ಮಲೇಷಿಯಾ ಕೊರೊನಾ ಮುಕ್ತ ಆಗಿದ್ದು ಹೇಗೆ? ಕನ್ನಡಿಗ ರಾಘವೇಂದ್ರ ಶರ್ಮಾ ಕಂಡಂತೆ..

ಇಡೀ ವಿಶ್ವವೇ ಕೊರೊನಾ ಸುಳಿಗೆ ಸಿಲುಕಿದೆ. ನಮ್ಮ ಅಕ್ಕ- ಪಕ್ಕದ ದೇಶದಲ್ಲೂಈ ಸೋಂಕು ವೇಗವಾಗಿ ಹರಡುತ್ತಿದೆ. ಎಷ್ಟೋ ದೇಶದಲ್ಲಿ ನಿಯಂತ್ರಣಕ್ಕೂ ಬಂದಿದೆ. ಈ ಪೈಕಿ ಮಲೇಷಿಯಾ ಕೂಡ ಒಂದು. ಈಗಾಗಲೇ ಅಲ್ಲಿ ಶಾಲೆಗಳು ಸಹ ಆರಂಭವಾಗಿದ್ದು, ಕಳೆದ 3 ವಾರಗಳಿಂದ ಮಲೇಷಿಯಾದಲ್ಲಿ ಕೊರೊನಾ ವೈರಸ್ ಪ್ರಕರಣಗಳೇ ಕಂಡುಬರುತ್ತಿಲ್ಲ... ಹಾಗಾದ್ರೆ ಮಲೇಷಿಯಾದಲ್ಲಿ ಕೈಗೊಂಡ ಮುಂಜಾಗರೂಕತಾ ಕ್ರಮಗಳೇನು..? ಅಲ್ಲಿನ ಸರ್ಕಾರದ ಕಾರ್ಯವೈಖರಿ ಹೇಗಿದೆ..? ಅಲ್ಲಿನ ಜನಜೀವನದಲ್ಲಿ ಏನೆಲ್ಲಾ ಬದಲಾವಣೆ ಆಗಿದೆ ಅನ್ನೋ ವಿಚಾರವಾಗಿ, ಮಲೇಷ್ಯಾದಲ್ಲಿ ನೆಲೆಸಿರುವ ಕನ್ನಡಿಗ ರಾಘವೇಂದ್ರ ಶರ್ಮಾ ಅವರನ್ನು ನಿಮ್ಮ ವಿಜಯ ಕರ್ನಾಟಕ ವೆಬ್ ಸಂಪರ್ಕಿಸಿತು. ವಿಜಯ ಕರ್ನಾಟಕ ವೆಬ್‌ನ ಮೈಸೂರು ವರದಿಗಾರ್ತಿ ಯಶಸ್ವಿನಿ ಎಂ.ಕೆ ಅವರು ರಾಘವೇಂದ್ರ ಶರ್ಮಾ ಅವರ ಜೊತೆ ನಡೆಸಿದ ಸಂದರ್ಶನದ ವಿವರ ಇಲ್ಲಿದೆ.

ಕೊರೊನಾ ವೈರಸ್ ಮಲೇಷಿಯಾ ಮೇಲೂ ಪರಿಣಾಮ ಬೀರಿದೆ. ಇಲ್ಲಿಯೂ ಕೂಡ ಆರ್ಥಿಕ ಸ್ಥಿತಿ ಮುಂಚಿಗಿಂತ ಹದಗೆಟ್ಟಿದೆ. ಕೊರೊನಾದ ಮೊದಲ ಪ್ರಕರಣ ಮಲೇಷಿಯಾದಲ್ಲಿ ಕಾಣಿಸಿಕೊಂಡಿದ್ದು, ಜನವರಿ 29ರಂದು. ಅದು ಚೀನಾದಿಂದ ಬಂದ ಕೆಲವರಿಂದಲೇ ಹರಡಿತ್ತು. ಇದಾದ ಬಳಿಕ ಫೆಬ್ರವರಿಯಲ್ಲಿ ಸೋಂಕಿತರು ಕಡಿಮೆಯಾಗಿಯೇ ಇದ್ದರು. ಆದರೆ ಮಾರ್ಚ್‌ ಮೊದಲ ವಾರದಲ್ಲಿ ಏಕಾಏಕಿ ಸೋಂಕು ತೀವ್ರಗತಿಯಲ್ಲಿ ಹರಡಲು ಶುರುವಾಯಿತು.

ಮಲೇಷಿಯಾವನ್ನು ಎರಡು ಐ ದ್ವೀಪಗಳಾಗಿ ವಿಭಾಗ ಮಾಡಲಾಗಿದೆ. ಈಸ್ಟ್‌ ಹಾಗೂ ವೆಸ್ಟ್‌ ಎಂದು. ಈ ಎರಡು ಭಾಗದಲ್ಲೂ ಸೋಂಕು ಹರಡುವಿಕೆ ತೀವ್ರಗತಿಯಲ್ಲಿ ಏರಿಕೆಯಾಗುತ್ತಾ ಹೋಯಿತು. ಅಲ್ಲಿಯ ತನಕ ಜನಜೀವನದ ಮೇಲೆ ಇಲ್ಲಿನ ಸರ್ಕಾರ ಯಾವುದೇ ನಿರ್ಬಂಧ ಹೇರಲಿಲ್ಲ. ಇದಾದ ಬಳಿಕ ಮಾರ್ಚ್‌ 18ರಂದು ಸರ್ಕಾರ ಲಾಕ್‌ ಡೌನ್‌ ಘೋಷಣೆ ಮಾಡಿತು. ಇಲ್ಲಿ ಲಾಕ್‌ ಡೌನ್‌ ಅನ್ನು ಮೂವ್‌ಮೆಂಟ್‌ ಕಂಟ್ರೋಲ್‌ ಆರ್ಡರ್‌ ಎಂದು ಹೇಳುತ್ತಾರೆ. ಸತತ 2 ತಿಂಗಳು ಇದು ಜಾರಿಯಲ್ಲಿತ್ತು.

ಮಲೇಷಿಯಾದಲ್ಲಿ ಸೋಂಕು ಕಂಡುಬಂದ ಬಳಿಕ ಮಾರ್ಚ್‌ ಮೊದಲ ವಾರದಲ್ಲಿ ಫ್ಲೈಟ್‌ಗಳನ್ನು ನಿಲ್ಲಿಸಲಾಯಿತು. ಈಗಾಗಲೇ ಬಂದ ವಿದೇಶಿಗರನ್ನು ಮಾತ್ರ ಕ್ವಾರೆಂಟೈನ್‌ಗೆ ಒಳಪಡಿಸಲಾಯಿತು. ಲಾಕ್‌ಡೌನ್‌ ಅನ್ನು ಮೂರು ವಿಧಾನದಲ್ಲಿ ಮಾಡಿದರು. ಆಗ ಹೊರಗಡೆ ಜನರು ತೆರಳುವ ಹಾಗಿಲ್ಲ ಎಂಬ ನಿಯಮ ಜಾರಿಗೆ ತಂದು ಪಾಲಿಸುವಂತೆ ಆರ್ಡರ್‌ ಹೇರಲಾಯಿತು. ಇವೆಲ್ಲವೂ ಸಹ ಕಟ್ಟುನಿಟ್ಟಾಗಿ ನಡೆಯಿತು.

ಒಂದರ್ಥದಲ್ಲಿ ಮಲೇಷಿಯಾದಲ್ಲಿ ಕೊರೊನಾ ಕಂಟ್ರೋಲ್‌ ನಾವಂದುಕೊಂಡದ್ದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಆಗಿದೆ. ನಮ್ಮಲ್ಲಿ ಈ ತಿಂಗಳಲ್ಲಿಯೇ ಕೊರೊನಾದಿಂದ ಸಾವಿಗೀಡಾದವರು ಒಬ್ಬರೂ ಇಲ್ಲ. ಮೊದಲ ಕೊರೊನಾ ಸೋಂಕಿತರ ಸಾವು ನಮ್ಮ ದೇಶದಲ್ಲಿ ಆಗಿದ್ದು ಮಾರ್ಚ್‌ 2ನೇ ವಾರದಲ್ಲಿ. ಕೇವಲ ಮಾರ್ಚ್‌ನಲ್ಲಿಯೇ ಏಕಾಏಕಿ ಕೊರೊನಾದಿಂದ ಸಾವಿಗೀಡಾದವರ ಸಂಖ್ಯೆ ಹೆಚ್ಚಾಗುತ್ತಾ ಹೋಯಿತು. ಅಕಸ್ಮಾತ್‌ ಮಲೇಷಿಯಾದಲ್ಲಿ ಸೋಂಕಿತ ವ್ಯಕ್ತಿ ಸಾವಿಗೀಡಾದರೆ ಇಲ್ಲಿ ಹೂಳಲಾಗುತ್ತದೆ. ಇಲ್ಲಿ ಮೊದಲಿನಿಂದಲೂ ಸುಡುವ ಪದ್ದತಿ ಇಲ್ಲ. ಕೊರೊನಾ ವಿಚಾರದಲ್ಲಿ ತೆಗೆದುಕೊಂಡ ಮುಂಜಾಗ್ರತಾ ಕ್ರಮದಿಂದ, ಪ್ರಸ್ತುತ ನಮ್ಮ ಇಡೀ ದೇಶದಲ್ಲಿ ಸೋಂಕಿತರ ಸಂಖ್ಯೆ ಕೇವಲ 15-20ರೊಳಗಿದೆ. ಅದರಲ್ಲೂ ನಾವಿರುವ ಮಲೇಷಿಯಾದ ಪಿನಾಂ ಎಂಬ ರಾಜ್ಯದಲ್ಲಿ ಒಂದು ಸಹ ಕೊರೊನಾ ಕೇಸ್‌ ಇಲ್ಲದಿರುವುದು ನಿರಾಳವೆಂದೆನಿಸಿದೆ.

ನಮಲ್ಲಿಯೂ ಸಹ ಪ್ರತಿ ದಿನ 1.30ಕ್ಕೆ ಆರೋಗ್ಯಾಧಿಕಾರಿಗಳು ಹೆಲ್ತ್‌ ಬುಲೆಟಿನ್‌ ರಿಲೀಸ್‌ ಮಾಡುತ್ತಾರೆ. ಅವರು ಕ್ಲಸ್ಟರ್‌ (ಕಂಟೈನ್‌ ಮೆಂಟ್‌ ಝೋನ್‌ )ಗಳ ಬಗ್ಗೆ ಜನರಿಗೆ ಮಾಹಿತಿ ನೀಡುತ್ತಾರೆ. ಭಾರತದ ಹಾಗೆಯೇ ಮಲೇಷಿಯಾದಲ್ಲಿಯೂ ಸಹ ಸರ್ಕಾರಿ ಆಸ್ಪತ್ರೆಗಳಲ್ಲಿಯೇ ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತದೆ. ಇಲ್ಲಿನ ಸರ್ಕಾರ ಪ್ರೈವೇಟ್‌ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲು ಸೋಂಕಿತರಿಗೆ ಅವಕಾಶವೇ ಕೊಡಲಿಲ್ಲ. ಕಾರಣ ಏಕಾಏಕಿ ಸೋಂಕಿತರ ಸಂಖ್ಯೆಯಲ್ಲಿ ಫಾಲ್‌ ಡೌನ್‌ ಆಗಿರುವುದು.

ಇನ್ನು ಸೋಂಕಿತರ ಮನೆ ಬಳಿ ಎನ್‌ ಹ್ಯಾನ್ಸ್‌ ಕ್ಲಸ್ಟರ್‌ ಎಂದು ಪ್ರತ್ಯೇಕ ವಿಭಾಗ ಮಾಡಿ ಅಲ್ಲಿ ಮನೆಯಿಂದ ಹೊರಗೆ ಯಾರೂ ಬಾರದ ಹಾಗೆ ನಿಯಮ ಜಾರಿಗೆ ತಂದರು. ಕೋವಿಡ್‌ ಟೆಸ್ಟ್‌ ಉಚಿತವಾಗಿದ್ದು, ಯಾವುದೇ ಹಣ ಪಾವತಿಸುವಂತಿಲ್ಲ. ಈವರೆಗೂ ಸಹ ಮಲೇಷಿಯಾದಲ್ಲಿ ಲಾಕ್‌ಡೌನ್‌ ತೆಗೆದೇ ಇಲ್ಲ. ರಾತ್ರಿಯ ವೇಳೆ ಲಾಕ್‌ ಡೌನ್‌ ಕೂಡಾ ಇದೆ.

ಇಡೀ ರಾಷ್ಟ್ರದಲ್ಲಿ ಕಂಪನಿಗಳು ಹಾಗೂ ಫ್ಯಾಕ್ಟರಿಗಳು ಕೆಲಸ ನಿರ್ವಹಿಸುತ್ತಿದ್ದು, ಕೇವಲ 30%ರಷ್ಟು ಜನರಿಗೆ ಮಾತ್ರ ಕೆಲಸ ಮಾಡಲು ಅವಕಾಶ ಮಾಡಿಕೊಡಲಾಗಿದೆ. ಆದರೆ ಅಂತಾರಾಜ್ಯ ಓಡಾಟಕ್ಕೆ ಜೂನ್ 10ರವರೆಗೂ ತೆರೆದಿರಲಿಲ್ಲ. ಈವರೆಗೂ ಅಂತರರಾಷ್ಟ್ರೀಯ ವಿಮಾನಗಳ ಹಾರಾಟ ಶುರುವಾಗಿಲ್ಲ. ಇಲ್ಲಿ ಪಕ್ಕದ ರಾಜ್ಯದಿಂದ ಬಂದರೆ ಕ್ವಾರೆಂಟೈನ್‌ ಆಗಬೇಕಾದ ಅನಿವಾರ್ಯವಿಲ್ಲ. ಕಾರಣ ಇಲ್ಲಿ ಸೋಂಕಿತರ ಸಂಖ್ಯೆ ಇಳಿಮುಖವಾಗಿದೆ ಹಾಗಾಗಿ.

ಕೋವಿಡ್‌ ನಿಂದಾಗಿ ಆರ್ಥಿಕ ಸ್ಥಿತಿಗತಿ ಕುಸಿತಗೊಂಡಿದ್ದು ಸ್ವಲ್ಪ ಕಡಿಮೆ ಎನ್ನಬಹುದು. ಇದಕ್ಕೆ ಪ್ರಮುಖ ಕಾರಣ ಲಾಕ್‌ಡೌನ್ ಘೋಷಿಸಿದ ದಿನದಿಂದ ಎಲ್ಲಾ ಫ್ಯಾಕ್ಟರಿಗಳನ್ನು ಸಂಪೂರ್ಣವಾಗಿ ಮುಚ್ಚಿಸಲಿಲ್ಲ. ಕಡಿಮೆ ಜನರಿಂದಲೇ ಕಾರ್ಯ ನಿರ್ವಹಿಸಲಾಗುತ್ತಿತ್ತು. ಹಾಗಾಗಿ ಅಷ್ಟಾಗಿ ಜನರ ಮೇಲೆ ಪ್ರಭಾವ ಬೀಳಲಿಲ್ಲ. ಇನ್ನು ಇಲ್ಲಿನ ಸರ್ಕಾರವೂ ಸಹ ಕೂಡಲೇ ಆರ್ಥಿಕ ಸಹಾಯವನ್ನು ಘೋಷಿಸಿತು. ಇದಾದ ಬಳಿಕ ತೆರಿಗೆ ಕಟ್ಟಬೇಕಾದ ದಿನಾಂಕವನ್ನು ಕೆಲ ತಿಂಗಳುಗಳ ಕಾಲ ಮುಂದೂಡಿದರು. ಸೋಂಕು ಇಷ್ಟರ ಮಟ್ಟಿಗೆ ತಡೆಯಲು ಪ್ರಮುಖ ಕಾರಣವೆಂದರೆ ಜವಾಬ್ದಾರಿಯುತವಾಗಿ ಜನರು ಸರ್ಕಾರದ ನಿಯಮಗಳಿಗೆ ಸ್ಪಂದಿಸಿದ ರೀತಿ ಎಂದರೆ ತಪ್ಪಾಗಲಾರದು.

ಕೊರೊನಾ ಪ್ರಕರಣಗಳು ಕಂಡುಬರದಿದ್ದರೂ ಜನರು ಮಾಸ್ಕ್ ಧರಿಸಿಯೇ ಎಲ್ಲೆಡೆ ತೆರಳುತ್ತಾರೆ. ಇದು ಜನರಿಗೆ ಇರುವ ಭಯ. ಇಲ್ಲಿ ಪ್ರತಿ ಅಂಗಡಿಗೆ ತೆರಳಿದಾಗಲೂ ಟೆಂಪರೇಚರ್‌ ಪರೀಕ್ಷಿಸುವುದು ಕಡ್ಡಾಯವಾಗಿದೆ. ಅಲ್ಲದೇ ಇಲ್ಲಿ ಒಂದು ಆಪ್ ಮೂಲಕ ನಮ್ಮ ಮಾಹಿತಿ ನೀಡಬೇಕಿದೆ. ನಾವು ಆ ಮಾಹಿತಿಯನ್ನು ಎಲ್ಲಿ ತೆರಳಿದರೂ ಸ್ಕ್ಯಾನ್‌ ಮಾಡುವುದು ಕಡ್ಡಾಯವಾಗಿರುತ್ತದೆ. ಈ ಮೂಲಕ ಸುಲಭವಾಗಿ ಟ್ರ್ಯಾಕ್‌ ಮಾಡಬಹುದಾಗಿದೆ.

ನಮ್ಮಲ್ಲಿ ಲಕ್ಷಣ ಇಲ್ಲದವರಿಗೆ ಸೋಂಕು ತಗುಲುವಿಕೆ ಪ್ರಮಾಣ ತೀರಾ ಕಡಿಮೆ ಇದೆ. ಹೋಂ ಐಸೋಲೇಶನ್‌ ಟ್ರೀಟ್ಮೆಂಟ್‌ ಕೂಡ ಶುರು ಮಾಡಿಲ್ಲ. ಮೊದ-ಮೊದಲು ಮಲೇಷಿಯಾದಲ್ಲಿ ಲಾಕ್‌ಡೌನ್ ಘೋಷಣೆಯಾದಾಗ ಮಾಸ್ಕ್‌ ಹಾಗೂ ಸ್ಯಾನಿಟೈಸರ್‌ ಕೂಡ ಸಿಗಲಿಲ್ಲ. ನಂತರ ಹೆಚ್ಚು ಉತ್ಪಾದನೆ ಶುರುವಾಯಿತು. ಇಲ್ಲಿಯೂ ಕೂಡ ಮಾಸ್ಕ್‌ ಧರಿಸದಿದ್ದರೆ ದಂಡವಿದೆ.

ಸೋಂಕಿನ ಪ್ರಮಾಣ ಸಂಪೂರ್ಣ ಕಡಿಮೆಯಾದ ಬಳಿಕವೇ ಶಾಲೆ ಆರಂಭಿಸಲಾಗಿದೆ. ಪ್ರಸ್ತುತ ಜುಲೈ 15ರಿಂದ ಶಾಲೆಗಳು ಓಪನ್‌ ಆಗಿವೆ. ನನ್ನ ಮಗಳು ಸಹ ಶಾಲೆಗೆ ತೆರಳುತ್ತಿದ್ದಾಳೆ. ಮೊದಲಿನ ಹಾಗೆ ಶಾಲೆಯೊಳಗೆ ಓಡಾಡುವಂತಿಲ್ಲ. ಒಂದೇ ಕಡೆ ಕುಳಿತುಕೊಳ್ಳಬೇಕು. ಆದರೆ ಆಟ ಆಡುವುದು, ಸ್ವಿಮ್ಮಿಂಗ್‌, ಮ್ಯೂಸಿಕ್‌ ಸೇರಿದಂತೆ ಇತರೆ ಚಟುವಟಿಕೆಗಳನ್ನು ಮಾಡುತ್ತಿಲ್ಲ. ಮಕ್ಕಳನ್ನು ಶಾಲೆಗೆ ಕಳುಹಿಸಲೇಬೇಕೆಂಬ ಒತ್ತಡವೇನೂ ಇಲ್ಲ. ಆನ್‌ಲೈನ್ ಕ್ಲಾಸ್‌ ಸಹ ನಡೆಯುತ್ತಿದೆ. ಆದರೆ ಸಕಲ ಮುಂಜಾಗ್ರತಾ ಕ್ರಮ ತೆಗೆದುಕೊಂಡು ಶಾಲೆ ನಡೆಯುತ್ತಿರುವುದರಿಂದ ಮಕ್ಕಳನ್ನು ಕಳುಹಿಸುವಲ್ಲಿ ಪೋಷಕರು ಹಿಂದೇಟು ಹಾಕುತ್ತಿಲ್ಲ.



from India & World News in Kannada | VK Polls https://ift.tt/30KrBLc

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...