ನಿರ್ಮಿಸಿದ ಕೆರೆ ಕಾಮೇಗೌಡರು ಈಗ ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ. ಅವರ ಪರಿಸ್ಥಿತಿ ಗಂಭೀರವಾಗಿ ಈ ನಿಟ್ಟಿನಲ್ಲಿ ಸರಕಾರ ಸೂಕ್ತ ಚಿಕಿತ್ಸೆಗೆ ವ್ಯವಸ್ಥೆ ಮಾಡಬೇಕು ಎಂದು ಮಾಜಿ ಮುಖ್ಯಮಂತ್ರಿ ಆಗ್ರಹಿಸಿದ್ದಾರೆ. ಈ ಕುರಿತು ಸರಣಿ ಟ್ವೀಟ್ ಮಾಡಿರುವ ಕುಮಾರಸ್ವಾಮಿ, ಕಾಮೇಗೌಡರಿಗೆ ಉತ್ತಮ ಚಿಕಿತ್ಸೆ ಕೊಡಿಸಬೇಕು ಎಂದು ಸರಕಾರವನ್ನು ಒತ್ತಾಯಿಸಿದ್ದಾರೆ. ಕೆರೆ ಕಾಮೇಗೌಡರ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಅವರನ್ನು ಉಳಿಸಿಕೊಳ್ಳಬೇಕಾದ ಜವಾಬ್ದಾರಿ ನಮ್ಮ ಮೇಲಿದೆ. ರಾಜ್ಯ ಸರಕಾರ ತುರ್ತು ಅವರ ಚಿಕಿತ್ಸೆಗೆ ಸೂಕ್ತ ವ್ಯವಸ್ಥೆ ಮಾಡುವಂತೆ ಒತ್ತಾಯಿಸುತ್ತೇನೆ ಎಂದು ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ. ಮನ್ ಕಿ ಬಾತ್ ನಲ್ಲಿ ಕೂಡ ಪ್ರಧಾನಿಯವರು ಕೊಂಡಾಡಿದ್ದಾರೆ. ಮುಖ್ಯಮಂತ್ರಿಗಳು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಹೊಗಳಿ ಹೊನ್ನಶೂಲಕ್ಕೆ ಏರಿಸಿದರೆ ಸಾಲದು. ಅನಾರೋಗ್ಯದಿಂದ ಅವರು ಸೋತು ಸುಣ್ಣವಾಗಿರುವಾಗ ಒಳ್ಳೆಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲು ಸರಕಾರ ಮುಂದಾಗಬೇಕಿದೆ ಎಂದು ಕುಮಾರಸ್ವಾಮಿ ಟ್ವೀಟಿಸಿದ್ದಾರೆ. ಇತ್ತೀಚೆಗೆ ಮನ್ ಕಿ ಬಾತ್ನಲ್ಲಿ ಭಾಷಣ ಮಾಡಿದ್ದ ಪ್ರಧಾನಿ ಮೋದಿ, ಕಾಮೇಗೌಡರ ಕಾರ್ಯವನ್ನು ಮುಕ್ತವಾಗಿ ಶ್ಲಾಘಿಸಿದ್ದರು. ಇಂಥವರು ದೇಶದಲ್ಲಿರುವುದು ನಿಜಕ್ಕೂ ನಮ್ಮ ಪುಣ್ಯ. ಕೆರೆ, ಕಾಲುವೆಗಳನ್ನು ನಿರ್ಮಿಸಿ ಕಾಮೇಗೌಡರು ಸಾವಿರಾರು ಜನ, ಜಾನುವಾರುಗಳಿಗೆ ನೀರು ಹರಿಸಿದ್ದಾರೆ. ಆಧುನಿಕ ಭಗೀರಥ ಮಾದರಿಯಲ್ಲಿ ಕಾಮೇಗೌಡರು ಮಾಡಿರುವ ಈ ಜಲಯಜ್ಞದಿಂದ ಸಾವಿರಾರು ಮಂದಿ ಪ್ರತಿಫಲ ಪಡೆದಿದ್ದಾರೆ ಎಂದು ನರೇಂದ್ರ ಮೋದಿ ತಮ್ಮ ಮನದ ಮಾತಿನಲ್ಲಿ ಹೇಳಿದ್ದರು.
from India & World News in Kannada | VK Polls https://ift.tt/3f3kYIF