ಉಡುಪಿ: ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಶತಾಯುಷಿ, ಡೋಲು (ಕಡ್ಡಾಯಿ) ಕಲಾವಿದ ಗುರುವ ಕೊರಗ(105) ಅವರು ವಯೋಸಹಜ ಅನಾರೋಗ್ಯ ಸಮಸ್ಯೆಯಿಂದ ಭಾನುವಾರ ನಿಧನರಾದರು. ಕೊರಗ ಸಮುದಾಯದ ಅತ್ಯಂತ ಹಿರಿಯರು ಇವರಾಗಿದ್ದಾರು. ಹಿರಿಯಡ್ಕ ಸಮೀಪದ ಗುಡ್ಡೆಯಂಗಡಿ ಬಲ್ಕೋಡಿ ನಿವಾಸಿಯಾಗಿದ್ದ ಅವರು ಡೋಲು ಕಲಾವಿದ ತೋಮ ಮತ್ತು ತುಂಬೆ ದಂಪತಿ ಪುತ್ರ. ಗುರುವ ಕೊರಗರು 12ನೇ ವಯಸ್ಸಿನಿಂದ ಬುಟ್ಟಿ ಹೆಣೆಯುವ ಕಾಯಕದೊಂದಿಗೆ ಡೋಲು ಬಾರಿಸುವ ಕಾಯಕದಲ್ಲಿ ತೊಡಗಿಸಿಕೊಂಡಿದ್ದರು. ಡೋಲು ನುಡಿಸುವುದರ ಮೂಲಕ ಜನಪದ ಸಂಸ್ಕೃತಿಯ ಅನನ್ಯತೆಯನ್ನು ನಾಡಿಗೆ ಪರಿಚಯಿಸಿದ್ದರು. ತುಳುನಾಡಿನ ಜನಪದಿಯ ಸಂಸ್ಕೃತಿಯನ್ನು ರಾಜ್ಯ ಮಟ್ಟದಲ್ಲಿ ಗುರುತಿಸುವಂತೆ ಮಾಡಿದವರು. ತುಳುನಾಡು ಹಾಗೂ ಕೊರಗ ಸಮುದಾಯಕ್ಕೆ ಕೀರ್ತಿ ತಂದಿದ್ದರು. ಕೊರಗ ಬುಡಕಟ್ಟು ಸಮುದಾಯದ ಗುರುವ ಕೊರಗ ಡೋಲು ಕಲೆಯಲ್ಲಿ ಮಹಾನ್ ಸಾಧನೆ ಮಾಡಿದ್ದರು. ಈ ಕ್ಷೇತ್ರದಲ್ಲಿ ಸಾಧನೆ ಮಾಡಿದ ಇವರು ಸಮುದಾಯಕ್ಕೆ ಪ್ರಪ್ರಥಮವಾಗಿ ರಾಜ್ಯೋತ್ಸವ ಪ್ರಶಸ್ತಿ ಗರಿ ಮುಡಿಗೇರಲು ಕಾರಣೀಭೂತರಾಗಿದ್ದರು. 2018ರಲ್ಲಿ ಅಂದಿನ ರಾಜ್ಯ ಸರಕಾರ ಗುರುವ ಕೊರಗರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿತ್ತು. ಅಂದಿನ ಉಸ್ತುವಾರಿ ಸಚಿವರಾಗಿದ್ದ ಜಯಮಾಲಾ ಅವರು ಗುರುವ ಕೊರಗ ಅವರ ಮನೆಗೆ ತೆರಳಿ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಿ ಸನ್ಮಾನ ಮಾಡಿದ್ದರು. ಇಂಧನ ಸಚಿವರ ಸಂತಾಪನಾಡಿನ ಹಿರಿಯ ಜನಪದ ಕಲಾವಿದರಾಗಿದ್ದ ಗುರುವ ಕೊರಗ (105) ಅವರ ನಿಧನದಿಂದ ನಾಡಿನ ಸಾಂಸ್ಕೃತಿಕ ಮತ್ತು ಜನಪದ ಕ್ಷೇತ್ರಕ್ಕೆ ಬಹಳ ದೊಡ್ಡ ನಷ್ಟವಾಗಿದೆ ಎಂದು ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ. ಸುನಿಲ್ ಕುಮಾರ್ ಸಂತಾಪ ಸೂಚಿಸಿದ್ದಾರೆ. ಸಮಾಜದ ಕಟ್ಟಕಡೆಯ ಸಮುದಾಯದಿಂದ ಬಂದ ಅವರು ತಮ್ಮ ಪರಂಪರಾಗತ ಡೋಲು ವಾದನ ಕಲೆಯನ್ನು ಮೈಗೂಡಿಸಿಕೊಂಡಿದ್ದರು. ತಮ್ಮ ಆಯಸ್ಸಿನ ಕೊನೆಯವರೆಗೂ ಅದನ್ನು ಮುಂದುವರಿಸಿಕೊಂಡು ಬಂದು, ನೂರಾರು ಮಂದಿಗೆ ಆ ವಿದ್ಯೆಯನ್ನು ಧಾರೆಯೆರೆದು, ಪೋಷಿಸಿದ ಅವರ ಕಾಳಜಿ ಸ್ಮರಣೀಯವಾದುದು ಎಂದು ಹೇಳಿದ್ದಾರೆ. ಅಲ್ಲದೇ ಯಾವುದೇ ದುರಾಭ್ಯಾಸಗಳಿಲ್ಲದೇ ಶತಮಾನವನ್ನು ಪೂರೈಸಿದ ಅವರ ಬದುಕಿನ ರೀತಿ ನೀತಿ ಕಲಾವಿದರೆಲ್ಲರಿಗೂ ಆದರ್ಶ. ಅವರ ಕಲಾಸೇವೆಗೆ ಕರ್ನಾಟಕ ಸರಕಾರ ರಾಜ್ಯೋತ್ಸವ ಪ್ರಶಸ್ತಿ,, ಜನಪದ ಶ್ರೀ ಪ್ರಶಸ್ತಿ ಮತ್ತು ತುಳು ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಗಳಿಂದ ಗೌರವಿಸಲಾಗಿತ್ತು. ದೇವರು ಅವರ ಆತ್ಮಕ್ಕೆ ಚಿರಶಾಂತಿಯನ್ನು ಕರುಣಿಸಲಿ, ಅವರ ಮನೆಯವರಿಗೆ ಮತ್ತು ಅಭಿಮಾನಿಗಳಿಗೆ ಅವರ ಅಗಲಿಕೆಯ ನೋವನ್ನು ಸಹಿಸಿಸುವ ಶಕ್ತಿಯನ್ನು ನೀಡಲಿ ಎಂದು ಸಚಿವರು ಸಂತಾಪ ವ್ಯಕ್ತಪಡಿಸಿದ್ದಾರೆ.
from India & World News in Kannada | VK Polls https://ift.tt/3B1KIkm