ಹೊಸದಿಲ್ಲಿ: ಭಾರತ ವಿರುದ್ಧ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಈಗಾಗಲೇ 0-1 ಹಿನ್ನಡೆ ಅನುಭವಿಸಿರುವ ಇಂಗ್ಲೆಂಡ್ ತಂಡದ ಬ್ಯಾಟಿಂಗ್ ವಿಭಾಗದಲ್ಲಿ ಗುಣಮಟ್ಟದ ಕೊರತೆ ಇದೆ ಎಂದು ಭಾರತದ ಮಾಜಿ ಆರಂಭಿಕ ಬ್ಯಾಟ್ಸ್ಮನ್ ಹೇಳಿದ್ದಾರೆ. ಆಗಸ್ಟ್ 25 ರಿಂದ ಲೀಡ್ಸ್ನಲ್ಲಿ ಆರಂಭವಾಗಲಿರುವ ಮೂರನೇ ಟೆಸ್ಟ್ ಪಂದ್ಯಕ್ಕೆ ಇಂಗ್ಲೆಂಡ್ ತಂಡವನ್ನು ಪ್ರಕಟಿಸಲಾಗಿದೆ. ಕಳೆದ ಪಂದ್ಯಗಳಲ್ಲಿ ಹೀನಾಯ ಪ್ರದರ್ಶನ ತೋರಿದ್ದ ಡಾಮ್ ಸಿಬ್ಲೀ ಹಾಗೂ ಝ್ಯಾಕ್ ಕ್ರಾವ್ಲಿರನ್ನು ಕೈ ಬಿಟ್ಟಿದ್ದು, ಅವರ ಸ್ಥಾನಕ್ಕೆ ಇಂಗ್ಲೆಂಡ್ ಹಾಗೂ ವೇಲ್ಸ್ ಕ್ರಿಕೆಟ್ ಅಕಾಡೆಮಿಯು ಡಾವಿಡ್ ಮಲಾನ್ ಮತ್ತು ಸಕೀಬ್ ಮಹ್ದೂದ್ ಅವರಿಗೆ ತಂಡದಲ್ಲಿ ಅವಕಾಶ ಕಲ್ಪಿಸಿದೆ. ತಮ್ಮ ಅಧಿಕೃತ ಯೂಟ್ಯೂಬ್ ಚಾನೆಲ್ನಲ್ಲಿ ಶೇರ್ ಮಾಡಿರುವ ವಿಡಿಯೋದಲ್ಲಿ ಮಾತನಾಡಿದ ಆಕಾಶ್ ಚೋಪ್ರಾ, ಇಂಗ್ಲೆಂಡ್ ತಂಡದಲ್ಲಿ ನಾಯಕ ಜೋ ರೂಟ್ ಬಿಟ್ಟರೆ ಇನ್ನುಳಿದ ಎಲ್ಲಾ ಬ್ಯಾಟ್ಸ್ಮನ್ಗಳು ವೈಫಲ್ಯ ಅನುಭವಿಸುತ್ತಿದ್ದಾರೆ. ಈ ಕಾರಣದಿಂದಾಗಿ ಆತಿಥೇಯರು, ಪ್ರವಾಸಿಗರ ಎದುರು ಹಿನ್ನಡೆ ಅನುಭವಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ. "ಇಂಗ್ಲೆಂಡ್ ತಂಡದಲ್ಲಿ ಸಾಕಷ್ಟು ಆಯ್ಕೆಗಳಿವೆ. ಆದರೆ, ಹೆಚ್ಚಿನ ಆಯ್ಕೆಗಳೊಂದಿಗೆ ಆಂಗ್ಲರ ತಂಡದಲ್ಲಿ ಪ್ರಮಾಣವಿದೆ ಆದರೆ, ಗುಣಮಟ್ಟ ಇಲ್ಲ. ಗುಣಮಟ್ಟದ ಏಕೈಕ ಬ್ಯಾಟ್ಸ್ಮನ್ ಅಂದರೆ ಜೋ ರೂಟ್ ಮಾತ್ರ. ತಂಡದ ಇನ್ನುಳಿದ ಆಟಗಾರರು ಭಾರತ ತಂಡದ ಗುಣಮಟ್ಟದ ಬೌಲಿಂಗ್ ಎದುರು ರನ್ ಗಳಿಸಲು ಪರದಾಡುತ್ತಿದ್ದಾರೆ," ಎಂದು ಚೋಪ್ರಾ ಹೇಳಿದ್ದಾರೆ. ಭಾರತ ತಂಡದ ಗುಣಮಟ್ಟದ ಬೌಲಿಂಗ್ ದಾಳಿಗೆ ಇಂಗ್ಲೆಂಡ್ ಬ್ಯಾಟ್ಸ್ಮನ್ಗಳು ಶರಣಾಗಿದ್ದಾರೆ ಎಂದು ಪ್ರಸ್ತುತ ಕಾಮೆಂಟೆಟರ್ ಆಗಿರುವ ಆಕಾಶ್ ಚೋಪ್ರಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. "ನನ್ನ ಮಾತನ್ನು ನೀವು ಇಷ್ಟಪಡಬಹುದು ಅಥವಾ ವಿರೋಧಿಸಬಹುದು. ಆದರೆ, ಇದೇ ವಾಸ್ತವವಾಗಿದೆ. ಆದರೆ, ಬೌಲಿಂಗ್ ವಿಭಾಗ ಯೋಗ್ಯ ಪ್ರದರ್ಶನ ತೋರಿದೆ. ಕೊನೆಯ ಹಂತದಲ್ಲಿ ಭಾರತದ ಬ್ಯಾಟ್ಸ್ಮನ್ಗಳ ಎದುರು ಸ್ವಲ್ಪ ಎಡವಿದ್ದು, ಬಿಟ್ಟರೆ ಇನ್ನೆಲ್ಲವೂ ಉತ್ತಮವಾಗಿದೆ," ಎಂದು ತಿಳಿಸಿದ್ದಾರೆ. ಸಕೀಬ್ ಮಹ್ದೂದ್ ಅವರನ್ನು ಮೂರನೇ ಪಂದ್ಯಕ್ಕೆ ಆಯ್ಕೆ ಮಾಡಿರುವ ಬಗ್ಗೆ ಪ್ರತಿಕ್ರಿಯಿಸಿದ ಆಕಾಶ್ ಚೋಪ್ರಾ, "ಡಾಮ್ ಸಿಬ್ಲೀ ಹಾಗೂ ಝ್ಯಾಕ್ ಕ್ರಾವ್ಲೀ ಇಬ್ಬರನ್ನು ಕೈ ಬಿಡಲಾಗಿದೆ. ಹಾಗಾಗಿ, ಡಾವಿಡ್ ಮಲಾನ್ ಹಾಗೂ ಸಕೀಬ್ ಮಹ್ಮೂದ್ ಅವರನ್ನು ತಂಡಕ್ಕೆ ವಾಪಸ್ ಕರೆಸಿಕೊಳ್ಳಲಾಗಿದೆ. ಪಾಕಿಸ್ತಾನದ ವಿರುದ್ಧ ಸಕೀಬ್ ಅತ್ಯುತ್ತಮ ಪ್ರದರ್ಶನ ತೋರಿದ್ದರು," ಎಂದು ಹೇಳಿದ್ದಾರೆ. "ಅಂಹಹಾಗೆ ಭಾರತ ವಿರುದ್ಧ ಎರಡನೇ ಪಂದ್ಯದ ವೇಳೆಯೂ ಸಕೀಬ್ ಮಹ್ಮೂದ್ ತಂಡದಲ್ಲಿದ್ದರು. ಆದರೆ, ಮಾರ್ಕ್ವುಡ್ ಆಡಿದ್ದರಿಂದ ಸಕೀಬ್ಗೆ ಅವಕಾಶ ಸಿಕ್ಕಿರಲಿಲ್ಲ. ಇದೀಗ ಮಾರ್ಕ್ವುಡ್ ಗಾಯಕ್ಕೆ ತುತ್ತಾಗಿದ್ದ ಹಿನ್ನೆಲೆಯಲ್ಲಿ ಮತ್ತೇ ಯುವ ವೇಗಿಗೆ ಅವಕಾಶ ನೀಡಲಾಗಿದೆ," ಎಂದು ಆಕಾಶ್ ಚೋಪ್ರಾ ತಿಳಿಸಿದ್ದಾರೆ. ಕಳಪೆ ಬ್ಯಾಟಿಂಗ್ ಪ್ರದರ್ಶನದಿಂದಾಗಿ ಡಾಮ್ ಸಿಬ್ಲೀ ಅವರನ್ನು ತಂಡದಿಂದ ಕೈ ಬಿಡಲಾಗಿದೆ. ಈ ಹಿನ್ನೆಲೆಯಲ್ಲಿ ಬ್ಯಾಟಿಂಗ್ ವಿಭಾಗದಲ್ಲಿ ಬದಲಾವಣೆ ಮಾಡಲಾಗಿದೆ ಎಂದು ಮಾಜಿ ಆಟಗಾರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. "ಮಲಾನ್ ಟಿ20 ಚಾಂಪಿಯನ್. ಡಾಮ್ ಸಿಬ್ಲೀ ವೈಫಲ್ಯ ಅನುಭವಿಸಿದ ಕಾರಣ ಡಾವಿಡ್ ಮಲಾನ್ಗೆ ಅವಕಾಶ ಕಲ್ಪಿಸಲಾಗಿದೆ. ಹಸೀಬ್ ಹಮೀದ್ ಅವರನ್ನು ಓಪನಿಂಗ್ಗೆ ಕಳುಹಿಸಬಹುದು. ಮಧ್ಯಮ ಕ್ರಮಾಂಕದಲ್ಲಿ ಡಾವಿಡ್ ಮಲಾನ್ ಅಥವಾ ಒಲ್ಲೀ ಪೋಪ್ ಅವರಲ್ಲಿ ಒಬ್ಬರನ್ನು ಆಡಿಸಬಹುದು. ಇನ್ನು ಮೂರನೇ ಕ್ರಮಾಂಕದಲ್ಲಿ ಜಾನಿ ಬೈರ್ಸ್ಟೋವ್ ಅವರನ್ನು ಕಣಕ್ಕೆ ಇಳಿಸಬಹುದು," ಎಂದು ಆಕಾಶ್ ಚೋಪ್ರಾ ಸಲಹೆ ನೀಡಿದ್ದಾರೆ.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3B4IIYB