ಇಂದಿರಾ ಕ್ಯಾಂಟೀನ್ ಹೆಸರು ಬದಲಾವಣೆ ವಿಚಾರವಾಗಿ ಸಚಿವ ಸಂಪುಟ ಸಭೆಯಲ್ಲಿ ಯಾವುದೇ ಚರ್ಚೆ ಆಗಿಲ್ಲ ಎಂದು ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಖಾತೆ ಸಚಿವ ಮಾಧುಸ್ವಾಮಿ ತಿಳಿಸಿದರು. ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿ ನಡೆಸಿದ ಅವರು, ಈ ಕುರಿತಾಗಿ ಯಾವುದೇ ಚರ್ಚೆ ನಡೆದಿಲ್ಲ ಎಂದರು. ಸೆಪ್ಟೆಂಬರ್ 13 ರಿಂದ 24 ರವರೆಗೆ ವಿಧಾನಮಂಡಲ ಅಧಿವೇಶನ ಬೆಂಗಳೂರಿನಲ್ಲಿ ನಡೆಯಲಿದೆ. ಕೋವಿಡ್ ಮೂರನೇ ಅಲೆಯ ಬಗ್ಗೆ ಆತಂಕ ಇಲ್ಲ, ನಿಯಂತ್ರಣದಲ್ಲಿ ಇದೆ ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು. ಒಟ್ಟು 14 ಸಂಪುಟ ಉಪ ಸಮಿತಿಗಳನ್ನು ಪುನರ್ ರಚಿಸುವ ಬಗ್ಗೆ ಕ್ಯಾಬಿನೆಟ್ ಸಭೆಯಲ್ಲಿ ಅನುಮೋದನೆ ನೀಡಲಾಯಿತು. ಸಂಪುಟ ಸಭೆಯಲ್ಲಿ ಕೈಗೊಂಡ ಇತರ ಮಹತ್ವದ ನಿರ್ಧಾರಗಳು ಹೀಗಿವೆ
- ಸಂಪುಟ ಉಪ ಸಮಿತಿಗಳನ್ನು ಪುನರ್ ರಚಿಸುವ ಬಗ್ಗೆ ಅನುಮೋದನೆ.
- ಒಟ್ಟು 14 ಉಪಸಮಿತಿಯಗಳ ಪುನರ್ ರಚನೆಗೆ ಅನುಮೋದನೆ
- ರಾಜ್ಯ ಮಾನಸಿಕ ಆರೋಗ್ಯ ಆರೈಕೆ ನಿಯಮ, 2021ಕ್ಕೆ ಅನುಮೋದನೆ
- 2020-21 ನೇ ಸಾಲಿನ ಸರ್ಕಾರಿ ಹಾಗೂ ಅನುದಾನಿತ ಶಾಲಾ- ಕಾಲೇಜುಗಳ ಹದಿಹರೆಯದ ಹೆಣ್ಣುಮಕ್ಕಳಿಗೆ "ಶುಚಿ" ಕಾರ್ಯಕ್ರಮದಡಿ ಸ್ಯಾನಿಟರಿ ನ್ಯಾಪ್ಕಿನ್ ಪ್ಯಾಡ್ಗಳನ್ನು ವಿತರಿಸಲು 47 ಕೋಟಿ ರೂ ಮೊತ್ತಕ್ಕೆ ಆಡಳಿತಾತ್ಮಕ ಅನುಮೋದನೆ. ಒಂದು ಮಗುವಿಗೆ ಹತ್ತು ಪ್ಯಾಡ್ ನೀಡಲು ನಿರ್ಧಾರ
- ರಾಜ್ಯದಲ್ಲಿನ 2859 ಆರೋಗ್ಯ ಉಪಕೇಂದ್ರಗಳನ್ನು ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳನ್ನಾಗಿ ರೂ. 478,91 ಕೋಟಿ ಮೊತ್ತದಲ್ಲಿ ಮೇಲ್ದರ್ಜೆಗೇರಿಸಲು ಆಡಳಿತಾತ್ಮಕ ಅನುಮೋದನೆ. ಈ ಯೋಜನೆಗೆ ಶೇ.60ರಷ್ಟು ಅನುದಾನ ಕೇಂದ್ರದಿಂದ ಬರಲಿದೆ.
- ಕಲಬುರಗಿ ಜಿಲ್ಲೆ, ಆಳಂದ ತಾಲೂಕು ಮಿನಿ ವಿಧಾನಸೌಧ ಕಟ್ಟಡ ಕಾಮಗಾರಿಯ 12,48 ಕೋಟಿ ರೂ. ಪರಿಷ್ಕೃತ ಅಂದಾಜು ಪಟ್ಟಿಗೆ ಆಡಳಿತಾತ್ಮಕ ಅನುಮೋದನೆ.
- ಮಂಗಳೂರು ಮಹಾನಗರ ವ್ಯಾಪ್ತಿಯ ಪಚ್ಚನಾಡಿ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಸಂಗ್ರಹವಾಗಿರುವ 9 ಲಕ್ಷ ಟನ್ ತ್ಯಾಜ್ಯ ಇದೆ. ಪಾರಂಪರಿಕ ತ್ಯಾಜ್ಯ (Legacy waste) ನಿರ್ವಹಣೆಗೆ 73.73 ಕೋಟಿ ರೂ.ಗಳ ವಿಸ್ತ್ರತ ಯೋಜನಾ ವರದಿಗೆ ಅನುಮೋದನೆ
- ಆಝಾದಿ ಅಮೃತ ಮಹೋತ್ಸವ ಅಂಗವಾಗಿ ಸಿಎಂ ಬಸವರಾಜ ಬೊಮ್ಮಾಯಿ ಸ್ವಾತಂತ್ರ್ಯ ದಿನಾಚರಣೆಯಂದು ಘೋಷಣೆ ಮಾಡಿದ ವಿವಿಧ ಅಮೃತ ಯೋಜನೆಗಳಿಗೆ 400 ಕೋಟಿ ರೂ. ಅನುದಾನ ಬಿಡುಗಡೆಗೆ ಅನುಮೋದನೆ.
from India & World News in Kannada | VK Polls https://ift.tt/3CYckZf