ಭಾರತದ ಹಾಕಿ ದಂತಕತೆ ಬಲ್ಬೀರ್‌ ಸಿಂಗ್‌ ನಿಧನ, ಸಂತಾಪ ಸೂಚಿಸಿದ ಪ್ರಧಾನಿ ಮೋದಿ

ಹೊಸದಿಲ್ಲಿ: ಭಾರತೀಯ ಹಾಕಿಯ ದಿಗ್ಗಜ ಆಟಗಾರ ಬಲ್ಬೀರ್‌ ಸಿಂಗ್‌ ಸೀನಿಯರ್‌ ಅವರ ನಿಧನಕ್ಕೆ ಪ್ರಧಾನ ಮಂತ್ರಿ ಮತ್ತು ರಾಷ್ಟ್ರಪತಿ ರಾಮ್‌ನಾಥ್ ಕೋವಿಂದ್‌ ಸೋಮವಾರ ಸಂತಾಪ ಸೂಚಿಸಿದ್ದಾರೆ. ಮೂರು ಬಾರಿ ಚಾಂಪಿಯನ್‌ ಆಗಿರುವ ಬಲ್ಬೀರ್‌ ಸಿಂಗ್‌ (96) ಮೊಹಾಲಿಯ ಖಾಸಗಿ ಆಸ್ಪತ್ರೆಯೊಂದರಲ್ಲಿ ಸೋಮವಾರ ಬೆಳಗ್ಗೆ ಕೊನೆಯುಸಿರೆಳೆದಿದ್ದಾರೆ. ಅರ್ಧ ಕೋಮಾ ಸ್ಥಿತಿಯಲ್ಲಿದ್ದ ಬಲ್ಬೀರ್‌ ಸಿಂಗ್ ಮೊಹಾಲಿಯ ಫೋರ್ಟಿಸ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ವಿಪರೀತ ಜ್ವರ ಮತ್ತು ಉಸಿರಾಟದ ತೊಂದರೆ ಕಾಣಿಸಿಕೊಂಡಿದ್ದ ಕಾರಣ ಮೇ 8ರಂದು ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಅಂದಹಾಗೆ, ಕೋವಿಡ್‌-19 ಸೋಂಕು ಪತ್ತೆ ಪರೀಕ್ಷೆಯಲ್ಲಿ ನೆಗೇಟಿವ್‌ ವರದಿ ಬಂದಿತ್ತು ಎಂದು ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ. "ಹಾಕಿ ದಂತಕತೆ ಬಲ್ಬೀರ್‌ ಸಿಂಗ್‌ ಸೀನಿಯರ್‌ ಅವರ ನಿಧನ ಸುದ್ದಿ ಕೇಳಿ ಬಹಳ ಬೇಸರವಾಗಿದೆ. ಮೂರು ಬಾರಿಯ ಒಲಿಂಪಿಕ್‌ ಚಾಂಪಿಯನ್. ಪದ್ಮಿಶ್ರೀ ಪುರಸ್ಕೃತ, ಭಾರತದ ಸರ್ವೋತ್ತಮ ಕ್ರೀಡಾಪಟು. ಅವರ ಸಾಧನೆ ಮತ್ತು ಪರಂಪರೆ ಮುಂದಿನ ಪೀಳಿಗೆಯವರಿಗೆ ಮಾದರಿಯಾಗಲಿದೆ. ಅವರ ಕುಟುಂಬ ಮತ್ತು ಬಂಧುಮಿತ್ರರಿಗೆ ಧುಃಖ ಭರಿಸುವ ಶಕ್ತಿ ಸಿಗಲಿ," ಎಂದು ರಾಷ್ಟ್ರಪತಿ ಕೋವಿಂದ್‌ ಟ್ವೀಟ್‌ ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಕೂಡ ಟ್ವಿಟರ್‌ ಮೂಲಕ ಸಂತಾಪ ಸೂಚಿಸಿದ್ದಾರೆ. "ಪದ್ಮಶ್ರೀ ಬಲ್ಬೀರ್‌ ಸಿಂಗ್‌ ಜಿ ತಮ್ಮ ಕ್ರೀಡಾ ಸಾಧನೆಯ ಮೂಲಕವೇ ಚಿರಪರಿಚಿತರು. ಅವರು ದೇಶಕ್ಕೆ ಅಪಾರ ಕೀರ್ತಿ ತಂದಿದ್ದಾರೆ. ನಿಸ್ಸಂದೇಹವಾಗಿ ಅಮೋಘ ಹಾಕಿ ಆಟಗಾರ. ತರಬೇತುದಾರರಾಗಿಯೂ ಛಾಪು ಮೂಡಿಸಿದ್ದರು. ಅವರ ನಿಧನ ಬಹಳ ನೋವುಂಟು ಮಾಡಿದೆ. ಕುಟುಂಬದವರು ಮತ್ತು ಬಂಧುಮಿತ್ರರಿಗೆ ಸಾಂತ್ವನ ಹೇಳುತ್ತೇನೆ," ಎಂದಿದ್ದಾರೆ. ಮೂರು ಬಾರಿ ಒಲಿಂಪಿಕ್ಸ್‌ ಚಾಂಪಿಯನ್ಸ್‌ಬಲ್ಬೀರ್‌ ಸಿಂಗ್‌, 1948ರ ಲಂಡನ್‌ ಒಲಿಂಪಿಕ್ಸ್‌, 1952ರ ಹೆಲ್ಸಿಂಕಿ ಒಲಿಂಪಿಕ್ಸ್‌ ಮತ್ತು 1956ರ ಮೆಲ್ಬೋರ್ನ್‌ ಒಲಿಂಪಿಕ್ಸ್‌ನಲ್ಲಿ ಸ್ವರ್ಣ ಸಾಧನೆ ಮಾಡಿದ ಭಾರತ ತಂಡದ ಸದಸ್ಯರಾಗಿದ್ದರು. ಪುರುಷರ ಹಾಕಿಯ ಒಲಿಂಪಿಕ್ಸ್‌ ಫೈನಲ್‌ನಲ್ಲಿ ಅತಿ ಹೆಚ್ಚು ವೈಯಕ್ತಿಕ ಗೋಲ್‌ ದಾಖಲಿಸಿದ ದಾಖಲೆ ಈಗಲೂ ಬಲ್ಬೀರ್‌ ಹೆಸರಲ್ಲಿ ಇರುವುದು ವಿಶೇಷ. 1952ರಲ್ಲಿ ಹೆಲ್ಸಿಂಕಿಯಲ್ಲಿ ನಡೆದ ಒಲಿಂಪಿಕ್ಸ್‌ ಫೈನಲ್‌ ಪಂದ್ಯದಲ್ಲಿ ಬಲ್ಬೀರ್‌ ಸಿಂಗ್‌ 5 ಗೋಲ್‌ ಬಾರಿಸಿ ಭಾರತ ತಂಡಕ್ಕೆ ನೆದರ್ಲೆಂಡ್ಸ್‌ ವಿರುದ್ಧ 6-1ರ ಭರ್ಜರಿ ಜಯ ತಂದುಕೊಟ್ಟಿದ್ದರು. 1957ರಲ್ಲಿ ಭಾರತದ ನಾಲ್ಕನೇ ಅತ್ಯುನ್ನತ ನಾಗರೀಕ ಪ್ರಶಸ್ತಿ ಆಗಿರುವ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದ ಬಲ್ಬೀರ್‌ ಸಿಂಗ್, 2014ರಲ್ಲಿ ಹಾಕಿ ಇಂಡಿಯಾದಿಂದ ಜೀವಮಾನದ ಶ್ರೇಷ್ಠ ಸಾಧನೆಗೆ ಮೇಜರ್‌ ಧ್ಯಾನ್‌ ಚಂದ್‌ ಪ್ರಶಸ್ತಿ ಸ್ವೀಕರಿಸಿದ್ದರು. ಅಂತಾರಾಷ್ಟ್ರೀಯ ಒಲಿಂಪಿಕ್ಸ್‌ ಸಮಿತಿಯು ವಿಶ್ವದಾದ್ಯಂತ ಆಧುನಿಕ ಒಲಿಂಪಿಕ್ಸ್‌ನ ಶ್ರೇಷ್ಠರ ಸಾಲಿಗೆ ಆಯ್ಕೆಯಾದ ಏಷ್ಯಾದ 16 ಅಥ್ಲೀಟ್‌ಗಳ ಪೈಕಿ ಬಲ್ಬೀರ್‌ ಏಕಮಾತ್ರ ಭಾರತೀಯರಾಗಿದ್ದರು.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2TCZtXr

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...