ಶ್ರೀನಗರ: ಅಫ್ಘಾನಿಸ್ತಾನದಿಂದ ಅಮೆರಿಕವು ತನ್ನ ಸೇನಾ ಪಡೆಗಳನ್ನು ಹಿಂದಕ್ಕೆ ಪಡೆದುಕೊಂಡ ಘಟನೆಯಿಂದ ಪಾಠ ಕಲಿತುಕೊಳ್ಳುವಂತೆ ಕೇಂದ್ರ ಸರ್ಕಾರಕ್ಕೆ ಸಲಹೆ ನೀಡಿರುವ ಮಾಜಿ ಮುಖ್ಯಮಂತ್ರಿ, ಪಿಡಿಪಿ ನಾಯಕಿ , 'ಜಮ್ಮು ಮತ್ತು ಕಾಶ್ಮೀರದ ಜನತೆ ತಾಳ್ಮೆ ಕಳೆದುಕೊಂಡರೆ ನೀವು ಉಳಿಯುವುದಿಲ್ಲ. ನೀವು ನಿರ್ನಾಮವಾಗಿ ಹೋಗುತ್ತೀರಿ' ಎಂದು ಎಚ್ಚರಿಕೆ ನೀಡಿದ್ದಾರೆ. ದಕ್ಷಿಣ ಕಾಶ್ಮೀರದ ಕುಲ್ಗಾಮ್ನಲ್ಲಿ ಶನಿವಾರ ಸಾರ್ವಜನಿಕ ಸಮಾವೇಶದಲ್ಲಿ ಮುಫ್ತಿ ಮಾತನಾಡಿದರು. ಕಣಿವೆಗೆ ನೀಡಿದ್ದ ವಿಶೇಷ ಸ್ಥಾನಮಾನವನ್ನು 2019ರ ಆಗಸ್ಟ್ನಲ್ಲಿ ರದ್ದುಗೊಳಿಸಿದ ಬಳಿಕ ರಾಜಕೀಯ ನಾಯಕರು ಈ ರೀತಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡುವುದು ಬಹಳ ಅಪರೂಪವಾಗಿದೆ. 'ತಾಳ್ಮೆಗೆ ಧೈರ್ಯ ಬೇಕು. ಜಮ್ಮು ಮತ್ತು ಕಾಶ್ಮೀರ ಜನತೆ ಸಹಿಸಿಕೊಳ್ಳುತ್ತಿದ್ದಾರೆ. ಅವರು ತಮ್ಮ ಸಹನೆಯನ್ನು ಕಳೆದುಕೊಂಡ ಬಳಿಕ ನೀವೂ ಕೂಡ ಉಳಿಯುವುದಿಲ್ಲ. ನೀವು ನಿರ್ನಾಮವಾಗುತ್ತೀರಿ. ನಾನು ನಿಮಗೆ ಮತ್ತೆ ಮತ್ತೆ ಹೇಳುತ್ತಿದ್ದೇನೆ. ನಮ್ಮ ತಾಳ್ಮೆಯನ್ನು ಪರೀಕ್ಷಿಸಬೇಡಿ. ಅರ್ಥಮಾಡಿಕೊಳ್ಳಿ ಮತ್ತು ನಿಮ್ಮ ತಪ್ಪನ್ನು ತಿದ್ದಿಕೊಳ್ಳಿ' ಎಂದು ಹೇಳಿದ್ದಾರೆ. ಅಫ್ಘಾನಿಸ್ತಾನವನ್ನು ಆಕ್ರಮಿಸಿಕೊಂಡ ಘಟನೆಯಿಂದ ಪಾಠ ಕಲಿಯುವಂತೆ ಕೇಂದ್ರಕ್ಕೆ ಸಲಹೆ ನೀಡಿದ ಅವರು, ಕಾಶ್ಮೀರ ಸಮಸ್ಯೆಯನ್ನು ಮಾತುಕತೆ ಮೂಲಕ ಪರಿಹರಿಸಿಕೊಳ್ಳುವಂತೆ ಒತ್ತಾಯಿಸಿದ್ದಾರೆ. 'ನೆರೆಯ ದೇಶದಲ್ಲಿ ಏನಾಗುತ್ತಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಿ. ಎಂತಹ ದೊಡ್ಡ ಶಕ್ತಿ ಅಮೆರಿಕ... ಅವರು ತಮ್ಮ ಹಾಸಿಗೆಗಳನ್ನು ಮಡಿಸಿ ವಾಪಸಾಗುವಂತಾಯಿತು. ನಿಮಗೆ (ಕೇಂದ್ರ ಸರ್ಕಾರ) ಇನ್ನೂ ಅವಕಾಶವಿದೆ. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಹೊರಗಿನವರೊಂದಿಗೆ (ಪಾಕಿಸ್ತಾನ) ಮಾತುಕತೆ ಆರಂಭಿಸಿದಂತೆ, ನೀವು ಇಲ್ಲಿಯೂ (ಜಮ್ಮು ಮತ್ತು ಕಾಶ್ಮೀರ) ಮಾತುಕತೆಯನ್ನು ಆರಂಭಿಸಬೇಕು' ಎಂದು ಸಲಹೆ ನೀಡಿದ್ದಾರೆ. 'ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳು ಅಮೆರಿಕ ಪಡೆಗಳು ಅಲ್ಲಿಂದ ಕಾಲ್ಕೀಳುವಂತೆ ಮಾಡಿದ್ದರು. ಈಗ ತಾಲಿಬಾನಿಗಳ ವರ್ತನೆಯನ್ನು ಇಡೀ ಜಗತ್ತು ನೋಡುತ್ತಿದ್ದೆ. ಜಗತ್ತು ಅದರ ವಿರುದ್ಧ ಹೋಗದಂತೆ ತಾಲಿಬಾನ್ ಪಡೆಗಳು ಯಾವುದೇ ಕೃತ್ಯ ಎಸಗದಂತೆ ನಾನು ಮನವಿ ಮಾಡುತ್ತೇನೆ. ಬಂದೂಕುಗಳ ಪಾತ್ರ ಮುಗಿದಿದೆ' ಎಂದು ಹೇಳಿದ್ದಾರೆ.
from India & World News in Kannada | VK Polls https://ift.tt/3kh86mT