ಕಾಂಗ್ರೆಸ್‌ ಮುಳುಗುವ ಹಡಗು ಎಂದವರಿಗೆ ಉಪಚುನಾವಣೆಯಲ್ಲಿ ಮತದಾರರು ಸರಿಯಾದ ಉತ್ತರ ಕೊಟ್ಟಿದ್ದಾರೆ: ಡಿಕೆಶಿ

ಬೆಂಗಳೂರು: ಕಾಂಗ್ರೆಸ್‌ ಮುಳುಗಿದ ಹಡಗು, ಕಾಂಗ್ರೆಸ್‌ ಇಬ್ಬಾಗವಾಗಿದೆ ಎಂದೆಲ್ಲಾ ವ್ಯಾಖ್ಯಾನಿಸುತ್ತಿದ್ದ ಸ್ನೇಹಿತರಿಗೆ ಹಾನಗಲ್‌, ಸಿಂದಗಿ ಕ್ಷೇತ್ರದ ಉಪಚುನಾವಣೆ ಹಾಗೂ ಹಲವು ರಾಜ್ಯಗಳ ಉಪ ಚುನಾವಣೆಯಲ್ಲಿ ಮತದಾರರ ತೀರ್ಪು ಉತ್ತರವಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹೇಳಿದರು. ಕೆಪಿಸಿಸಿ ಕಚೇರಿಯಲ್ಲಿ ಬುಧವಾರ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿ, ‘ಸೋತಾಗ ಸೋಲನ್ನು ಒಪ್ಪಿದ್ದೇವೆ. ಈಗ ದೇಶದಾದ್ಯಂತ ನಡೆದಿರುವ ಉಪಚುನಾವಣೆಯಲ್ಲಿಆಡಳಿತ ಪಕ್ಷ ಹಾಗೂ ಪ್ರತಿಪಕ್ಷಕ್ಕೂ ನಷ್ಟವಾಗಿದೆ. ದೇಶದ ಹಲವೆಡೆ ಕಾಂಗ್ರೆಸ್‌ಗೆ ಜನ ಆಶೀರ್ವಾದ ಮಾಡಿದ್ದು, ಬಿಜೆಪಿ ಕೆಲವೆಡೆ ಸ್ಥಾನ ಉಳಿಸಿಕೊಂಡಿದ್ದರೂ ಮುಖಭಂಗ ಅನುಭವಿಸಿದೆ ಎಂದು ತಿಳಿಸಿದರು. ‘ಹಾನಗಲ್‌ ಮುಖ್ಯಮಂತ್ರಿಗಳ ಪಕ್ಕದ ಕ್ಷೇತ್ರವಾಗಿದೆ. ಸಿಎಂ ಕ್ಷೇತ್ರದ ಅಳಿಯಂದಿರು. ಇಡೀ ಸರಕಾರ ಎರಡೂ ಕ್ಷೇತ್ರಗಳಲ್ಲಿ ಕುಳಿತು ಎಲ್ಲ ಪ್ರಯೋಗ ಮಾಡಿತು. ಆದರೂ ಹಾನಗಲ್‌ನ ಮತದಾರರು ದಿಟ್ಟ ತೀರ್ಮಾನ ತೆಗೆದುಕೊಂಡರು. ಸರಕಾರ ಎಷ್ಟೇ ಒತ್ತಡ, ಆಮಿಷವೊಡ್ಡಿದ್ದರೂ ಮತದಾರರು ಕಾಂಗ್ರೆಸ್‌ ಕೈ ಹಿಡಿದು ದೇಶಕ್ಕೆ ದೊಡ್ಡ ಸಂದೇಶ ರವಾನಿಸಿದ್ದಾರೆ ಎಂದು ತಿಳಿಸಿದರು. ‘ಇದು ನನ್ನ ಗೆಲುವಲ್ಲ. ಮತದಾರರು, ಕಾರ್ಯಕರ್ತರ ಗೆಲುವು. ಬಿಜೆಪಿ ಆಡಳಿತದ ವಿರುದ್ಧ ನೀಡಿದ ತೀರ್ಪು. ಯಾರು ಜನರ ಮಧ್ಯೆ ಇರುತ್ತಾರೋ, ಅವರ ಕಷ್ಟದಲ್ಲಿ ಭಾಗಿಯಾಗಿ ಸ್ಪಂದಿಸುತ್ತಾರೋ ಅವರಿಗೆ ಮತದಾರ ಆಶೀರ್ವಾದ ನೀಡುತ್ತಾನೆ ಎಂದು ಹೇಳಿದರು. ಹರಕೆ- ಪ್ರಾರ್ಥನೆ ಸಲ್ಲಿಸುತ್ತೇನೆಹಾನಗಲ್‌ನಲ್ಲಿ ನಾಮಪತ್ರ ಸಲ್ಲಿಸುವಾಗ ಅಲ್ಲಿನ ಗ್ರಾಮದೇವತೆ ದೇವಾಲಯ, ದರ್ಗಾಕ್ಕೆ ಹೋಗಿದ್ದೆ. ಆಗ ನನಗೆ ಸಮಾಧಾನ ಆಗಿರಲಿಲ್ಲ. ನಂತರ ಆ ದೇವಾಲಯಕ್ಕೆ ಹೋಗಿ ಹರಕೆ ಮಾಡಿಕೊಂಡು ನನ್ನ ಪ್ರಚಾರ ಆರಂಭಿಸಿದ್ದೆ. ಈಗ ನನ್ನ ಹರಕೆಯಂತೆ ನ.5ರಂದು ಅಲ್ಲಿಗೆ ತೆರಳಿ ಪ್ರಾರ್ಥನೆ ಸಲ್ಲಿಸುತ್ತೇನೆ ಎಂದು ಡಿ.ಕೆ.ಶಿವಕುಮಾರ್‌ ತಿಳಿಸಿದರು. ‘ಸಿಂದಗಿಯಲ್ಲಿ ನಾವು ಮೂರನೇ ಸ್ಥಾನದಲ್ಲಿದ್ದೆವು. ಈ ಬಾರಿ 30,000 ಅಂತರದಲ್ಲಿ ಸೋತರೂ ಮತಗಳ ಏರಿಕೆಯಿಂದ ಬೆಳವಣಿಗೆ ಕಂಡಿದ್ದೇವೆ. ಅಲ್ಲಿನ ಕಾರ್ಯಕರ್ತರು, ನಾಯಕರ ಕೈ ಬಿಡುವುದಿಲ್ಲ. ತಪ್ಪು ತಿದ್ದುಕೊಂಡು 2023ರ ಚುನಾವಣೆಗೆ ಸಿದ್ಧರಾಗಲು ಮಾರ್ಗದರ್ಶನ ನೀಡಲಾಗುವುದು ಎಂದು ಹೇಳಿದರು. ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್‌, ಮಾಧ್ಯಮ ವಿಭಾಗದ ಮುಖ್ಯಸ್ಥ ಬಿ.ಎಲ್‌. ಶಂಕರ್‌ ಉಪಸ್ಥಿತರಿದ್ದರು. ನ. 7ರಂದು ಜಿಲ್ಲಾಧ್ಯಕ್ಷರ ಸಭೆಇತ್ತೀಚೆಗೆ ನಡೆದ ಎಐಸಿಸಿ ಕಾರ್ಯಕಾರಿ ಸಭೆಗೆ ಉಪಚುನಾವಣೆ ಹಾಗೂ ಕೌಟುಂಬಿಕ ಕಾರಣದ ಹಿನ್ನೆಲೆಯಲ್ಲಿ ಭಾಗವಹಿಸಲು ಸಾಧ್ಯವಾಗಿರಲಿಲ್ಲ. ರಾಷ್ಟ್ರ ಮಟ್ಟದಲ್ಲಿ ಬೆಲೆ ಏರಿಕೆ ವಿಚಾರವಾಗಿ ಬೃಹತ್‌ ಜನಜಾಗೃತಿ ಅಭಿಯಾನ ನಡೆಸಲು ಆ ಸಭೆಯಲ್ಲಿ ತೀರ್ಮಾನಿಸಿದ್ದು, ಸದಸ್ಯತ್ವ ನೋಂದಣಿ ಪ್ರಾರಂಭವಾಗಿದೆ. ನ. 7ರಂದು ಜಿಲ್ಲಾಧ್ಯಕ್ಷರೊಂದಿಗೆ ಸಭೆ ನಡೆಸಿ ಕಾರ್ಯಕ್ರಮದ ರೂಪುರೇಷೆ ನಿರ್ಧರಿಸಲಾಗುವುದು ಎಂದು ಡಿ.ಕೆ.ಶಿವಕುಮಾರ್‌ ತಿಳಿಸಿದರು. ಕೆಪಿಸಿಸಿ ಪದಾಧಿಕಾರಿಗಳ ನೇಮಕ ವಿಚಾರಕ್ಕೆ ಪ್ರತಿಕ್ರಿಯಿಸಿ, ಬೆಂಗಳೂರು ನಗರಕ್ಕೆ ಸಂಬಂಧಿಸಿದಂತೆ ಗುರುವಾರ ದೊಡ್ಡ ಸುದ್ದಿ ಬರಲಿದೆ. ಉಪಚುನಾವಣೆ ಇಲ್ಲದಿದ್ದರೆ ಈ ಹೊತ್ತಿಗಾಗಲೇ ಎಲ್ಲಘೋಷಣೆಯಾಗುತ್ತಿತ್ತು. ಪದಾಧಿಕಾರಿಗಳ ಪಟ್ಟಿ ಸಿದ್ಧವಾಗಿದ್ದು, ಶೀಘ್ರವೇ ನೇಮಕವಾಗಲಿದೆ ಎಂದು ಹೇಳಿದರು. ಪದ್ಮಶ್ರೀ, ಕರ್ನಾಟಕ ರತ್ನ ನೀಡಬೇಕುರಸ್ತೆಗೆ ಹೆಸರು ನಾಮಕರಣದಿಂದ ಕರ್ನಾಟಕ ರತ್ನ ಪ್ರಶಸ್ತಿ, ಪದ್ಮಶ್ರೀ ಪ್ರಶಸ್ತಿವರೆಗೂ ಎಲ್ಲದಕ್ಕೂ ನಟ ಪುನೀತ್‌ ರಾಜ್‌ಕುಮಾರ್‌ ಅರ್ಹರು. ಅವರಿಗೆ ಈ ಗೌರವ ನೀಡಬೇಕು. ಹಿಂದೆ ಎಸ್‌.ಬಂಗಾರಪ್ಪನವರ ಸರಕಾರವಿದ್ದಾಗ ಪುನೀತ್‌ ಅವರ ತಂದೆ ಡಾ.ರಾಜಕುಮಾರ್‌ ಅವರಿಗೆ 'ಕರ್ನಾಟಕ ರತ್ನ' ಪ್ರಶಸ್ತಿ ನೀಡಲಾಗಿತ್ತು. ಅದೇರೀತಿ ಪುನೀತ್‌ ರಾಜ್‌ಕುಮಾರ್‌ ಅವರಿಗೂ 'ಕರ್ನಾಟಕ ರತ್ನ', 'ಪದ್ಮಶ್ರೀ' ಪ್ರಶಸ್ತಿ ನೀಡಲು ಕ್ರಮ ತೆಗೆದುಕೊಳ್ಳಬೇಕೆಂದು ಮುಖ್ಯಮಂತ್ರಿಗಳನ್ನು ಒತ್ತಾಯಿಸುತ್ತೇನೆ,'' ಎಂದು ಡಿ.ಕೆ. ಶಿವಕುಮಾರ್‌ ಹೇಳಿದರು. ‘ಪುನೀತ್‌ ರಾಜಕುಮಾರ್‌ ಅವರ ನಿಧನದಿಂದ ರಾಜ್ಯ ಈ ಬಾರಿ ಬಹಳ ಕೆಟ್ಟ ಕನ್ನಡ ರಾಜ್ಯೋತ್ಸವ ಕಂಡಿದೆ. ಕಳೆದ ಒಂದೂವರೆ ವರ್ಷದಿಂದ ಕೋವಿಡ್‌ ಪರಿಣಾಮ ರಾಜ್ಯ ಹಾಗೂ ದೇಶ ಕತ್ತಲೆಯಲ್ಲಿ ಮುಳುಗಿದ್ದು, ದೀಪಾವಳಿ ಹಬ್ಬದ ಮೂಲಕ ಎಲ್ಲರೂ ಬೆಳಕು ಪಡೆಯಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದು ತಿಳಿಸಿದರು.


from India & World News in Kannada | VK Polls https://ift.tt/3k52MDT

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...