ಹೊಸದಿಲ್ಲಿ: ನಿರ್ಭಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿರುವ ಅಪರಾಧಿಗಳ ಪರವಾಗಿ ಮತ್ತೆ ಮೊರೆ ಹೋಗುವುದಾಗಿ ಅಪರಾಧಿಗಳ ಪರ ವಾದಿಸಿದ ವಕೀಲ ಎಪಿ ಸಿಂಗ್ ಹೇಳಿದ್ದಾರೆ. “ಒಂದೆರಡು ದಿನದೊಳಗೆ ಸುಪ್ರೀಂ ಕೋರ್ಟ್ಗೆ ನಾವು ಸಲ್ಲಿಸಲಿದ್ದೇವೆ. ಸುಪ್ರೀಂ ಕೋರ್ಟ್ ಅತ್ಯಂತ ಹಿರಿಯ ಐವರು ನ್ಯಾಯಮೂರ್ತಿಗಳು ಈ ಅರ್ಜಿಯ ವಿಚಾರಣೆ ನಡೆಸಲಿದ್ದಾರೆ. ಆರಂಭದಿಂದಲೂ ಈ ಪ್ರಕರಣದಲ್ಲಿ ಮಾಧ್ಯಮ, ಸಾರ್ವಜನಿಕರು ಮತ್ತು ರಾಜಕೀಯ ಒತ್ತಡವಿತ್ತು. ಈ ಪ್ರಕರಣದಲ್ಲಿ ನಿಷ್ಪಕ್ಷಪಾತ ತನಿಖೆ ನಡೆದಿಲ್ಲ,” ಎಂದಿದ್ದಾರೆ. ಏನಿದು ಕ್ಯುರೇಟಿವ್ ಪಿಟಿಷನ್? ಕ್ಯುರೇಟಿವ್ ಪಿಟಿಷನ್ ಭಾರತದ ನ್ಯಾಯಾಂಗ ವ್ಯವಸ್ಥೆಯಲ್ಲಿ ಇರುವ ಅಂತಿಮ ಆಯ್ಕೆಯಾಗಿದೆ. ಅಂತಿಮ ಆದೇಶ ಬಂದ ನಂತರ, ಮೇಲ್ಮನವಿ ಅರ್ಜಿಯ ತೀರ್ಪೂ ಹೊರ ಬಿದ್ದ ಮೇಲೆ ಈ ಪಿಟಿಷನ್ ಸಲ್ಲಿಸಬಹುದಾಗಿದೆ. ಅಪರೂಪದಲ್ಲಿ ಅಪರೂಪದ ಪ್ರಕರಣದಲ್ಲಿ ಮಾತ್ರ ಈ ಅರ್ಜಿಯನ್ನು ಸಲ್ಲಿಸಲಾಗುತ್ತದೆ. ‘ರೂಪಾ ಅಶೋಕ್ ಹುರ್ರಾ ವರ್ಸಸ್ ಅಶೋಕ್ ಹುರ್ರಾ ಮತ್ತು ಇತರರು (2002)’ ಪ್ರಕರಣದ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ಈ ಕಲ್ಪನೆಯನ್ನು ಚಾಲ್ತಿಗೆ ತಂದಿತು. ತನ್ನ ಪ್ರಕ್ರಿಯೆಯ ದುರುಪಯೋಗವನ್ನು ತಡೆಗಟ್ಟಲು ಮತ್ತು ಸಂಪೂರ್ಣ ನ್ಯಾಯವನ್ನು ನೀಡುವ ಉದ್ದೇಶದಿಂದ ಸುಪ್ರೀಂ ಕೋರ್ಟ್ ತನಗಿರುವ ಅಂತರ್ಗತ ಅಧಿಕಾರವನ್ನು ಚಲಾಯಿಸಿ ತನ್ನದೇ ತೀರ್ಪುಗಳನ್ನು ಮರುಪರಿಶೀಲಿಸಬಹುದು ಎಂದು ಅಭಿಪ್ರಾಯಪಟ್ಟಿತು. ಇದನ್ನು ನ್ಯಾಯಾಲಯ ‘ಕ್ಯೂರೇಟಿವ್ ಅರ್ಜಿ’ ಎಂದು ಕರೆಯಿತು. ಈ ಅರ್ಜಿ ಸಲ್ಲಿಸುವಾಗ ಅರ್ಜಿದಾರರು, ಮರುಪರಿಶೀಲನೆ ಅರ್ಜಿಯಲ್ಲಿ ಉಲ್ಲೇಖಿಸಲಾದ ಅಂಶಗಳನ್ನು ತೆಗೆದುಕೊಳ್ಳಲಾಗಿದೆ ಮತ್ತು ಇದು ಮರುಪರಿಶೀಲನೆ ವೇಳೆ ವಜಾಗೊಂಡಿದೆ ಎಂದು ಸ್ಪಷ್ಟವಾಗಿ ಹೇಳಬೇಕು. ಇದನ್ನು ಹಿರಿಯ ವಕೀಲರು ಪ್ರಾಮಾಣೀಕರಿಸಬೇಕು. ನಂತರ ಈ ಅರ್ಜಿಯನ್ನು ಸುಪ್ರೀಂ ಕೋರ್ಟ್ನ ಅತೀ ಹಿರಿಯ ಮೂವರು ನ್ಯಾಯಮೂರ್ತಿಗಳಿಗೆ ಮತ್ತು ಆದೇಶ ನೀಡಿದ ನ್ಯಾಯಮೂರ್ತಿಗಳಿದ್ದರೆ ಅವರಿಗೆ ಕಳುಹಿಸಲಾಗುತ್ತದೆ. ಈ ಅರ್ಜಿ ಸಲ್ಲಿಸಲು ಯಾವುದೇ ಕಾಲಾವಕಾಶವನ್ನು ನೀಡುವುದಿಲ್ಲ. ಸಂವಿಧಾನದ ಪರಿಚ್ಛೇದ 137ರಲ್ಲಿ ಇದಕ್ಕೆ ಅವಕಾಶವಿದೆ. ಅಂದರೆ ಸುಪ್ರೀಂ ಕೋರ್ಟ್ಗೆ ತನ್ನದೇ ಆದೇಶಗಳನ್ನು ಮರುಪರಿಶೀಲಿಸುವ ಅಧಿಕಾರವಿದೆ.
from India & World News in Kannada | VK Polls https://ift.tt/37NeRoV