ಪಶ್ಚಿಮಘಟ್ಟದಲ್ಲಿ ಮಿನಿ ಡ್ಯಾಂ ಆತಂಕ; ಎತ್ತಿನಹೊಳೆ ಬಳಿಕ ಮತ್ತೊಮ್ಮೆ ಬೃಹತ್ ಪರಿಸರ ನಾಶದ ಭೀತಿ!

ವಿನಯ್‌ ಕೂಡುರಸ್ತೆ ಸಕಲೇಶಪುರ: ಪಶ್ಚಿಮಘಟ್ಟ ಅರಣ್ಯ ಪ್ರದೇಶ ಹೊಂದಿರುವ ಸಕಲೇಶಪುರ ಭಾಗ ಸೇರಿದಂತೆ ವಿವಿಧ ಕಡೆಗಳಲ್ಲಿ ರಾಜ್ಯ ಸರಕಾರ 1400 ಮಿನಿ ಡ್ಯಾಂ ನಿರ್ಮಿಸಲು ಜಾಗ ಗುರುತಿಸಲಾಗಿದೆ ಎಂಬ ಸಣ್ಣ ನೀರಾವರಿ ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿಕೆ ಮಲೆನಾಡಿಗರಲ್ಲಿ ಸಂಚಲನ ಮೂಡಿಸಿದೆ. ಡ್ಯಾಂ ನಿರ್ಮಿಸುವ ಬಗ್ಗೆ ಮಂಗಳವಾರ ಹೊಸದಿಲ್ಲಿಯಲ್ಲಿ ಕೇಂದ್ರ ಜಲಶಕ್ತಿ ಸಚಿವರನ್ನು ಭೇಟಿ ಮಾಡಿ ಚರ್ಚಿಸಲಾಗಿದೆ ಎನ್ನಲಾಗುತ್ತಿದ್ದು, ಇದು ಮಲೆನಾಡು ಭಾಗದಲ್ಲಿ ಮತ್ತೊಂದು ಪರಿಸರ ನಾಶದ ಯೋಜನೆ ಎಂಬುದು ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ. ಈಗಾಗಲೇ ಪಶ್ಚಿಮಘಟ್ಟ ಅರಣ್ಯ ಭಾಗದಲ್ಲಿಎತ್ತಿನಹೊಳೆ ಯೋಜನೆ, ಗುಂಡ್ಯ ಜಲವಿದ್ಯುತ್‌ ಯೋಜನೆಯಿಂದ ಸಾವಿರಾರು ಮರಗಳು ನಾಶವಾಗಿದ್ದು, ರಾಜ್ಯ ಸರಕಾರದ ಹೊಸ ಯೋಜನೆಗೆ ಪರಿಸರವಾದಿಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಏನಿದು ಯೋಜನೆ? ಪಶ್ಚಿಮಘಟ್ಟ ದಟ್ಟ ಕಾಡುಗಳ ನಡುವೆ ಹುಟ್ಟುವ ನದಿಗಳ ನೀರು ಸಮುದ್ರ ಸೇರದಂತೆ ಚಿಕ್ಕಚಿಕ್ಕ ಡ್ಯಾಂಗಳನ್ನು ನಿರ್ಮಿಸಲು ಈಗಾಗಲೇ ಸಮೀಕ್ಷೆ ನಡೆಸಿದ್ದು, ಕುಡಿಯುವ ನೀರು ಹಾಗೂ ಸಣ್ಣ ವಿದ್ಯುತ್‌ ಉತ್ಪಾದನೆಗೆ ಜಾಗಗಳನ್ನು ಗುರುತಿಸಲಾಗಿದೆ. ಈಗಾಗಲೇ ಸಕಲೇಶಪುರ ಭಾಗದಲ್ಲಿ ಹಲವು ಜಲ ಯೋಜನೆಗಳಿಂದ ಅರಣ್ಯ ನಾಶವಾಗಿದ್ದು, ಶಿರಾಡಿ ಘಾಟ್‌ನಲ್ಲಿ ಗುಂಡ್ಯ ಕೆಂಪುಹೊಳೆ ಸಮೀಪ ಸಣ್ಣ ಡ್ಯಾಂ ಕಾರ್ಯ ನಿರ್ವಹಿಸುತ್ತಿದ್ದು, ಇಲ್ಲಿ ವಿದ್ಯುತ್‌ ಉತ್ಪಾದನೆ ಮಾಡಲಾಗುತ್ತಿದೆ. ಇದರ ಜತೆ ಸಣ್ಣ ಡ್ಯಾಂ ನಿರ್ಮಿಸಿದರೆ ಪರಿಸರ ನಾಶದಿಂದ ಮಲೆನಾಡಿನ ನೈಜ ಪರಿಸರಕ್ಕೆ ತೊಂದರೆಯಾಗಲಿದೆ ಎಂಬುದು ಪರಿಸರವಾದಿಗಳ ವಾದ. ಎತ್ತಿನಹೊಳೆ ಯೋಜನೆಗೆ ಶೇ.45ರಷ್ಟು ಅರಣ್ಯ ನಾಶರಾಜ್ಯದ ಬೃಹತ್‌ ನೀರಾವರಿ ಯೋಜನೆಯಾದ ಬಯಲು ಸೀಮೆಗಳಿಗೆ ಪಶ್ಚಿಮಘಟ್ಟದಿಂದ ನೀರು ಹರಿಸುವ ಎತ್ತಿನಹೊಳೆ ಯೋಜನೆಯಿಂದ ಈಗಾಗಲೇ ಮಲೆನಾಡು ಭಾಗದ ಶೇ.45ರಷ್ಟು ಕಾಡು ನಾಶವಾಗಿದ್ದು, ಯೋಜನೆಯ ಹೆಸರಿನಲ್ಲಿ ನಿಯಮ ಮುರಿದು ಲಕ್ಷಾಂತರ ಮರಗಳನ್ನು ಅಕ್ರಮವಾಗಿ ಕಟಾವು ಮಾಡಲಾಗಿದೆ. ಎತ್ತಿನಹೊಳೆ ಯೋಜನೆಯಿಂದ ಈ ಭಾಗದ ಸಾವಿರಾರು ರೈತರು ತಮ್ಮ ಜಮೀನನ್ನು ಕಳೆದುಕೊಂಡು ಅತಂತ್ರ ಸ್ಥಿತಿಯಲ್ಲಿದ್ದಾರೆ. ಪರಿಹಾರವೇ ಬರಲಿಲ್ಲ: ಸಕಲೇಶಪುರ ತಾಲೂಕಿನ ಹೆಬ್ಬನಹಳ್ಳಿ ಗ್ರಾಮದ ಸರ್ವೆ ನಂ.86ರಲ್ಲಿಎತ್ತಿನಹೊಳೆ ಯೋಜನೆ ನೀರು ಸರಬರಾಜು ಮಾಡುವ ಸುರಂಗ ಕಾಮಗಾರಿ ಮುಕ್ತಾಯ ಹಂತದಲ್ಲಿದೆ. ಒಟ್ಟು 76 ಎಕರೆ ಸರಕಾರ ಗೋಮಾಳವಿದ್ದು ಅದರಲ್ಲಿ 45 ಎಕರೆ ಭೂಮಿಯಲ್ಲಿ ನಿವೇಶನ ರಹಿತರಿಗೆ ಸರಕಾರ ಈ ಹಿಂದೆಯೇ ಮಂಜೂರಾತಿ ನೀಡಿ ಹಕ್ಕುಪತ್ರ ಸಹ ನೀಡಲಾಗಿದೆ. ಆದರೆ ಇದೀಗ ಹಕ್ಕುಪತ್ರ ನೀಡಿದ ರೈತರಿಂದ ಭೂಮಿಯನ್ನು ವಾಪಸ್‌ ಪಡೆಯಲಾಗುತ್ತಿದ್ದು, ಜಮೀನು ಕಳೆದುಕೊಂಡ ರೈತರಿಗೆ ಇನ್ನೂ ಯಾವುದೇ ಪರಿಹಾರ ಬಂದಿಲ್ಲ. ಇದಲ್ಲದೆ ಎತ್ತಿನಹೊಳೆ ಯೋಜನೆಯಿಂದ ಬಯಲುಸೀಮೆಗೆ ನೀರು ಕೊಡುವ ಯೋಜನೆ ಯಶಸ್ವಿಯಾಗುವ ಲಕ್ಷಣಗಳು ಕಾಣುತ್ತಿಲ್ಲ. ಕಳೆದ 7 ವರ್ಷದಿಂದ ಆಮೆಗತಿಯಲ್ಲಿ ಕಾಮಗಾರಿ ಕುಂಟುತ್ತಲೇ ಇದೆ. ಇದರ ಮಧ್ಯೆ ಮತ್ತೊಂದು ಯೋಜನೆ ಬೇಕೇ ಎಂಬುದು ಸಾರ್ವಜನಿಕರ ಪ್ರಶ್ನೆ. ಈಗಾಗಲೇ ಎತ್ತಿನಹೊಳೆ ಯೋಜನೆಯಿಂದ ಈ ಭಾಗದಲ್ಲಿ ಕಾಡಾನೆಗಳು ಪಟ್ಟಣಕ್ಕೆ ನುಗ್ಗುತ್ತಿವೆ. ಕೆಲವು ಕಡೆ ಭೂ ಕುಸಿತವು ಉಂಟಾಗಿದ್ದು, ಯೋಜನೆಗೆ ಸರಿಯಾಗಿ ನೀರು ಸಿಗುತ್ತಿಲ್ಲ. ಇನ್ನು ಡ್ಯಾಂ ನಿರ್ಮಿಸಿ ಮಲೆನಾಡಿಗರಿಗೆ ಮತ್ತೊಂದು ಸಮಸ್ಯೆ ಉಂಟು ಮಾಡಬಾರದು ಎನ್ನುವುದು ಪರಿಸರ ಪ್ರಿಯರ ಒತ್ತಾಯವಾಗಿದೆ. ಈ ಬಗ್ಗೆ ಸರಕಾರ ಗಮನಹರಿಸಬೇಕು ಎಂದು ಆಗ್ರಹಿಸಿದ್ದಾರೆ.


from India & World News in Kannada | VK Polls https://ift.tt/3j3Jn6c

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...