ಗಂಗಾವತಿಯಲ್ಲಿ ಭಾರೀ ಮಳೆ: ಭತ್ತಕ್ಕೆ ಬಲವಾದ ಹೊಡೆತ; ಕೈಗೆ ಬಂದರೂ ಬಾಯಿಗೆ ಬಾರದ ಪರಿಸ್ಥಿತಿ!

ಗಂಗಾವತಿ: ಕಳೆದ ಒಂದು ವಾರದಿಂದ ಸತತ ಸುರಿದ ಮಳೆಗೆ ತಾಲೂಕಿನಲ್ಲಿ ಅಂದಾಜು 12 ಸಾವಿರ ಹೆಕ್ಟೇರ್‌ ಪ್ರದೇಶದ ಭತ್ತದ ಬೆಳೆ ಹಾನಿಯಾಗಿದ್ದು, ರೈತರು ಸಂಕಷ್ಟ ಎದುರಿಸುವಂತಾಗಿದೆ. ತುಂಗಭದ್ರಾ ಜಲಾಶಯದ ಎಡದಂಡೆ ಕಾಲುವೆ ಹಾಗೂ ತುಂಗಭದ್ರಾ ನದಿಯ ಅಚ್ಚುಕಟ್ಟು ಪ್ರದೇಶಕ್ಕೆ ಹೊಂದಿಕೊಂಡು ತಾಲೂಕಿನಲ್ಲಿ ಮುಂಗಾರು ಬೆಳೆ ಸೇರಿ ಹಿಂಗಾರು ಬೆಳೆಯಲ್ಲಿ ಕೂಡ ಅತಿಹೆಚ್ಚು ಬೆಳೆಯಲಾಗುತ್ತದೆ. ಸದ್ಯದ ಮುಂಗಾರು ಬೆಳೆಯಲ್ಲೂ ರೈತರು ಸೋನಾ ಮಸೂರಿ, ಐಆರ್‌ 64, ಕಾವೇರಿ ಸೋನಾ ಸೇರಿ ಇತರ ತಳಿಗಳ ಭತ್ತದ ಬೆಳೆಗಳನ್ನು ಬೆಳೆಯಲಾಗಿದೆ. ಪ್ರಸಕ್ತ ಸಾಲಿನಲ್ಲಿ ಭತ್ತಕ್ಕೆ ಹೇಳಿಕೊಳ್ಳುವ ಮಟ್ಟದಲ್ಲಿ ರೋಗಗಳು ಕಾಣಿಸಿಕೊಳ್ಳದೇ ಇರುವುದರಿಂದ ರೈತರು ಸಂತಸದಲ್ಲಿಯೇ ಹೆಚ್ಚಿನ ಇಳುವರಿ ಪಡೆಯಲು ಮುಂದಾಗಿದ್ದರು. ಆದರೆ ಹವಾಮಾನ ವೈಪರೀತ್ಯದಿಂದಾಗಿ ಸತತ ಗಾಳಿ ಸಹಿತ ತುಂತುರು ಸುರಿದಿದೆ. ಹಾಗಾಗಿ ತಾಲೂಕಿನಲ್ಲಿ ಬೆಳೆದ ಭತ್ತದ ಬೆಳೆಯು ನೆಲಕ್ಕೆ ಬಿದ್ದಿದ್ದು, ಗಿಡದಲ್ಲಿಯೇ ಭತ್ತ ಮೊಳಕೆಯೊಡೆಯುವ ಹಂತ ತಲುಪಿವೆ. ಇದರಿಂದ ರೈತರ ಕೈಗೆ ಬೆಳೆ ಬಾರದಂತಾಗಿದೆ. 48 ಸಾವಿರ ಹೆಕ್ಟೇರ್‌ ಬಿತ್ತನೆ ಭತ್ತದ ನಗರಿ ಎಂದು ಕರೆಸಿಕೊಂಡಿರುವ ಗಂಗಾವತಿ ತಾಲೂಕಿನಲ್ಲಿ 35 ಸಾವಿರ ಹೆಕ್ಟೇರ್‌ ಪ್ರದೇಶ ತುಂಗಭದ್ರಾ ಅಚ್ಚುಕಟ್ಟು ಪ್ರದೇಶವಿದೆ. ಕನಕಗಿರಿ ಸೇರಿ ಗಂಗಾವತಿ, ಕಾರಟಗಿ ತಾಲೂಕುಗಳನ್ನು ಒಳಗೊಂಡು ಕೃಷಿ ಇಲಾಖೆ ಅಧಿಕಾರಿಗಳು 40ರಿಂದ 42 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಭತ್ತ ಬೆಳೆಯಬಹುದು ಎಂದು ಗುರಿ ಹಾಕಿಕೊಂಡಿದ್ದರು. ಆದರೆ ಸದ್ಯ ಮುಂಗಾರು ಬೆಳೆಗೆ ರೈತರು ಅಧಿಕಾರಿಗಳ ಗುರಿಗೂ ಮೀರಿ ಅಂದರೆ 48,406 ಹೆಕ್ಟೇರ್‌ ಪ್ರದೇಶದಲ್ಲಿ ಭತ್ತ ನಾಟಿ ಮಾಡಿದ್ದಾರೆ. ಇವುಗಳಲ್ಲಿ ಗಂಗಾವತಿ ಹೋಬಳಿಯಲ್ಲಿ 4,057 ಹೆಕ್ಟೇರ್‌, ವೆಂಕಟಗಿರಿ ಹೋಬಳಿಯಲ್ಲಿ 2,100 ಹೆಕ್ಟೇರ್‌, ಮರಳಿ ಹೋಬಳಿಯಲ್ಲಿ 11,005 ಹೆಕ್ಟೇರ್‌, ಕಾರಟಗಿಯಲ್ಲಿ 13,000 ಹೆಕ್ಟೇರ್‌, ಸಿದ್ದಾಪೂರ ಹೋಬಳಿಯಲ್ಲಿ 14,050 ಹೆಕ್ಟೇರ್‌, ನವಲಿಯಲ್ಲಿ 3094 ಹೆಕ್ಟೇರ್‌, ಹುಲಿಹೈದರ 800 ಹೆಕ್ಟೇರ್‌, ಕನಕಗಿರಿಯಲ್ಲಿ 300 ಹೆಕ್ಟೇರ್‌ ಒಟ್ಟು 48,406 ಹೆಕ್ಟೇರ್‌ ಪ್ರದೇಶದಲ್ಲಿ ಭತ್ತವನ್ನು ಬೆಳೆಯಲಾಗಿದೆ. 12 ಸಾವಿರ ಹೆಕ್ಟೇರ್‌ ಭತ್ತ ಹಾನಿ ಕೃಷಿ ಇಲಾಖೆ ಅಧಿಕಾರಿಗಳು ಹಾಕಿಕೊಂಡಿರುವ ಗುರಿಗೂ ಮೀರಿ ರೈತರು ಪ್ರಸಕ್ತ ಮುಂಗಾರು ಬೆಳೆಯಲ್ಲಿ ಭತ್ತ ನಾಟಿ ಮಾಡಿದ್ದರು. ಆದರೆ ವಾಯುಭಾರ ಕುಸಿತದಿಂದ ಸುರಿದಿರುವ ಮಳೆಯಿಂದಾಗಿ ಬೆಳೆದ ಬೆಳೆಯು ಹಾನಿಯಾಗಿದೆ. ಗಂಗಾವತಿ ಹೋಬಳಿಯಲ್ಲಿ 237 ಹೆಕ್ಟೇರ್‌ ಪ್ರದೇಶ ಭತ್ತ ಹಾನಿಯಾಗಿದೆ. ವೆಂಕಟಗಿರಿಯಲ್ಲಿ 169.6 ಹೆಕ್ಟೇರ್‌, ಮರಳಿಯಲ್ಲಿ 3,688 ಹೆಕ್ಟೇರ್‌, ಕಾರಟಗಿಯಲ್ಲಿ 4,338 ಹೆಕ್ಟೇರ್‌, ಸಿದ್ದಾಪುರ 2,998 ಹೆಕ್ಟೇರ್‌, ನವಲಿಯಲ್ಲಿ 615.2 ಹೆಕ್ಟೇರ್‌, ಹುಲಿಹೈದರ 200 ಹೆಕ್ಟೇರ್‌, ಕನನಗಿರಿಯಲ್ಲಿ 90.8 ಹೆಕ್ಟೇರ್‌ ಒಟ್ಟು 12,336 ಹೆಕ್ಟೇರ್‌ ಪ್ರದೇಶದಲ್ಲಿ ಭತ್ತದ ಬೆಳೆಯು ಹಾನಿಯಾಗಿದೆ. ಸಂಕಷ್ಟ ಮುಂಗಾರು ಬೆಳೆಗೆ ಉತ್ತಮ ಇಳುವರಿ ಪಡೆಯಬೇಕು ಎಂಬ ಆಸೆಯಿಂದ ರೈತರು ಪ್ರತಿ ಎಕರೆಗೆ 15 ರಿಂದ 20 ಸಾವಿರ ರೂ. ವೆಚ್ಚ ಮಾಡಿ, ಭತ್ತ ಬೆಳೆದಿದ್ದರು. ಆದರೆ ಕಟಾವಿಗೆ ಮುಂಚೆಯೇ ಮಳೆ ಆಗಮಿಸಿ, ರೈತರನ್ನು ನಷ್ಟ ಅನುಭವಿಸುವಂತೆ ಮಾಡಿದೆ. ಕೃಷಿ ಇಲಾಖೆ ಅಧಿಕಾರಿಗಳ ಮಾಹಿತಿ ಪ್ರಕಾರ ತಾಲೂಕಿನಲ್ಲಿ 11,834 ಜನ ಸಣ್ಣ ರೈತರು, 15 ಜನ ದೊಡ್ಡ ಪ್ರಮಾಣದ ರೈತರ ಬೆಳೆಗಳು ಹಾನಿಯಾಗಿವೆ. ಸದ್ಯ ಕೈಗೆ ಬಂದಿರುವ ತುತ್ತು ಬಾಯಿಗೆ ಬಾರದಂತ ಪರಿಸ್ಥಿತಿಯನ್ನು ರೈತರು ಅನುಭವಿಸುತ್ತಿದ್ದಾರೆ. ಮೂರು ತಿಂಗಳಗಳ ಕಾಲ ಬೆಳೆಯನ್ನು ಪೋಷಣೆ ಮಾಡಲಾಗಿದೆ. ಆದರೆ ಕಟಾವು ಮಾಡುವ ಸಮಯದಲ್ಲಿ ಮಳೆ ಬಂದಿರುವುದರಿಂದ ಬೆಳೆ ಕೈಗೆ ಬಾರದಂತ ಪರಿಸ್ಥಿತಿ ನಿರ್ಮಾಣವಾಗಿದೆ. ಸಾವಿರಾರು ರೂಪಾಯಿಗಳನ್ನು ಖರ್ಚು ಮಾಡಿ, ಬೆಳೆ ಬೆಳೆಯಲಾಗಿದೆ. ಸದ್ಯ ನಷ್ಟ ಅನುಭವಿಸಬೇಕಾಗಿದೆ. ದುರುಗಪ್ಪ, ಚಿಕ್ಕರಾಂಪೂರ ರೈತ ಹಾನಿಯಾಗಿರುವ ಬೆಳೆಗಳ ಸರ್ವೆ ನಡೆಸಿ, ದಾಖಲೆಗಳನ್ನು ಸಂಗ್ರಹ ಮಾಡಲಾಗಿದೆ. ಮೊದಲ ಹಂತದ ಸರ್ವೆ ಪ್ರಕಾರ 12 ಸಾವಿರ ಹೆಕ್ಟೇರ್‌ ಹಾನಿಯಾಗಿದೆ. ಆದಷ್ಟು ಬೇಗ ಹಾನಿಯಾಗಿರುವ ರೈತರ ದಾಖಲೆಗಳನ್ನು ಪಡೆದುಕೊಂಡು ಮೇಲಧಿಕಾರಿಗಳ ಗಮನಕ್ಕೆ ನೀಡಲಾಗುವುದು. ಸಂತೋಷ ಪಟ್ಟದಕಲ್ಲ, ಕೃಷಿ ಇಲಾಖೆ ಸಹಾಯಕ ನಿರ್ದೇಶಕರು, ಗಂಗಾವತಿ


from India & World News in Kannada | VK Polls https://ift.tt/32wLBW6

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...