ಎಚ್.ಪಿ. ಪುಣ್ಯವತಿ ಬೆಂಗಳೂರು: ರಾಜ್ಯದಲ್ಲಿ ಪ್ರವಾಹ, ನೆರೆ ಹಾವಳಿ ಬೆನ್ನಲ್ಲೇ ಎದುರಾಗಿರುವ ದಿಢೀರ್ ಕೃಷಿ ಚಟುವಟಿಕೆಗೆ ಭಾರಿ ಹೊಡೆತ ನೀಡಿದೆ. ಸಜ್ಜೆ, ತೊಗರಿ, ಹೈಬ್ರಿಡ್ ಜೋಳ, ಉದ್ದು, ಹೆಸರು, ಸೋಯಾ, ಹತ್ತಿ ಸೇರಿದಂತೆ ಹಲವು ಬೆಳೆಗಳಿಗೆ ಆಗಸ್ಟ್ ಮೊದಲಾರ್ಧದಲ್ಲಿ ಬೀಳುವ ಮಳೆಯೇ ಪ್ರಧಾನವಾಗಿದೆ. ಈ ಸಮಯದಲ್ಲೇ ಕೈಕೊಟ್ಟಿದ್ದರಿಂದ ರೈತರು ಕಂಗೆಟ್ಟಿದ್ದಾರೆ. ಈಗಾಗಲೇ ಬೆಳೆಗಳು ಒಣಗಲು ಆರಂಭವಾಗಿದ್ದು, ಇನ್ನೂ ಒಂದು ವಾರ ಮಳೆ ಬಾರದಿದ್ದರೆ ಭಾರಿ ಸಮಸ್ಯೆ ಎದುರಾಗಲಿದೆ. ಆಗಸ್ಟ್ 1ರಿಂದ 18ರ ಅವಧಿಯಲ್ಲಿ ರಾಜ್ಯದಲ್ಲಿ ಸರಾಸರಿ 144 ಮಿ.ಮೀ. ಮಳೆ ಬೀಳಬೇಕಿತ್ತು. ಆದರೆ ಬಿದ್ದಿರುವುದು ಕೇವಲ 77 ಮಿ.ಮೀ. ಅಂದರೆ, ಶೇ. 48ರಷ್ಟು ಕೊರತೆ ಆಗಿದೆ. ಇದು ಕಳೆದ 50 ವರ್ಷಗಳಲ್ಲೇ ಕನಿಷ್ಠ ಎಂದು ಹವಾಮಾನ ಇಲಾಖೆ ಹೇಳಿದೆ. ರಾಜ್ಯದ 21 ಜಿಲ್ಲೆಗಳ 143 ತಾಲೂಕುಗಳಲ್ಲಿ ಅಭಾವ ಪರಿಸ್ಥಿತಿ ಎದುರಾಗಿದೆ. ಈಗಾಗಲೇ 83 ತಾಲೂಕುಗಳನ್ನು ನೆರೆಪೀಡಿತ ಪಟ್ಟಿಗೆ ಸೇರಿಸಲಾಗಿದೆ. ಈ ತಾಲೂಕುಗಳಲ್ಲಿ ಅತಿವೃಷ್ಟಿಯಿಂದ ಲಕ್ಷಾಂತರ ಹೆಕ್ಟೇರ್ನಲ್ಲಿ ಬಿತ್ತಿದ ಹಾಳಾಗಿದೆ. ಸಮಸ್ಯೆ ಏನು?ಜೂನ್ ಮತ್ತು ಜುಲೈ ತಿಂಗಳಲ್ಲಿ ಉತ್ತಮ ಮಳೆಯಾಗಿದ್ದರಿಂದ ಹೆಚ್ಚಿನ ರೈತರು ಖುಷಿಯಿಂದ ಕೃಷಿ ಚಟುವಟಿಕೆ ಆರಂಭಿಸಿದ್ದರು. ಹೀಗಾಗಿ ಹಲವು ಬೆಳೆಗಳು ಮೊಳಕೆಯೊಡೆದು ಪೈರಾಗಿವೆ, ಕೆಲವು ತೆನೆಗಟ್ಟಿವೆ. ಈ ಹಂತದಲ್ಲಿ ಹದವಾದ ಮಳೆ ಬೇಕಾಗಿದೆ. ಇನ್ನು ಕೆಲವು ಬೆಳೆಗಳ ಬಿತ್ತನೆ ಆಗಿದ್ದು, ಅವುಗಳು ಮೊಳಕೆಯೊಡೆಯಲು ನೀರಿನ ಅವಶ್ಯಕತೆ ಇದೆ. ಆದರೆ, ಅದೇ ಸಮಯಕ್ಕೆ ಸರಿಯಾಗಿ ಮಳೆ ಕೈಕೊಟ್ಟಿದೆ. ಮುಂಗಾರು ಚಟುವಟಿಕೆ ಹಿಮಾಲಯ ತಪ್ಪಲಿನಲ್ಲಿದ್ದಾಗ ದಕ್ಷಿಣ ಭಾಗದಲ್ಲಿ ಮಳೆ ಕಡಿಮೆಯಾಗುತ್ತದೆ. ಮುಂಬರುವ ದಿನಗಳಲ್ಲಿ ಮಳೆಯಾಗುವ ಸಾಧ್ಯತೆಯಿದೆ. ಈ ವಾರದಲ್ಲಿ ಮಳೆಯಾಗುವ ಸಾಧ್ಯತೆಯಿದೆ. ಆದರೆ ಆಗಸ್ಟ್ನಲ್ಲಿ ಉಂಟಾಗಿರುವ ಕೊರತೆಯನ್ನು ತುಂಬುವಷ್ಟು ಮಳೆಯಾಗುವುದು ಅನುಮಾನವಿದೆ ಎಂದು ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (ಕೆಎಸ್ಎನ್ಡಿಎಂಸಿ) ಅಧಿಕಾರಿಗಳು ಹೇಳುತ್ತಾರೆ. 233 ಹೋಬಳಿಗಳಲ್ಲಿ ಮಳೆ ಅಭಾವರಾಜ್ಯದ 4 ಜಿಲ್ಲೆಗಳು, 41 ತಾಲೂಕುಗಳು ಹಾಗೂ 233 ಹೋಬಳಿಗಳಲ್ಲಿ ಮಳೆಯ ತೀವ್ರ ಕೊರತೆ ಕಂಡುಬಂದಿದೆ. ಅದೇ ರೀತಿ 21 ಜಿಲ್ಲೆಗಳು, 143 ತಾಲೂಕುಗಳು ಹಾಗೂ 428 ಹೋಬಳಿಗಳಲ್ಲಿ ಮಳೆಯ ಕೊರತೆ ಕಂಡು ಬಂದಿದೆ. 5 ಜಿಲ್ಲೆಗಳು, 24 ತಾಲೂಕುಗಳು ಹಾಗೂ 113 ಹೋಬಳಿಗಳಲ್ಲಿ ಸಾಧಾರಣ ಮಳೆಯಾಗಿದೆ. 1 ಜಿಲ್ಲೆ, 16 ತಾಲೂಕು, 52 ಹೋಬಳಿಗಳಲ್ಲಿ ವಾಡಿಕೆಗಿಂತ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾದರೆ, 3 ತಾಲೂಕು, 24 ಹೋಬಳಿಗಳಲ್ಲಿ ಅತಿ ಹೆಚ್ಚು ಮಳೆಯಾಗಿರುವ ಬಗ್ಗೆ ವರದಿಯಾಗಿದೆ. ಈ ಅಂಕಿ ಅಂಶಗಳು ಆಗಸ್ಟ್ 1 ರಿಂದ 19ರವರೆಗೆ ದಾಖಲಾಗಿವೆ. ಈ ನಡುವೆ ಮುಂದೆ ಚೆನ್ನಾಗಿ ಮಳೆ ಬಂದು ಮುಂಗಾರಿನ ಕೋಟಾವೇನೋ ಪೂರ್ಣ ಆಗಲೂಬಹುದು. ಆದರೆ, ಸಕಾಲದಲ್ಲಿ ಮಳೆ ಬಾರದೆ ಇದ್ದರೆ ಆಗುವ ಹಾನಿಗೆ ಯಾವುದೇ ಪರಿಹಾರ ಇಲ್ಲ. ಮಳೆ ಕೊರತೆಯಿಂದ ನಷ್ಟ ಹೇಗೆ ?
- ಬಿತ್ತಿನ ಬೀಜ ಸಕಾಲದಲ್ಲಿ ನೀರು ಸಿಗದಿದ್ದರೆ ಮೊಳಕೆ ಒಡೆಯುವುದಿಲ್ಲ. ಮತ್ತೆ ಬಿತ್ತಬೇಕಾದ ಪರಿಸ್ಥಿತಿ ಬರುತ್ತದೆ.
- ತೆನೆಗಟ್ಟುವ, ಕಾಯಿಕಟ್ಟುವ ಸಮಯಕ್ಕೆ ಮಳೆ ಬರದಿದ್ದರೆ ಇಳುವರಿ ಕುಂಠಿತ.
- ಮಳೆಯಾಶ್ರಿತ ಬೆಳೆಗಳಿಗೆ ತೊಂದರೆ, ಪಂಪ್ ಸೆಟ್ ಇದ್ದವರು ಹೇಗೋ ಸುಧಾರಿಸಬಹುದು.
- ಬೀದರ್: ಸಜ್ಜೆ, ತೊಗರಿ, ಹೈಬ್ರಿಡ್ ಜೋಳ, ಉದ್ದು, ಹೆಸರು, ಸೋಯಾಬೀನ್
- ಧಾರವಾಡ: ಹತ್ತಿ ಬೆಳೆ ಒಣಗುತ್ತಿದೆ. ಶೇಂಗಾ, ಸೋಯಾ ಅವರೆ, ಗೋವಿನ ಜೋಳಕ್ಕೂ ಸಮಸ್ಯೆ
- ರಾಯಚೂರು: ತೊಗರಿ, ಹತ್ತಿ, ಭತ್ತಕ್ಕೆ ಹಾನಿ
- ಕೊಪ್ಪಳ: ಸೂರ್ಯಕಾಂತಿ, ಶೇಂಗಾ ತೇವಾಂಶ ಕೊರತೆಯಿಂದ ಸಂಕಷ್ಟದಲ್ಲಿ
- ಹಾಸನ: ರಾಗಿ, ಉದ್ದು, ಅಲಸಂದೆಗೆ ನೀರಿಲ್ಲ
- ಕಲಬುರಗಿ: ಹೆಸರು, ಉದ್ದು ಇಳುವರಿ ಕುಂಠಿತ ಭೀತಿ
- ತುಮಕೂರು: ರಾಗಿ, ಮುಸುಕಿನ ಜೋಳ, ಅವರೆ ಬೆಳೆಗೆ ಹಿನ್ನಡೆ
- ದಾವಣಗೆರೆ: ಊಟದ ಜೋಳ, ಹತ್ತಿ, ರಾಗಿ ಒಣಗುತ್ತಿದೆ.
from India & World News in Kannada | VK Polls https://ift.tt/2UDFkEs