ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಮೃತ್ಯುಕೂಪಗಳಾಗುತ್ತಿವೆ ಕೃಷಿ ಹೊಂಡ; 7 ಮಕ್ಕಳು ಬಲಿ!

ನಾಗರಾಜು ಅಶ್ವತ್ಥ್, ಬೆಂಗಳೂರು ಗ್ರಾಮಾಂತರ: ಜಿಲ್ಲೆಯಾದ್ಯಂತ , ಕೆರೆ, ಕುಂಟೆಗಳು ಮೃತ್ಯುಕೂಪಗಳಾಗಿ ಬದಲಾಗುತ್ತಿದ್ದು, ಪೋಷಕರು ಎಚ್ಚರಿಕೆ ಕ್ರಮ ಕೈಗೊಳ್ಳದಿದ್ದರೆ ಮತ್ತಷ್ಟು ಮಕ್ಕಳು ನೀರಿನಲ್ಲಿ ಮುಳುಗಿ ಸಾಯುವ ಸ್ಥಿತಿ ಎದುರಿಸಬೇಕಾಗುತ್ತದೆ. ಉತ್ತಮ ಮಳೆಯಿಂದ ತುಂಬಿದ ಕೆರೆ, ಕುಂಟೆಗಳೊಂದಿಗೆ ಸರಕಾರದ ಸಹಾಯಧನದಲ್ಲಿ ನಿರ್ಮಿಸಲಾಗಿರುವ ಕೃಷಿ ಹೊಂಡಗಳಲ್ಲಿನ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಪಾಲನೆಯಿಲ್ಲದ ಹಿನ್ನೆಲೆ ಮುಗ್ದ ಮಕ್ಕಳು ಸಾಯುವ ದುಸ್ಥಿತಿ ಸೃಷ್ಟಿಯಾಗಿದೆ. ಕೃಷಿ ಇಲಾಖೆ ಸಹಕಾರದಿಂದ ನಿರ್ಮಾಣಗೊಂಡಿರುವ ಬಹುತೇಕ ಕೃಷಿ ಹೊಂಡಗಳು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಗಾಳಿಗೆ ತೂರಿದ ಹಿನ್ನೆಲೆ ಬದಿಯಲ್ಲಿ ನಡೆದು ಹೋಗುವ ಮಕ್ಕಳು ಆಯತಪ್ಪಿ ಬಿದ್ದು, ರಕ್ಷಣೆಯಿಲ್ಲದಂತಾಗಿ ಮುಳುಗಿ ಸಾಯುತ್ತಿದ್ದಾರೆ. ಇಂತಹ ಅನೇಕ ಸಾವುಗಳು ಇಲಾಖೆ ಗಮನಕ್ಕೂ ಬಾರದೆ, ಪೋಷಕರು ತಮ್ಮ ಮಕ್ಕಳನ್ನು ಕಳೆದುಕೊಳ್ಳಬೇಕಾದ ದುಸ್ಥಿತಿ ನಿರ್ಮಾಣವಾಗುತ್ತಿದೆ. ಕಳೆದ ಮೂರು ವರ್ಷಗಳಲ್ಲಿ ಕೃಷಿ ಇಲಾಖೆ ಮಾಹಿತಿ ಪ್ರಕಾರ ಜಿಲ್ಲೆಯ 4 ತಾಲೂಕು ವ್ಯಾಪ್ತಿಯಲ್ಲಿ ಕೃಷಿ ಹೊಂಡಕ್ಕೆ ಬಿದ್ದು ಬಲಿಯಾದ ಮಕ್ಕಳ ಸಂಖ್ಯೆ 7. ಹೊರ ಜಿಲ್ಲೆಗಳಲ್ಲಿ ವರ್ಷಕ್ಕೆ ಕನಿಷ್ಠ 30ರಿಂದ 100ರವರೆಗೆ ಮಕ್ಕಳು ಕೃಷಿ ಹೊಂಡಕ್ಕೆ ಬಿದ್ದು ಸಾವನ್ನಪ್ಪಿದ ಬಗ್ಗೆ ವರದಿಗಳಾಗುತ್ತಿದ್ದು, ಜಿಲ್ಲೆಯ ಇಲಾಖೆಗೆ ಸಮರ್ಪಕ ಮಾಹಿತಿಯಿಲ್ಲದಂತಾಗಿದೆ. ಕೆಲ ಅಧಿಕಾರಿಗಳ ಅಂದಾಜಿನ ಪ್ರಕಾರ ಜಿಲ್ಲೆಯಲ್ಲಿ ವರ್ಷಕ್ಕೆ ಕನಿಷ್ಠ 50ರಿಂದ 60 ಮಕ್ಕಳು ಕೃಷಿ ಹೊಂಡಕ್ಕೆ ಬಿದ್ದು ಸಾವನ್ನಪ್ಪುತ್ತಿದ್ದಾರೆ. ಹೀಗಾಗಿ, ಸರಕಾರ ಕೃಷಿ ಹೊಂಡ ಮಾಲೀಕರಿಗೆ ಕಠಿಣ ನಿಯಮಗಳನ್ನು ಪಾಲಿಸುವಂತೆ ಎಚ್ಚರಿಕೆ ನೀಡಬೇಕಾದ ಅನಿವಾರ್ಯತೆಯಿದೆ. ಪಾಲಿಥೀನ್‌ ಕಂಟಕ ಸಾಮಾನ್ಯವಾಗಿ ಕೃಷಿ ಹೊಂಡ ನಿರ್ಮಾಣಕ್ಕೆ ಪಾಲಿಥೀನ್‌ ಶೀಟ್‌ ಹೊದಿಸುತ್ತಾರೆ. ಜಮೀನಿನ ಅಗತ್ಯಕ್ಕನುಸಾರವಾಗಿ ಕೃಷಿ ಹೊಂಡಗಳನ್ನು ನಿರ್ಮಿಸುತ್ತಿದ್ದು, ಪಾಲಿಥೀನ್‌ ಶೀಟ್‌ ಸಹ ಬೃಹತ್‌ ಪ್ರಮಾಣದಲ್ಲಿರುತ್ತದೆ. 2014-15ರ ಬಳಿಕ ಈ ಯೋಜನೆ ಆರಂಭಕ್ಕೂ ಮುನ್ನ ಕೇವಲ ಕುಂಟೆಗಳಿಂದ ಮಾತ್ರ ನೀರನ್ನು ಜಮೀನುಗಳಿಗೆ ಹರಿಬಿಡಲಾಗುತ್ತಿತ್ತು. ಕೃಷಿ ಹೊಂಡ ನಿರ್ಮಾಣ ಆಲೋಚನೆಯಿಂದಾಗಿ ನೀರು ಇಂಗುವ ಪ್ರಮೇಯವಿಲ್ಲದೆ, ಕೃಷಿಗೆ ಹೆಚ್ಚಿನ ನೀರು ಲಭ್ಯವಾಗುವ ಅವಕಾಶ ಸೃಷ್ಟಿಯಾಯಿತು. ಹೀಗಾಗಿ, ರೈತರೆಲ್ಲಾ ಇದೇ ಮಾದರಿಯನ್ನೇ ಬಳಸಲು ಮುಂದಾದರು. ಆದರೆ, ಈ ಯೋಜನೆಯಡಿ ಪಾಲಿಸಬೇಕಾದ ಯಾವುದೇ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಲಿಲ್ಲ. ಕೇವಲ ಪಾಲಿಥೀನ್‌ ಶೀಟ್‌ ಅಳವಡಿಸಿ, ತಮ್ಮ ಹೊಂಡದಲ್ಲಿ ನೀರು ತುಂಬಲು ತೋರಿದ ಆಸಕ್ತಿಯನ್ನು ಸುತ್ತಲು ಫೆನ್ಸಿಂಗ್‌ ವ್ಯವಸ್ಥೆಗೆ ನೀಡಲಿಲ್ಲ. ಹೀಗಾಗಿ, ಪಾಲಿಥೀನ್‌ ಶೀಟ್‌ ಮೇಲೆ ಕಾಲಿಟ್ಟ ಮಕ್ಕಳು ಜಾರಿ ಹೊಂಡದಲ್ಲಿ ಬಿದ್ದು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಇನ್ನಾದರು, ಸರಕಾರ ಇತ್ತ ಗಮನ ಹರಿಸಬೇಕಿದೆ. ಜಿಲ್ಲೆಯಲ್ಲಿ ಆತಂಕ ಬೆಂಗಳೂರು ಗ್ರಾಮಾಂತರ ಜಿಲ್ಲೆಯ 4 ತಾಲೂಕುಗಳಲ್ಲು ಉತ್ತಮ ಮಳೆಯಾಗಿರುವ ಹಿನ್ನೆಲೆ ಕೆರೆ, ಕುಂಟೆ, ಕೃಷಿ ಹೊಂಡಗಳಲ್ಲಿ ನೀರು ತುಂಬಿವೆ. ಜತೆಗೆ, ಹಬ್ಬ, ವಾರಾಂತ್ಯದ ರಜೆ ದಿನಗಳಲ್ಲಿ ಗ್ರಾಮೀಣ ಪ್ರದೇಶಗಳಿಗೆ ತೆರಳುವ ಮಕ್ಕಳು ನೀರಿಗಿಳಿಯುವ ದುಸ್ಸಾಹಸಗಳಿಗೆ ಮುಂದಾಗುತ್ತಿದ್ದು, ಪೋಷಕ ವಲಯದಲ್ಲಿ ಆತಂಕ ಮನೆ ಮಾಡಿದೆ. ಗ್ರಾಮೀಣ ಪ್ರದೇಶಗಳಲ್ಲಂತೂ ಪುಟಾಣಿ ಮಕ್ಕಳಿಗೆ ಕೆರೆಗಳ ಆತಂಕವಿದ್ದು, ಪೋಷಕರು, ಸಾರ್ವಜನಿಕರು ಅವಘಡಗಳು ಸಂಭವಿಸುವ ಮುನ್ನ ಜಾಗರೂಕರಾಗಿಬೇಕಿದೆ. ಪೋಷಕರೇ ಎಚ್ಚರ ವಹಿಸಿ
  • ಗ್ರಾಮದ ಸಮೀಪ ಕೆರೆ, ಕುಂಟೆ, ಕೃಷಿ ಹೊಂಡಗಳಿದ್ದರೆ ಪೋಷಕರು ಹೆಚ್ಚಿನ ಎಚ್ಚರಿಕೆಯಿಂದಿರಬೇಕು.
  • ಮಕ್ಕಳ ರಜೆ ದಿನಗಳಲ್ಲಿ ಆಟವಾಡಲು ಹೊರಟರೆ ನಿಗಾ ವಹಿಸಬೇಕು.
  • ಸಾಧ್ಯವಿದ್ದರೆ ಮಕ್ಕಳಿಗೆ ಈಜು ಕಲಿಸಿದರೆ ಒಳಿತು.
  • ಆಯಾ ಗ್ರಾಮಗಳಲ್ಲಿನ ಕೃಷಿ ಹೊಂಡಗಳಿಗೆ ಫೆನ್ಸಿಂಗ್‌ ಹಾಕದವರ ಕುರಿತು ಅಧಿಕಾರಿಗಳಿಗೆ ಮಾಹಿತಿ ನೀಡಿ, ಎಚ್ಚರಿಕೆ ಕ್ರಮ ಅನುಸರಿಸಲು ವ್ಯವಸ್ಥೆಗೆ ಯತ್ನ.
ಜಿಲ್ಲಾ ವ್ಯಾಪ್ತಿಯಲ್ಲಿ ಕೃಷಿ ಹೊಂಡಕ್ಕೆ ಫೆನ್ಸಿಂಗ್‌ ಸೇರಿದಂತೆ ಮಕ್ಕಳು ಬೀಳದಂತೆ ತೆಗೆದುಕೊಳ್ಳಬೇಕಾದ ಎಲ್ಲಾ ಎಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಆಯಾ ರೈತರಿಗೆ ಸೂಚಿಸಲಾಗಿದೆ. ಜಯಸ್ವಾಮಿ, ಜಂಟಿ ನಿರ್ದೇಶಕ, ಕೃಷಿ ಇಲಾಖೆ


from India & World News in Kannada | VK Polls https://ift.tt/3q9Eix5

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...