ಹೊಸದಿಲ್ಲಿ: ಪೌರತ್ವ ತಿದ್ದುಪಡಿ ಕಾಯಿದೆ ವಿರೋಧಿಸಿ ಪ್ರತಿಭಟನೆ ನಡೆಯುತ್ತಿರುವ ಹಿನ್ನೆಲೆಯಲ್ಲಿಅಸ್ಸಾಂನ ಗುವಾಹಟಿಯಲ್ಲಿ ನಡೆಯಬೇಕಿರುವ ಭಾರತ ಹಾಗೂ ಶ್ರೀಲಂಕಾ ನಡುವಣ ಟಿ20 ಪಂದ್ಯದ ಮೇಲೆ ಆತಂಕದ ಕರಿಛಾಯೆ ಮೂಡಿದೆ. ಗುವಾಹಟಿಯ ಬರ್ಸಾಪಾರ ಸ್ಟೇಡಿಯಂನಲ್ಲಿ3 ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯ ನಿಗದಿಯಾಗಿದೆ. ಶ್ರೀಲಂಕಾ ತಂಡ ಗುರುವಾರ ಸಂಜೆಯೇ ಗುವಾಹಟಿ ತಲುಪಿದೆ. ಆದರೆ, ವೆಸ್ಟ್ ಇಂಡೀಸ್ ವಿರುದ್ಧದ ಸರಣಿ ಬಳಿಕ ದೀರ್ಘ ವಿಶ್ರಾಂತಿಯಲ್ಲಿರುವ ಟೀಮ್ ಇಂಡಿಯಾ ಯಾವಾಗ ರಾಜಧಾನಿ ಪ್ರವೇಶಿಸಲಿದೆ ಎಂಬುದರ ಸುಳಿವಿಲ್ಲ. ಗುವಾಹಟಿ ಬೆಳವಣಿಗೆ ಬಗ್ಗೆ ಬಿಸಿಸಿಐ ಹಾಗೂ ಅಸ್ಸಾಂ ಕ್ರಿಕೆಟ್ ಸಂಸ್ಥೆ ಜಂಟಿಯಾಗಿ ತೀವ್ರ ನಿಗಾ ವಹಿಸಿವೆ. ''ಕ್ರೀಡಾಂಗಣವನ್ನು ಪೊಲೀಸರ ನಿಯಂತ್ರಣಕ್ಕೆ ನೀಡಲಾಗಿದೆ. ರಾಜಧಾನಿಯ ಪರಿಸ್ಥಿತಿ ತಿಳಿಯಾಗಿದ್ದು, ಇನ್ನೆರಡು ದಿನಗಳಲ್ಲಿಸಂಪೂರ್ಣ ನಿಯಂತ್ರಣಕ್ಕೆ ಬರಲಿದೆ,'' ಎಂದು ಅಸ್ಸಾಂ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷ ರೊಮೆನ್ ದತ್ತಾ ಗುರುವಾರ ಮಾಧ್ಯಮ ಮಂದಿಗೆ ತಿಳಿಸಿದ್ದಾರೆ. ಶುಕ್ರವಾರ ಬೆಳಗ್ಗೆ ವಿವಿಧ ಪಂಗಡಗಳಾಗಿ ಭಾರತೀಯ ತಂಡದ ಆಟಗಾರರು ಗುವಾಹಟಿಯನ್ನು ತಲುಪುವ ನಿರೀಕ್ಷೆಯಿದೆ. ಈ ಹಿಂದೆ ಗುರುವಾರ ತಡರಾತ್ರಿಯೇ ನಗರವನ್ನು ಪ್ರವೇಶಿಸುವ ಸಾಧ್ಯತೆಯಿತ್ತು ಎಂದು ಟೀಮ್ ಮ್ಯಾನೇಜ್ಮೆಂಟ್ ತಿಳಿಸಿತ್ತು. ಅತ್ತ ಲಸಿತ್ ಮಾಲಿಂಗ ನೇತೃತ್ವದ ಲಂಕಾ ತಂಡಕ್ಕೆ ಭಾರಿ ಭದ್ರತೆಯನ್ನು ಒದಗಿಸಲಾಗಿದೆ. ಈ ಸಂಬಂಧ ಕ್ರಿಕೆಟ್ ಸಂಸ್ಥೆಯು ಚಿತ್ರವನ್ನು ಹಂಚಿದೆ. ಲಂಕಾ ಸಂಪ್ರದಾಯದಂತೆ ಪೂಜೆಯನ್ನು ಸಲ್ಲಿಸಿ ಭಾರತದಲ್ಲಿ ಗೆಲುವಿಗಾಗಿ ಪ್ರಾರ್ಥನೆ ಸಲ್ಲಿಸಲಾಯಿತು. ಶುಕ್ರವಾರದಂದು ಐಚ್ಛಿಕ ಅಭ್ಯಾಸ ಅವಧಿಯು ನಿಗದಿಯಾಗಿದೆ. ಮುಂಬರುವ ಟ್ವೆಂಟಿ-20 ವಿಶ್ವಕಪ್ ಹಿನ್ನೆಲೆಯಲ್ಲಿ ಭಾರತ ಹೆಚ್ಚೆಚ್ಚು ಟಿ20 ಟೂರ್ನಿಗಳಲ್ಲಿ ಆಡುವುದರಲ್ಲಿ ಕಾರ್ಯ ಮಗ್ನವಾಗಿದೆ. ಅಸ್ಸಾಂ ಸ್ಟೇಡಿಯಂ 39,500 ಸಾಮರ್ಥ್ಯವನ್ನು ಹೊಂದಿದೆ. ಈ ಪೈಕಿ ಈಗಾಗಲೇ 27000 ಟಿಕೆಟ್ಗಳು ಮಾರಾಟವಾಗಿದೆ. ಹಾಗಾಗಿ ಸ್ಟೇಡಿಯಂ ಕಿಕ್ಕಿರಿದು ತುಂಬಿಕೊಳ್ಳಲಿದೆ ಎಂಬುದರಲ್ಲಿ ಅನುಮಾನವಿಲ್ಲ. ಲಸಿತ್ ಮಾಲಿಂಗ ಜತೆಗೆ ಮಾಜಿ ನಾಯಕರಾದ ಆ್ಯಂಗಲೋ ಮ್ಯಾಥ್ಯೂಸ್ ಹಾಗೂ ಧನಂಜಯ ಡಿ ಸಿಲ್ವ ತಂಡಕ್ಕೆ ಪುನರಾಗಮನ ಮಾಡಿದ್ದಾರೆ. ಇನ್ನೊಂದೆಡೆ ಭಾರತ ತಂಡದಲ್ಲಿ ಜಸ್ಪ್ರೀತ್ ಬುಮ್ರಾ ಹಾಗೂ ಶಿಖರ್ ಧವನ್ ಕಮ್ ಬ್ಯಾಕ್ ಮಾಡಿರುವುದು ಪ್ರಮುಖ ಅಂಶವಾಗಿದೆ.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2tpnWFo