ಸೇನೆ ಹಿಂಪಡೆಯದಿದ್ದರೆ ಕೆಟ್ಟ ಪರಿಣಾಮ ಖಚಿತ - ಅಮೆರಿಕಕ್ಕೇ ತಾಲಿಬಾನ್‌ ಡೆಡ್‌ಲೈನ್‌!

ಕಾಬೂಲ್‌: ಸೇನೆಯ ಶ್ರೀರಕ್ಷೆಯಿಂದಾಗಿ ಅಫ್ಘಾನಿಸ್ತಾನದಲ್ಲಿ 20 ವರ್ಷ ಬಾಲ ಮುದುರಿಕೊಂಡಿದ್ದ ತಾಲಿಬಾನಿಗಳು ಈಗ ಅಮೆರಿಕಕ್ಕೇ ಸೆಡ್ಡೊಡೆದಿದ್ದು, "ಆಗಸ್ಟ್‌ 31ರೊಳಗೆ ಸೇನೆಯನ್ನು ಸಂಪೂರ್ಣವಾಗಿ ವಾಪಸ್‌ ಪಡೆಯದಿದ್ದರೆ ಪರಿಣಾಮ ಎದುರಿಸಬೇಕಾಗುತ್ತದೆ,'' ಎಂದು ಎಚ್ಚರಿಸಿದ್ದಾರೆ. ಅಲ್ಲದೆ, ಬ್ರಿಟನ್‌ ಸೇನೆಗೂ ಇದೇ ಎಚ್ಚರಿಕೆ ನೀಡಿದ್ದಾರೆ. "ನಿಗದಿಯಂತೆ ಸೇನೆಯ ಸ್ಥಳಾಂತರ ಮಾಡಲಾಗುತ್ತಿದ್ದರೂ, ಆ.31ರ ನಂತರ ಸಹ ಅಮೆರಿಕ ಸೈನಿಕರು ಅಫ್ಘಾನಿಸ್ತಾನದಲ್ಲಿ ಇರಬಹುದು,'' ಎಂದು ಜೋ ಬೈಡೆನ್‌ ಹೇಳಿರುವ ಬೆನ್ನಲ್ಲೇ ತಾಲಿಬಾನಿಗಳು ಖಡಕ್‌ ಎಚ್ಚರಿಕೆ ನೀಡಿದ್ದಾರೆ. ಹಾಗಾಗಿ ಜೋ ಬೈಡೆನ್‌ ಮುಂದಿನ ನಡೆಯು ಕುತೂಹಲ ಕೆರಳಿಸಿದೆ. ''ಅಮೆರಿಕ ಹಾಗೂ ಬ್ರಿಟನ್‌ ಸರಕಾರಗಳು ಗಡುವು ವಿಸ್ತರಣೆ ಮಾಡುತ್ತೇವೆ ಎಂದರೆ ಅದಕ್ಕೆ ನಮ್ಮ ಉತ್ತರ 'ಇಲ್ಲ' ಎಂಬುದೇ ಆಗಿದೆ. ಇದನ್ನೇ ಉಭಯ ರಾಷ್ಟ್ರಗಳು ಡೆಡ್‌ಲೈನ್‌ ಎಂದು ಭಾವಿಸಬೇಕು. ಇಲ್ಲದಿದ್ದರೆ ಭಾರಿ ಪರಿಣಾಮ ಎದುರಿಸಬೇಕಾಗುತ್ತದೆ,'' ಎಂದು ವಕ್ತಾರ ಸುಹೇಲ್‌ ಶಹೀನ್‌ ಸುದ್ದಿಸಂಸ್ಥೆಯೊಂದಕ್ಕೆ ತಿಳಿಸಿದ್ದಾನೆ. ಸರಕಾರ ರಚಿಸಲು ಧಾವಂತ ಅಫ್ಘಾನಿಸ್ತಾನ ಈಗ ಸಂಪೂರ್ಣವಾಗಿ ತಾಲಿಬಾನ್‌ ವಶಕ್ಕೆ ಸಿಕ್ಕಿದೆ. ಎಲ್ಲ ಪ್ರಾಂತ್ಯಗಳ ಮೇಲೆ ಉಗ್ರರು ಹಿಡಿತ ಸಾಧಿಸಿದ್ದಾರೆ. ಹಾಗಾಗಿ ಅಮೆರಿಕ ಹಾಗೂ ಬ್ರಿಟನ್‌ ಸೈನಿಕರು ವಾಪಸಾಗುತ್ತಲೇ ಸರಕಾರ ರಚಿಸುವ ಧಾವಂತದಲ್ಲಿ ತಾಲಿಬಾನಿಗಳಿದ್ದಾರೆ. ಈಗಾಗಲೇ ಅಧ್ಯಕ್ಷ ಎಂದೇ ಬಿಂಬಿತವಾಗಿರುವ ಮುಲ್ಲಾ ಅಬ್ದುಲ್‌ ಅಬ್ದುಲ್‌ ಘನಿ ಬರಾದರ್‌ ಕಾಬೂಲ್‌ ತಲುಪಿದ್ದು, ಜಿಹಾದಿಗಳ ಜತೆಗೆ ರಾಜಕಾರಣಿಗಳ ಬೆಂಬಲವನ್ನೂ ಪಡೆಯುತ್ತಿದ್ದಾನೆ. ತಾಲಿಬಾನ್‌ ಹಿರಿಯ ಮುಖಂಡರು ಸಹ ಇದೇ ಪ್ರಯತ್ನದಲ್ಲಿದ್ದಾರೆ. ಹಾಗಾಗಿ ನಿಗದಿಯಂತೆಯೇ ಅಮೆರಿಕ ಹಾಗೂ ಬ್ರಿಟನ್‌ ಸೇನೆ ವಾಪಸಾದರೆ ಸರಕಾರ ರಚನೆ ಸುಲಭವಾಗಲಿದೆ ಎಂಬ ಲೆಕ್ಕಾಚಾರ ಉಗ್ರರದ್ದಾಗಿದೆ. ಬ್ರಿಟನ್‌ ನಿಲುವೇನು? ಒಪ್ಪಂದದಂತೆ ಅಮೆರಿಕವೇನೋ ಆಗಸ್ಟ್‌ 31ರೊಳಗೆ ಎಲ್ಲ ಸೈನಿಕರ ಹಿಂಪಡೆಯಲು ಮುಂದಾಗಿದ್ದು, ಈಗಾಗಲೇ ಸಾವಿರಾರು ಸೈನಿಕರು ವಾಪಸಾಗಿದ್ದಾರೆ. ಆದರೆ, ಬ್ರಿಟನ್‌ ಇದುವರೆಗೂ ತಾಲಿಬಾನಿಗಳಿಗೆ ಇಷ್ಟೇ ದಿನದಲ್ಲಿ ಸೇನೆ ಹಿಂಪಡೆಯುತ್ತೇವೆ ಎಂದು ತಿಳಿಸಿಲ್ಲ. ಹಾಗಾಗಿ ಎಷ್ಟು ದಿನದಲ್ಲಿ ವಾಪಸ್‌ ಪಡೆಯಬೇಕು ಎಂಬ ಕುರಿತು ತಾಲಿಬಾನಿಗಳ ಜತೆ ಬ್ರಿಟನ್‌ ಮಾತುಕತೆ ನಡೆಸಲಿದೆ ಎಂದು ತಿಳಿದುಬಂದಿದೆ. ತಾಲಿಬಾನ್‌ ವಿರುದ್ಧ ನಿರ್ಬಂಧ ಹೇರಬೇಕು ಎಂದು ಬ್ರಿಟನ್‌ ಪ್ರತಿಪಾದಿಸದಿದ್ದರೂ, ಜಿ-7 ರಾಷ್ಟ್ರಗಳು ಆಫ್ಘನ್‌ ಕುರಿತು ಒಗ್ಗೂಡಬೇಕು ಎಂದು ಪ್ರಧಾನಿ ಬೋರಿಸ್‌ ಜಾನ್ಸನ್‌ ಕರೆ ನೀಡಿದ್ದಾರೆ. ಹಾಗಾಗಿ ಮುಂದಿನ ದಿನಗಳಲ್ಲಿಉಭಯ ರಾಷ್ಟ್ರಗಳು ಯಾವ ನಿರ್ಧಾರ ತೆಗೆದುಕೊಳ್ಳುತ್ತವೆ ಎಂಬ ಕುತೂಹಲ ಮೂಡಿದೆ. ಗುಂಡಿನ ದಾಳಿಗೆ ಆಫ್ಘನ್‌ ಯೋಧ ಬಲಿ ಆಫ್ಘನ್‌ ರಾಜಧಾನಿ ಕಾಬೂಲ್‌ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನ ಹಾರಾಟಕ್ಕಿಂತ ಗುಂಡು ಹಾರಿಸುವುದು, ಕಾಲ್ತುಳಿತ, ಗದ್ದಲಗಳೇ ಜಾಸ್ತಿಯಾಗುತ್ತಿದ್ದು, ಸೋಮವಾರ ನಡೆದ ಗುಂಡಿನ ದಾಳಿಗೆ ಅಫ್ಘಾನಿಸ್ತಾನದ ಯೋಧರೊಬ್ಬರು ಮೃತಪಟ್ಟಿದ್ದಾರೆ. ಆರು ಜನ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಗುಂಡಿನ ದಾಳಿ ಕುರಿತು ಜರ್ಮನಿ ಸೇನೆ ಟ್ವೀಟ್‌ ಮಾಡಿದ್ದು, ''ವಿಮಾನ ನಿಲ್ದಾಣದ ಗೇಟ್‌ ಒಂದರಲ್ಲಿ ಅಪರಿಚಿತ ವ್ಯಕ್ತಿಗಳು ಗುಂಡಿನ ದಾಳಿ ಮಾಡಿದ್ದು, ಆಫ್ಘನ್‌ ಯೋಧ ಮೃತಪಟ್ಟಿದ್ದಾರೆ. ದೇಶ ತೊರೆಯಲು ನಿತ್ಯ ಸಾವಿರಾರು ಜನ ವಿಮಾನ ನಿಲ್ದಾಣಕ್ಕೆ ನುಗ್ಗುತ್ತಿರುವ ಕಾರಣ, ನಿಲ್ದಾಣಕ್ಕೆ ಭದ್ರತೆ ಒದಗಿಸಲು ಆಗಮಿಸಿದ್ದ ಯೋಧನನ್ನು ಹತ್ಯೆಗೈಯಲಾಗಿದೆ,'' ಎಂದು ಮಾಹಿತಿ ನೀಡಿದೆ. ವಿಮಾನ ನಿಲ್ದಾಣದಲ್ಲಿಅಮೆರಿಕ ಸೇನೆಯ ಭದ್ರತೆ, ನ್ಯಾಟೊ ಕಣ್ಗಾವಲು ಇದ್ದರೂ ಏಕಾಏಕಿ ದಾಳಿ ನಡೆದಿದೆ. ಆದರೆ, ಇದುವರೆಗೂ ಗುಂಡಿನ ದಾಳಿ ಕುರಿತು ತಾಲಿಬಾನ್‌ನ್‌ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿಲ್ಲ. ನಿತ್ಯ ಹತ್ತಾರು ಸಾವಿರ ಜನ ದೇಶ ತೊರೆಯಲು ವಿಮಾನ ನಿಲ್ದಾಣಕ್ಕೆ ನುಗ್ಗುತ್ತಿದ್ದು, ಭಾನುವಾರ ಉಂಟಾದ ಕಾಲ್ತುಳಿತ ಹಾಗೂ ಗುಂಡಿನ ದಾಳಿಯಲ್ಲಿ 12 ಜನ ಮೃತಪಟ್ಟಿದ್ದರು. ಇಂತಹ ಘಟನೆಗಳಿಂದ ಇದುವರೆಗೆ ವಿಮಾನ ನಿಲ್ದಾಣದಲ್ಲಿ 26 ಜನ ಮೃತಪಟ್ಟಿದ್ದಾರೆ. ಜಾಗತಿಕ ಭಯೋತ್ಪಾದನೆ ವಿರುದ್ಧದ ಹೋರಾಟಕ್ಕೆ ಅಫ್ಘಾನಿಸ್ತಾನವೇ ಪ್ರಮುಖ ರಣಾಂಗಣವಾಗಿದೆ. ಇಡೀ ದೇಶದಲ್ಲಿ ಉಗ್ರರು ಹಿಡಿತ ಸಾಧಿಸಿದ್ದರೂ, ಇದು ಮತ್ತೆ ಭಯೋತ್ಪಾದನೆಯ ಕೇಂದ್ರ ಸ್ಥಾನ ಆಗುವುದಿ ಲ್ಲಎಂಬ ವಿಶ್ವಾಸವಿದೆ. ಇಲ್ಲಿಂದ ಉಗ್ರವಾದದ ಪ್ರಸರಣ ಆಗುವುದಿಲ್ಲ ಎಂಬ ನಂಬಿಕೆಯೂ ಇದೆ ಎಂದು ಸಿಂಗಾಪುರ ಪ್ರಧಾನಿ ಲೀ ಸೇನ್‌ ಲೂಂಗ್‌ ಹೇಳಿದ್ದಾರೆ. ವೈದ್ಯಕೀಯ ಸಲಕರಣೆ ಸರಬರಾಜು ಸ್ಥಗಿತ ಕಾಬೂಲ್‌ ವಿಮಾನ ನಿಲ್ದಾಣದಲ್ಲಿ ತಾಲಿಬಾನಿಗಳು ಹಲವು ನಿರ್ಬಂಧ ಹೇರಿದ ಹಿನ್ನೆಲೆಯಲ್ಲಿ ಸುಮಾರು 500 ಟನ್‌ಗಿಂತಲೂ ಹೆಚ್ಚಿನ ವೈದ್ಯಕೀಯ ಸಲಕರಣೆ, ಶಸ್ತ್ರಚಿಕಿತ್ಸೆ ಉಪಕರಣ ಸೇರಿ ಹಲವು ವಸ್ತುಗಳ ಸರಬರಾಜು ಸ್ಥಗಿತವಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಕಳವಳ ವ್ಯಕ್ತಪಡಿಸಿದೆ. ಆಗಸ್ಟ್‌ 15ರಂದು ತಾಲಿಬಾನಿಗಳು ಇಡೀ ದೇಶವನ್ನು ವಶಪಡಿಸಿಕೊಂಡಿದ್ದು, ಎರಡು ತಿಂಗಳಿಂದ ಇದುವರೆಗೆ ಸುಮಾರು ಮೂರು ಲಕ್ಷ ಜನ ನಿರಾಶ್ರಿತರಾಗಿದ್ದಾರೆ. ಅವರಿಗೆ ಡಬ್ಲ್ಯೂಎಚ್‌ಒ ವೈದ್ಯಕೀಯ ಸಲಕರಣೆ, ಔಷಧ, ಆಹಾರ ಸಾಮಗ್ರಿ ಪೂರೈಸಲು ಮುಂದಾಗಿದ್ದು, ಇದಕ್ಕೂ ತಾಲಿಬಾನಿಗಳು ಅಡ್ಡಗಾಲು ಹಾಕಿದ್ದಾರೆ. ಮಾಜಿ ಅಧ್ಯಕ್ಷ, ಉಪಾಧ್ಯಕ್ಷರಿಗೆ ಉಗ್ರರಿಂದ ಕ್ಷಮಾದಾನ ಅಫ್ಘಾನಿಸ್ತಾನದ ಮಾಜಿ ಅಧ್ಯಕ್ಷ ಅಶ್ರಫ್‌ ಘನಿ ಹಾಗೂ ಮಾಜಿ ಉಪಾಧ್ಯಕ್ಷ ಅಮ್ರುಲ್ಲಾ ಸಲೇಹ್‌ ಅವರನ್ನು ಕ್ಷಮಿಸಿದ್ದೇವೆ ಎಂದು ತಾಲಿಬಾನ್‌ ಹಿರಿಯ ಮುಖಂಡ ಖಲೀಲ್‌ ಉರ್‌-ರೆಹಮಾನ್‌ ಹಕ್ಕಾನಿ ತಿಳಿಸಿದ್ದಾನೆ. ''ನಾವು ಸರ್ವರನ್ನೂ ಕ್ಷಮಿಸುತ್ತೇವೆ. ಅದೇ ರೀತಿ ಘನಿ ಹಾಗೂ ಸಲೇಹ್‌ ಅವರನ್ನು ಕ್ಷಮಿಸಿದ್ದೇವೆ. ನಮ್ಮ ವಿರುದ್ಧ ಸಮರ ಸಾರಿದ ಅಧ್ಯಕ್ಷನಿಂದ ಹಿಡಿದು ಸಾಮಾನ್ಯರವರೆಗೆ ಎಲ್ಲರನ್ನೂ ಕ್ಷಮಿಸುತ್ತೇವೆ," ಎಂದು ಹೇಳಿದ್ದಾನೆ. ಹಕ್ಕಾನಿ ನೆಟ್‌ವರ್ಕ್ ನಾಯಕ ಸಹ ಆಗಿರುವ ರೆಹಮಾನ್‌, ಕಾಬೂಲ್‌ ಭದ್ರತಾ ಉಸ್ತುವಾರಿ ವಹಿಸಿಕೊಂಡಿದ್ದಾನೆ. ಆಗಸ್ಟ್‌ 15ರಂದು ತಾಲಿಬಾನಿಗಳು ಕಾಬೂಲ್‌ ಪ್ರವೇಶಿಸುತ್ತಲೇ ರಾಜೀನಾಮೆ ನೀಡಿದ ಅಶ್ರಫ್‌ ಘನಿ ಯುಎಇಯಲ್ಲಿ ಆಶ್ರಯ ಪಡೆದಿದ್ದಾರೆ. ಮೂರು ಜಿಲ್ಲೆ ಮರು ಸ್ವಾಧೀನ? ಬಾಘ್ಲಾನ್‌ ಜಿಲ್ಲೆಯ ಮೂರು ಪ್ರಾಂತ್ಯಗಳನ್ನು ಸ್ಥಳೀಯ ಬಂಡಾಯಗಾರರಿಂದ ಮರು ಸ್ವಾಧೀನಪಡಿಸಿಕೊಳ್ಳಲಾಗಿದೆ ಎಂದು ತಾಲಿಬಾನಿಗಳು ಹೇಳಿದ್ದಾರೆ. ಬಾನೋ, ದೇಹ್‌ ಸಲೇಹ್‌ ಹಾಗೂ ಪುಲ್‌ ಇ-ಹೆಸಸರ್‌ ಪ್ರಾಂತ್ಯಗಳನ್ನು ಮೊದಲು ಸ್ಥಳೀಯ ಬಂಡುಕೋರರು ವಶಪಡಿಸಿಕೊಂಡಿದ್ದರು. ಅವರ ಮೇಲೆ ದಾಳಿ ನಡೆಸಿ ಮತ್ತೆ ಸ್ವಾಧೀನಕ್ಕೆ ತೆಗೆದುಕೊಂಡಿದ್ದೇವೆ ಎಂದು ಉಗ್ರರು ಘೋಷಿಸಿದ್ದಾರೆ. ಖ್ಯಾತ ಪಾಪ್‌ ಸ್ಟಾರ್‌ ಪರಾರಿ ತಾಲಿಬಾನಿಗಳ ಅಟ್ಟಹಾಸ ಹಿನ್ನೆಲೆಯಲ್ಲಿಅ ಫಘಾನಿಸ್ತಾನದ ಖ್ಯಾತ ಪಾಪ್‌ ಗಾಯಕಿ ಆರ್ಯಾನಾ ಸಯೀದ್‌ ವಿದೇಶಕ್ಕೆ ಪರಾರಿಯಾಗಿದ್ದಾರೆ. ''ನಾನು ಜೀವಂತವಾಗಿದ್ದೇನೆ ಹಾಗೂ ಸುರಕ್ಷಿತವಾಗಿದ್ದೇನೆ. ಆಫ್ಘನ್‌ನಲ್ಲಿ ಕೆಲವು ಭೀಕರ ರಾತ್ರಿಗಳನ್ನು ಕಳೆದ ಬಳಿಕ ಕತಾರ್‌ನ ದೋಹಾಗೆ ಬಂದಿದ್ದೇನೆ. ಎಲ್ಲ ಬಿಕ್ಕಟ್ಟು ಶಮನಗೊಂಡು, ಶಾಂತಿ ನೆಲೆಸಲಿ. ನಾನೂ ಕೂಡಲೇ ಇಸ್ತಾನ್‌ಬುಲ್‌ಗೆ ಬರುವಂತಾಗಲಿ,'' ಎಂದು ಹೇಳಿದ್ದಾರೆ. ಆರ್ಯಾನಾ ಸಯೀದ್‌ಗೆ ಇನ್‌ಸ್ಟಾಗ್ರಾಂನಲ್ಲಿ 13 ಲಕ್ಷ ಫಾಲೋವರ್ಸ್ ಇದ್ದಾರೆ.


from India & World News in Kannada | VK Polls https://ift.tt/3B75gYw

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...