ರಾಜ್ಯದಲ್ಲಿ ಸತತ 4ನೇ ದಿನವೂ 'ಕೊರೊನಾ' ಸೆಂಚುರಿ..! ಮತ್ತೆ 130 ಪಾಸಿಟಿವ್‌ ಕೇಸ್ ಪತ್ತೆ

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ವೈರಸ್‌ನ ರುದ್ರ ನರ್ತನ ಮುಂದುವರೆದಿದೆ. ಸತತ ನಾಲ್ಕನೇ ದಿನ 100 ಪ್ಲಸ್‌ ಪ್ರಕರಣಗಳು ವರದಿಯಾಗಿದ್ದು, ರಾಜ್ಯದ ಜನರನ್ನು ಆತಂಕಕ್ಕೆ ತಳ್ಳಿದೆ. ಶನಿವಾರ 216 ಪ್ರಕರಣಗಳು ವರದಿಯಾಗಿದ್ದ ಕರ್ನಾಟಕದಲ್ಲಿ ಭಾನುವಾರ 130 ಪಾಸಿಟಿವ್‌ ಕೇಸ್‌ಗಳು ಪತ್ತೆಯಾಗಿವೆ. ಈ ಮೂಲಕ ರಾಜ್ಯದಲ್ಲಿ ಕೋವಿಡ್-19 2 ಸಾವಿರದ ಗಡಿ ದಾಟಿದ್ದು, ಕೊರೊನಾ ಸೋಂಕಿತರ ಸಂಖ್ಯೆ 2089ಕ್ಕೆ ಏರಿಕೆಯಾಗಿದೆ. ಭಾನುವಾರ ಚಿಕ್ಕಬಳ್ಳಾಪುರದಲ್ಲಿ ಅತಿ ಹೆಚ್ಚು ಎಂಬಂತೆ 27 ಕೊರೊನಾ ಪಾಸಿಟಿವ್‌ ಪ್ರಕರಣಗಳು ಕಂಡುಬಂದಿದ್ದು, ಯಾದಗಿರಿ 24, ಉಡುಪಿ 23, ಮಂಡ್ಯ 15 ಹಾಗೂ ಹಾಸನದಲ್ಲಿ 14 ಹೊಸ ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ. ಇಂದು ಪತ್ತೆಯಾದ ಹೊಸ ಪ್ರಕರಣಗಳ ಪೈಕಿ 105 ಜನ ಹೊರರಾಜ್ಯದಿಂದ ಬಂದಿದ್ದರೆ, ಇಬ್ಬರು ವಿದೇಶದಿಂದ ಬಂದವರಾಗಿದ್ದಾರೆ. ಇದುವರೆಗೂ 2089 ಸೋಂಕಿತರಲ್ಲಿ 42 ಜನ ಕೊರೊನಾದಿಂದ ಮೃತಪಟ್ಟಿದ್ದರೆ, ಇಬ್ಬರು ಕೊರೊನಾ ಅಲ್ಲದ ಕಾರಣದಿಂದ ಸಾವನ್ನಪ್ಪಿದ್ದಾರೆ. ಇನ್ನು, 654 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, 1391 ಪ್ರಕರಣಗಳು ರಾಜ್ಯದಲ್ಲಿ ಸಕ್ರಿಯವಾಗಿವೆ.

ಶುಕ್ರವಾರ 45, ಶನಿವಾರ 26 ಪ್ರಕರಣಗಳು ವರದಿಯಾಗಿದ್ದ ಚಿಕ್ಕಬಳ್ಳಾಪುರದಲ್ಲಿ ಭಾನುವಾರ ಮತ್ತೆ 27 ಪಾಸಿಟಿವ್‌ ಪ್ರಕರಣಗಳು ಪತ್ತೆಯಾಗಿವೆ. ಒಬ್ಬರನ್ನು ಹೊರತುಪಡಿಸಿ ಉಳಿದ ಎಲ್ಲ ಪ್ರಕರಣಗಳು ಮಹಾರಾಷ್ಟ್ರದ ನಂಟು ಹೊಂದಿವೆ. ಹೊಸ ಸೋಂಕಿತರ ಪೈಕಿ 14 ಜನ ಮಹಿಳೆಯರು ಹಾಗೂ 13 ಜನ ಪುರುಷರು ಸೇರಿದ್ದಾರೆ. ಜಿಲ್ಲೆಯಲ್ಲಿ ಮೂರು ದಿನಗಳಲ್ಲಿ 98 ಪ್ರಕರಣಗಳು ಸಿಕ್ಕಿರುವುದು ಜಿಲ್ಲಾಡಳಿತದ ನಿದ್ದೆಗೆಡಿಸಿದೆ. ಈ 27 ಪ್ರಕರಣಗಳೊಂದಿಗೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆಯೂ ಕೂಡ ಶತಕ ದಾಟಿದ್ದು, ಜಿಲ್ಲೆಯಲ್ಲೀಗ 126 ಸೋಂಕಿತರು ಇದ್ದಾರೆ. ಇದರಲ್ಲಿ 18 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದರೆ, ಇಬ್ಬರು ಸಾವನ್ನಪ್ಪಿದ್ದು, 106 ಸಕ್ರಿಯ ಪ್ರಕರಣಗಳಿವೆ.

ಮೂರನೇ ಲಾಕ್‌ಡೌನ್‌ ಮುಗಿಯುವವರೆಗೂ ಒಂದೇ ಒಂದು ಕೊರೊನಾ ಪ್ರಕರಣ ಕಂಡುಬರದ ಯಾದಗಿರಿ ಜಿಲ್ಲೆಯಲ್ಲಿ ಕೊರೊನಾ ಅಬ್ಬರ ಜೋರಾಗಿದೆ. ಕೆಲವೇ ದಿನಗಳಲ್ಲಿ ಯಾದಗಿರಿಯಲ್ಲಿ ಕೊರೊನಾ ವೈರಸ್‌ ಶತಕ ಬಾರಿಸಿದ್ದು, ಜಿಲ್ಲೆಯ ಜನರಲ್ಲಿ ಆತಂಕ ಸೃಷ್ಟಿಸಿದೆ. ಶುಕ್ರವಾರ 72 ಪಾಸಿಟಿವ್‌ ಪ್ರಕರಣಗಳು ಕಂಡುಬಂದಿದ್ದ ಜಿಲ್ಲೆಯಲ್ಲಿ ಇಂದು ಮತ್ತೆ 24 ಹೊಸ ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ. ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತೆ ಸಂಖ್ಯೆ 111ಕ್ಕೆ ಏರಿಕೆಯಾಗಿದೆ. ಭಾನುವಾರ ಮತ್ತು ಶನಿವಾರ ಪತ್ತೆಯಾದ ಎಲ್ಲ 96 ಪ್ರಕರಣಗಳು ಕೂಡ ಮಹಾರಾಷ್ಟ್ರದ ನಂಟು ಹೊಂದಿವೆ. ಇಷ್ಟೇ ಅಲ್ಲದೇ ಜಿಲ್ಲೆಯ ಬಹುತೇಕ ಪ್ರಕರಣಗಳು ಮಹಾರಾಷ್ಟ್ರದಿಂದ ಬಂದವರಲ್ಲಿಯೇ ಕಾಣಿಸಿಕೊಂಡಿವೆ.

ಭಾನುವಾರ ಚಿಕ್ಕಬಳ್ಳಾಪುರ ಹಾಗೂ ಯಾದಗಿರಿ ಹೊರತುಪಡಿಸಿದರೆ ಹೆಚ್ಚು ಪ್ರಕರಣಗಳು ಕಂಡುಬಂದಿದ್ದು, ಉಡುಪಿ, ಮಂಡ್ಯ ಹಾಗೂ ಹಾಸನ ಜಿಲ್ಲೆಗಳಲ್ಲಿ. ಉಡುಪಿಯಲ್ಲಿ ಭಾನುವಾರ 23 ಪಾಸಿಟಿವ್‌ ಪ್ರಕರಣಗಳು ಪತ್ತೆಯಾಗಿದ್ದು, ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 76ಕ್ಕೆ ಏರಿಕೆಯಾಗಿದೆ. ಇನ್ನು, ಸಕ್ಕರೆ ನಾಡು ಮಂಡ್ಯದಲ್ಲಿ ಮತ್ತೆ 15 ಪಾಸಿಟಿವ್‌ ಪ್ರಕರಣಗಳು ವರದಿಯಾಗಿದ್ದು, ಸೋಂಕಿತರ ಸಂಖ್ಯೆ 226ಕ್ಕೇರಿದೆ. ಹಾಸನದಲ್ಲಿಯೂ 14 ಹೊಸ ಸೋಂಕಿತರು ಕಂಡುಬಂದಿದ್ದಾರೆ. ಜಿಲ್ಲೆಯಲ್ಲಿ ಕೊರೊನಾ ಶತಕದ ಹೊಸ್ತಿಲಲ್ಲಿ ನಿಂತಿದ್ದು, ಕೊರೊನಾ ಸೋಂಕಿತರ ಸಂಖ್ಯೆ ಇನ್ನು ಹೆಚ್ಚಾಗುವ ಸೂಚ್ಯವನ್ನು ದಾಖಲಿಸಿದೆ.

ರಾಜ್ಯದಲ್ಲಿಂದು ಕಂಡುಬಂದ 130 ಹೊಸ ಸೋಂಕಿತರ ಸಂಖ್ಯೆಯನ್ನು ಜಿಲ್ಲಾವಾರು ಗಮನಿಸಿದರೆ,

* ಚಿಕ್ಕಬಳ್ಳಾಪುರ - 27

* ಯಾದಗಿರಿ - 24

* ಉಡುಪಿ - 23

* ಮಂಡ್ಯ - 15

* ಹಾಸನ - 14

* ಕಲಬುರಗಿ - 6

* ಬೀದರ್‌ - 6

* ದಾವಣಗೆರೆ - 4

* ಉತ್ತರ ಕನ್ನಡ - 2

* ತುಮಕೂರು - 2

* ಶಿವಮೊಗ್ಗ - 2

* ವಿಜಯಪುರ - 1

* ದಕ್ಷಿಣ ಕನ್ನಡ - 1

* ಕೊಡಗು - 1

* ಧಾರವಾಡ - 1

* ಬೆಂಗಳೂರು ನಗರ - 1 ಸೋಂಕಿತರು ಹೊಸದಾಗಿ ಪತ್ತೆಯಾಗಿದ್ದಾರೆ.

ರಾಜ್ಯದ 2089 ಸೋಂಕಿತರ ಪೈಕಿ ಜಿಲ್ಲಾವಾರು ಸೋಂಕಿತರ ಸಂಖ್ಯೆಯನ್ನು ಗಮನಿಸುವುದಾದರೆ, ಬೆಂಗಳೂರು ನಗರ (266), ಮಂಡ್ಯ (252), ಕಲಬುರಗಿ (141), ಬೆಳಗಾವಿ (127), ಚಿಕ್ಕಬಳ್ಳಾಪುರ (126), ದಾವಣಗೆರೆ (125), ಯಾದಗಿರಿ (111), ಹಾಸನ (98), ಮೈಸೂರು (90), ಬೀದರ್‌ (85), ಬಾಗಲಕೋಟೆ (77), ಉಡುಪಿ (76), ವಿಜಯಪುರ (69), ಉತ್ತರ ಕನ್ನಡ (68), ರಾಯಚೂರು (66), ದಕ್ಷಿಣ ಕನ್ನಡ (58), ಧಾರವಾಡ (39), ಗದಗ (35), ಶಿವಮೊಗ್ಗ (34), ಬಳ್ಳಾರಿ (33), ತುಮಕೂರು (26), ಕೋಲಾರ (14), ಚಿತ್ರದುರ್ಗ (11), ಬೆಂಗಳೂರು ಗ್ರಾಮಾಂತರ (11), ಚಿಕ್ಕಮಗಳೂರು (10) ಹಾವೇರಿ (06), ಕೊಪ್ಪಳ (03), ಕೊಡಗು (03) ಹಾಗೂ ಇತರೆ (29) ಸೋಂಕಿತರು ಕಂಡು ಬಂದಿದ್ದಾರೆ. ರಾಮನಗರ ಹಾಗೂ ಚಾಮರಾಜನಗರ ಜಿಲ್ಲೆಗಳಲ್ಲಿ ಇದುವರೆಗೂ ಯಾವುದೇ ಸೋಂಕಿತರು ಕಂಡುಬಂದಿಲ್ಲ.



from India & World News in Kannada | VK Polls https://ift.tt/2TzNtWA

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...