ನನ್ನ ಪಯಣ ಇತರೆ ಆಟಗಾರರಿಗಿಂತಲೂ ವಿಭಿನ್ನ: ಮಯಾಂಕ್ ಅಗರ್ವಾಲ್

ಬೆಂಗಳೂರು: 2018 ಡಿಸೆಂಬರ್ 26ರಂದು ಮೆಲ್ಬೋರ್ನ್‌ನಲ್ಲಿ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ಪಾದಾರ್ಪಣೆ ಮಾಡಿರುವ ಯುವ ಭರವಸೆಯ ಆರಂಭಿಕ ಬ್ಯಾಟ್ಸ್‌ಮನ್ , ಅಲ್ಲಿಂದ ಬಳಿಕ ಹಿಂತಿರುಗಿ ನೋಡಿಲ್ಲ. ಕಳೆದೊಂದು ಸಾಲಿನಲ್ಲಿ ಆಡಿರುವ ಒಂಬತ್ತು ಟೆಸ್ಟ್ ಪಂದ್ಯಗಳಲ್ಲಿ ಎರಡು ದ್ವಿಶತಕ, ಶತಕ ಹಾಗೂ ಮೂರು ಅರ್ಧಶತಕಗಳು ಸೇರಿದಂತೆ ಒಟ್ಟು 754 ರನ್ ಪೇರಿಸಿದ್ದಾರೆ. ಈ ಮೂಲಕ 28ರ ಹರೆಯದ ಮಯಾಂಕ್, 2019ರಲ್ಲಿ ಅತಿ ಹೆಚ್ಚು ರನ್ ಗಳಿಸಿದ ಟಾಪ್ ಐದರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಪೃಥ್ವಿ ಶಾ ಗಾಯಗೊಂಡಾಗ ಮಯಾಂಕ್ ಅಗರ್ವಾಲ್ ಅವಕಾಶವನ್ನು ಪಡೆದಿದ್ದರು. ಅಲ್ಲದೆ ತಮಗೆ ಲಭಿಸಿದ ಅವಕಾಶವನ್ನು ಸಮರ್ಥವಾಗಿಯೇ ಬಳಸಿಕೊಂಡಿದ್ದಾರೆ. ರಾಷ್ಟ್ರೀಯ ತಂಡದಿಂದ ದೂರವುಳಿದ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ತಂಡ ಪರ ಆಡಿ ಸೈಯದ್ ಮುಷ್ತಾಕ್ ಅಲಿ ಟ್ವೆಂಟಿ-20 ಟ್ರೋಫಿ ಹಾಗೂ ವಿಜಯ್ ಹಜಾರೆ ಏಕದಿನ ಟೂರ್ನಿ ಗೆಲ್ಲುವಲ್ಲಿ ತಮ್ಮ ಪಾತ್ರವನ್ನು ನಿಭಾಯಿಸಿದ್ದರು. ಈ ಮಧ್ಯೆ ಶಿಖರ್ ಧವನ್ ಗಾಯಗೊಂಡಾಗ ವರ್ಷಾಂತ್ಯದಲ್ಲಿ ಏಕದಿನ ತಂಡಕ್ಕೂ ಆಯ್ಕೆಯಾಗಿದ್ದರು. ಆದರೂ ಇನ್ನಷ್ಟೇ ಪಾದಾರ್ಪಣೆ ಮಾಡಬೇಕಿದೆ. ಟೆಸ್ಟ್ ಕ್ರಿಕೆಟ್‌ನಲ್ಲಿ ವಿರಾಟ್ ಕೊಹ್ಲಿ ಹಾಗೂ ಚೇತೇಶ್ವರ ಪೂಜಾರ ಅವರಂತಹ ಅಗ್ರ ಬ್ಯಾಟ್ಸ್‌ಮನ್‌ಗಳನ್ನು ಹಿಂದಿಕ್ಕಿ ಭಾರತದ ಪರ 2019ನೇ ಸಾಲಿನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್ ಎಂಬ ಹಿರಿಮೆಗೆ ಪಾತ್ರವಾಗಿದ್ದಾರೆ. ಈ ಬಗ್ಗೆ ಕೇಳಿದಾಗ ಇತರೆಲ್ಲ ಆಟಗಾರರಗಿಂತಲೂ ತಮ್ಮ ಪಯಣ ವಿಭಿನ್ನವಾಗಿದೆ ಎಂದು ಉತ್ತರಿಸಿದ್ದಾರೆ. "ಇದು ಶ್ರೇಷ್ಠ ಕಲಿಕಾ ಹಂತವಾಗಿದೆ. ಉತ್ತಮ ಅನುಭವ ಸಂಪಾದಿಸಿದ್ದಾರೆ. ಪ್ರಾಮಾಣಿಕವಾಗಿ ಹೇಳಬೇಕೆಂದರೆ ಮೊದಲ ಬಾರಿಗೆ ತಂಡಕ್ಕೆ ಆಯ್ಕೆಯಾದಾಗ ಮೊದಲ ಪಂದ್ಯದಲ್ಲಿ ನಾನೇನು ಮಾಡಬೇಕು ಎಂಬುದು ತಿಳಿದಿರಲಿಲ್ಲ. ಒಮ್ಮೆಗೆ ಒಂದು ಪಂದ್ಯವನ್ನಷ್ಟೇ ಪರಿಗಣಿಸುತ್ತೇನೆ. ತಂಡಕ್ಕಾಗಿ ಕೊಡುಗೆ ಸಲ್ಲಿಸಲು ಸಾಧ್ಯವಾಗಿರುವುದು ಉತ್ತಮ ಭಾವನೆ ತಂದಿದೆ. ಇವೆಲ್ಲದಕ್ಕೂ ಮಿಗಿಲಾಗಿ ಭಾರತ ನಂ.1 ತಂಡವಾಗಿರುವುದು ತುಂಬಾನೇ ಸಂತೃಪ್ತಿ ನೀಡುತ್ತಿದೆ" ಎಂದರು. "ಭಾರತ ಪರ ಆಡುವುದೇ ತುಂಬಾನೇ ವಿಶೇಷ ಅನುಭವವಾಗಿದೆ. ನಾವು ಕೆಲವೊಂದು ಅದ್ಭುತ ಗೆಲುವಗಳನ್ನು ದಾಖಲಿಸಿದ್ದೇವೆ. ಈ ನೆನಪುಗಳೆಲ್ಲ ಶಾಶ್ವತವಾಗಿದೆ. ಅಂತಾರಾಷ್ಟ್ರೀಯ ಕ್ರಿಕೆಟಿಗನಾಗಿ 2019ನೇ ವರ್ಷವನ್ನು ತುಂಬಾನೇ ಆನಂದಿಸಿದ್ದೇನೆ" ಎಂದರು. "ನನ್ನ ಎರಡು ದ್ವಿಶತಕಗಳು ತುಂಬಾನೇ ವಿಶೇಷವಾಗಿದೆ. ಪ್ರಾಮಾಣಿಕವಾಗಿಯೂ ನಾನು ಹೋಲಿಕೆಗಳಲ್ಲಿ ವಿಶ್ವಾಸವನ್ನಿಡುವುದಿಲ್ಲ. ಪ್ರತಿಯೊಂದು ಇನ್ನಿಂಗ್ಸ್ ತನ್ನದೇ ಆದ ಮಹತ್ವ ಪಡೆದಿದೆ. ಮೊದಲ ದ್ವಿಶತಕವು ನಿಜಕ್ಕೂ ವಿಶೇಷ. ನಂತರದ ಸರಣಿಯಲ್ಲಿ ಮಗದೊಂದು ದ್ವಿಶತಕ ಸಾಧನೆ ಮಾಡಿರುವುದು ಕೂಡಾ ಅದ್ಭುತ. ಒಮ್ಮೆ ಕ್ರೀಸಿನಲ್ಲಿ ನೆಲೆಯೂರಿ ನಿಂತಾಗ ತಂಡಕ್ಕಾಗಿ ಸಾಧ್ಯವಾದಷ್ಟು ರನ್ ಗಳಿಸುವುದು ನನ್ನ ಗುರಿಯಾಗಿದೆ" ಎಂದರು. "ಇತರೆ ಆಟಗಾರರಿಗಿಂತಲೂ ನನ್ನ ಪಯಣ ವಿಭಿನ್ನವಾಗಿದೆ. ನಾನು ದೇಶೀಯ ಕ್ರಿಕೆಟ್‌ನಲ್ಲಿ ಸಾಕಷ್ಟು ಕ್ರಿಕೆಟ್ ಆಡಿದ್ದೇನೆ. ಇದು ನನಗೆ ಉನ್ನತ ಮಟ್ಟದಲ್ಲಿ ಉತ್ತಮ ಆಟಗಾರನಾಗಿ ಹೊರಹೊಮ್ಮಲು ನೆರವಾಗಿದೆ" ಎಂದರು. "ರೋಹಿತ್ ಶರ್ಮಾ ಜತೆಗೆ ಇನ್ನಿಂಗ್ಸ್ ಆರಂಭಿಸಿರುವುದರ ಬಗ್ಗೆ ಕೇಳಿದಾಗ, ನಾವು ಯೋಜನೆಗಳ ಬಗ್ಗೆ ಮಾತುಕತೆ ನಡೆಸುತ್ತೇವೆ. ಪ್ರತಿಯೊಬ್ಬ ಬೌಲರ್ ವಿರುದ್ದವೂ ಯೋಜನೆ ಹೊಂದಿರುತ್ತೇವೆ. ನಾವಿಬ್ಬರೂ ಹೆಚ್ಚು ಯೋಚನೆ ಮಾಡಲ್ಲ" ಎಂದು ತಿಳಿಸಿದರು. "ಪಂದ್ಯದ ಗ್ರಹಿಕೆಯು ಅತಿ ಮುಖ್ಯವೆನಿಸುತ್ತದೆ ಪರಿಸ್ಥಿತಿಗೆ ಹೊಂದಿಕೊಂಡು ಆಡಬೇಕು. ಇವೆಲ್ಲದರ ಜತೆಗೆ ಮಾನಸಿಕ ಶಿಸ್ತು ಅತಿ ಮುಖ್ಯ" ಎಂದು ಸೇರಿಸಿದರು. "ಪ್ರತಿ ಪಂದ್ಯ ಹಾಗೂ ಪ್ರತಿ ಟೂರ್ನಿ ಗೆಲ್ಲುವುದು ಮುಖ್ಯ. ಇದು ನನ್ನನ್ನು ಮುಂದಕ್ಕೆ ಸಾಗುವಂತೆ ಮಾಡಿದೆ. ಪ್ರತಿ ಬಾರಿಯೂ ನಾನು ಟೆಸ್ಟ್ ಸರಣಿ ಮುಗಿಸಿ ಬಂದಾಗ ಕರ್ನಾಟಕ ದೇಶೀಯ ಟೂರ್ನಿಯಲ್ಲಿ ಆಡುತ್ತಿರುತ್ತದೆ. ಆಗ ನಿಸ್ಸಂಶಯವಾಗಿಯೂ ರಾಜ್ಯ ತಂಡದ ಭಾಗವಾಗಲು ಬಯಸುತ್ತೇನೆ. ದೇಶ ಹಾಗೂ ರಾಜ್ಯ ತಂಡದ ಪರ ಸಾಧ್ಯವಾದಷ್ಟು ಕೊಡುಗೆ ನೀಡುವುದು ನನ್ನ ಗುರಿಯಾಗಿದೆ" ಎಂದು ಮಾತುಗಳನ್ನು ಕೊನೆಗೊಳಿಸಿದರು.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2rMtPw1

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...