ಮೈಸೂರು ಮೇಯರ್‌ಗಿರಿ ಯಾವ ಪಕ್ಷಕ್ಕೆ..? ಆರೇ ತಿಂಗಳ ಅಧಿಕಾರಕ್ಕಾಗಿ 'ತ್ರಿಮೂರ್ತಿ'ಗಳ ಮೀನಮೇಷ..!

ಐತಿಚಂಡ ರಮೇಶ್‌ ಉತ್ತಪ್ಪ : ಇನ್ನು ಉಳಿದಿರುವ ಕೇವಲ ಆರು ತಿಂಗಳ ಮೇಯರ್‌ ಪದವಿಗಾಗಿ ಯಾವ ಪಕ್ಷವೂ ಆಸಕ್ತಿ ತೋರಿಸುತ್ತಿಲ್ಲ. ಒಂದು ವೇಳೆ ಆರು ತಿಂಗಳಿಗೆ ಆಸೆಪಟ್ಟರೆ ಬರೋಬ್ಬರಿ ಎರಡು ವರ್ಷ ಖಾಲಿ ಕೈಯಲ್ಲಿ ಕುಳಿತುಕೊಳ್ಳಬೇಕು ಎನ್ನುವ ಚಿಂತೆ ಕಾಂಗ್ರೆಸ್‌ಗೆ..! ಈ ಹಿನ್ನೆಲೆಯಲ್ಲಿ ಪಕ್ಷ ಅರೆಮನಸ್ಸಿನ ಗೊಂದಲ್ಲಿದ್ದರೆ, ಜೆಡಿಎಸ್‌ ಪಕ್ಷವು ಕೊಟ್ಟು ಬಾಚಿಕೊಳ್ಳುವ ಚಾಣಾಕ್ಷ್ಯ ನಡೆ ಅನುಸರಿಸಲು ಮುಂದಾಗಿದ್ದು, ಮತ್ತೊಮ್ಮೆ ತೀವ್ರ ಕುತೂಹಲ ಮೂಡಿಸಿದೆ. ಸದ್ಯಕ್ಕೆ ಮೇಯರ್‌ ಆಯ್ಕೆ ಇಲ್ಲ ಎನ್ನುವ ಮನಸ್ಥಿತಿಯಲ್ಲಿದ್ದ ಪಕ್ಷಗಳಿಗೆ ದಿಢೀರ್‌ ಚುನಾವಣೆ ಘೋಷಣೆಯಾಗಿರುವುದು ಅಚ್ಚರಿ ಮೂಡಿಸಿದೆ. ಮಾನಸಿಕವಾಗಿ ಸಿದ್ಧರಿಲ್ಲದ ಪಕ್ಷಗಳು ಇದೀಗ ಮತ್ತೊಮ್ಮೆ ತಂತ್ರಗಾರಿಕೆಗೆ ಮೊರೆ ಹೋಗಬೇಕಿದೆ. ಯಾವುದೇ ಪಕ್ಷಕ್ಕೆ ಬಹುಮತ ಇಲ್ಲದ ಮಹಾನಗರ ಪಾಲಿಕೆಯಲ್ಲಿ ಸದ್ಯಕ್ಕೆ ಕಾಂಗ್ರೆಸ್‌ ಹಾಗೂ ಜೆಡಿಎಸ್‌ಗೆ ಒಲ್ಲದ ಪದವಿ. ಇದರಲ್ಲಿ ಹೆಚ್ಚು ಚಿಂತೆ ಹಾಗೂ ಗೊಂದಲದಲ್ಲಿ ಇರುವುದು ಕಾಂಗ್ರೆಸ್‌ ಪಕ್ಷ. ಕೆಲವೇ ತಿಂಗಳ ಹಿಂದೆ ಕಾಂಗ್ರೆಸ್‌ಗೆ ಚಳ್ಳೆ ಹಣ್ಣು ತಿನ್ನಿಸಿ ಅದರ ನೆರವಿನಿಂದಲೇ ಮೇಯರ್‌ ಪಟ್ಟ ಪಡೆದುಕೊಂಡ ಜೆಡಿಎಸ್‌, ಇದೀಗ 'ಧಾರಾಳತನ' ತೋರಿ ಗಾದಿಯನ್ನು ಕಾಂಗ್ರೆಸ್‌ಗೆ ಧಾರೆ ಎರೆಯಲು ಸಿದ್ಧವಾಗಿದೆ. ಸದ್ಯದ ಸ್ಥಿತಿ: ಮೂರನೇ ಅವಧಿಯ ಮೇಯರ್‌ ಚುನಾವಣೆ ಇದೀಗ ನಡೆಯಲಿದೆ. ಬಹುಮತ ಇಲ್ಲದ ಪಾಲಿಕೆಯಲ್ಲಿ ಜೆಡಿಎಸ್‌ ಹಾಗೂ ಕಾಂಗ್ರೆಸ್‌ ಅಧಿಕಾರ ಹಂಚಿಕೆ ಸೂತ್ರದಡಿಯಲ್ಲಿ ಮೈತ್ರಿ ಮಾಡಿಕೊಂಡಿವೆ. ಆದರೆ, ರಾಜ್ಯದಲ್ಲಿ ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಪಾಲಿಕೆಯ ಮೈತ್ರಿಯಲ್ಲಿಯೂ ಕಳೆದ ಬಾರಿ ಬಿರುಕುಬಿಟ್ಟಿದ್ದು, ಹೇಗೋ ತೇಪೆ ಹಚ್ಚಿ ಮುಂದುವರಿಯುತ್ತಿದೆ. ಒಪ್ಪಂದದ ಪ್ರಕಾರ ಮೂರನೇ ಅವಧಿ ಕಾಂಗ್ರೆಸ್‌ಗೆ ನೀಡಬೇಕಿತ್ತಾದರೂ ಸಿದ್ದರಾಮಯ್ಯ ಅವರಿಗೆ ಟಾಂಗ್‌ ನೀಡಲು ಸ್ವತಃ ಎಚ್‌.ಡಿ.ಕುಮಾರಸ್ವಾಮಿ ಎಂಟ್ರಿ ಕೊಟ್ಟು ಜೆಡಿಎಸ್‌ನ ರುಕ್ಮಿಣಿ ಮಾದೇಗೌಡ ಅವರನ್ನು ಮೇಯರ್‌ ಆಗುವಂತೆ ನೋಡಿಕೊಂಡರು. ಆದರೆ, ಅದೃಷ್ಟ ಕೈಕೊಟ್ಟಿದ್ದು ಕೇವಲ ಮೂರು ತಿಂಗಳಿನಲ್ಲಿ ರುಕ್ಮಿಣಿ ಮಾದೇಗೌಡ ಅವರ ಸದಸ್ಯತ್ವವೇ ರದ್ದಾದ ನಂತರ ಮತ್ತೆ ಚುನಾವಣೆ ಎದುರಿಸಬೇಕಿದೆ. ತಡೆಯಾಜ್ಞೆಯಿಂದಾಗಿ ಮೇಯರ್‌ ಇಲ್ಲದೆಯೇ ಮೂರು ತಿಂಗಳು ಕಳೆದುಹೋಗಿದೆ. ಇದರಿಂದಾಗಿ ಉಳಿದ ಅವಧಿ ಕೇವಲ ಆರು ತಿಂಗಳು. ಕಾಂಗ್ರೆಸ್‌ಗೆ ದಳ ಆಫರ್‌: ರುಕ್ಮಿಣಿ ಮಾದೇಗೌಡ ಸ್ಥಾನಕ್ಕೆ ಜೆಡಿಎಸ್‌ ಅಭ್ಯರ್ಥಿಯನ್ನೇ ತರಬೇಕಿತ್ತಾದರೂ ಜೆಡಿಎಸ್‌ ಅತ್ಯಂತ ಚಾಣಕ್ಷ್ಯ ನಡೆ ಅನುಸರಿಸಲು ಮುಂದಾಗಿದೆ. ಕಳೆದ ಚುನಾವಣೆಯಲ್ಲಿನ ತಂತ್ರಗಾರಿಕೆಯಿಂದ ಉಂಟಾದ ಬಿರುಕಿನ ಡ್ಯಾಮೇಜ್‌ ಕಂಟ್ರೋಲ್‌ ಮಾಡಲು ಮೇಲ್ನೋಟಕ್ಕೆ ಕಾಂಗ್ರೆಸ್‌ಗೆ ಅವಕಾಶ ನೀಡುವಂತೆ ಕಂಡು ಬರುತ್ತಿದೆ. ಆದರೆ, ಒಳಗೊಳಗೆ ನಿಗೂಢ ತಂತ್ರಗಾರಿಕೆ ಕಂಡುಬರುತ್ತಿದೆ. ಈಗ ಉಪಮೇಯರ್‌ ಸ್ಥಾನ ಕಾಂಗ್ರೆಸ್‌ಗೆ ನೀಡಲಾಗಿದೆ. ಉಳಿದ ಆರು ತಿಂಗಳ ಮೇಯರ್‌ ಪದವಿಯನ್ನೂ ನೀಡಿದರೆ ಎರಡು ಪ್ರಮುಖ ಹುದ್ದೆಯಲ್ಲದೆ ಪ್ರಮುಖ ಸ್ಥಾಯಿ ಸಮಿತಿಯೂ ಕಾಂಗ್ರೆಸ್‌ಗೆ ಲಭ್ಯವಾಗಲಿದೆ. ಇದಕ್ಕೆ ಪ್ರತಿಯಾಗಿ ಉಳಿದ ಎರಡು ವರ್ಷಗಳ ಕಾಲ ಮೇಯರ್‌, ಉಪಮೇಯರ್‌ ಪದವಿಯನ್ನು ತನಗೆ ಬಿಟ್ಟುಕೊಡಬೇಕು ಎಂಬ ಷರತ್ತು ಹಾಕಿದೆ. ಗುಟ್ಟು ಬಿಡದ 'ಕೈ' ಮುಖಂಡರು: ಜೆಡಿಎಸ್‌ನ ಈ ನಡೆಯನ್ನು ಅರಿತಿರುವ ಕಾಂಗ್ರೆಸ್‌ ಮುಖಂಡರು ಸದ್ಯಕ್ಕೆ ತಮ್ಮ ನಿರ್ಧಾರದ ಗುಟ್ಟು ಬಿಟ್ಟುಕೊಟ್ಟಿಲ್ಲ. ಕೇವಲ ಆರು ತಿಂಗಳಿಗಾಗಿ ಉಳಿದ ಎರಡೂ ಅವಧಿಯಲ್ಲಿ ಅಧಿಕಾರ ಇಲ್ಲದೆ ಕುಳಿತುಕೊಳ್ಳಲು ತಯಾರಿಲ್ಲ. ಆರು ತಿಂಗಳ ಹಿಂದೆ ಜೆಡಿಎಸ್‌ಗೆ ಸ್ಥಾನ ಒಲಿದಿರುವ ಹಿನ್ನೆಲೆಯಲ್ಲಿ ಉಳಿದಿರುವ ಆರು ತಿಂಗಳು ಜೆಡಿಎಸ್‌ ಇಟ್ಟುಕೊಳ್ಳಲಿ. ಮುಂದಿನ ವರ್ಷ ಮೇಯರ್‌ ಪಟ್ಟ ನಮಗೆ ನೀಡಲಿ ಎಂದು ಕೆಲವರು ಸಲಹೆ ನೀಡಿದ್ದಾರೆ. ಅವಕಾಶಕ್ಕಾಗಿ ನಿರೀಕ್ಷೆ: ಈ ಮಧ್ಯೆ ಅತೀ ದೊಡ್ಡ ಪಕ್ಷವಾಗಿದ್ದರೂ ಮೈತ್ರಿಯ ಬಲವಿಲ್ಲದೆ ಪ್ರತಿಪಕ್ಷದಲ್ಲಿದೆ. ಕಳೆದ ಬಾರಿಯ ತಂತ್ರಗಾರಿಕೆ ಫಲ ಕೊಡಲಿಲ್ಲ. ಈ ಹಿನ್ನೆಲೆಯಲ್ಲಿ ಪಕ್ಷಗಳ ನಡುವಿನ ಗೊಂದಲದಲ್ಲಿ ತಾನಾಗಿಯೇ ಅವಕಾಶ ಬಂದರಷ್ಟೇ ಮುಂದುವರಿಯಲು ನಿರ್ಧರಿಸಿದೆ. ಒಟ್ಟಿನಲ್ಲಿ ಮತ್ತೊಮ್ಮ ರೋಚಕ ತಿರುವು ಬಂದರೂ ಅಚ್ಚರಿ ಇಲ್ಲ 'ನಮಗೆ ಈ ಬಾರಿ ಅವಕಾಶ ಕೊಡಿ ಎಂದು ಕೇಳುತ್ತಿದ್ದೇವೆ. ಮೈಸೂರಿನ ಸಮಗ್ರ ಅಭಿವೃದ್ಧಿ ಕನಸು ನನಸು ಮಾಡುತ್ತೇವೆ. ಈ ಕಾರಣಕ್ಕಾಗಿ ಮನವಿ ಮಾಡುತ್ತಿದ್ದೇನೆ' ಎಂದು ಸಂಸದ ಪ್ರತಾಪ್‌ ಸಿಂಹ ಹೇಳಿದ್ದಾರೆ. 'ಕಾಂಗ್ರೆಸ್‌ ಇನ್ನೂ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ. ಶೀಘ್ರ ನಾಯಕರು ಸೇರಿ ಚರ್ಚೆ ನಡೆಸಲಿದ್ದಾರೆ. ಕಳೆದ ಬಾರಿ ಜೆಡಿಎಸ್‌ಗೆ ಅವಕಾಶ ನೀಡಿದ್ದೇವೆ' ಎಂದು ಕಾಂಗ್ರೆಸ್‌ ನಗರ ಅಧ್ಯಕ್ಷ ಆರ್‌. ಮೂರ್ತಿ ಹೇಳಿದ್ದಾರೆ. 'ಜೆಡಿಎಸ್‌ ಇನ್ನೂ ತೀರ್ಮಾನಿಸಿಲ್ಲ. ಕಾಂಗ್ರೆಸ್‌ ಸದಸ್ಯರೇ ಚುನಾವಣೆಗೆ ತಡೆಯಾಜ್ಞೆ ತಂದರು. ಇದರ ವಿರುದ್ಧ ನಾಯಕರು ಇಲ್ಲಿಯವರೆಗೆ ಮಾತನಾಡಿಲ್ಲ. ಪ್ರತಿ ಪಕ್ಷದಲ್ಲಿರೋಣ ಎಂದು ಸದಸ್ಯರು ಹೇಳುತ್ತಿದ್ದಾರೆ, ನೋಡೋಣ' ಎಂದು ಕೆ.ಆರ್‌.ನಗರ ಜೆಡಿಎಸ್‌ ಶಾಸಕ ಸಾ. ರಾ. ಮಹೇಶ್‌ ತಿಳಿಸಿದ್ದಾರೆ.


from India & World News in Kannada | VK Polls https://ift.tt/37ToT9Y

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...