ಬೆಂಗಳೂರು: ಕೆಎಸ್ಆರ್ಟಿಸಿ, ವಾಯವ್ಯ ಮತ್ತು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದವರಿಗೆ ಜುಲೈ ತಿಂಗಳ ವೇತನ ಪಾವತಿಗೆ ರಾಜ್ಯ ಸರಕಾರವು ಶೇ 25ರಷ್ಟು ( ₹60.84 ಕೋಟಿ) ಅನುದಾನ ಬಿಡುಗಡೆ ಮಾಡಿದೆ. ಆದರೆ ನೌಕರರ ವೇತನಕ್ಕೆ ನಯಾಪೈಸೆ ಅನುದಾನ ನೀಡಿಲ್ಲ. ಮೂರು ನಿಗಮಗಳ ವ್ಯವಸ್ಥಾಪಕ ನಿರ್ದೇಶಕರು ಸಾರಿಗೆ ಮತ್ತು ರಸ್ತೆ ಸುರಕ್ಷತೆ ಆಯುಕ್ತರಿಂದ ಪೇಯೀಸ್ ರಶೀದಿಗೆ ಮೇಲು ರುಜು ಪಡೆದು ಖಜಾನೆಯಿಂದ ಹಣ ಡ್ರಾ ಮಾಡಲು ಅನುಮತಿ ನೀಡಲಾಗಿದೆ ಎಂದು ಸಾರಿಗೆ ಇಲಾಖೆಯ ಅಧೀನ ಕಾರ್ಯದರ್ಶಿ ಎಂ.ಸತ್ಯವತಿ ಅವರು ಆದೇಶಿಸಿದ್ದಾರೆ. ಕೋವಿಡ್ ಮತ್ತು ಇಂಧನ ದರ ಹೆಚ್ಚಳದ ಹಿನ್ನೆಲೆಯಲ್ಲಿ ಸಾರಿಗೆ ನಿಗಮಗಳ ಆರ್ಥಿಕ ಸ್ಥಿತಿ ಹದಗೆಟ್ಟಿದೆ. ಬಸ್ಗಳ ಕಾರ್ಯಾಚರಣೆಯಿಂದ ನಿರೀಕ್ಷಿತ ಆದಾಯವೂ ಸಂಗ್ರಹವಾಗುತ್ತಿಲ್ಲ. ಹಾಗಾಗಿ, ಜುಲೈ ತಿಂಗಳ ವೇತನ ಪಾವತಿಗೆ 110 ಕೋಟಿ ರೂ. ಮತ್ತು 52.52 ಕೋಟಿ ರೂ. ವಿಶೇಷ ಅನುದಾನ ಬಿಡುಗಡೆ ಮಾಡುವಂತೆ ಕೋರಿ ಕೆಸ್ಆರ್ಟಿಸಿ ಮತ್ತು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕರು ಮನವಿ ಮಾಡಿಕೊಂಡಿದ್ದರು. ಹಾಗೆಯೇ, ಬಿಎಂಟಿಸಿ ಮತ್ತು ವಾಯುವ್ಯ ಸಾರಿಗೆ ಸಂಸ್ಥೆಯು ಜುಲೈನಿಂದ ಸೆಪ್ಟೆಂಬರ್ವರೆಗೆ ಅಧಿಕಾರಿ, ಸಿಬ್ಬಂದಿಗೆ ವೇತನ ನೀಡಲು ಕ್ರಮವಾಗಿ 284.14 ಹಾಗೂ 193 ಕೋಟಿ ರೂ.ಗಳಿಗೆ ಬೇಡಿಕೆ ಸಲ್ಲಿಸಿದ್ದವು. ನಾಲ್ಕು ನಿಗಮಗಳು ಒಟ್ಟು 640.61 ಕೋಟಿ ರೂ. ವಿಶೇಷ ಅನುದಾನ ಬಿಡುಗಡೆಗೆ ಕೋರಿದ್ದವು. ಪ್ರಸ್ತಾವನೆ ಪರಿಶೀಲಿಸಿದ ಸರಕಾರ, ಕೇವಲ 60.84 ಕೋಟಿ ರೂ.ಗಳನ್ನು ಮಾತ್ರ ಬಿಡುಗಡೆ ಮಾಡಿದೆ. ರಾಜ್ಯ ಸರಕಾರವು ನಾಲ್ಕೂ ಸಾರಿಗೆ ನಿಗಮಗಳ ಅಧಿಕಾರಿ, ಸಿಬ್ಬಂದಿಗಳ ಏಪ್ರಿಲ್, ಮೇ ಮತ್ತು ಜೂನ್ ತಿಂಗಳಿಗೆ ಒಟ್ಟು 487.50 ಕೋಟಿ ರೂ. ಅನುದಾನ ನೀಡಿತ್ತು. ಕೆಎಸ್ಆರ್ಟಿಸಿಗೆ 152.64 ಕೋಟಿ, ಬಿಎಂಟಿಸಿಗೆ 147.93 ಕೋಟಿ, ವಾಯುವ್ಯ ಸಾರಿಗೆ ಸಂಸ್ಥೆಗೆ 99.63 ಕೋಟಿ ಮತ್ತು ಈಶಾನ್ಯ ಸಾರಿಗೆ ಸಂಸ್ಥೆಗೆ (ಕಲ್ಯಾಣ ಕರ್ನಾಟಕ) 87.30 ಕೋಟಿ ರೂ.ಗಳನ್ನು ಇದುವರೆಗೆ ನೀಡಿದೆ. ವೇತನಕ್ಕೆ ಬಿಡುಗಡೆ ಮಾಡಿರುವ ಅನುದಾನದ ವಿವರ: ಸಾರಿಗೆ ಸಂಸ್ಥೆ ಬಿಡುಗಡೆ ಮಾಡಿರುವ ಅನುದಾನ (ಶೇ 25ರಷ್ಟು)
| ಕೆಎಸ್ಆರ್ಟಿಸಿ | ₹27.24 ಕೋಟಿ |
| ವಾಯುವ್ಯ | ₹17.47 ಕೋಟಿ |
| ಕಲ್ಯಾಣ ಕರ್ನಾಟಕ | ₹15.61 ಕೋಟಿ |
| ಒಟ್ಟು | ₹60.82 ಕೋಟಿ |
from India & World News in Kannada | VK Polls https://ift.tt/3knsi6Z