ಸಂಪುಟ ಗೊಂದಲ, ಉದ್ಧವ್‌ ಸರಕಾರದಲ್ಲಿ ಮೊದಲ ಭಿನ್ನಮತ ಸ್ಫೋಟ

ಮುಂಬಯಿ: ಮಹಾರಾಷ್ಟ್ರದಲ್ಲಿ ಸಂಪುಟ ಬಿಕ್ಕಟ್ಟು ಸದ್ಯಕ್ಕೆ ಬಗೆಹರಿಯುವ ಲಕ್ಷಣಗಳು ಕಾಣಿಸುತ್ತಿಲ್ಲ. ತಮಗೆ ಸಂಪುಟ ದರ್ಜೆ ಸಚಿವ ಸ್ಥಾನ ನೀಡದೇ ಸಹಾಯಕ ಸಚಿವರಾಗಿ ಸಂಪುಟಕ್ಕೆ ಸೇರ್ಪಡೆ ಮಾಡಿಕೊಂಡಿರುವುದರಿಂದ ಸಿಟ್ಟಿಗೆದ್ದಿರುವ ಶಿವಸೇನೆಯ ಏಕೈಕ ಮುಸ್ಲಿಂ ಶಾಸಕ ಭಿನ್ನಮತದ ಕಿಡಿ ಹೊತ್ತಿಸಿದ್ದಾರೆ. ಒಂದು ಹಂತದಲ್ಲಿ ಅವರು ಶನಿವಾರ ಸಚಿವ ಪದವಿಗೆ ರಾಜೀನಾಮೆ ನೀಡಿದ್ದಾರೆ ಎನ್ನಲಾಗಿತ್ತು. ಆದರೆ ಸಂಜೆ ಅವರು ಈ ಸುದ್ದಿಯನ್ನು ನಿರಾಕರಿಸಿದ್ದಾರೆ. ಹಿಂದಿನ ವಿಧಾನಸಭೆಗೆ ಕಾಂಗ್ರೆಸ್‌ನಿಂದ ಆಯ್ಕೆಯಾಗಿದ್ದ ಸತ್ತಾರ್‌ ಅವರು, ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಸೇರಿದ್ದರು. ಕಳೆದ ವಾರ ಮುಖ್ಯಮಂತ್ರಿ ಅವರು ಸಂಪುಟ ವಿಸ್ತರಣೆ ಮಾಡಿದಾಗ ಸತ್ತಾರ್‌ ಅವರನ್ನು ಸಹಾಯಕ ಸಚಿವರಾಗಿ ಸೇರ್ಪಡೆ ಮಾಡಿಕೊಂಡಿದ್ದರು. ಶಿವಸೇನೆ ಜೊತೆ ಮೈತ್ರಿಗೆ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಮೀನಮೇಷ ಎಣಿಸುತ್ತಿದ್ದಾಗ ಎನ್‌ಸಿಪಿ ವರಿಷ್ಠ ಶರದ್‌ ಪವಾರ್‌ ಅವರು ಸತ್ತಾರ್‌ರನ್ನು ಶಿವಸೇನೆಯು ಸೇರಿಸಿಕೊಂಡಿರುವುದನ್ನು ಉದಾಹರಣೆಯಾಗಿ ನೀಡಿದ್ದರು. ಆ ಮೂಲಕ ಶಿವಸೇನೆ ಉದಾರವಾದಿ ನಿಲುವು ತಾಳುತ್ತಿದೆ ಎಂಬುದನ್ನು ಮನವರಿಕೆ ಮಾಡಿಕೊಟ್ಟಿದ್ದರು. ತಮಗೆ ಸಂಪುಟ ಸಚಿವ ಸ್ಥಾನ ಸಿಗುವುದು ಖಚಿತ ಎಂಬ ನಿರೀಕ್ಷೆಯಲ್ಲಿದ್ದ ಸತ್ತಾರ್‌, ಉದ್ಧವ್‌ ಕ್ರಮದಿಂದ ಹತಾಶೆಗೊಂಡಿದ್ದರು. ಪಕ್ಷದಲ್ಲಿ ತಮಗೆ ಪ್ರಮುಖ ಸ್ಥಾನಮಾನ ನೀಡದೇ ಕಡೆಗಣಿಸಲಾಗುತ್ತಿದೆ ಎಂದು ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದರು.

ಶಿವಸೇನೆ ನಿರಾಕರಣೆ ಸತ್ತಾರ್‌ ರಾಜೀನಾಮೆ ವಿಚಾರವನ್ನು ಶಿವಸೇನೆ ತಳ್ಳಿಹಾಕಿದ್ದು, ಇದು ಕೇವಲ ವದಂತಿ ಎಂದು ಹೇಳಿದೆ. "ಪಕ್ಷದ ಯಾವುದೇ ಸಚಿವರು ರಾಜೀನಾಮೆ ನೀಡಿಲ್ಲ," ಎಂದು ಶಿವಸೇನೆಯ ಹಿರಿಯ ನಾಯಕ ಏಕನಾಥ ಶಿಂಧೆ ಹೇಳಿದ್ದಾರೆ. "ಸಂಪುಟ ರಚನೆ ಅಥವಾ ವಿಸ್ತರಣೆ ವೇಳೆ ಕೆಲವರಿಗೆ ಅಸಮಾಧಾನವಾಗುವುದು ಸಹಜ. ಅಂತಹವರು ಇದು ಶಿವಸೇನೆ ಸರಕಾರವಲ್ಲ, ಮಹಾ ವಿಕಾಸ ಅಘಾಡಿ ಸರಕಾರ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು. ಸತ್ತಾರ್‌ ಅವರು ಬೇರೆ ಪಕ್ಷದಿಂದ ಬಂದಿದ್ದರೂ ತಮಗೆ ಸಚಿವ ಸ್ಥಾನ ನೀಡಲಾಗಿದೆ ಎನ್ನುವುದನ್ನು ಮರೆಯಬಾರದು. ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಅವರು ಸತ್ತಾರ್‌ ಜತೆ ಮಾತನಾಡಿ ಅಸಮಾಧಾನ ಬಗೆಹರಿಸುತ್ತಾರೆ," ಎಂದು ಪಕ್ಷದ ವಕ್ತರ ಸಂಜಯ್‌ ರಾವತ್‌ ತಿಳಿಸಿದ್ದಾರೆ. ಸತ್ತಾರ್‌ ಅವರ ಪುತ್ರ ಸಮೀರ್‌ ಸತ್ತಾರ್‌ ತಂದೆಯ ರಾಜೀನಾಮೆಯನ್ನು ನಿರಾಕರಿಸಲೂ ಇಲ್ಲ, ದೃಢಪಡಿಸಲೂ ಇಲ್ಲ. ಬದಲಿಗೆ, "ಕಾದು ನೋಡುವುದು ಉತ್ತಮ," ಎಂದಷ್ಟೇ ಹೇಳಿದ್ದಾರೆ. ಸಮಯಾವಕಾಶ ಅಗತ್ಯಮಹಾ ವಿಕಾಸ ಅಘಾಡಿ ಸರಕಾರ ಹೊಸ ಖಾತೆಗಳನ್ನು ಸೃಷ್ಟಿಸುತ್ತಿರುವುದರಿಂದ ಸಚಿವರಿಗೆ ಖಾತೆ ಹಂಚಿಕೆ ಪ್ರಕ್ರಿಯೆ ಸ್ವಲ್ಪ ಸಮಯ ತೆಗೆದುಕೊಳ್ಳಲಿದೆ ಎಂದು ಎನ್‌ಸಿಪಿ ವಕ್ತಾರ ನವಾಬ್‌ ಮಲಿಕ್‌ ತಿಳಿಸಿದ್ದಾರೆ. ಶನಿವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ''ಖಾತೆ ಹಂಚಿಕೆ ವಿಚಾರವಾಗಿ ಮಿತ್ರಪಕ್ಷಗಳ ನಡುವೆ ಯಾವುದೇ ಅಸಮಾಧಾನವಿಲ್ಲ. ಮುಖ್ಯಮಂತ್ರಿ ಕಾರ್ಯಾಲಯ, ವಾಣಿಜ್ಯ, ಮೆಟ್ರೊ ಮೊದಲಾದ ಹೊಸ ಖಾತೆಗಳನ್ನು ರಚಿಸಲಾಗುತ್ತಿದೆ. ಬಹುಶಃ ಸೋಮವಾರ ಈ ಪ್ರಕ್ರಿಯೆ ಪೂರ್ಣಗೊಳ್ಳಬಹುದು,'' ಎಂದು ಹೇಳಿದ್ದಾರೆ. ರಾಜೀನಾಮೆ ನೀಡಿಲ್ಲ ಶನಿವಾರ ಸಂಜೆ ವೇಳೆ ಎಎನ್‌ಐ ಸುದ್ದಿ ಸಂಸ್ಥೆ ಜೊತೆ ಮಾತನಾಡಿರುವ ಸತ್ತಾರ್‌, "ನಾನು ರಾಜೀನಾಮೆ ನೀಡಿಲ್ಲ. ಮಾತೋಶ್ರೀಗೆ ತೆರಳಿ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಜೊತೆ ಮಾತನಾಡಲಿದ್ದೇನೆ. ಅದಾದ ನಂತರ ಮುಖ್ಯಮಂತ್ರಿ ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೋ ಅದಕ್ಕೆಲ್ಲಾ ನಾವು ಬದ್ಧರಾಗಿರುತ್ತೇವೆ," ಎಂದಿದ್ದಾರೆ. ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಅವರು ನ. 28ರಂದು ಶಿವಸೇನೆ, ಕಾಂಗ್ರೆಸ್‌, ಎನ್‌ಸಿಪಿಯ ತಲಾ ಇಬ್ಬರು ಸೇರಿದಂತೆ ಆರು ಸಚಿವರೊಂದಿಗೆ ಪ್ರಮಾಣ ವಚನ ಸ್ವೀಕರಿಸಿದ್ದರು. ಡಿ. 30ರಂದು ಮೊದಲ ಸಲ ಸಂಪುಟ ವಿಸ್ತರಣೆ ನಡೆಸಿದ್ದರು. ಇದುವರೆಗೂ ಖಾತೆ ಹಂಚಿಕೆ ಆಗಿಲ್ಲ.


from India & World News in Kannada | VK Polls https://ift.tt/2SUwcb8

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...