ದಾಸರಹಳ್ಳಿ: ಕೊರೊನಾ ಸಂದರ್ಭದಲ್ಲಿಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಜೀವನಾಧಾರಕ್ಕಾಗಿ ಸಾಲ ಮಾಡಿಕೊಂಡಿದ್ದ ದಂಪತಿ ಸುಸೈಡ್ ನೋಟ್ ಬರೆದಿಟ್ಟು ಇಬ್ಬರು ಹೆಣ್ಣು ಮಕ್ಕಳ ಸಮೇತ ನಾಪತ್ತೆಯಾಗಿರುವ ಪ್ರಕರಣ ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಕಳೆದ ನಾಲ್ಕು ವರ್ಷಗಳಿಂದ ದಾಸರಹಳ್ಳಿಯ 5ನೇ ಕ್ರಾಸ್ ಪ್ರಶಾಂತನಗರದಲ್ಲಿ ವಾಸವಾಗಿದ್ದ ಗಾಂಧಿ(43), ಶಾಲಿನಿ(40) ದಂಪತಿ 13 ಮತ್ತು 16 ವರ್ಷದ ಹೆಣ್ಣು ಮಕ್ಕಳೊಂದಿಗೆ ನಾಪತ್ತೆಯಾಗಿದ್ದಾರೆ. ಗಾಂಧಿ ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಪತ್ನಿ ಶಾಲಿನಿ ಕಂಪ್ಯೂಟರ್ ಕೆಲಸ ಮಾಡಿಕೊಂಡಿದ್ದರು. ‘ಕೋವಿಡ್ ಬಳಿಕ ಕುಟುಂಬ ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಗಾಂಧಿ ಕೆಲವರ ಬಳಿ ಸಾಲ ಮಾಡಿದ್ದರು. ಬಡ್ಡಿಗೆ ಬಡ್ಡಿ ಹೆಚ್ಚಾಗಿ ಸಾಲದ ಮೊತ್ತ ಏಳು ಲಕ್ಷ ರೂ.ಗೂ ಹೆಚ್ಚಾಗಿತ್ತು. ಸಾಲಗಾರರು ಮನೆ ಹತ್ತಿರ ಬಂದು ಹಣ ಹಿಂತಿರುಗಿಸುವಂತೆ ಕಿರುಕುಳ ನೀಡುತ್ತಿದ್ದರು. ಇದರಿಂದ ಜಿಗುಪ್ಸೆಗೊಂಡು ಸುಸೈಡ್ ನೋಟ್ ಬರೆದಿಟ್ಟು ಕುಟುಂಬ ಸಹಿತ ನಾಪತ್ತೆಯಾಗಿದ್ದಾರೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ನಾಪತ್ತೆ ಬಗ್ಗೆ ಶಾಲಿನಿ ಬಾಮೈದ, ತುಮಕೂರು ನಿವಾಸಿ ಚಿರಂಜೀವಿ ಎಂಬವರು ದೂರು ನೀಡಿದ್ದಾರೆ. ‘ಕುಟುಂಬದವರು ಬಳಸುತ್ತಿದ್ದ ಎಲ್ಲ ಮೊಬೈಲ್ಗಳು ಸ್ವಿಚ್ ಆಫ್ ಆಗಿತ್ತು. ಇದರಿಂದ ಆತಂಕಗೊಂಡಾಗ ಮನೆ ಮಾಲೀಕರಿಗೆ ಫೋನ್ ಮಾಡಿದ್ದೆ. ಮನೆ ಖಾಲಿ ಮಾಡಿದ್ದಾರೆಂದು ಹೇಳಿದ್ದರು. ಇದರಿಂದ ಆತಂಕಗೊಂಡ ಮತ್ತೊಂದು ಕೀಯಿಂದ ಮನೆ ಬೀಗ ತೆಗೆದು ನೋಡಿದಾಗ ಸುಸೈಡ್ ನೋಟ್ ಪತ್ತೆಯಾಗಿದೆ’ ಎಂದು ದೂರಿನಲ್ಲಿ ತಿಳಿಸಿದ್ದಾರೆ.
from India & World News in Kannada | VK Polls https://ift.tt/3z2gAVc