ಉಡುಪಿ: ಬೆಳಗಿನ ಜಾವ 4 ಗಂಟೆಯ ಸುಮಾರಿಗೆ ಹೆರಿಗೆ ನೋವು ಕಾಣಿಸಿಕೊಂಡ ಗರ್ಭಿಣಿಯೊಬ್ಬರನ್ನು ಆಶಾ ಕಾರ್ಯಕರ್ತೆಯೊಬ್ಬರು ತಕ್ಷಣವೇ ಆಟೋ ರಿಕ್ಷಾದಲ್ಲಿ ಆಸ್ಪತ್ರೆಗೆ ಸಾಗಿಸಿ ಮಾನವೀಯತೆ ಮೆರೆದಿದ್ದಾರೆ. ಅಂದಹಾಗೆ, ಸೂಕ್ತ ಸಾರಿಗೆ ಸೌಕರ್ಯವಿಲ್ಲದ ಜಿಲ್ಲೆಯ ಪೆರ್ಣಂಕಿಲ ಗ್ರಾಮದ ಶ್ರೀಲತಾ ಅವರಿಗೆ ಎರಡು ದಿನದ ಹಿಂದೆ ಮುಂಜಾವು ಮೂರರ ಸುಮಾರಿಗೆ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಈ ವೇಳೆ ಪರಿಚಯದ ಆಟೋ ಚಾಲಕರಾದ ರಾಜೀವಿ ಅವರಿಗೆ ಕರೆ ಮಾಡಿದ್ದಾರೆ. ರಾತ್ರಿ ಅನ್ನೋದು ನೋಡದೆ, ತನ್ನ ನಿದ್ದೆಯ ಬಗ್ಗೆಯೂ ಚಿಂತೆ ಮಾಡದ ರಾಜೀವಿ ಅವರು ಗರ್ಭಿಣಿ ಮಹಿಳೆಯ ನೆರವಿಗೆ ತನ್ನ ಆಟೋದ ಜೊತೆ ಓಡೋಡಿ ಬಂದಿದ್ದಾರೆ. ಬಳಿಕ 18 ಕಿ.ಮೀ ದೂರ ಇರುವ ಆಸ್ಪತ್ರೆಗೆ ತನ್ನ ಆಟೋದಲ್ಲಿ ಕರೆದುಕೊಂಡು ಹೋಗಿದ್ದಾರೆ. ಗುರುವಾರ ಬೆಳಗ್ಗೆ ಶ್ರೀಲತಾ ಅವರಿಗೆ ಹೆರಿಗೆಯಾಗಿದ್ದು, ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಸದ್ಯ ತಾಯಿ, ಮಗು ಆರೋಗ್ಯವಾಗಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರೋ ರಾಜೀವಿ ಅವರು, ‘ಮುಂಜಾನೆ 3.15ರ ಸುಮಾರಿಗೆ ಶ್ರೀಲತಾಗೆ ಹೆರಿಗೆ ನೋವು ಕಾಣಿಸಿಕೊಂಡಿದೆ ಎಂದು ನನಗೆ ಕರೆ ಮಾಡಿ ಹೇಳಿದರು. ಒಂದು ಹೆಣ್ಣಾಗಿ ಮತ್ತೊಬ್ಬ ಹೆಣ್ಣಿನ ಕಷ್ಟಕ್ಕೆ ನೆರವಾಗುವುದು ನನ್ನ ಕರ್ತವ್ಯ’ ಎಂದು ತಿಳಿಸಿದ್ದಾರೆ. ಅಲ್ಲದೇ ‘ಹವ್ಯಾಸಕ್ಕಾಗಿ ನನ್ನ ಗಂಡನಿಂದ ಆಟೋ ಚಲಾಯಿಸುವುದನ್ನು ಕಲಿತೊಂಡಿದ್ದೆ. ಈಗ ಅದೇ ನನಗೆ ವೃತ್ತಿಯಾಗಿದೆ. ಈಗಾಗಲೇ ಹತ್ತು ಹದಿನೈದು ಮಂದಿಯನ್ನು ಆಸ್ಪತ್ರೆಗೆ ದಾಖಲಿಸಿದ್ದೇನೆ ಎಂದಿರುವ ರಾಜೀವಿ ನಾನು ಹೆರಿಗೆಗೆ ಆಟೋ ಬಾಡಿಗೆ ಕೂಡ ಪಡೆಯುವುದಿಲ್ಲ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಆಪತ್ಕಾಲದ ಆಪತ್ಭಾಂಧವರಾದ ರಾಜೀವಿಗೆ ಉಪರಾಷ್ಟ್ರಪತಿಯೇ ಫಿದಾ..! ರಾಜೀವಿ ಅವರು ರಾತ್ರಿ ಹೊತ್ತಿನಲ್ಲಿ ಗರ್ಭಿಣಿ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿದ ಬಗ್ಗೆ ಸುದ್ದಿಯಾಗಿರೋದನ್ನು ಗಮನಿಸಿರುವ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ರಾಜೀವಿ ಅವರ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಮುಂಜಾನೆ ಮೂರರ ಸುಮಾರಿಗೆ ಗರ್ಭಿಣಿ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿದ ರಾಜೀವಿ ಅವರ ಕಾರ್ಯ ನಿಜಕ್ಕೂ ಶ್ಲಾಘನೀಯವಾದದು, ಬಿಡುವಿನ ವೇಳೆಯಲ್ಲಿ ಆಟೋ ಚಲಾಯಿಸಿ ಗರ್ಭಿಣಿ ಮಹಿಳೆಯರಿಗೆ ಉಚಿತ ಸೇವೆ ನೀಡುವ ರಾಜೀವಿ ಎಲ್ಲರಿಗೂ ಮಾದರಿಯಾಗಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.
from India & World News in Kannada | VK Polls https://ift.tt/2WTOrP0