ಬೆಂಗಳೂರು: ಬೈಕ್ ವಿಚಾರಕ್ಕೆ ಸಂಬಂಧಿಸಿದಂತೆ ಸ್ನೇಹಿತರ ಜತೆಗೆ ಜಗಳವಾಡಿದ ಮೊದಲನೇ ವರ್ಷದ ಬಿ.ಕಾಂ ವಿದ್ಯಾರ್ಥಿ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದು, ಈ ವಿಷಯ ಕೇಳಿ ಆಘಾತಕ್ಕೊಳಗಾದ ವಿದ್ಯಾರ್ಥಿಯ ತಾಯಿಯೂ ಚಲಿಸುವ ಕಾರಿಗೆ ಸಿಲುಕಿ ಮೃತಪಟ್ಟಿರುವ ದಾರುಣ ಘಟನೆ ವಿಜಯನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಎಂ.ಸಿ. ಲೇಔಟ್ನ ಮೋಹನ್ ಗೌಡ (20) ಆತ್ಮಹತ್ಯೆ ಮಾಡಿಕೊಂಡ ಯುವಕ. ಈ ಸುದ್ದಿ ಕೇಳಿದ ಮೃತನ ತಾಯಿ ಲೀಲಾವತಿ (45) ಶಾಕ್ಗೆ ಒಳಗಾಗಿ ಆಸ್ಪತ್ರೆಯಿಂದ ಹೊರಬರುವಾಗ ಚಲಿಸುವ ಕಾರೊಂದಕ್ಕೆ ಸಿಲುಕಿ ಪ್ರಾಣ ಬಿಟ್ಟಿದ್ದಾರೆ. ಮೋಹನ್ ಗೌಡ ಖಾಸಗಿ ಕಾಲೇಜಿನಲ್ಲಿ ಪರೀಕ್ಷೆ ಬರೆದ ಬಳಿಕ ಸ್ನೇಹಿತರ ಜತೆಗೂಡಿ ಧೂಮಪಾನ ಮಾಡಿ ಮನೆಗೆ ಬಂದಿದ್ದ. ಈ ವೇಳೆ ಅಲ್ಲಿಗೆ ಬಂದ ಆತನ ಸ್ನೇಹಿತರು ತಮ್ಮಿಂದ ತೆಗೆದುಕೊಂಡಿರುವ ಬೈಕ್ ವಾಪಸ್ ನೀಡುವಂತೆ ಆತನ ಜತೆ ಜಗಳ ಮಾಡಿದರು. ಬೈಕ್ ತೆಗೆದುಕೊಂಡಿಲ್ಲಎಂದು ಮೋಹನ್ ವಾದ ಮಾಡಿದರೂ, ಸ್ನೇಹಿತರು ಅದನ್ನು ಒಪ್ಪಿರಲಿಲ್ಲ. ಇದರಿಂದ ಮನನೊಂದ ಮೋಹನ್ ಮನೆಯೊಳಗೆ ತೆರಳಿ ಸೀರೆಯಿಂದ ನೇಣು ಬಿಗಿದುಕೊಂಡಿದ್ದಾನೆ. ಆದರೆ, ಕೊನೆಗೆ ಮೋಹನ್ ಬೈಕ್ ತೆಗೆದುಕೊಂಡಿಲ್ಲ ಎಂಬ ಸಂಗತಿಯೂ ಗೊತ್ತಾಗಿದೆ. ಕೊಠಡಿ ಬಾಗಿಲು ತಟ್ಟಿದ್ದರೂ ಪುತ್ರ ತೆಗೆಯದಿದ್ದಾಗ, ಆತನ ತಂದೆ-ತಾಯಿ ಹತ್ತಿರದಲ್ಲಿದ್ದ ಪೊಲೀಸರನ್ನು ಕರೆದಿದ್ದಾರೆ. ಈ ವೇಳೆ ಸ್ಥಳಕ್ಕೆ ಬಂದ ಪೊಲೀಸರು ಬಾಗಿಲು ಮುರಿದಾಗ ನೇಣು ಬಿಗಿದು ಕೊಂಡಿರುವುದು ಕಂಡುಬಂತು. ಕೂಡಲೇ ಆತನನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಯುವಕ ಮೃತಪಟ್ಟಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಪುತ್ರ ಮೃತಪಟ್ಟ ವಿಷಯ ತಿಳಿಯುತ್ತಿದ್ದಂತೆ ಆಘಾತಕ್ಕೊಳಗಾದ ತಾಯಿ ಲೀಲಾವತಿ ಸಂಬಂಧಿಕರ ಜತೆ ಅಳುತ್ತ ಆಸ್ಪತ್ರೆಯಿಂದ ಹೊರಗೆ ಓಡಿ ಬಂದಿದ್ದಾರೆ. ಪುತ್ರನನ್ನು ಕಳೆದುಕೊಂಡ ನೋವಿನಲ್ಲಿದ್ದ ತಾಯಿ ಅದೇ ರಸ್ತೆಯಲ್ಲಿ ವೇಗವಾಗಿ ಬರುತ್ತಿದ್ದ ಕಾರೊಂದಕ್ಕೆ ಅಡ್ಡವಾಗಿ ಸಿಲುಕಿ ಪ್ರಾಣ ಬಿಟ್ಟಿದ್ದಾರೆ ಎಂದು ಸಂಚಾರ ಪೊಲೀಸರು ತಿಳಿಸಿದ್ದಾರೆ. ಆತ್ಮಹತ್ಯೆಯೋ, ಅಪಘಾತವೂ ಗೊಂದಲ:ಲೀಲಾವತಿ ತಾವಾಗಿಯೇ ವೇಗವಾಗಿ ಬರುತ್ತಿದ್ದ ಕಾರಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಹೇಳುತ್ತಿದ್ದಾರೆ. ಆದರೆ ಮಗನನ್ನು ಕಳೆದುಕೊಂಡ ದುಃಖದಲ್ಲಿ ರಸ್ತೆಗೆ ದಿಕ್ಕಾಪಾಲಾಗಿ ಓಡಿ ಬಂದಾಗ ಕಾರಿಗೆ ಸಿಲುಕಿದ್ದಾರೆ ಎಂದು ಸಂಬಂಧಿಕರು ಹೇಳುತ್ತಿದ್ದಾರೆ. ಈ ಕುರಿತು ಸಿಸಿಟಿವಿ ದೃಶ್ಯಾವಳಿ ಪರಿಶೀಲಿಸಿ ತನಿಖೆ ನಡೆಸಲಾಗುತ್ತಿದೆ. ಹಾಗೆಯೇ ಮೃತ ವಿದ್ಯಾರ್ಥಿಯ ತಂದೆ ಸ್ನೇಹಿತರ ಜತೆಗಿನ ಜಗಳವೇ ಮಗನ ಸಾವಿಗೆ ಕಾರಣವೆಂದು ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.
from India & World News in Kannada | VK Polls https://ift.tt/3iYCWBt