ಬೆಂಗಳೂರು: ಕೋವಿಡ್ ಕಾರಣದಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ಹೋಟೆಲ್ ಉದ್ಯಮಕ್ಕೆ ಆರ್ಥಿಕ ನೆರವು ನೀಡಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರಿಗೆ ಪತ್ರ ಬರೆದು ಮನವಿ ಮಾಡಿಕೊಂಡಿದ್ದಾರೆ. ಕೋವಿಡ್ 19 ವಿಶ್ವವನ್ನೇ ತಲ್ಲಣಗೊಳಿಸಿದೆ. ಲಾಕ್ಡೌನ್ನಿಂದಾಗಿ ಹೋಟೆಲ್ ಉದ್ಯಮಕ್ಕೆ ಭಾರೀ ಹೊಡೆತ ನೀಡಿದೆ. ಕಳೆದ ನಾಲ್ಕು ತಿಂಗಳಿಂದ ಲಾಕ್ಡೌನ್ ಹಾಗೂ ಗ್ರಾಹಕರ ಪ್ರಮಾಣ ಕುಸಿತದಿಂದ ಈ ಉದ್ಯಮ ತತ್ತರಿಸಿದೆ. ಈ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಲಕ್ಷಾಂತರ ಮಂದಿಯ ಬದುಕು ಅನಿಶ್ಚಿತತೆಯಲ್ಲಿದೆ. ಪರಿಸ್ಥಿತಿ ಹೀಗಿದ್ದರೂ ಸರ್ಕಾರ ಇದುವರೆಗೂ ಈ ವರ್ಗದವರಿಗೆ ಯಾವುದೇ ನೆರವು ನೀಡದಿರುವುದು ಬೇಸರದ ಸಂಗತಿ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಈ ನಿಟ್ಟಿನಲ್ಲಿ ವಾಣಿಜ್ಯ ಕಟ್ಟಡಗಳಲ್ಲಿ ಇರುವ ಹೋಟೆಲ್ಗಳಿಗೆ 2020-21 ಆಸ್ತಿ ತೆರಿಗೆ ಕನಿಷ್ಠ ಒಂದು ವರ್ಷ ಮನ್ನಾ ಮಾಡಬೇಕು. ಎಲ್ಲಾ ಹೋಟೆಲ್ಗಳಿಗೆ ಬೆಸ್ಕಾಂ ನಿಗದಿತ ಶುಲ್ಕವನ್ನು ಒಂದು ವರ್ಷಗಳ ಕಾಲ ವಜಾ ಮಾಡಬೇಕು, 2020-21 ನೇ ಸಾಲಿನ ಸನ್ನದು ಶುಲ್ಕದಲ್ಲಿ ಕನಿಷ್ಠ ಒಂದು ವರ್ಷ ವಿನಾಯ್ತಿ ನೀಡಿ ಉಳಿದ ಶುಲ್ಕವನ್ನು ಕಟ್ಟಲು ಆರು ಕಂತುಗಳ ಅವಕಾಶ ನೀಡಬೇಕು ಎಂದು ಆಗ್ರಹಿಸಿದ್ದಾರೆ. ಅಲ್ಲದೆ ಹೋಟೆಲ್ ಕಾರ್ಮಿಕರಿಗೆ ಸಹಾಯಧನ ನೀಡುವ ಪ್ಯಾಕೇಜ್ ಘೋಷಿಸಬೇಕು ಎಂದು ಮುಖ್ಯಮಂತ್ರಿಗೆ ಪತ್ರದ ಮೂಲಕ ಒತ್ತಾಯಿಸಿದ್ದಾರೆ.
from India & World News in Kannada | VK Polls https://ift.tt/3hxCJl6