ಬೆಂಗಳೂರು: ಪೆಟ್ರೋಲ್, ಡೀಸಿಲ್ ದರ ಏರಿಗೆ ಹಿನ್ನೆಲೆಯಲ್ಲಿ ಬಿಎಂಟಿಸಿ, ಪ್ರಯಾಣ ದರ ಏರಿಕೆ ಕುರಿತಾಗಿಯೂ ಚರ್ಚೆ ನಡೆಯುತ್ತಿದೆ. ಈ ನಿಟ್ಟಿನಲ್ಲಿ ಮಂಗಳವಾರ ಸಾರಿಗೆ ಸಚಿವ ನೇತೃತ್ವದಲ್ಲಿ ವಿಧಾನಸೌಧದಲ್ಲಿ ನಡೆಯಲಿರುವ ಸಾರಿಗೆ ಇಲಾಖೆಯ ಪ್ರಗತಿ ಪರಿಶೀಲನೆ ಸಭೆಯಲ್ಲಿ ಚರ್ಚೆ ನಡೆಯುವ ಸಾಧ್ಯತೆ ಇದೆ. ಕೋವಿಡ್ ಹಾಗೂ ಲಾಕ್ಡೌನ್ನಿಂದಾಗಿ ಸಾರಿಗೆ ಇಲಾಖೆ ಭಾರೀ ಪ್ರಮಾಣದ ನಷ್ಟದಲ್ಲಿದೆ. ಇದರ ಪರಿಣಾಮ ಸಿಬ್ಬಂದಿ ವೇತನಕ್ಕೂ ಅಡ್ಡಿ ಉಂಟಾಗಿದೆ. ಈ ನಿಟ್ಟಿನಲ್ಲಿ ಸಾರಿಗೆ ನೌಕರರ ವೇತನ ಪಾವತಿ ಮಾಡಲು ಶೇ. 25 ರಷ್ಟು ಸಹಾಯ ಧನವನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಿದೆ. ಕೆಎಸ್ಆರ್ಟಿಸಿ, ವಾಯುವ್ಯ ಸಾರಿಗೆ, ಕಲ್ಯಾಣ ಕರ್ನಾಟಕ ಸಾರಿಗೆ ನಿಗಮದ ನೌಕರರ ಮೂಲ ವೇತನ ಹಾಗೂ ತುಟ್ಟಿಭತ್ಯೆಗಾಗಿ ಶೇ 25 ಅಂದರೆ 61.82 ಕೋಟಿ ಬಿಡುಗಡೆ ಮಾಡಿದೆ. ಅಲ್ಲದೆ ಬಿಎಂಟಿಸಿ ನಿಗಮಕ್ಕೆ 49.31 ಕೋಟಿ ಸಹಾಯ ಧನ ಬಿಡುಗಡೆ ಮಾಡಿದೆ. ಕೋವಿಡ್ ಕಾರಣದಿಂದಾಗಿ ಸಾರಿಗೆ ಇಲಾಖೆ ಸಾಕಷ್ಟು ನಷ್ಟದಲ್ಲಿದೆ. ಮತ್ತೊಂದು ಕಡೆ ಸಾರಿಗೆ ನೌಕರರು ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಎರಡು ಭಾರಿ ದೊಡ್ಡ ಪ್ರಮಾಣದ ಮುಷ್ಕರವನ್ನು ನಡೆಸಿದ್ದರು. ಇದೀಗ ತೈಲ ದರ ವಿಪರೀತವಾಗಿ ಏರಿಕೆಯಾಗಿದೆ. ಮತ್ತೊಂದು ಕಡೆ ಪ್ರಯಾಣಿಕರ ಸಂಖ್ಯೆಯಲ್ಲೂ ಕೊರತೆ ಇದೆ. ಈ ನಿಟ್ಟಿನಲ್ಲಿ ನಿಗಮ ನಷ್ಟದಲ್ಲಿ ಸಾಗುತ್ತಿದೆ. ಇದರಿಂದ ಪ್ರಯಾಣ ದರ ಏರಿಕೆ ಮಾಡುವ ಪ್ರಸ್ತಾವವೂ ಸಾರಿಗೆ ಇಲಾಖೆಯ ಮುಂದಿದೆ. ಈ ಹಿಂದೆ ಲಕ್ಷ್ಮಣ ಸವದಿ ಸಾರಿಗೆ ಸಚಿವರಾಗಿದ್ದ ಅವಧಿಯಲ್ಲೂ ಈ ಪ್ರಸ್ತಾವ ಬಂದಿತ್ತಾದರೂ ಅದನ್ನು ತಿರಸ್ಕರಿಸಲಾಗಿತ್ತು. ಆದರೆ ಮಂಗಳವಾರ ಸಾರಿಗೆ ಸಚಿವ ಶ್ರೀರಾಮುಲು ನೇತೃತ್ವದಲ್ಲಿ ಪ್ರಗತಿ ಪರಿಶೀಲನೆ ಸಭೆ ನಡೆಯಲಿದ್ದು ಈ ಸಭೆಯಲ್ಲಿ ದರ ಏರಿಕೆ ಸಾಧಕ ಬಾಧಕಗಳ ಕುರಿತಾಗಿ ಚರ್ಚೆ ನಡೆಯುವ ಸಾಧ್ಯತೆ ಇದೆ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಪ್ರಯಾಣ ದರ ಏರಿಕೆ ಮಾಡುವ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಕಡಿಮೆ ಎನ್ನಲಾಗುತ್ತಿದೆ.
from India & World News in Kannada | VK Polls https://ift.tt/3kcFbR6