ಲಂಕಾ ವಿರುದ್ಧ ದ್ವಿತೀಯ ಟಿ20 ಸಮರ; ಗೆಲುವಿಗಾಗಿ ಟೀಮ್ ಇಂಡಿಯಾ ಕಾತರ

ಮುಂದೆ ಸಾಗಲಿ ಜಯದ ಓಟ ಇಂದೋರ್: ಮೊದಲ ಟಿ20 ಪಂದ್ಯ ಮಳೆಯಿಂದಾಗಿ ರದ್ದಾದಾಗ ಕೋಟ್ಯಂತರ ಕ್ರಿಕೆಟ್‌ ಅಭಿಮಾನಿಗಳಿಗೆ ನಿರಾಸೆಯಾಗಿದ್ದರೂ, ಭಾರತ ತಂಡದ ಪರಾಕ್ರಮವನ್ನು ಕಣ್ತುಂಬಿಕೊಳ್ಳಲು ಸರಣಿಯಲ್ಲಿ ಇನ್ನೆರಡು ಪಂದ್ಯಗಳು ಬಾಕಿ ಉಳಿದಿವೆ. ಮಂಗಳವಾರ ಇಂದೋರ್‌ನ ಹೋಳ್ಕರ್‌ ಕ್ರೀಡಾಂಗಣದಲ್ಲಿ ಎರಡನೇ ಪಂದ್ಯ ನಡೆಯಲಿದ್ದು, ಕದನ ಕಹಳೆ ಮೊಳಗಿದೆ. ಸರಣಿ ಜಯಿಸಬೇಕಿದ್ದರೆ, ಮುಂದಿನ ಎರಡೂ ಪಂದ್ಯಗಳ ಕೊನೆಯಲ್ಲಿ ವಿಜಯೋತ್ಸವ ಆಚರಿಸುವುದು ಭಾರತದ ಕ್ರಿಕೆಟ್‌ ಕಲಿಗಳಿಗೆ ಅನಿವಾರ್ಯವಾಗಿದೆ. ಎದುರಾಳಿ ತಂಡಕ್ಕೂ ಇದೇ ಸೂತ್ರ ಅನ್ವಯವಾಗುತ್ತದೆ. ಬಾಂಗ್ಲಾದೇಶ ಹಾಗೂ ವಿಂಡೀಸ್‌ ವಿರುದ್ಧ ದೊರೆತ ಸರಣಿ ಜಯ ಭಾರತದ ತಂಡಕ್ಕೆ ಅದಮ್ಯ ಉತ್ಸಾಹ ನೀಡಿದೆ ಎಂಬುದು ಆಟಗಾರರ ಭಾವದಲ್ಲೇ ವ್ಯಕ್ತವಾಗುತ್ತಿದೆ. ಹೀಗಾಗಿ ಅದೇ ಲಯ ಮುಂದುವರಿಸುವ ಲಕ್ಷಣಗಳು ತೋರುತ್ತಿವೆ. ಇನ್ನೂ ಇದೆ ಪರೀಕ್ಷೆ: ಟಿ20 ವಿಶ್ವ ಕಪ್‌ ತನಕ ಭಾರತ ತಂಡದ ಆಟಗಾರರಿಗೆ ಸಾಮರ್ಥ್ಯ‌ ಪರೀಕ್ಷೆಗಳು ನಡೆಯುತ್ತಿರುತ್ತವೆ. ಇಂದೋರ್‌ ಪಂದ್ಯ ಕೂಡ ಇದಕ್ಕೆ ಹೊರತಲ್ಲ. ಗಾಯದಿಂದ ಚೇತರಿಸಿಕೊಂಡು ತಂಡಕ್ಕೆ ಮರುಸೇರ್ಪಡೆಯಾಗಿರುವ ಶಿಖರ್‌ ಧವನ್‌ ಹಾಗೂ ಜಸ್ಪ್ರೀತ್ ಬುಮ್ರಾಗೆ ಗುವಾಹಟಿ ಪಂದ್ಯ ಅಗ್ನಿ ಪರೀಕ್ಷೆ ಎಂದು ಹೇಳಲಾಗಿತ್ತು. ಈ ಮಾತು ಇಂದೋರ್‌ ಪಂದ್ಯಕ್ಕೂ ಅನ್ವಯಿಸುತ್ತದೆ. ಆರನೇ ಕ್ರಮಾಂಕಕ್ಕೆ ಯಾರು?: ಆಲ್‌ರೌಂಡರ್‌ ಶಿವಂ ದುಬೆ ಗುವಾಹಟಿ ಪಂದ್ಯಕ್ಕೆ 11ರ ಬಳಗದಲ್ಲಿ ಅವಕಾಶ ಪಡೆದಿದ್ದರು. ಹೀಗಾಗಿ ಚುರುಕಿನ ಆಟಗಾರ ರವೀಂದ್ರ ಜಡೇಜಾಗೆ ಬೆಂಚ್‌ ಕಾಯಿಸುವಂತೆ ಹೇಳಲಾಗಿತ್ತು. ಆದರೆ, ಇಂದೋರ್‌ ಪಿಚ್‌ ಸ್ಪಿನ್‌ಗೆ ನೆರವಾಗುವ ಲಕ್ಷಣಗಳಿವೆ. ಹೀಗಾಗಿ ಸ್ಪಿನ್‌ ಆಯ್ಕೆಯಾಗಿ ಜಡೇಜಾ ಎಂಟ್ರಿ ಪಡೆದರೂ ಅಚ್ಚರಿಯಿಲ್ಲ. ದಾಖಲೆ ಬರೆದಿತ್ತು ಭಾರತ: 2017ರ ಡಿಸೆಂಬರ್‌ 22ರಂದು ಇದೇ ಪಿಚ್‌ನಲ್ಲಿ ಭಾರತ ಹಾಗೂ ಶ್ರೀಲಂಕಾ ನಡುವೆ ಟಿ20 ಪಂದ್ಯ ನಡೆದಿತ್ತು. ಆ ಪಂದ್ಯದಲ್ಲಿ ಭಾರತ 5 ವಿಕೆಟ್‌ಗೆ 260 ರನ್‌ಗಳ ಬೃಹತ್‌ ಮೊತ್ತ ಪೇರಿಸಿ 88 ರನ್‌ ಗಳ ಭರ್ಜರಿ ಜಯ ದಾಖಲಿಸಿತ್ತು. ಇದು ಟಿ20 ಮಾದರಿಯಲ್ಲಿ ಭಾರತ ಗಳಿಸಿರುವ ಗರಿಷ್ಠ ಮೊತ್ತವಾಗಿದೆ. ಆ ಪಂದ್ಯದಲ್ಲಿ ರೋಹಿತ್‌ ಶರ್ಮ 43 ಎಸೆತಗಳಲ್ಲಿ 118 ರನ್‌ ಪೇರಿಸಿದ್ದರು. ಆದರೆ, ಹಾಲಿ ತಂಡದಲ್ಲಿ ಅವರಿಲ್ಲ. ಆದರೂ ಹೋಳ್ಕರ್‌ ಮೈದಾನದಲ್ಲಿ ಮಂಗಳವಾರ ದೊಡ್ಡ ಮೊತ್ತ ದಾಖಲಾಗುವ ಎಲ್ಲ ಸಾಧ್ಯತೆಗಳಿವೆ. ಪಿಚ್ ಹೇಗೆ?: ಬ್ಯಾಟ್ಸ್‌ಮನ್‌ಗಳಿಗೆ ಅನುಕೂಲಕರ. ಸ್ಪಿನ್ನರ್‌ಗಳಿಗೂ ಮೆರೆದಾಡುವ ಅವಕಾಶಗಳಿವೆ. ಹೋಳ್ಕರ್‌ ಮೈದಾನದಲ್ಲಿ ಇದುವರೆಗೆ ನಡೆದ ಒಟ್ಟು ಪಂದ್ಯಗಳನ್ನು ಗಮನಿಸಿ ಹೇಳುವುದಾರೆ, ಕೊನೆಯಲ್ಲಿ ಬ್ಯಾಟ್‌ ಮಾಡಿದ ತಂಡಕ್ಕೆ ಹೆಚ್ಚು ಜಯ ದಕ್ಕಿದೆ. ಇಲ್ಲಿ ಟಿ20 ಪಂದ್ಯ ನಡೆದಿದ್ದು ಒಮ್ಮೆ ಮಾತ್ರ. ಆ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ತಂಡವೇ (ಭಾರತ) ಗೆದ್ದಿದೆ. ಹವಾಮಾನ ಹೇಗಿದೆ?: ಇಂದೋರ್‌ನಲ್ಲಿಸದ್ಯ ಗರಿಷ್ಠ 26 ಡಿಗ್ರಿ ಸೆಲ್ಸಿಯಸ್‌ ತಾಪಮಾನ ಇದೆ. ಮಳೆಯ ಸಾಧ್ಯತೆಗಳಿಲ್ಲ. ಆದರೂ ಮೋಡ ಮುಸುಕಿದ ವಾತಾವರಣ ಇರಲಿದೆ. ಪಂದ್ಯದ ತಾಣ: ಹೋಳ್ಕರ್ ಸ್ಟೇಡಿಯಂ ಇಂದೋರ್, ಸಮಯ: ಸಂಜೆ 7ರಿಂದ ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ಒಟ್ಟು ಮುಖಾಮುಖಿ: 17 ಭಾರತ: 11 ಶ್ರೀಲಂಕಾ: 5 ಫಲಿತಾಂಶ ರಹಿತ: 1 ಶ್ರೀಲಂಕಾ: ಲಸಿತ್‌ ಮಾಲಿಂಗ (ನಾಯಕ), ಧನುಷ್ಕಾ ಗುಣತಿಲಕ, ಅವಿಷ್ಕಾ ಫರ್ನಾಂಡೊ, ಏಂಜೆಲೊ ಮ್ಯಾಥ್ಯೂಸ್‌, ದಸುನ್‌ ಶನಕ, ಕುಸಾಲ್‌ ಪೆರೆರಾ, ನಿರೋಶನ್‌ ಡಿಕ್ವೆಲ್ಲ, ಧನಂಜಯ ಡಿ’ಸಿಲ್ವಾ, ಇಸುರು ಉದಾನ, ಭಾನುಕ ರಾಜಪಕ್ಸ, ಒಶಾಡ ಫೆರ್ನಾಂಡೊ, ವಾನಿಂಡು ಹಸರಂಗ, ಲಹಿರು ಕುಮಾರ, ಕುಸಾಲ್‌ ಮೆಂಡಿಸ್‌, ಲಕ್ಷಣ್‌ ಸಂದಕನ್‌ ಮತ್ತು ಕಸುನ್‌ ರಜಿತ. ಭಾರತ: ವಿರಾಟ್‌ ಕೊಹ್ಲಿ (ನಾಯಕ), ಶಿಖರ್‌ ಧವನ್‌, ಕೆ. ಎಲ್‌ ರಾಹುಲ್‌, ಶ್ರೇಯಸ್‌ ಅಯ್ಯರ್‌, ಮನೀಶ್‌ ಪಾಂಡೆ, ಸಂಜು ಸ್ಯಾಮ್ಸನ್‌, ರಿಷಭ್‌ ಪಂತ್‌ (ವಿಕೆಟ್‌ಕೀಪರ್‌), ಶಿವಂ ದುಬೆ, ಯಜ್ವೇಂದ್ರ ಚಹಲ್‌, ಕುಲ್ದೀಪ್‌ ಯಾದವ್‌, ರವೀಂದ್ರ ಜಡೇಜಾ, ಜಸ್ಪ್ರೀತ್ ಬುಮ್ರಾ, ಶಾರ್ದುಲ್‌ ಠಾಕೂರ್‌, ನವದೀಪ್‌ ಸೈನಿ ಮತ್ತು ವಾಷಿಂಗ್ಟನ್‌ ಸುಂದರ್‌


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/35wH8OM

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...