ಕೊರೊನಾ ನಿರ್ವಹಣೆಗೆ 500 ಕೋಟಿ, ಸೋಂಕಿತರ ಬೆಡ್‌ ಮರು ಬಳಕೆ ಇಲ್ಲ

ಬೆಂಗಳೂರು: ''ಕೋವಿಡ್‌ ರೋಗಿಗಳಿಗೆ ಬಳಸಿದ ಬೆಡ್‌ಗಳನ್ನು ಯಾವುದೇ ಕಾರಣಕ್ಕೂ ಮರು ಬಳಕೆ ಮಾಡುವುದಿಲ್ಲ. ಇಂಥ ಬೆಡ್‌ಗಳನ್ನು ಸುಟ್ಟ ಹಾಕಲಾಗುತ್ತದೆ'' ಎಂದು ಸಿಎಂ ಅವರು ಸ್ಪಷ್ಟಪಡಿಸಿದ್ದಾರೆ. ''ಈ ಬಗ್ಗೆ ಆತಂಕ ಪಡಬೇಕಿಲ್ಲ. ಸ್ಟೀಲ್‌ ಮಂಚಗಳನ್ನಷ್ಟೇ ಸ್ವಚ್ಛಗೊಳಿಸಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ನೀಡಲಾಗುತ್ತದೆ,'' ಎಂದು ತಿಳಿಸಿದರು. ಡಿಕೆಶಿ ಗುಟುರಿಗೆ ಸ್ಪಷ್ಟನೆ: ಸೋಂಕಿತರು ಬಳಸಿದ ನಂತರ ಹಾಸ್ಟೆಲ್‌ ವಿದ್ಯಾರ್ಥಿಗಳಿಗೆ ಕೊಡಲು ಅಧಿಕಾರಿಗಳು ಮಾಡಿರುವ ಸಲಹೆಯನ್ನು ಸರಕಾರ ಒಪ್ಪಿದೆ. ಅದಕ್ಕೆ ನನ್ನ ಬಳಿ ದಾಖಲೆಗಳಿವೆ. ಈ ತೀರ್ಮಾನದ ವಿರುದ್ಧ ಆಂದೋಲನ ಆರಂಭಿಸುವುದಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್‌ ಸೋಮವಾರ ಸರಕಾರಕ್ಕೆ ಎಚ್ಚರಿಕೆ ನೀಡಿದ್ದರು. 'ಸೋಂಕಿನಿಂದ ಸತ್ತವರ ದೇಹವನ್ನು ಮುಟ್ಟಲು ಹಿಂದೆ ಮುಂದೆ ನೋಡುತ್ತಿರುವ ಈ ಸರಕಾರ ಈಗ ಸೋಂಕಿತರು ಬಳಸಿದ ಹಾಸಿಗೆ ವಸ್ತುಗಳನ್ನು ಹಾಸ್ಟೆಲ್‌ ವಿದ್ಯಾರ್ಥಿಗಳು, ನಮ್ಮ ಹಳ್ಳಿ ಮಕ್ಕಳಿಗೆ ಹೇಗೆ ನೀಡುತ್ತಾರೆ? ಇವರಿಗೇನಾದರೂ ಬುದ್ಧಿ ಇದೆಯೇ? ಎಂದು ವಾಗ್ದಾಳಿ ನಡೆಸಿದ್ದರು. ಕೊರೊನಾ ನಿಯಂತ್ರಣಕ್ಕೆ ಹೆಚ್ಚುವರಿಯಾಗಿ 500 ಕೋಟಿ ರೂ. ಬಳಕೆ ಖಾಸಗಿ ಸಹಭಾಗಿತ್ವದಲ್ಲಿ ಪ್ಲಾಸ್ಮಾ ಬ್ಯಾಂಕ್‌ ಸ್ಥಾಪನೆ ಹಾಗೂ ರಾಜ್ಯಾದ್ಯಂತ 5 ಲಕ್ಷಕ್ಕೂ ಹೆಚ್ಚು ಆ್ಯಂಟಿಜೆನ್‌ ಪರೀಕ್ಷೆ ನಡೆಸುವುದಕ್ಕೆ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ. ಜತೆಗೆ ಕೊರೊನಾ ನಿಯಂತ್ರಣಕ್ಕೆ ಹೆಚ್ಚುವರಿಯಾಗಿ 500 ಕೋಟಿ ರೂ. ಬಳಕೆ ಮಾಡುವುದಕ್ಕೂ ಸಭೆ ಒಪ್ಪಿಗೆ ನೀಡಿದೆ. ಡಿಸಿಎಂ ಡಾ.ಸಿ.ಎನ್‌.ಅಶ್ವತ್ಥನಾರಾಯಣ, ಆರೋಗ್ಯ ಸಚಿವ ಬಿ. ಶ್ರೀರಾಮುಲು, ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ನೇತೃತ್ವದಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಈ ನಿರ್ಣಯ ತೆಗೆದುಕೊಳ್ಳಲಾಗಿದೆ. ಸೋಮವಾರ ನಿಗದಿಯಾದ ಸಭೆ ಅರ್ಧಕ್ಕೆ ಮೊಟಕುಗೊಂಡ ಹಿನ್ನೆಲೆಯಲ್ಲಿ ಮಂಗಳವಾರ ಮತ್ತೆ ಸಭೆ ಸೇರಲಾಗಿತ್ತು.ಒಟ್ಟು 8 ವಿಚಾರಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಲಾಗಿದ್ದು, ಪ್ಲಾಸ್ಮಾ ಬ್ಯಾಂಕ್‌ ಸ್ಥಾಪನೆ ಹಾಗೂ ಆ್ಯಂಟಿಜೆನ್‌ ಪರೀಕ್ಷೆಗೆ ಅಗತ್ಯವಾದ 5 ಲಕ್ಷ ಕಿಟ್‌ ಖರೀದಿ ಮಾಡುವುದಕ್ಕೆ ಸಭೆ ಒಪ್ಪಿಗೆ ನೀಡಿದೆ. 5 ಲಕ್ಷ ಕಿಟ್‌ಗಳ ಪೈಕಿ ಶೇ.50ರಷ್ಟನ್ನು ಬೆಂಗಳೂರಿನಲ್ಲಿ ಪರೀಕ್ಷೆಗೆ ಬಳಸಲಾಗುತ್ತದೆ. ಆಯುಷ್‌ ಔಷಧ ಬಳಕೆ ನಿರ್ಧಾರವಿಲ್ಲ ರೋಗಿಗಳು ಹಾಗೂ ರೋಗ ಲಕ್ಷಣ ಇಲ್ಲದೇ ಇರುವವರಿಗೆ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಔಷಧ ನೀಡುವ ಬಗ್ಗೆ ಆಯುಷ್‌ ಇಲಾಖೆ ನೀಡಿದ್ದ ಪ್ರಸ್ತಾಪದ ಬಗ್ಗೆ ಮಂಗಳವಾರ ನಡೆದ ಸಭೆಯಲ್ಲಿಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ಈ ಪ್ರಸ್ತಾಪವನ್ನು ಉನ್ನತ ಸಮಿತಿಗೆ ವರ್ಗಾಯಿಸಲಾಗಿದೆ. ವರದಿ ಬಂದ ನಂತರ ಮುಂದಿನ ವಾರ ನಡೆಯುವ ಕಾರ್ಯಪಡೆ ಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳಲಾಗುತ್ತದೆ. ವೇತನ ಹೆಚ್ಚಳ ಕೋವಿಡ್‌ ಹಿನ್ನೆಲೆಯಲ್ಲಿ ಮುಂದಿನ ಆರು ತಿಂಗಳಿಗೆ ಅನ್ವಯವಾಗುವಂತೆ ಶುಶ್ರೂಷಕರು, ಆಯುಷ್‌ ಹಾಗೂ ಯುನಾನಿ ವೈದ್ಯರಿಗೆ ವೇತನ ದ್ವಿಗುಣಗೊಳಿಸಲು ರಾಜ್ಯ ಸರಕಾರ ನಿರ್ಧರಿಸಿದೆ.ಕಾರ್ಯಪಡೆ ಸಭೆಯಲ್ಲಿ ಈ ನಿರ್ಣಯ ತೆಗೆದುಕೊಳ್ಳಲಾಗಿದೆ. ನರ್ಸ್‌ಗಳಿಗೆ 15 ಸಾವಿರದಿಂದ 30 ಸಾವಿರ ರೂ. ಆಯುಷ್‌ ಹಾಗೂ ಯುನಾನಿ ವೈದ್ಯರ ಸಂಬಳವನ್ನು 25 ಸಾವಿರದಿಂದ 48 ಸಾವಿರ ರೂ.ಗಳಿಗೆ ಹೆಚ್ಚಳ ಮಾಡಲು ತೀರ್ಮಾನಿಸಲಾಗಿದೆ. ಅದೇ ರೀತಿ ಬಿಬಿಎಂಪಿ ವ್ಯಾಪ್ತಿಯಲ್ಲಿ ತಾತ್ಕಾಲಿಕವಾಗಿ ನೇಮಕ ಮಾಡಿಕೊಳ್ಳುವ ಎಂಬಿಬಿಎಸ್‌ ವೈದ್ಯರಿಗೆ ಮಾಸಿಕ 80 ಸಾವಿರ ರೂ. ವೇತನ ನಿಗದಿ ಮಾಡಲಾಗಿದೆ.


from India & World News in Kannada | VK Polls https://ift.tt/3hqiXrS

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...