ಟೆಲ್ ಅವೀವ್ (): ಅಮೆರಿಕ ಹಾಗೂ ಇರಾನ್ ನಡುವೆ ಯುದ್ಧದ ಕಾರ್ಮೋಡ ಕವಿದಿರುವ ಬೆನ್ನಲ್ಲೇ, ಇಸ್ರೇಲ್ ಕೂಡಾ ಇರಾನ್ ದೇಶವನ್ನು ಪ್ರಚೋದಿಸುವ ಹೇಳಿಕೆ ನೀಡಿದೆ. ಇರಾನ್ ಒಂದು ವೇಳೆ ಇಸ್ರೇಲ್ ಮೇಲೆ ದಾಳಿ ನಡೆಸಿದರೆ ನಾವು ‘ಅದ್ಭುತ ಹೊಡೆತ’ ಕೊಡುತ್ತೇವೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಘೋಷಿಸಿದ್ಧಾರೆ. ಈ ಮೂಲಕ ಕಾಲು ಕೆರೆದು ಜಗಳಕ್ಕೆ ಬಂದರೆ ನಾವೂ ಪ್ರತಿದಾಳಿಗೆ ಸಿದ್ಧ ಎಂದು ಇಸ್ರೇಲ್ ಪಂಥಾಹ್ವಾನ ನೀಡಿದೆ. ಅಮೆರಿಕಕ್ಕೆ ನಮ್ಮ ಬೆಂಬಲ..! ಇರಾನ್ ದೇಶಕ್ಕೆ ಪಂಥಾಹ್ವಾನ ನೀಡಿರುವ ಜೊತೆಯಲ್ಲೇ ಅಮೆರಿಕಕ್ಕೂ ತನ್ನ ಬೆಂಬಲವನ್ನು ಇಸ್ರೇಲ್ ಘೋಷಿಸಿದೆ. ಇಸ್ರೇಲ್ಗೆ ಅಮೆರಿಕ ದೇಶಕ್ಕಿಂತಾ ಒಳ್ಳೆಯ ಗೆಳೆಯನಿಲ್ಲ ಎಂದಿರುವ ಬೆಂಜಮಿನ್ ನೆತನ್ಯಾಹು, ಟ್ರಂಪ್ಗೆ ತಮ್ಮ ಬೆಂಬಲವಿದೆ ಎಂದು ಘೋಷಿಸಿದ್ದಾರೆ. ಅಷ್ಟೇ ಅಲ್ಲ, ಅಮೆರಿಕ ಕೈಗೊಳ್ಳುವ ಎಲ್ಲ ನಿರ್ಧಾರಗಳಿಗೂ ತಮ್ಮ ಬೆಂಬಲವಿದೆ ಎಂದಿದ್ದಾರೆ. ಇರಾನ್ ಕ್ಷಿಪಣಿ ದಾಳಿಗೆ ಅಮೆರಿಕ ಪ್ರತ್ಯುತ್ತರವೇನು..? ಇರಾಕ್ನಲ್ಲಿರುವ ಅಮೆರಿಕದ ಎರಡು ಸೇನಾ ನೆಲೆಗಳ ಮೇಲೆ, ಡಜನ್ಗಟ್ಟಲೆ ಕ್ಷಿಪಣಿ ದಾಳಿ ನಡೆಸಿರುವ ಇರಾನ್, 80ಕ್ಕೂ ಹೆಚ್ಚು ಸೈನಿಕರನ್ನು ಕೊಂದಿರುವುದಾಗಿ ಹೇಳಿಕೊಂಡಿದೆ. ಅಮೆರಿಕ ಸೈನಿಕರನ್ನು ಉಗ್ರರಿಗೆ ಹೋಲಿಸಿರುವ ಇರಾನ್, ವಿಶ್ವದ ದೊಡ್ಡಣ್ಣನಿಗೆ ಭಾರೀ ಆಘಾತ ಕೊಟ್ಟಿದ್ದೇವೆ ಎಂದು ಹೇಳಿಕೊಂಡಿದೆ. ಇದೇ ಮಾದರಿಯ ಹಲವು ದಾಳಿಗಳನ್ನು ನಡೆಸುವ ಎಚ್ಚರಿಕೆ ಸಹ ಕೊಟ್ಟಿದೆ. ತನ್ನ ದೇಶದ ಸೈನಿಕರ ಮಾರಣಹೋಮ ಮಾಡಿರುವ ಇರಾನ್ ವಿರುದ್ಧ ಅಮೆರಿಕ ಕೆಂಗಣ್ಣು ಬೀರಿದೆ. ‘ಆಲ್ ಈಸ್ ವೆಲ್’ ಎಂದು ಅಚ್ಚರಿಯ ಟ್ವೀಟ್ ಮಾಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ , ನಮ್ಮ ಸೈನ್ಯ ವಿಶ್ವದಲ್ಲೇ ಅತ್ಯಂತ ಪ್ರಬಲ ಎಂದು ಹೇಳಿಕೊಂಡಿದ್ದಾರೆ. ಹೀಗಾಗಿ, ದೊಡ್ಡ ಮಟ್ಟದ ಪ್ರತಿದಾಳಿಗೆ ಅಮೆರಿಕ ಸೇನೆ ಸಿದ್ದತೆ ನಡೆಸಿದೆ ಎಂದೇ ಹೇಳಲಾಗುತ್ತಿದೆ. ಯುದ್ಧ ಭೂಮಿಯಂತಾಗಿದೆ ಬಾಗ್ದಾದ್..! ಇರಾಕ್ನಲ್ಲಿ ಸದ್ದಾಂ ಹುಸೇನ್ ಅಧಿಕಾರ ನಡೆಸುತ್ತಿದ್ದ ಕಾಲದಲ್ಲಿ ವೈಭವೋಪೇತವಾಗಿದ್ದ ಬಾಗ್ದಾದ್, ಇದೀಗ ಯುದ್ಧ ಭೂಮಿಯಂತಾಗಿದೆ. ಅಮೆರಿಕ ಸೇನಾ ನೆಲೆಗಳ ಮೇಲೆ ಇರಾನ್ ಕ್ಷಿಪಣಿ ದಾಳಿ ನಡೆಸಿದ ಹಿನ್ನೆಲೆಯಲ್ಲಿ, ಪ್ರತಿದಾಳಿಗೆ ಅಮೆರಿಕ ಸಮರೋಪಾದಿಯ ತಯಾರಿ ನಡೆಸುತ್ತಿದೆ. ಬಾಗ್ದಾದ್ ಮಾರ್ಗವಾಗಿ ಪ್ರಯಾಣಿಕರ ಯುದ್ಧ ವಿಮಾನಗಳ ಹಾರಾಟ ನಿಷೇಧಿಸಲಾಗಿದೆ. ಇರಾಕ್ಗೆ ಅಮೆರಿಕದ ಪ್ರಯಾಣಿಕ ವಿಮಾನಗಳ ಹಾರಾಟವನ್ನೂ ರದ್ದುಪಡಿಸಲಾಗಿದೆ. ಅಮೆರಿಕ ತನ್ನ ಪ್ರಜೆಗಳಿಗೆ ಇರಾಕ್ ಪ್ರವೇಶಿಸದಂತೆ ಸೂಚನೆ ನೀಡಿದೆ. ಅಮೆರಿಕದ ಸೇನಾ ನೆಲೆಗಳ ಮೇಲೆ ಇರಾನ್ ಕ್ಷಿಪಣಿ ದಾಳಿ ನಡೆಸಿದ ಪ್ರದೇಶಗಳಲ್ಲಿ ಸಾವು-ನೋವಿನ, ಹಾನಿಯ ಲೆಕ್ಕಾಚಾರ ನಡೆಯುತ್ತಿದೆ. ರಕ್ಷಣಾ ಕಾರ್ಯಾಚರಣೆ ಕೂಡಾ ಭರದಿಂದ ಸಾಗಿದೆ. ಇರಾಕ್ಗೆ ಹೋಗಬೇಡಿ ಪ್ಲೀಸ್.. ಅಮೆರಿಕ ಹಾಗೂ ಇರಾನ್ ನಡುವಣ ಯುದ್ಧಕ್ಕೆ ಇರಾಕ್ ದೇಶವೇ ವೇದಿಕೆಯಾಗಲಿದ್ದು, ಸಮರ ಭೂಮಿಯಾಗಿ ಬಾಗ್ದಾದ್ ಬದಲಾಗಿರುವ ಹಿನ್ನೆಲೆಯಲ್ಲಿ ಭಾರತೀಯರಿಗೆ ಇರಾಕ್ ಪ್ರವೇಶಿಸದಂತೆ ವಿದೇಶಾಂಗ ಸಚಿವಾಲಯ ಸಲಹೆ ನೀಡಿದೆ. ಈಗಾಗಲೇ ಇರಾಕ್ನಲ್ಲಿರುವ ಭಾರತೀಯ ಪ್ರಜೆಗಳಿಗೆ ವಾಪಸ್ ಬರುವಂತೆ ತಿಳಿಸಲಾಗಿದೆ. ಅನಿವಾರ್ಯ ಕಾರಣಗಳಿಂದಾಗಿ ಇರಾಕ್ನಲ್ಲೇ ಇರಬೇಕಾದ ಭಾರತೀಯ ಪ್ರಜೆಗಳಿಗೆ ಸುರಕ್ಷತೆಗೆ ಆದ್ಯತೆ ನೀಡುವಂತೆ ಮನವಿ ಮಾಡಲಾಗಿದೆ.
from India & World News in Kannada | VK Polls https://ift.tt/2FrNpAX