ಮುಂಬೈ: ಆಲ್ರೌಂಡ್ ಪ್ರದರ್ಶನ ನೀಡಿದ ತಂಡ 41 ಬಾರಿಯ ಚಾಂಪಿಯನ್ಸ್ ತಂಡವನ್ನು ಅವರದ್ದೇ ಅಂಗಣದಲ್ಲಿ 5 ವಿಕೆಟ್ಗಳಿಂದ ಬಗ್ಗುಬಡಿದು, ಪ್ರಸಕ್ತ ಸಾಲಿನ ಟೂರ್ನಿಯ 'ಬಿ' ಗುಂಪಿನಲ್ಲಿ ತನ್ನ ಎರಡನೇ ಗೆಲುವು ದಾಖಲಿಸಿದೆ. ಇಲ್ಲಿನ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮಾಜಿ ಚಾಂಪಿಯನ್ಸ್ ಕರ್ನಾಟಕ ಕೇವಲ ಎರಡೂವರೆ ದಿನಗಳ ಅಂತರದಲ್ಲಿ ಪಂದ್ಯ ಗೆದ್ದು ಬೀಗಿತು. ಎಲ್ಲಕ್ಕಿಂತಲೂ ಮಿಗಿಲಾಗಿ 2013-14ರ ಬಳಿಕ ಮುಂಬೈ ಎದುರು ಸತತ ನಾಲ್ಕನೇ ಜಯ ದಾಖಲಿಸಿ ತನ್ನ ಪ್ರಾಬಲ್ಯವನ್ನು ಮತ್ತೊಮ್ಮೆ ಸಾಬೀತು ಪಡಿಸಿದೆ. ಮತ್ತೊಂದೆಡೆ ಅಜಿಂಕ್ಯ ರಹಾನೆ, ಸೂರ್ಯಕುಮಾರ್ ಯಾದವ್ ಹಾಗೂ ಪೃಥ್ವಿ ಶಾ (ಗಾಯಗೊಂಡ ಶಾ 2ನೇ ಇನಿಂಗ್ಸ್ನಲ್ಲಿ ಬ್ಯಾಟ್ ಮಾಡಲಿಲ್ಲ) ಅವರಂತಹ ಸ್ಟಾರ್ಗಳ ದಂಡನ್ನೇ ಒಳಗೊಂಡಿದ್ದ ಮುಂಬೈ ತಂಡ ಈ ಬಾರಿ ಮನೆಯಂಗಣದಲ್ಲಿ ಸತತ 2ನೇ ಸೋಲಿನ ಆಘಾತಕ್ಕೊಳಗಾಗಿದೆ. ಕಳೆದ ಪಂದ್ಯದಲ್ಲಿ ರೈಲ್ವೇಸ್ ಎದುರು ಅಚ್ಚರಿಯ ಸೋಲುಂಡಿತ್ತು. ಶನಿವಾರದ ಆಟದ ಅಂತ್ಯಕ್ಕೆ ಮುಂಬೈ ತಂಡ ತನ್ನ 2ನೇ ಇನಿಂಗ್ಸ್ನಲ್ಲಿ 5 ವಿಕೆಟ್ಗೆ 109 ರನ್ಗಳಿಸಿತ್ತು. ಆದರೆ, ಭಾನುವಾರದ ಆಟದಲ್ಲಿ ಕರ್ನಾಟಕ ತಂಡದ ಎಡಗೈ ಮಧ್ಯಮ ವೇಗಿ ಪ್ರತೀಕ್ ಜೈನ್ (11ಕ್ಕೆ 4) ದಾಳಿಗೆ ಕಂಗಾಲಾಗಿ 50 ಓವರ್ಗಳಲ್ಲಿ 149 ರನ್ಗಳಿಗೆ ಆಲ್ಔಟ್ ಆಯಿತು. ನಂತರ ಗೆಲುವಿಗೆ 126 ರನ್ಗಳ ಸುಲಭದ ಗುರಿ ಪಡೆದ ಕರ್ನಾಟಕ ತಂಡ, ಭೋಜನ ವಿರಾಮದ ಹೊತ್ತಿಗೆ ವಿಕೆಟ್ ನಷ್ಟವಿಲ್ಲದೆ 77 ರನ್ ಗಳಿಸಿ ಸುಸ್ಥಿತಿಯಲ್ಲಿತ್ತು. ಆದರೂ, ಶಶಾಂಕ್ ಅತ್ರಾಡೆ (52ಕ್ಕೆ 4) ಅವರ ಸ್ಪಿನ್ ಎದುರು ಕೊಂಚ ತಡವರಿಸಿ ವಿಕೆಟ್ಗಳನ್ನು ಕಳೆದುಕೊಂಡರೂ ಗೆಲುವು ತಡವಾಗಲಿಲ್ಲ. ಆರಂಭಕಾರರಾದ ಆರ್. ಸಮರ್ಥ್ (34) ಮತ್ತು ದೇವದತ್ ಪಡಿಕ್ಕಲ್ (50) ಅವರ ಜವಾಬ್ದಾರಿಯುತ ಬ್ಯಾಟಿಂಗ್ ಮತ್ತು ರೋಹನ್ ಕದಮ್ (21) ಅವರ ಉಪಯುಕ್ತ ಕಾಣಿಕೆ ನೆರವಿನಿಂದ 24.3 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 129 ರನ್ಗಳಿಸಿ ಗೆಲುವಿನ ಕೇಕೆ ಹಾಕಿತು. ಮೊದಲ ಪಂದ್ಯದಲ್ಲಿ ತಮಿಳುನಾಡು ವಿರುದ್ಧ ಗೆದ್ದ ಕರ್ನಾಟಕ, ಬಳಿಕ ಉತ್ತರ ಪ್ರದೇಶ ಎದುರು ಇನಿಂಗ್ಸ್ ಮುನ್ನಡೆಯಿಂದಿಗೆ ಡ್ರಾ ಮತ್ತು ಹಿಮಾಚಲ ಪ್ರದೇಶ ಎದುರು ಇನಿಂಗ್ಸ್ ಹಿನ್ನಡೆಯಲ್ಲಿ ಡ್ರಾ ಸಾಧಿಸಿತ್ತು. ಇದೀಗ ಮರಳಿ ಗೆಲುವಿನ ಹಾದಿ ಹಿಡಿದು ಸಂಪೂರ್ಣ 6 ಅಂಕಗಳನ್ನು ಬಾಚಿಕೊಂಡಿದೆ. ಸಂಕ್ಷಿಪ್ತ ಸ್ಕೋರ್ ಮುಂಬೈ: ಮೊದಲ ಇನಿಂಗ್ಸ್ 194 ಮತ್ತು 2ನೇ ಇನಿಂಗ್ಸ್ 50 ಓವರ್ಗಳಲ್ಲಿ 149ಕ್ಕೆ ಆಲ್ಔಟ್ (ಸರ್ಫರಾಝ್ ಖಾನ್ 71; ಪ್ರತೀಕ್ ಜೈನ್ 11ಕ್ಕೆ 4, ಅಭಿಮನ್ಯು ಮಿಥುನ್ 62ಕ್ಕೆ 3, ವಾಸುಕಿ ಕೌಶಿಕ್ 23ಕ್ಕೆ 2). ಕರ್ನಾಟಕ: ಮೊದಲ ಇನಿಂಗ್ಸ್ 218 ಮತ್ತು 2ನೇ ಇನಿಂಗ್ಸ್ 24.3 ಓವರ್ಗಳಲ್ಲಿ 5 ವಿಕೆಟ್ಗೆ 129 (ಸಮರ್ಥ್ 34, ದೇವದತ್ ಪಡಿಕ್ಕಲ್ 50, ರೋಹನ್ ಕದಮ್ 21; ಶಶಾಂಕ್ ಅತ್ರಾಡೆ 52ಕ್ಕೆ 4, ಶಾಮ್ಸ್ ಮುಲಾನ್ 54ಕ್ಕೆ 1).
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/37zdE4r