ಹೊಸದಿಲ್ಲಿ: ವಿಶ್ವಾದ್ಯಂತ ಯುದ್ಧ ಮಾದರಿಗಳು ದಿನೇ ದಿನೆ ಭಾರಿ ಬದಲಾವಣೆ ಕಾಣುತ್ತಿವೆ. ಈ ನಿಟ್ಟಿನಲ್ಲಿ ಹೋರಾಟಕ್ಕಾಗಿ ಅಗತ್ಯವಾದ ಮಿಲಿಟರಿ ಸಾಮರ್ಥ್ಯವನ್ನು ಭಾರತ ಹೆಚ್ಚಿಸಿಕೊಳ್ಳುವುದು ಅನಿವಾರ್ಯವಾಗಿದೆ. ಇದಕ್ಕೆ ತಕ್ಕಂತೆ ಗಡಿಯಲ್ಲಿನ ಸಂಪರ್ಕ ಹೆಚ್ಚಳ ಹಾಗೂ ಸೇನೆ ನಿಯೋಜನೆಗೆ ಅಗತ್ಯ ಮೂಲಭೂತ ಸೌಕರ್ಯ ಅಭಿವೃದ್ಧಿ ಮಾಡಲಾಗಿದೆ ಎಂದು ಪ್ರಧಾನ ಮಂತ್ರಿ ಹೇಳಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ರಜೌರಿ ಜಿಲ್ಲೆಯ ನೌಶೆರಾ ಸೆಕ್ಟರ್ನಲ್ಲಿ ಗುರುವಾರ ಯೋಧರೊಂದಿಗೆ ಪ್ರಧಾನಿ ಮೋದಿ ಅವರು ದೀಪಾವಳಿ ಸಂಭ್ರಮ ಆಚರಿಸಿದರು. ಈ ವೇಳೆ ಯೋಧರಿಗೆ ಸಿಹಿ ತಿನ್ನಿಸಿ, ದೇಶ ಕಾಯುವ ಧೈರ್ಯವಂತರಾದ ತಾವೇ ನನ್ನ ಕುಟುಂಬ ಎಂದು ಯೋಧರನ್ನು ಉದ್ದೇಶಿಸಿ ಭಾವುಕ ಭಾಷಣ ಮಾಡಿದರು. 2016 ರಲ್ಲಿ ಸರ್ಜಿಕಲ್ ದಾಳಿ ನಡೆಸಿದ ನೌಶೆರಾ ಸೆಕ್ಟರ್ನಲ್ಲಿನ ಬ್ರಿಗೇಡ್ ಸಾಹಸಕ್ಕೆ ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಭಾರಿ ಮೆಚ್ಚುಗೆ ವ್ಯಕ್ತಪಡಿಸಿದರು. ಕಣಿವೆಯ ಮೂಲಕ ದೇಶಾದ್ಯಂತ ಭಯೋತ್ಪಾದನೆ ಹಬ್ಬಿಸಲು ಶತ್ರುಗಳಿಂದ ಯತ್ನ ನಡೆದಿತ್ತು. ಅವರಿಗೆ ಸರ್ಜಿಕಲ್ ದಾಳಿ ಮೂಲಕ ಪ್ರತ್ಯುತ್ತರ ನೀಡಲಾಗಿತ್ತು. ಆಗಿನಿಂದಲೂ, ಗಡಿಯಲ್ಲಿನ ಆಧುನಿಕ ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಇದರ ಭಾಗವಾಗಿ ಲಡಾಕ್ನಿಂದ ಅರುಣಾಚಲ ಪ್ರದೇಶ ಮತ್ತು ಜೈಸಲ್ಮೇರ್ನಿಂದ ಅಂಡಮಾನ್ ಹಾಗೂ ನಿಕೊಬಾರ್ ದ್ವೀಪಗಳವರೆಗಿನ ಸಂಪರ್ಕ ವೃದ್ಧಿ ಮಾಡಲಾಗಿದೆ. ಈ ಹಿಂದೆ ಸೂಕ್ತ ಸಂಪರ್ಕವನ್ನೇ ಹೊಂದಿರದ ಗಡಿ ಹಾಗೂ ಕರಾವಳಿ ಪ್ರದೇಶಗಳಲ್ಲಿ ಈಗ ಆಪ್ಟಿಕ್ ಫೈಬರ್ ನೆಟ್ವರ್ಕ್ ಹಾಗೂ ಉತ್ತಮ ಗುಣಮಟ್ಟದ ರಸ್ತೆಗಳನ್ನು ನಿರ್ಮಿಸಲಾಗಿದೆ ಎಂದು ಮೋದಿ ಅವರು ತಮ್ಮ ಸರಕಾರದ ಕಾರ್ಯಗಳ ಬಗ್ಗೆ ಯೋಧರಿಗೆ ವಿವರಿಸಿದರು. ದೇಶೀಯ ಶಸ್ತ್ರಾಸ್ತ್ರ ಅಭಿವೃದ್ಧಿ ಹೆಚ್ಚಳ: ಹಿಂದಿನ ದಿನಗಳಲ್ಲಿ ರಕ್ಷಣಾ ಸಾಮಗ್ರಿಗಳಿಗಾಗಿ ವಿದೇಶಗಳ ಅವಲಂಬನೆ ಇತ್ತು. ದೇಶೀಯವಾಗಿ ಶಸ್ತ್ರಾಸ್ತ್ರಗಳ ತಯಾರಿಕೆ ನಿರೀಕ್ಷಿತ ಪ್ರಮಾಣದಲ್ಲಿ ಆಗುತ್ತಿರಲಿಲ್ಲ. ಸದ್ಯ, ಆ ಕೊರತೆಯನ್ನು ನೀಗಿಸಿ ದೇಶೀಯವಾಗಿ ರಕ್ಷಣಾ ಸಾಮಗ್ರಿಗಳ ತಯಾರಿಕೆ ಭಾರಿ ಪ್ರಮಾಣದಲ್ಲಿ ಆಗುತ್ತಿದೆ. ರಕ್ಷಣಾ ಕ್ಷೇತ್ರಕ್ಕೆ ಸರಕಾರ ಬಲ ತುಂಬಿದೆ. ನಿಮ್ಮೆಲ್ಲರ ಶೌರ್ಯದಿಂದಾಗಿ ದೇಶದಲ್ಲಿ ಶಾಂತಿ, ಸ್ಥಿರತೆ ನೆಲೆಸಿದೆ. 'ಏಕ ಭಾರತ , ಶ್ರೇಷ್ಠ ಭಾರತದ' ಮೂಲ ರಕ್ಷಕರು ನೀವೇ. ತಾಯಿ ಭಾರತಿಯ ಸುರಕ್ಷಾ ಕವಚವು ಕೂಡ ನೀವೇ ಆಗಿದ್ದೀರಿ ಎಂದು ನರೇಂದ್ರ ಮೋದಿ ಅವರು ಯೋಧರನ್ನು ಹಾಡಿ ಹೊಗಳಿದರು. ಬುಧವಾರದಂದು ಭೂಸೇನಾ ಪಡೆ ಮುಖ್ಯಸ್ಥ ಜನರಲ್ ಎಂ.ಎಂ. ನರವಾಣೆ ಅವರು ರಾಜೌರಿ ಸೇರಿದಂತೆ ಅಂತಾರಾಷ್ಟ್ರೀಯ ಗಡಿಯ ಗ್ರಾಮ ಪ್ರದೇಶಗಳ ವೈಮಾನಿಕ ಸಮೀಕ್ಷೆ ನಡೆಸಿದ್ದರು.
from India & World News in Kannada | VK Polls https://ift.tt/3GOIc4y