ದುಬೈ/ವಾಷಿಂಗ್ಟನ್: ಇರಾನ್ ಸೇನೆಯ ಪ್ರಮುಖ ಕಮಾಂಡಂರ್ ಅಮೆರಿಕ ವೈಮಾನಿಕ ದಾಳಿಯಲ್ಲಿ ಮೃತಪಟ್ಟಿದ್ದು, ಅವರ ಅಂತ್ಯಕ್ರಿಯೆ ಸೋಮವಾರ ನಡೆಯಿತು. ಅಂತ್ಯಕ್ರಿಯೆಗೆ ಲಕ್ಷಾಂತರ ಮಂದಿ ಆಗಮಿಸಿದ್ದು, ಸುಲೇಮಾನಿ ಮೇಲಿದ್ದ ಅಭಿಮಾನಕ್ಕೆ ಇದು ಸಾಕ್ಷಿಯಾಗಿತ್ತು. ಅಮೆರಿಕ ನಡೆಸಿದ ದಾಳಿಯಲ್ಲಿ ಮೃತಪಟ್ಟಿದ್ದು ಇರಾನ್ನಲ್ಲಿ ತೀವ್ರ ಆಕ್ರೋಶಕ್ಕೆ ಗುರಿಯಾಗಿದೆ. ಸುಲೇಮಾನಿ ಪುತ್ರಿ ಝೀನಾಬ್ ಸುಲೇಮಾನಿ ಈಗಾಗಲೇ ಅಮೆರಿಕಕ್ಕೆ ಎಚ್ಚರಿಕೆಯನ್ನೂ ನೀಡಿದ್ದಾರೆ. ಸರಕಾರಿ ಟೆಲಿವಿಷನ್ ಮೂಲಕ ಭಾಷಣ ಮಾಡಿದ ಝೀನಾಬ್ ಅಮೆರಿಕಕ್ಕೆ ಅದರಲ್ಲೂ ಅಧ್ಯಕ್ಷ ಡೊನಾಲ್ಡ್ ಟ್ರಂಪ್ಗೆ ನೇರವಾಗಿ ಸವಾಲು ಹಾಕಿದ್ದಾರೆ. "ಕ್ರೇಜಿ ಟ್ರಂಪ್, ನನ್ನ ತಂದೆಯ ಮರಣ ನಂತರ ಎಲ್ಲವೂ ಮುಗಿದು ಹೋಯಿತು ಎಂದುಕೊಳ್ಳಬೇಡ. ಮುಂದಿನ ದಿನಗಳಲ್ಲಿ ಅಮೆರಿಕಕ್ಕೆ ತಕ್ಕ ಶಾಸ್ತಿ ಕಾದಿದೆ. ಭವಿಷ್ಯದಲ್ಲಿ ಅಮೆರಿಕಕ್ಕೆ ಕರಾಳ ದಿನಗಳು ಕಾಣಲಿವೆ ಎಂದು ಸುಲೇಮಾನಿ ಪುತ್ರಿ ಗುಡುಗಿದ್ದಾರೆ. ಟೆಹರಾನ್ನಲ್ಲಿ ನಡೆದ ಸುಲೇಮಾನಿ ಅಂತ್ಯಕ್ರಿಯೆಗೆ ಅತಿ ಹೆಚ್ಚು ಮಂದಿ ಆಗಮಿಸಿದ್ದರು. ಸುಲೇಮಾನಿ ಹತ್ಯೆಯ ನಂತರ ಅಮೆರಿಕ ಮತ್ತು ಇರಾನ್ ನಡುವಿನ ಸಂಘರ್ಷ ಮುಗಿಲುಮುಟ್ಟಿದೆ. ಸುಲೇಮಾನಿ ಹತ್ಯೆಗೆ ಪ್ರತೀಕಾರ ತೀರಿಸಿಕೊಳ್ಳಲು ಇರಾನ್ ತಂತ್ರ ಹೆಣೆಯುತ್ತಿದೆ. ಇದಕ್ಕೆ ಪೂರಕ ಎಂಬಂತೆ ಹಾಗೂ ಅಮೆರಿಕಕ್ಕೆ ಎಚ್ಚರಿಕೆಯ ಸಂದೇಶ ರವಾನಿಸುವ ರೀತಿಯಲ್ಲಿ ಮಸೀದಿಯೊಂದರ ಮೇಲೆ ಕೆಂಪು ಬಾವುಟ ಹಾರಿಸಲಾಗಿದೆ. ಅಮೆರಿಕದ ಮೇಲೆ ದಾಳಿ ನಡೆಸಲು ಸುಮಾರು 35 ತಾಣಗಳನ್ನು ಇರಾನ್ ಗುರುತಿಸಿದೆ ಎಂದು ಹೇಳಲಾಗಿದೆ. ಇದಕ್ಕೆ ಪ್ರತಿಯಾಗಿ ಡೊನಾಲ್ಡ್ ಟ್ರಂಪ್ ಕೂಡ ಇರಾನ್ನ 52 ಪ್ರದೇಶಗಳನ್ನು ದಾಳಿಗೆ ಗುರಿಯಾಗಿಸಿದ್ದಾರೆ.
from India & World News in Kannada | VK Polls https://ift.tt/2MWjKDR