ಕೋಲ್ಕತ: ಪೌರತ್ವ ತಿದ್ದುಪಡಿ ಕಾಯಿದೆ ಜಾರಿಯಿಂದ ಪಾಕಿಸ್ತಾನದಲ್ಲಿಧಾರ್ಮಿಕ ಅಲ್ಪಸಂಖ್ಯಾತರು ಎದುರಿಸುತ್ತಿರುವ ದೌರ್ಜನ್ಯದ ಕರಾಳಮುಖ ಜಗತ್ತಿಗೆ ತಿಳಿಯುವಂತಾಯಿತು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಈ ಮೂಲಕ ಸಿಎಎ ಅನ್ನು ಸಮರ್ಥಿಸಿಕೊಂಡಿದ್ದಲ್ಲದೇ, ಕಾಯಿದೆ ತಿದ್ದುಪಡಿ ವಿರುದ್ಧ ಪ್ರತಿಪಕ್ಷಗಳು ಅನಗತ್ಯವಾಗಿ ಹುಯಿಲೆಬ್ಬಿಸುತ್ತಿವೆ ಎಂದು ಆರೋಪಿಸಿದ್ದಾರೆ. ಸ್ವಾಮಿ ವಿವೇಕಾನಂದರಿಂದ ಸ್ಥಾಪಿತಗೊಂಡಿರುವ ರಾಮಕೃಷ್ಣ ಮಿಷನ್ ಕೇಂದ್ರ ಕಚೇರಿ ಇರುವ ಕೋಲ್ಕತದ ಬೇಲೂರು ಮಠದಲ್ಲಿ ಕಾರ್ಯಕ್ರಮ ಉದ್ದೇಶಿ ಮಾತನಾಡಿದ ಪ್ರಧಾನಿ ''ನಾವು ರಾತ್ರೋರಾತ್ರಿ ಸಿಎಎ ಜಾರಿಗೊಳಿಸಿಲ್ಲ. ವಿಸ್ತೃತ ಚರ್ಚೆ ಬಳಿಕವೇ ನಿರ್ಧಾರ ಕೈಗೊಂಡಿದ್ದೇವೆ. ಯಾವೊಬ್ಬ ಭಾರತೀಯರ ಪೌರತ್ವದ ಹಕ್ಕನ್ನೂ ಇದು ಕಸಿದುಕೊಳ್ಳುವುದಿಲ್ಲ. ಕಾಯಿದೆಯಲ್ಲಿಒಂದೇ ಒಂದು ಮುಸ್ಲಿಂ ವಿರೋಧಿ ಪ್ರಸ್ತಾವನೆಗಳಿಲ್ಲ. ಆದರೆ ಒಂದಂತೂ ಸತ್ಯ, ಕಾಯಿದೆ ಕುರಿತು ಇಷ್ಟೊಂದು ದೊಡ್ಡ ಮಟ್ಟದಲ್ಲಿ ಚರ್ಚೆ ನಡೆಯದೇ ಇದ್ದಿದ್ದರೆ ಪಾಕ್ನಲ್ಲಿ ಧಾರ್ಮಿಕ ಅಲ್ಪಸಂಖ್ಯಾತ ನಮ್ಮ ಸಹೋದರ, ಸಹೋದರಿಯರ ಮೇಲೆ ನಡೆಯುತ್ತಿರುವ ಶೋಷಣೆ ಜಗತ್ತಿಗೆ ತಿಳಿಯುತ್ತಲೇ ಇರಲಿಲ್ಲ,'' ಎಂದು ಹೇಳಿದರು. ಪಾಕ್ ಈಗಲಾದರೂ ತನ್ನ ನೆಲದಲ್ಲಿ ಅಲ್ಪಸಂಖ್ಯಾತರ ಹಕ್ಕುಗಳನ್ನು ವ್ಯವಸ್ಥಿತವಾಗಿ ದಮನಗೊಳಿಸಲಾಗಿದೆ ಎಂಬ ಕಹಿಸತ್ಯ ಒಪ್ಪಿಕೊಳ್ಳಬೇಕು ಎಂದರು. ಪಾಕಿಸ್ತಾನ, ಅಫ್ಘಾನಿಸ್ತಾನ, ಬಾಂಗ್ಲಾದೇಶದಲ್ಲಿಅಲ್ಪಸಂಖ್ಯಾತರಾಗಿರುವ ಹಿಂದೂ, ಸಿಖ್, ಪಾರ್ಸಿ, ಬೌದ್ಧ, ಜೈನ ಮತ್ತು ಕ್ರಿಶ್ಚಿಯನ್ ಧರ್ಮದವರಿಗೆ ಭಾರತದಲ್ಲಿಆಶ್ರಯ ಕಲ್ಪಿಸುವುದರಲ್ಲಿ ತಪ್ಪೇನಿದೆ? ಈ ತ್ರಿವಳಿ ದೇಶಗಳಲ್ಲಿ ಕಿರುಕುಳ ಅನುಭವಿಸಿ ಆಶ್ರಯ ಅರಸಿ ಭಾರತಕ್ಕೆ ಬಂದಿರುವ ನಿರಾಶ್ರಿತರಿಗೆ ಪೌರತ್ವ ನೀಡಿದರೆ ಹುಯಿಲೆಬ್ಬಿಸುವುದೇಕೆ ಎಂದು ಪ್ರಶ್ನಿಸಿದ ಅವರು, ''ಯುವ ಸಮುದಾಯದಲ್ಲಿಅನೇಕರು ಬುದ್ಧಿವಂತರಿದ್ದರೂ ಅವರನ್ನು ಕೆಲವು ರಾಜಕೀಯ ಪಕ್ಷಗಳು ದಿಕ್ಕು ತಪ್ಪಿಸುತ್ತಿವೆ. ಸಿಎಎ ವಿಚಾರದಲ್ಲಿ ಕೇಂದ್ರದ ವಿರುದ್ಧ ವ್ಯವಸ್ಥಿತವಾಗಿ ಅಪಪ್ರಚಾರ ನಡೆಸಲಾಗುತ್ತಿದೆ,'' ಎಂದು ಪ್ರತಿಪಕ್ಷಗಳನ್ನು ಟೀಕಿಸಿದರು. ಈಶಾನ್ಯದ ಅಸ್ಮಿತೆ ರಕ್ಷಣೆ: ಸಿಎಎ ಬಗ್ಗೆ ರಾಷ್ಟ್ರಪಿತ ಮಹಾತ್ಮ ಗಾಂಧಿ ಸಹ ಒಲವು ತೋರಿದ್ದರು ಎಂಬ ವಿಚಾರ ಪ್ರಸ್ತಾಪಿಸಿದ ಅವರು, ಈಶಾನ್ಯ ಭಾರತದ ಸಂಸ್ಕೃತಿಗೆ ಪೆಟ್ಟು ಬೀಳಲಿದೆ ಎಂಬುದೆಲ್ಲವೂ ಪ್ರತಿಪಕ್ಷಗಳ ಕಟ್ಟುಕಥೆ. ಈಶಾನ್ಯದ ಅಸ್ಮಿತೆಗೆ ಯಾವ ರೀತಿಯಿಂದಲೂ ಧಕ್ಕೆಯಾಗದು ಎಂದರು. ನೋ ಕಮೆಂಟ್ಸ್: ''ನಮಗೂ ರಾಜಕೀಯಕ್ಕೂ ಸಂಬಂಧವಿಲ್ಲ. ನಮ್ಮ ಸಂಸ್ಥೆ ರಾಜಕೀಯವನ್ನು ಮೀರಿದ್ದಾಗಿದ್ದು, ಎಲ್ಲಧರ್ಮದವರನ್ನೂ ಸಮಾನ ಭಾವನೆಯಿಂದ ನೋಡಲಾಗುತ್ತದೆ. ಸಿಎಎ ಕುರಿತ ಪ್ರಧಾನಿ ಭಾಷಣದ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲ್ಲ,'' ಎಂದು ರಾಮಕೃಷ್ಣ ಮಿಷನ್ ಹೇಳಿದೆ. ''ನಮಗೆ ಭಾರತದ ನಾಯಕರಾದರೆ ಸಿಎಂ ಮಮತಾ ಬ್ಯಾನರ್ಜಿ ಪಶ್ಚಿಮ ಬಂಗಾಳದ ನಾಯಕಿ. ನಮ್ಮ ಸಂಸ್ಥೆಯಲ್ಲಿಹಿಂದೂ, ಇಸ್ಲಾಂ, ಕ್ರಿಶ್ಚಿಯನ್ ಧರ್ಮದಲ್ಲಿನಂಬಿಕೆ ಇರಿಸಿದ ಸನ್ಯಾಸಿಗಳು ಇರುವರು. ಎಲ್ಲಕ್ಕಿಂತಲೂ ಹೆಚ್ಚಾಗಿ ಒಂದೇ ಕುಟುಂಬದ ಸಹೋದರರಂತೆ ಜೀವಿಸುತ್ತಿದ್ದೇವೆ. ರಾಜಕೀಯ ಭಾಷಣ ಕುರಿತು ಯಾವುದೇ ಹೇಳಿಕೆ ನೀಡಲ್ಲ,''ಎಂದು ರಾಮಕೃಷ್ಣ ಮಿಷನ್ ಪ್ರಧಾನ ಕಾರ್ಯದರ್ಶಿ ಸ್ವಾಮಿ ಸುವಿರಾನಂದ ಹೇಳಿದ್ದಾರೆ. ಟ್ರಸ್ಟ್ಗೆ ಶ್ಯಾಮ್ ಪ್ರಸಾದ್ ಮುಖರ್ಜಿ ಹೆಸರು: ಕೋಲ್ಕತ ಬಂದರು ಟ್ರಸ್ಟ್ಗೆ ಜನಸಂಘ ಸಂಸ್ಥಾಪಕ ಡಾ.ಶ್ಯಾಮ್ ಪ್ರಸಾದ್ ಮುಖರ್ಜಿ ಟ್ರಸ್ಟ್ ಎಂದು ಮರು ನಾಮಕರಣ ಮಾಡಲಾಗಿದೆ. ಟ್ರಸ್ಟ್ನ 150ನೇ ವರ್ಷಾಚರಣೆ ಕಾರ್ಯಕ್ರಮದಲ್ಲಿಪ್ರಧಾನಿ ಮೋದಿ ಅವರು, ಮುಖರ್ಜಿ ಅವರು ಭಾರತದ ಕೈಗಾರಿಕೀಕರಣದ ಪಿತಾಮಹ ಎಂದು ಬಣ್ಣಿಸಿದರು. ಪ್ರಧಾನಿ ಅವರ ಭಾನುವಾರದ ಯಾವ ಕಾರ್ಯಕ್ರಮಗಳಲ್ಲೂ'ದೀದಿ' ವೇದಿಕೆ ಹಂಚಿಕೊಳ್ಳಲಿಲ್ಲ.
from India & World News in Kannada | VK Polls https://ift.tt/3a0IPHL