ಎಸ್. ಜಿ. ಕುರ್ಯ, ಉಡುಪಿ ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿ ಬದಿ ಇರುವ ಭೂಮಿಯಲ್ಲಿವಸತಿ, ವಾಣಿಜ್ಯ ಉದ್ದೇಶದ ಕಟ್ಟಡ/ಬಹುಮಹಡಿ ಕಟ್ಟಡ ನಿರ್ಮಾಣ ಹಾಗೂ ಭೂ ವ್ಯವಹಾರದಿಂದ ದುಡ್ಡೆಣಿಸುವ ಕನಸು ಕಂಡವರಿಗೆ ಸರಕಾರ ಹಾಗೂ ಹೈಕೋರ್ಟು ಆದೇಶದಿಂದ ಅಘಾತವಾಗಲಿದೆ. 1964ರ ಕರ್ನಾಟಕ ಹೈವೇ ಆ್ಯಕ್ಟ್ ಪ್ರಕಾರ 1998ರ ಬಳಿಕ 2005ರಲ್ಲಿ ರಾಜ್ಯ ಸರಕಾರ , ರಾಜ್ಯ ಹೆದ್ದಾರಿಯ ಮಧ್ಯಭಾಗದಿಂದ 40ಮೀ. ವ್ಯಾಪ್ತಿಯನ್ನು ಕಟ್ಟಡ ನಿರ್ಮಾಣ ನಿರ್ಬಂಧಿತ ಪ್ರದೇಶವಾಗಿ ಹೊರಡಿಸಿದ ಅಧಿಸೂಚನೆ ಆಧಾರದಲ್ಲಿ ಹೈಕೋರ್ಟು 2021ರ ಆ.25ಕ್ಕೆ ನೀಡಿದ ಆದೇಶವನ್ನೇ ಮುಂದಿಟ್ಟು ಲೋಕೋಪಯೋಗಿ ಇಲಾಖೆ ಉಡುಪಿ ಉಪವಿಭಾಗದ 17 ಗ್ರಾ.ಪಂ. ಗಳಿಗೆ ಸೂಚನೆ ರವಾನಿಸಿದೆ. 40ಮೀ. ವ್ಯಾಪ್ತಿಯೊಳಗೆ ನಿರ್ಮಾಣವಾದ ಕಟ್ಟಡಗಳ ಸ್ಥಿತಿಗತಿ ಬಗ್ಗೆ ಲೋಕೋಪಯೋಗಿ ಇಲಾಖೆ ಆದೇಶದಲ್ಲಿ ಯಾವುದೇ ಮಾಹಿತಿ ಇಲ್ಲದಿದ್ದರೂ ಹೊಸ ಕಟ್ಟಡ ಕಟ್ಟುವುದಿದ್ದರೆ 40ಮೀ. ಬಿಡಲೇಬೇಕು. ಕಟ್ಟಡ ನಿರ್ಮಾಣಕ್ಕೆ ನಗರ/ಗ್ರಾಮೀಣ ಸಂಸ್ಥೆಗಳು ಪರವಾನಗಿ ನೀಡುವಾಗ ಸರಕಾರ, ಹೈಕೋರ್ಟ್ನ ಆದೇಶವನ್ನು ಗಮನದಲ್ಲಿಡಬೇಕು. ತಪ್ಪಿದರೆ ಪರವಾನಗಿ ಕೊಟ್ಟವರು ಕೋರ್ಟ್ಗೆ ಅಲೆದಾಡಬೇಕು, ಶಿಕ್ಷೆಯಾದರೆ ಜೈಲಿಗೂ ಹೋಗಿ ಕಂಬಿ ಎಣಿಸಬೇಕು, ದಂಡ ತೆರಬೇಕು. 40ಮೀ. ವ್ಯಾಪ್ತಿಯಲ್ಲಿ ಈ ತನಕ ಇಲ್ಲದ ಕಟ್ಟಡವನ್ನು ರಾತ್ರಿ ಬೆಳಗಾಗುವುದರೊಳಗೆ ಅಕ್ರಮವಾಗಿ ನಿರ್ಮಿಸಿ ಈ ಹಿಂದೆಯೇ ಇತ್ತೆಂದು ಬಿಂಬಿಸಲು ಯತ್ನಿಸಿದರೂ ತೆರವು ಮಾಡದೆ ವಿಧಿಯಿಲ್ಲ. ಜಿಲ್ಲಾಮುಖ್ಯ ರಸ್ತೆಯ ಮಧ್ಯ ಭಾಗದಿಂದ 25ಮೀ. ವ್ಯಾಪ್ತಿಯನ್ನೂ ಕಟ್ಟಡ ನಿರ್ಮಾಣ ರಹಿತ ವಲಯವಾಗಿ ಪರಿಗಣಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿ ಬದಿಯ ಭೂಮಿಯಲ್ಲಿರುವ ಹಳೆ ಕಟ್ಟಡಗಳ ಪುನರ್ ನಿರ್ಮಾಣ, ನವೀಕರಣ, ವಿಸ್ತರಣೆಗಾಗಿ ಯಾವುದೇ ಪರವಾನಗಿ ಪಡೆಯಲು ಲೋಕೋಪಯೋಗಿ ಇಲಾಖೆ ಸಹಿತ ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿ ಇಲಾಖೆ ಕಚೇರಿಗೆ ಹೋದರೆ ಸಲ್ಲಿಸಿದ ಅರ್ಜಿ ಆಧಾರದಲ್ಲಿ ಪೂರ್ವಾಪರ ವಿಚಾರಿಸುತ್ತಾರೆ, ಜಾತಕವನ್ನೇ ತೆಗೆಯುತ್ತಾರೆ, ಏನೇ ಆಗಲಿ ಏನೇ ಹೋಗಲಿ 40ಮೀ. ಆಚೆಗಷ್ಟೇ ನಿರ್ಮಾಣ ಚಟುವಟಿಕೆಗೆ ಗ್ರೀನ್ ಸಿಗ್ನಲ್ ಸಿಗುತ್ತದೆ. 40*3.28=131ಅಡಿ ಭೂಮಿಯನ್ನು ರಾಷ್ಟ್ರೀಯ ಹೆದ್ದಾರಿ ಇಲ್ಲಾ ರಾಜ್ಯ ಹೆದ್ದಾರಿಯ ಮಧ್ಯಭಾಗದಿಂದ ಎಡ, ಬಲಗಳಲ್ಲಿ ಬಿಡಬೇಕು. ಈಗಾಗಲೇ ರಾಷ್ಟ್ರೀಯಯ ಹೆದ್ದಾರಿ, ರಾಜ್ಯ ಹೆದ್ದಾರಿ ಯೋಜನೆಗೆ ಭೂಮಿ ಕೊಟ್ಟು ಉಳಿದ 1, 2, 3ಸೆಂಟ್ಸಿಗೆ 40ಮೀ. ಮಿತಿ ಅನ್ವಯವಾಗುವ ಹಿನ್ನೆಲೆಯಲ್ಲಿ ಮನೆ/ ಕಟ್ಟಡ ಬಿಡಿ ಹಂದಿ, ಕೋಳಿ ಗೂಡನ್ನೂ ಕಟ್ಟಿಕೊಳ್ಳುವಂತಿಲ್ಲ. ರಾಷ್ಟ್ರೀಯ ಹೆದ್ದಾರಿ 169ಎ (ಮಲ್ಪೆ ಮೊಳಕಾಲ್ಮೂರು) 2012ರಲ್ಲಿ ಘೋಷಣೆಯಾಗಿದ್ದು, ಈಗಾಗಲೇ ಇರುವ ಕಟ್ಟಡಗಳಿಗೆ ಸಂಕಷ್ಟ ಇಲ್ಲದಿದ್ದರೂ ಮುಂದಿನ ದಿನಗಳಲ್ಲಿ ನವೀಕರಣ, ಪುನರ್ ನಿರ್ಮಾಣ, ವಿಸ್ತರಣೆಗೆ ತಕರಾರು ತಪ್ಪಿದ್ದಲ್ಲ. ಬರಲಿದೆ ರೈಟ್ ಆಫ್ ವೇ: ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿಯ ಎಡ, ಬಲದಲ್ಲಿ 40+40ಮೀ. ನಿರ್ಮಾಣ ರಹಿತ ವಲಯಕ್ಕೆ ಸಂಬಂಧಿಸಿ ಭೂ ಗಡಿ ಸಮೀಕ್ಷೆ ಮಾಡಿ 40ಮೀ. ಮಿತಿ ಇಲ್ಲದಿರುವ ಭೂಮಿಯಲ್ಲಿರುವ ಕಟ್ಟಡ ಸಹಿತ ಭೂಮಿಯನ್ನು ಅಧಿಸೂಚನೆ ಹೊರಡಿಸಿ, ಪರಿಹಾರ ನೀಡಿ ತನ್ನ ತೆಕ್ಕೆಗೆ ತೆಗೆದುಕೊಳ್ಳುವ ಅವಕಾಶವಿದೆ. ಫುಟ್ಪಾತ್, ಸಿಗ್ನಲ್, ಚರಂಡಿ ನಿರ್ಮಾಣ, ಸರ್ವೀಸ್ ರಸ್ತೆ ಸಹಿತ ಅನೇಕ ಅಭಿವೃದ್ಧಿಗೆ ಭೂಮಿ ಅಗತ್ಯವಿದ್ದು ಯಾವುದೇ ಕಟ್ಟಡ ನಿರ್ಮಾಣ ಸಾಧ್ಯವಿಲ್ಲದ 1,2 ಸೆಂಟ್ಸ್ ಭೂಮಿಯನ್ನು ಬಳಸಿಕೊಳ್ಳಬಹುದು. ಮಿತಿ ಎಷ್ಟು?
- ರಾಷ್ಟ್ರೀಯ ಹೆದ್ದಾರಿ ರಸ್ತೆ ಮಧ್ಯ ಭಾಗದಿಂದ 40ಮೀ.
- ರಾಜ್ಯ ಹೆದ್ದಾರಿ ರಸ್ತೆ ಮಧ್ಯ ಭಾಗದಿಂದ 40ಮೀ.
- ಜಿಲ್ಲಾ ಮುಖ್ಯ ರಸ್ತೆ ಮಧ್ಯ ಭಾಗದಿಂದ 25 ಮೀ.
- ಎನ್ಎಚ್66 (ಕನ್ಯಾಕುಮಾರಿ ಪನ್ವೇಲ್)
- ಎನ್ಎಚ್169ಎ (ಮಲ್ಪೆ ಬಂದರು ತೀರ್ಥಹಳ್ಳಿ)
- ಎನ್ಎಚ್ 169 (ಮಂಗಳೂರು ಕಾರ್ಕಳ ಪೂನಾ)
- ಉಡುಪಿ ಉಪವಿಭಾಗ: 7
- ಕುಂದಾಪುರ ಉಪವಿಭಾಗ: 3
- ಕಾರ್ಕಳ ಉಪವಿಭಾಗ: 5
from India & World News in Kannada | VK Polls https://ift.tt/tNSuvH8