
ಇಸ್ಲಾಮಾಬಾದ್: ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐ ಭಾರತದ ವಿರುದ್ಧದ ಭಯೋತ್ಪಾದಕ ಚಟುವಟಿಕೆಗಳಿಗೆ ಕುಮ್ಮಕ್ಕು ನೀಡುತ್ತದೆ ಎಂಬುದು ಇಡೀ ವಿಶ್ವಕ್ಕೆ ಗೊತ್ತಿರುವ ಸಂಗತಿ. ಅಂತಹ ಸಂಸ್ಥೆ ಭಯೋತ್ಪಾದಕರನ್ನು ಪತ್ತೆ ಹಚ್ಚುತ್ತದೆ ಎಂದರೆ ನೀವು ನಂಬುತ್ತೀರಾ?. ಪಾಕ್ ಪ್ರಧಾನಿ ಕೊಟ್ಟಿರುವ ಹೇಳಿಕೆಯ ಅನ್ವಯ ಐಎಸ್ಐ ಭಯೋತ್ಪಾದಕರನ್ನು ಪತ್ತೆ ಹಚ್ಚಲು ವಿನೂತನ ತಂತ್ರ ಬಳಸುತ್ತದೆ. ಇದೇ ತಂತ್ರವನ್ನು ಸದ್ಯ ಸರ್ಕಾರ ಕೊರೊನಾ ವೈರಸ್ ಸೋಂಕಿತರನ್ನು ಪತ್ತೆ ಹಚ್ಚಲು ಬಳಸುತ್ತಿದೆಯಂತೆ. ಹೌದು, ದೇಶದಲ್ಲಿ ಕೊರೊನಾ ವೈರಸ್ ಸೋಂಕಿತರನ್ನು ಪತ್ತೆ ಹಚ್ಚಲು ನಾವು ಐಎಸ್ಐನ ವಿನೂತನ ತಂತ್ರದ ಮೊರೆ ಹೋಗಿರುವುದಾಗಿ ಇಮ್ರಾನ್ ಖಾನ್ ಹೇಳಿದ್ದಾರೆ. ಆದರೆ ಆ ತಂತ್ರ ಯಾವುದು ಎಂಬುದರ ಕುರಿತು ಮಾತ್ರ ಬಾಯ್ಬಿಟ್ಟಿಲ್ಲ. ಇದೇ ವೇಳೆ ದೇಶದಲ್ಲಿ ಲಾಕ್ಡೌನ್ ನಿಯಮ ಸಡಿಲಿಸಲು ಚಿಂತನೆ ನಡೆಸಿರುವುದಾಗಿ ಹೇಳಿರುವ ಇಮ್ರಾನ್ ಖಾನ್, ಸಣ್ಣ ಮತ್ತು ಮಧ್ಯಮ ಉದ್ದಿಮೆಗಳನ್ನು ಮತ್ತೆ ಆರಂಭಿಸಿ ಆರ್ಥಿಕತೆಗೆ ಚೈತನ್ಯ ನೀಡಲು ಬಯಸಿರುವುದಾಗಿ ಹೇಳಿದ್ದಾರೆ. ಅಮೆರಿಕ ಕೂಡ ಲಾಕ್ಡೌನ್ ನಿಯಮ ಸಡಿಲಿಸಲು ಚಿಂತನೆ ನಡೆಸಿದೆ. ನಿರಂತರ ಲಾಕ್ಡೌನ್ನಿಂದ ಆರ್ಥಿಕತೆಗೆ ಹೊಡೆತ ಬೀಳಲಿದ್ದು, ಇದರಿಂದ ತಪ್ಪಿಸಿಕೊಳ್ಳಲು ಲಾಕ್ಡೌನ್ ಸಡಿಲಿಸುವುದೊಂದೇ ಉಪಾಯ ಎಂದು ಇಮ್ರಾನ್ ಖಾನ್ ಅಭಿಪ್ರಾಯಪಟ್ಟಿದ್ದಾರೆ.
from India & World News in Kannada | VK Polls https://ift.tt/3501sK1