ತಿರುಪತಿಯಿಂದ ಟ್ರಂಪ್‌ವರೆಗೆ.. ಭಾನುವಾರದ Top 10 ನ್ಯೂಸ್..

ರಾಜ್ಯದಲ್ಲಿ ಕೊರೊನಾ ವೈರಸ್ ಭಾನುವಾರವೂ ಬಿಡುವು ಕೊಟ್ಟಿಲ್ಲ. ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 2 ಸಾವಿರದ ಗಡಿ ದಾಟಿರುವ ಬೆನ್ನಲ್ಲೇ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ. ಇನ್ನು ಮಹಾರಾಷ್ಟ್ರದ ಆಡಳಿತಾರೂಢ ಶಿವಸೇನೆ, ಯುಪಿ ಸಿಎಂ ಆದಿತ್ಯನಾಥ್‌ರನ್ನು ತರಾಟೆಗೆ ತೆಗೆದುಕೊಂಡ ಬೆನ್ನಲ್ಲೇ, ಮಹಾರಾಷ್ಟ್ರದಲ್ಲಿ ಮತ್ತೊಬ್ಬ ಸಾಧು ಹತ್ಯೆಗೀಡಾಗಿದ್ದಾರೆ. ಇತ್ತ ಚೀನಾ ಅಮೆರಿಕ ನಡುವಣ ಸಂಘರ್ಷ ತಾರಕಕ್ಕೇರಿದ್ದು, ಶೀತಲ ಸಮರದ ಅಂಚಿಗೆ ಬಂದು ನಿಂತಿದೆ. ಇಷ್ಟು ದಿನ ಬಂದ್ ಆಗಿದ್ದ ತಿರುಪತಿ ಲಡ್ಡು ವಿತರಣೆ ಇದೀಗ ಮತ್ತೆ ಆರಂಭವಾಗಿದ್ದು, ರಿಯಾಯಿತಿ ದರದಲ್ಲಿ ಬೆಂಗಳೂರಿನಲ್ಲೂ ಸಿಗಲಿದೆ. ದೇವೇಗೌಡ-ಚೆನ್ನಮ್ಮ ಅವರ ದಾಂಪತ್ಯ ಇಂದಿಗೆ 66 ವಸಂತ ಪೂರೈಸಿರೋದು, ಭಾನುವಾರದ ಹೈಲೈಟ್ಸ್..

ರಾಜ್ಯದಲ್ಲಿ ಕೊರೊನಾ ವೈರಸ್‌ನ ರುದ್ರ ನರ್ತನ ಮುಂದುವರೆದಿದೆ. ಸತತ ನಾಲ್ಕನೇ ದಿನ 100 ಪ್ಲಸ್‌ ಪ್ರಕರಣಗಳು ವರದಿಯಾಗಿದ್ದು, ರಾಜ್ಯದ ಜನರನ್ನು ಆತಂಕಕ್ಕೆ ತಳ್ಳಿದೆ. ಶನಿವಾರ 216 ಪ್ರಕರಣಗಳು ವರದಿಯಾಗಿದ್ದ ಕರ್ನಾಟಕದಲ್ಲಿ ಭಾನುವಾರ 130 ಪಾಸಿಟಿವ್‌ ಕೇಸ್‌ಗಳು ಪತ್ತೆಯಾಗಿವೆ. ಈ ಮೂಲಕ ರಾಜ್ಯದಲ್ಲಿ ಕೋವಿಡ್-19 2 ಸಾವಿರದ ಗಡಿ ದಾಟಿದ್ದು, ಕೊರೊನಾ ಸೋಂಕಿತರ ಸಂಖ್ಯೆ 2089ಕ್ಕೆ ಏರಿಕೆಯಾಗಿದೆ. ಭಾನುವಾರ ಚಿಕ್ಕಬಳ್ಳಾಪುರದಲ್ಲಿ ಅತಿ ಹೆಚ್ಚು ಎಂಬಂತೆ 27 ಕೊರೊನಾ ಪಾಸಿಟಿವ್‌ ಪ್ರಕರಣಗಳು ಕಂಡುಬಂದಿದ್ದು, ಯಾದಗಿರಿ 24, ಉಡುಪಿ 23, ಮಂಡ್ಯ 15 ಹಾಗೂ ಹಾಸನದಲ್ಲಿ 14 ಹೊಸ ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ.

ಭಾನುವಾರ ಪತ್ತೆಯಾದ ಹೊಸ ಪ್ರಕರಣಗಳ ಪೈಕಿ 105 ಜನ ಹೊರರಾಜ್ಯದಿಂದ ಬಂದಿದ್ದರೆ, ಇಬ್ಬರು ವಿದೇಶದಿಂದ ಬಂದವರಾಗಿದ್ದಾರೆ. ಇದುವರೆಗೂ 2089 ಸೋಂಕಿತರಲ್ಲಿ 42 ಜನ ಕೊರೊನಾದಿಂದ ಮೃತಪಟ್ಟಿದ್ದರೆ, ಇಬ್ಬರು ಕೊರೊನಾ ಅಲ್ಲದ ಕಾರಣದಿಂದ ಸಾವನ್ನಪ್ಪಿದ್ದಾರೆ. ಇನ್ನು, 654 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, 1391 ಪ್ರಕರಣಗಳು ರಾಜ್ಯದಲ್ಲಿ ಸಕ್ರಿಯವಾಗಿವೆ.

ದೇಶದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 1 ಲಕ್ಷ 32 ಸಾವಿರದ ಗಡಿ ದಾಟಿದ್ದು, ಈ ಪೈಕಿ 54 ಸಾವಿರಕ್ಕೂ ಹೆಚ್ಚು ಮಂದಿ ಈಗಾಗಲೇ ಗುಣಮುಖರಾಗಿದ್ದಾರೆ. ಈವರೆಗೆ 3,800 ಮಂದಿ ಮಹಾಮಾರಿಗೆ ಬಲಿಯಾಗಿದ್ದಾರೆ.

ಜನರ ಹಿತ ಕಾಯುವಲ್ಲಿ ರಾಜ್ಯ ಬಿಜೆಪಿ ಸರ್ಕಾರ ವಿಫಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಕಿಡಿಕಾರಿದ್ದಾರೆ. ಸರಣಿ ಟ್ವೀಟ್‌ಗಳ ಮೂಲಕ ಬಿಎಸ್ ಯಡಿಯೂರಪ್ಪ ಹಾಗೂ ಬಿಜೆಪಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.

ಲಾಕ್‌ಡೌನ್‌ನಿಂದಾಗಿ ರಾಜ್ಯದ ರೈತರು, ಬಡವರು, ಕಾರ್ಮಿಕರು, ವಲಸಿಗರು ಇನ್ನಿಲ್ಲದ ಸಂಕಷ್ಟಕ್ಕೆ ಗುರಿಯಾಗಿದ್ದಾರೆ. ರೈತರು ಬೆಳೆದ ಹಣ್ಣು, ತರಕಾರಿ ಖರೀದಿಗೆ ಸರ್ಕಾರ ಸೂಕ್ತ ಕ್ರಮ ವಹಿಸಲಿಲ್ಲ. ಜನರ ಹಿತ ಕಾಯುವಲ್ಲಿ ಸಿಎಂ ಬಿಎಸ್‌ವೈ ಹಾಗೂ ಅವರ ನೇತೃತ್ವದ ಬಿಜೆಪಿ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ವಾಗ್ದಾಳಿ ನಡೆಸಿದರು.

ನಾನು ಅಧ್ಯಕ್ಷನಾದ ಮೂರೇ ದಿನದಲ್ಲಿ ಕೊರೊನಾ ಬಿಕ್ಕಟ್ಟು ಎದುರಾಯಿತು. ಎಲ್ಲಾ ಕ್ಷೇತ್ರಗಳ ಮೇಲೆ ವ್ಯಾಪಕ ಪರಿಣಾಮ ಬೀರಿತು.ತರಕಾರಿ, ಹಣ್ಣು ಬೆಳೆಗಾರರು ಕಣ್ಣೀರಿಟ್ಟರು, ಸರ್ಕಾರ, ಅಧಿಕಾರಿಗಳು ಸ್ಪಂದಿಸಲಿಲ್ಲ.ಹಾಗಾಗಿ ಕಾಂಗ್ರೆಸ್ ಪಕ್ಷವೇ ₹ 100 ಕೋಟಿಗೂ ಹೆಚ್ಚು ಮೌಲ್ಯದ ಬೆಳೆಯನ್ನು ರೈತರಿಂದ ನೇರವಾಗಿ ಖರೀದಿಸಿದೆ ಎಂದಿದ್ದಾರೆ.

ಕೊರೊನಾ ವೈರಸ್ ಸಂಡೇ ಕರ್ಫ್ಯೂಗೆ ಮೈಸೂರಿನಲ್ಲಿ ಸಿಕ್ತು ವೆರಿ ಗುಡ್ ರೆಸ್ಪಾನ್ಸ್..!

ಅನ್ಯ ರಾಜ್ಯದಿಂದ ಬಂದವರಿಗೆ ಹೋಟೆಲ್ ಕ್ವಾರಂಟೈನ್ ತಪ್ಪಿಸಿ ಮನೆಗೆ ಕಳುಹಿಸಲು ಹಣ ಕೇಳಿದ್ದ ಆರೋಪಿಯನ್ನು ಉಪ್ಪಾರಪೇಟೆ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಕೃಷ್ಣೇಗೌಡ ಎಂದು ಗುರುತಿಸಲಾಗಿದೆ.

ಮೇ 16ರಂದು ದೆಹಲಿಯಿಂದ ಬಂದು ಗಾಂಧಿನಗರದ ಹೋಟೆಲ್‌ನಲ್ಲಿ ಕ್ವಾರಂಟೈನ್‌ನಲ್ಲಿದ್ದ ಮಹಿಳೆಗೆ 25 ಸಾವಿರ ರೂ. ಹಣಕ್ಕೆ ಕೃಷ್ಣೇಗೌಡ ಬೇಡಿಕೆ ಇಟ್ಟಿದ್ದ. ಹಣ ನೀಡಿದರೆ ವೈದ್ಯಕೀಯ ಪರೀಕ್ಷೆ ಬಳಿಕ ಯಾವುದೇ ಕ್ವಾರಂಟೈನ್ ಇಲ್ಲದೆ ಮನೆಗೆ ಕಳುಹಿಸುವುದಾಗಿ ಕೃಷ್ಣೇಗೌಡ ತಿಳಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಬಗ್ಗೆ ವೈದ್ಯೆ ಬಿ.ನಂದಾ ಎಂಬುವವರು ನೀಡಿದ್ದ ದೂರಿನ‌ ಹಿನ್ನೆಲೆ ಕೃಷ್ಣೇಗೌಡ ವಿರುದ್ಧ ಉಪ್ಪಾರಪೇಟೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸದ್ಯ ಆರೋಪಿ ಕೃಷ್ಣೇಗೌಡನನ್ನು ಬಂಧಿಸಿರುವ ಪೊಲೀಸರು ತನಿಖೆಯನ್ನು ಮುಂದುವರೆಸಿದ್ದಾರೆ.

ಕೊರೊನಾ ನಿಯಂತ್ರಣಕ್ಕೆ 'ಭಾನುವಾರ ಕರ್ಫ್ಯೂ', ಸ್ತಬ್ಧಗೊಂಡಿದೆ ಬೆಂಗಳೂರು

ಮಹಾರಾಷ್ಟ್ರದ ಆಡಳಿತಾರೂಢ ಶಿವಸೇನೆ ಮಾತ್ರ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರುದ್ಧದ ತನ್ನ ರಾಜಕೀಯ ವಾಗ್ದಾಳಿಯನ್ನು ಮುಂದುವರೆಸಿದೆ.

ವಲಸೆ ಕಾರ್ಮಿಕರ ವಿಷಯದಲ್ಲಿ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಜರ್ಮನಿಯ ಮಾಜಿ ಸರ್ವಾಧಿಕಾರಿ ಹಿಟ್ಲರ್‌ನಂತೆ ವರ್ತಿಸುತ್ತಿದ್ದಾರೆ ಎಂದು ಶಿವಸೇನೆ ಆರೋಪ ಮಾಡಿದೆ.

ಈ ಕುರಿತು ಶಿವಸೇನೆ ಮುಖವಾಣಿ ಸಾಮ್ನಾದಲ್ಲಿ ಲೇಖನ ಬರೆದಿರುವ ರಾಜ್ಯಸಭಾ ಸಂಸದ ಸಂಜಯ್ ರಾವತ್, ವಲಸೆ ಕಾರ್ಮಿಕರ ವಿರುದ್ಧ ಯೋಗಿ ಆದಿತ್ಯನಾಥ್ ಅಮಾನವೀಯವಾಗಿ ವರ್ತಿಸುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.

ಉತ್ತರಪ್ರದೇಶದಲ್ಲಿರುವ ಹೊರ ರಾಜ್ಯದ ವಲಸೆ ಕಾರ್ಮಿಕರಿಗೆ ಸ್ವ ರಾಜ್ಯಗಳಿಗೆ ಹೋಗಲು ಯೋಗಿ ಸರ್ಕಾರ ಅನುಮತಿ ನೀಡುತ್ತಿಲ್ಲ ಎಂದು ಸಂಜಯ್ ರಾವತ್ ಆಪಾದಿಸಿದ್ದಾರೆ.

ಬೇಕಾದರೆ ಬಿಜೆಪಿ ಬಾವುಟ ಬಳಸಿ: ಮುಂದುವರೆದ ಪ್ರಿಯಾಂಕಾ VS ಯೋಗಿ ಜಟಾಪಟಿ!

ಸಾಮೂಹಿಕ ಥಳಿತದಲ್ಲಿ ಇಬ್ಬರು ಸಾಧುಗಳು ಮೃತಪಟ್ಟ ಘಟನೆ ಮರೆಯುವ ಮುನ್ನವೇ ಮಹಾರಾಷ್ಟ್ರದಲ್ಲಿ ಮತ್ತೊಬ್ಬ ಸಾಧುವಿನ ಹತ್ಯೆಯಾಗಿದೆ. ನಾಂದೇಡ್‌ ಜಿಲ್ಲೆಯ ನಾಗಥಾನಾ ಆಶ್ರಮದಲ್ಲಿ ಶನಿವಾರ ರಾತ್ರಿ ಸ್ವಾಮೀಜಿ ಹಾಗೂ ಮತ್ತೊಬ್ಬ ವ್ಯಕ್ತಿಯನ್ನು ಕೊಲೆ ಮಾಡಲಾಗಿದೆ.

ಪೊಲೀಸರ ಪ್ರಕಾರ, ಪಶುಪತಿ ಮಠದ ಶಿವಾಚಾರ್ಯ ರುದ್ರ ಸ್ವಾಮೀಜಿಯನ್ನು ಆಶ್ರಮದೊಳಗೆ ಕೊಲೆ ಮಾಡಲಾಗಿದ್ದು, ಮತ್ತೊಬ್ಬ ವ್ಯಕ್ತಿ ಭಗವಾನ್‌ ಶಿಂದೆಯ ಮೃತದೇಹ ಮಠದ ಬಳಿಯ ಶಾಲೆ ಸಮೀಪ ದೊರೆತಿದೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಸ್ಥಳೀಯ ಹಾಗೂ ಸ್ವಾಮೀಜಿಯ ಹಿಂಬಾಲಕ ಸಾಯಿನಾಥ್‌ ಲಿಂಗಾಡೆಯನ್ನು ಬಂಧಿಸಿದ್ದಾರೆ.

ತೆಲಂಗಾಣ ಗಡಿ ಬಳಿ ಸಾಯಿನಾಥ್‌ ಲಿಂಗಾಡೆಯನ್ನು ಪೊಲೀಸರು ಬಂಧಿಸಿದ್ದು, ಲಿಂಗಾಡೆ ಬಳಿ 70 ಸಾವಿರ ರೂ. ನಗದು ಮತ್ತು ಲ್ಯಾಪ್‌ಟಾಪ್‌ ವಶಪಡಿಸಿಕೊಂಡಿದ್ದು, ಹಣದ ಆಸೆಗಾಗಿ ಕೊಲೆ ಮಾಡಲಾಗಿದೆ ಎಂದು ಪೊಲೀಸರ ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ. ಈ ಹಿಂದೆಯು ಆರೋಪಿ ಮೇಲೆ ಕೊಲೆ ಹಾಗೂ ಲೈಂಗಿಕ ದೌರ್ಜನ್ಯ ಪ್ರಕರಣಗಳು ದಾಖಲಾಗಿದ್ದವು.

ಮತ್ತಿಬ್ಬರು ಸಾಧುಗಳ ಹತ್ಯೆ, ಆರೋಪಿ ಬಂಧನ, ಕೊಲೆಗೆ ಕಾರಣವೇನು?

50ಕ್ಕೂ ಹೆಚ್ಚು ಜನರನ್ನು ಬಲಿ ಪಡೆದ ದೆಹಲಿಯ ಸಿಎಎ ಗಲಭೆ ನಡೆದು ಮೂರು ತಿಂಗಳ ನಂತರ ಘಟನೆಗೆ ಸಂಬಂಧಿಸಿದಂತೆ ಜೆಎನ್‌ಯುನ ಇಬ್ಬರು ವಿದ್ಯಾರ್ಥಿನಿಯರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.

ದೇವಾಂಗಣ ಕಲಿತಾ ಮತ್ತು ನತಾಶಾ ನರ್ವಾಲ್‌ ಇಬ್ಬರು ವಿದ್ಯಾರ್ಥಿನಿಯರನ್ನು ಬಂಧಿಸಲಾಗಿದೆ.‌ ದಿಲ್ಲಿ ಆಧಾರಿತ ಪಿಂಜ್ರಾ ತೋಡ್‌ ಆಂದೋಲನದಿಂದ ದೆಹಲಿಯಲ್ಲಿ ಈ ಇಬ್ಬರು ಮುನ್ನೆಲೆಗೆ ಬಂದಿದ್ದರು. ಐಪಿಸಿ ಸೆಕ್ಷನ್‌ 186 ಮತ್ತು 353ರಡಿ ಪ್ರಕರಣ ದಾಖಲಿಸಲಾಗಿದೆ.

ಜಫ್ರಾಬಾದ್‌ ಮೆಟ್ರೋ ನಿಲ್ದಾಣದ ಬಳಿ ಫೆಬ್ರವರಿಯಲ್ಲಿ ನಡೆದ ಬೃಹತ್‌ ಮಹಿಳಾ ಪ್ರತಿಭಟನೆಯಲ್ಲಿ ಈ ಇಬ್ಬರು ವಿದ್ಯಾರ್ಥಿನಿಯರು ಭಾಗವಹಿಸಿದ್ದು, ದೆಹಲಿ ಗಲಭೆಯಲ್ಲಿ ಕೈವಾಡ ಇದೆ ಎನ್ನಲಾಗಿದೆ. ಸಿಎಎ ವಿರೋಧಿ ಪ್ರತಿಭಟನೆಯಲ್ಲಿ ಭಾಗಿ ಹಾಗೂ ದೆಹಲಿ ಘರ್ಷಣೆಗೆ ಕುಮ್ಮಕ್ಕು ನೀಡಿದ ಆಧಾರದಲ್ಲಿ ಕಳೆದ ಒಂದು ತಿಂಗಳಲ್ಲಿ ಬಹಳಷ್ಟು ವಿದ್ಯಾರ್ಥಿಗಳನ್ನು ಹಾಗೂ ಸಾಮಾಜಿಕ ಕಾರ್ಯಕರ್ತರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.

ಗಡಿ ದಾಟಿ ಹೋಗಬೇಡಿ ಎಂದ ಪೊಲೀಸರ ಮೇಲೆಯೇ ಜನರಿಂದ ಕಲ್ಲು ತೂರಾಟ!

ಬೆಂಗಳೂರು, ಹೈದರಾಬಾದ್‌, ಚೆನ್ನೈ ಮತ್ತು ಆಂಧ್ರಪ್ರದೇಶದ 13 ಜಿಲ್ಲಾ ಕೇಂದ್ರಗಳಲ್ಲಿ ಮೇ 25ರಿಂದ ತಿರುಪತಿ ಲಡ್ಡು ಮಾರಾಟ ನಡೆಯಲಿದೆ.

ಜಿಲ್ಲಾ ಕೇಂದ್ರಗಳಲ್ಲಿರುವ ಟಿಟಿಡಿ ಕಲ್ಯಾಣ ಮಂಟಪ ಹಾಗೂ ಮಾಹಿತಿ ಕೇಂದ್ರಗಳಲ್ಲಿ ಶೇ. 50ರ ರಿಯಾಯಿತಿ ದರದಲ್ಲಿ ಲಡ್ಡುಗಳು ದೊರೆಯಲಿವೆ ಎಂದು ಟಿಟಿಡಿ ಅಧಿಕಾರಿಗಳು ತಿಳಿಸಿದ್ದಾರೆ. ಲಾಕ್‌ಡೌನ್‌ ಪಿರಿಯಡ್‌ ಮುಗಿಯುವವರೆಗೆ ಹಾಗೂ ತಿರುಮಲೆಯಲ್ಲಿ ಶ್ರೀವಾರಿ ದರ್ಶನ ಪ್ರಾರಂಭವವಾಗುವವರೆಗೆ ಈ ಯೋಜನೆ ಜಾರಿಯಲ್ಲಿರುತ್ತದೆ.

ಒಂದೊಮ್ಮೆ ಭಕ್ತರಿಗೆ 1000ಕ್ಕಿಂತಲೂ ಹೆಚ್ಚಿನ ಲಡ್ಡು ಅವಶ್ಯಕತೆಯಿದ್ದಲ್ಲಿ ಭಕ್ತರು ತಮ್ಮ ಹೆಸರು, ಮೊಬೈಲ್‌ ಸಂಖ್ಯೆ ಹಾಗೂ ಯಾವ ಕಾರಣಕ್ಕಾಗಿ ಪ್ರಸಾದವನ್ನು ಪಡೆಯಲು ಬಯಸುತ್ತಿದ್ದೀರಿ ಎಂಬ ಮಾಹಿತಿಯನ್ನು ಐದು ದಿನಗಳಿಗೆ ಮುಂಚೆ tmlbulkladdus@gmail.com. ಗೆ ಇ-ಮೇಲ್‌ ಮಾಡಬೇಕು. ಇದಕ್ಕೆ ಉತ್ತರವಾಗಿ ಟಿಟಿಡಿ ಲಡ್ಡನ್ನು ಸಗಟಾಗಿ ಖರೀದಿಸಲು ಅಗತ್ಯವಾದ ಮಾರ್ಗಸೂಚಿಯನ್ನು ನೀಡುತ್ತದೆ.

ಆಸಕ್ತರು ಜಾಲತಾಣ https:/tirupatibalaji.ap.gov.in ಲಾಗ್‌ಇನ್‌ ಆಗಿ ವಿವಿಧ ಸೇವಾ ಟಿಕೆಟ್‌ಗಳನ್ನು ಮುಂಗಡವಾಗಿ ಕೊಳ್ಳಬಹುದು. ಅಥವಾ ಹೆಚ್ಚಿನ ಮಾಹಿತಿಗೆ ಟೋಲ್ ಫ್ರೀ ಸಂಖ್ಯೆಗಳಾದ 18004254141 ಅಥವಾ 1800425333333ಗೆ ಕರೆ ಮಾಡಬಹುದು.

ಬೆಂಗಳೂರಿಗರಿಗೆ ರಿಯಾಯಿತಿ ದರದಲ್ಲಿ ಸಿಗಲಿದೆ ತಿರುಪತಿ ಲಡ್ಡು!

ಕಳೆದ ವಾರ ಲಡಾಖ್ ಗಡಿಯಲ್ಲಿ ಭಾರತೀಯ ಸೈನಿಕರನ್ನು ಚೀನಾ ವಶಕ್ಕೆ ಪಡೆದಿತ್ತು ಎಂಬುದು ಕೇವಲ ವದಂತಿ ಎಂದು ಭಾರತೀಯ ಸೇನೆ ಸ್ಪಷ್ಟಪಡಿಸಿದೆ.

ಈ ಕುರಿತು ಪ್ರಕಟಣೆ ಹೊರಡಿಸಿರುವ ಭಾರತೀಯ ಸೇನೆ, ಗಡಿಯಲ್ಲಿ ಭಾರತೀಯ ಸೈನಿಕರನ್ನು ಚೀನಾ ವಶಕ್ಕೆ ಪಡೆದಿಲ್ಲ ಎಂದು ಸ್ಪಷ್ಟಪಡಿಸಿದೆ. ಅಲ್ಲದೇ ಈ ಕುರಿತು ಮಾಧ್ಯಮಗಳಲ್ಲಿ ಪ್ರಕಟವಾದ ವರದಿಗಳು ಸತ್ಯಕ್ಕೆ ದೂರವಾದವು ಎಂದು ಹೇಳಿದೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಭಾರತೀಯ ಸೇನೆಯ ವಕ್ತಾರ ಕರ್ನಲ್ ಅಮನ್ ಆನಂದ್, ಕಳೆದ ವಾರ ಲಡಾಖ್ ಗಡಿಯಲ್ಲಿ ಯಾವುದೇ ಭಾರತೀಯ ಸೈನಿಕರನ್ನು ಚೀನಾ ವಶಕ್ಕೆ ಪಡೆದಿಲ್ಲ ಎಂದು ಹೇಳಿದ್ದಾರೆ.

ಲಡಾಖ್ ಗಡಿಯಲ್ಲಿ ಭಾರತೀಯ ಗಸ್ತು ಸೈನಿಕರನ್ನು ವಶಕ್ಕೆ ಪಡೆದಿದ್ದ ಚೀನಾ?

ಸದ್ಯದ ಪರಿಸ್ಥಿತಿಯಲ್ಲಿ ಅಮೆರಿಕ ಹಾಗೂ ಚೀನಾ ಎರಡೂ ರಾಷ್ಟ್ರಗಳು ಶೀತಲ ಸಮರದ ಅಂಚಿಗೆ ಬಂದು ನಿಂತಿವೆ ಎಂದು ಚೀನಾ ಮಾರ್ಮಿಕವಾಗಿ ಹೇಳಿದೆ.

ಈ ಕುರಿತು ಮಾತನಾಡಿರುವ ಚೀನಾ ವಿದೇಶಾಂಗ ಸಚಿವ ವಾಂಗ್ ವೈ, ಅಮೆರಿಕದ ಉದ್ದೇಪೂರ್ವಕ ವೈರತ್ವದ ಪರಿಣಾಮವಾಗಿ ನಾವು ಆ ರಾಷ್ಟ್ರದೊಂದಿಗೆ ಶೀತಲ ಸಮರದ ಅಂಚಿಗೆ ಬಂದು ನಿಂತಿರುವಂತೆ ತೋರುತ್ತಿದೆ ಎಂದು ಅಭಿಪ್ರಾಯಪಟ್ಟಿದ್ಧಾರೆ.

ಅಮೆರಿಕ ಹಾಗೂ ಚೀನಾ ವಿಶ್ವದ ಎರಡು ಬೃಹತ್ ಆರ್ಥಿಕ ಹಾಗ ಮಿಲಿಟರಿ ಶಕ್ತಿಗಳು, ಈ ಎರಡೂ ರಾಷ್ಟ್ರಗಳ ನಡುವೆ ಉದ್ಭವಿಸುವ ಬಿಕ್ಕಟ್ಟು ಜಾಗತಿಕ ಪರಿಣಾಮ ಬೀರಲಿರುವುದು ನಿಶ್ಚಿತ ಎಂದು ವಂಗ್ ವೈ ಆತಂಕ ವ್ಯಕ್ತಪಡಿಸಿದ್ದಾರೆ.

ದಿಗ್ಬಂಧನ ಹೇರಿದರೆ ಪ್ರತೀಕಾರದ ಕ್ರಮ: ಅಮೆರಿಕಕ್ಕೆ ಚೀನಾ ಎಚ್ಚರಿಕೆಯ ಸಂದೇಶ!

ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ ಹಾಗೂ ಅವರ ಪತ್ನಿ ಚೆನ್ನಮ್ಮ ದಾಂಪತ್ಯಕ್ಕೆ ಇದೀಗ 66 ವಸಂತಗಳ ಸಂಭ್ರಮ. ತಾತ ಹಾಗೂ ಅಜ್ಜಿಯ ವಿವಾಹ ವಾರ್ಷಿಕೋತ್ಸವಕ್ಕೆ ಅವರ ಮೊಮ್ಮಗ ನಿಖಿಲ್ ಕುಮಾರಸ್ವಾಮಿ ಶುಭಕೋರಿದ್ದಾರೆ.

ಟ್ವಿಟ್ಟರ್‌ನಲ್ಲಿ ಶುಭಾಶಯ ಸಲ್ಲಿಸಿದ ನಿಖಿಲ್ “ದಾಂಪತ್ಯ ಜೀವನಕ್ಕೆ ಕಾಲಿಟ್ಟು ಇಂದಿಗೆ 66 ವಸಂತಗಳನ್ನು ಪೂರೈಸಿರುವ ನಾಡಿನ ಆದರ್ಶ ದಂಪತಿಗಳಾಗಿರುವ ಪ್ರೀತಿಯ ತಾತ ಎಚ್‌ಡಿ ದೇವೇಗೌಡ ಹಾಗೂ ಅಜ್ಜಿ ಚೆನ್ಮಮ್ಮ ಅವರಿಗೆ ವಿವಾಹ ವಾರ್ಷಿಕೋತ್ಸವದ ಹಾರ್ದಿಕ ಶುಭಾಶಯಗಳು” ಎಂದಿದ್ದಾರೆ.

ಎಚ್‌ಡಿ ದೇವೇಗೌಡ ಅವರು ಹಾಸನ ತಾಲ್ಲೂಕಿನ ಮುತ್ತಿಗೆ ಹಿರೇಹಳ್ಳಿಯ ಚೆನ್ನಮ್ಮ ಅವರನ್ನು 1954ರಲ್ಲಿ ವಿವಾಹವಾಗಿದ್ದರು. ದೇವೇಗೌಡರ ರಾಜಕೀಯ ಜೀವನದಲ್ಲೂ ಅವರ ಪತ್ನಿ ಚೆನ್ನಮ್ಮ ಮಹತ್ವದ ಪಾತ್ರವನ್ನು ವಹಿಸಿದ್ದಾರೆ.

ಎಚ್‌.ಡಿ ದೇವೇಗೌಡ @ 87: ಮಾಜಿ ಪ್ರಧಾನಿ ಜನ್ಮದಿನಕ್ಕೆ ಗಣ್ಯರಿಂದ ಶುಭಾಶಯ

75948628



from India & World News in Kannada | VK Polls https://ift.tt/2zoJLrW

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...