ಕೀರ್ತಿ ಶಿಖರದ ಹಾದಿಯಲ್ಲಿ ವಿರಾಟ್ ಕೊಹ್ಲಿ; ಕೋಚ್‌ ರವಿ ಶಾಸ್ತ್ರಿ ಪ್ರಶಂಸೆಯ ಸುರಿಮಳೆ

ಹೊಸದಿಲ್ಲಿ: ಭಾರತ ಕ್ರಿಕೆಟ್‌ ತಂಡದ ಪಾಲಿಗೆ 2019 ಅಕ್ಷಯ ಪಾತ್ರೆಯೇ ಆಗಿಹೋಯಿತು. ವಿರಾಟ್‌ ಕೊಹ್ಲಿ ಪಡೆ ಇದೀಗ 2020ಕ್ಕೆ ಪದಾರ್ಪಣೆಗೈದಿದೆ. ಇದು ಟಿ20 ವಿಶ್ವಕಪ್‌ ವರ್ಷ. ಆದರೆ, ಅದಕ್ಕೂ ಮೊದಲು ಜನವರಿ 24ರಿಂದ ಭಾರತ ತಂಡಕ್ಕೆ ಮೂರೂ ಮಾದರಿಗಳಲ್ಲಿ ನ್ಯೂಜಿಲೆಂಡ್‌ನಲ್ಲಿ ಆತಿಥೇಯ ನ್ಯೂಜಿಲೆಂಡ್‌ ಸವಾಲು ಎದುರಾಗಲಿದೆ. ನಾಯಕ ಕೊಹ್ಲಿ ಮತ್ತು ಮುಖ್ಯ ಕೋಚ್‌ ಅವರ ಮಾರ್ಗದರ್ಶನದಲ್ಲಿ ಟೀಮ್‌ ಇಂಡಿಯಾ ಜಗತ್ತಿನ ಶ್ರೇಷ್ಠ ತಂಡವೆನಿಸಿಕೊಂಡು ಮುನ್ನುಗ್ಗುತ್ತಿದೆ. ಭಾರತ ತಂಡಕ್ಕೆ ದೀರ್ಘ ಮಾದರಿಯ ಟೆಸ್ಟ್‌ ಕ್ರಿಕೆಟ್‌ ಎಂದರೆ ಅಚ್ಚುಮೆಚ್ಚು. ಏನೇ ಆದರೂ, ಈಗಲೂ ಭಾರತೀಯರಿಗೆ ವಿದೇಶಿ ನೆಲದಲ್ಲಿ ಆಡುವುದು ನೈಜ ಅಗ್ನಿಪರೀಕ್ಷೆ ಎನಿಸಿಕೊಳ್ಳುತ್ತದೆ. ಟೀಮ್‌ ಇಂಡಿಯಾದ ಮುಖ್ಯ ಕೋಚ್‌ ರವಿ ಶಾಸ್ತ್ರಿ ಬುಧವಾರ ಸುದ್ದಿ ಸಂಸ್ಥೆಗೆ ನೀಡಿದ ದಶಕದ ಮೊದಲ ಸಂದರ್ಶನದಲ್ಲಿ ದೀರ್ಘ ಮಾದರಿಯೆಡೆಗೆ ನಾಯಕ ಕೊಹ್ಲಿಯ ಒಲವು, ಭಾರತದ ಹಾಲಿ ಬೌಲಿಂಗ್‌ ಪಡೆ ವಿಶ್ವದ ಶ್ರೇಷ್ಠ ಬೌಲಿಂಗ್‌ ಪಡೆ ಎನಿಸಿಕೊಂಡಿದ್ದರ ಬಗೆ ಮುಂತಾದ ವಿಷಯಗಳ ಕುರಿತು ಮನಬಿಚ್ಚಿ ಮಾತನಾಡಿದ್ದಾರೆ. ದಿನೇದಿನೆ ಪಕ್ವಗೊಳ್ಳುತ್ತಿದ್ದಾರೆ ವಿರಾಟ್. ಇಲ್ಲಿಯ ತನಕ ಜಗತ್ತಿನಲ್ಲಿ ನಾನು ಪರಿಪೂರ್ಣ ನಾಯಕನನ್ನು ಕಂಡಿಲ್ಲ. ನಾಯಕನಾದವನಿಗೆ ಅವರದೇ ಆದ ಸಾಮರ್ಥ್ಯ‌ಗಳಿರುತ್ತವೆ. ಅಂತೆಯೇ ದೌರ್ಬಲ್ಯಗಳಿರುತ್ತವೆ. ಇದು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುತ್ತದೆ. ನಾಯಕನ ಸಾಮರ್ಥ್ಯ‌ ಯಾವ ರೀತಿ ಕೆಲಸ ಮಾಡಿತು ಎಂಬುದನ್ನು ದಿನದ ಕೊನೆಯಲ್ಲಿ ಸಿಗುವ ಫಲಿತಾಂಶವೇ ಹೇಳುತ್ತದೆ. ಕೊಹ್ಲಿ ದಿನೇದಿನೆ ಉನ್ನತಿಯತ್ತ ಹೆಜ್ಜೆ ಹಾಕುತ್ತಿದ್ದಾರೆ. ಕ್ರಿಕೆಟಿನೆಡೆಗಿನ ಅವರ ಸೆಳೆತ, ಶಕ್ತಿ, ಅವುಗಳನ್ನು ಅವರು ಬಳಸುವ ಪರಿ ಎಲ್ಲವೂ ಅದ್ವಿತೀಯ. ಟೆಸ್ಟ್‌ ಕ್ರಿಕೆಟೇ ನೈಜ ಸವಾಲು: ಜಗತ್ತಿನಾದ್ಯಂತ ಹೆಚ್ಚಿನೆಲ್ಲ ಕ್ರಿಕೆಟಿಗರು ಸಿರಿವಂತ ಕ್ರಿಕೆಟ್‌ ಲೀಗ್‌ ಗಳಲ್ಲಿ ಆಡಲು ಬಯಸುತ್ತಿರುವಾಗ ವಿರಾಟ್‌ ಕೊಹ್ಲಿ ಮಾತ್ರ ಟೆಸ್ಟ್‌ ಕ್ರಿಕೆಟಿನಲ್ಲಿ ಯಶಸ್ಸು ಗಳಿಸುವುದೇ ನಿಜವಾದ ಸವಾಲು ಎಂದು ಜಗತ್ತಿಗೆ ಪದೇಪದೆ ಸಾರುತ್ತಿದ್ದಾರೆ. ‘‘ಈ ಬಗ್ಗೆ ತಂಡದ ಮುಖ್ಯ ಕೋಚ್‌ ಆಗಿ ನಿಮ್ಮ ಅಭಿಪ್ರಾಯವೇನು? ಕೊಹ್ಲಿ ಮಾತು ಎಳೆಯ ಆಟಗಾರರ ಮೇಲೂ ಪರಿಣಾಮ ಬೀರುವುದೇ,’’ ಎಂದು ಕೇಳಿದ್ದಕ್ಕೆ, ‘‘ತುಂಬಾನೇ ಪರಿಣಾಮ ಬೀರಿದೆ... ಟೆಸ್ಟ್‌ ಕ್ರಿಕೆಟ್‌ ವಿಷಯಕ್ಕೆ ಬಂದರೆ, ಭಾರತ ತಂಡದ ಮೇಲಷ್ಟೇ ಅಲ್ಲ, ಇಡೀ ವಿಶ್ವದ ಮೇಲೆ ಪರಿಣಾಮ ಬೀರಿದೆ,’’ ಎಂದು ಶಾಸ್ತ್ರಿ ಉತ್ತರಿಸಿದ್ದಾರೆ. ಎಲ್ಲದಕ್ಕಿಂತ ಮಿಗಿಲಾಗಿ ಕೊಹ್ಲಿಯಂಥ ಶ್ರೇಷ್ಠ ಆಟಗಾರ ಟೆಸ್ಟ್‌ ಕ್ರಿಕೆಟನ್ನು ಮುಕ್ತವಾಗಿ ಒಪ್ಪಿಕೊಂಡು ನೀಡುವ ಹೇಳಿಕೆ ಮೆಚ್ಚುವಂಥದ್ದು. ಟೆಸ್ಟ್‌ ಕ್ರಿಕೆಟ್‌ ಅವರಿಗೆ ಅತ್ಯಂತ ಪ್ರಿಯವಾದುದು. ಹೀಗಿರುವಾಗ, ಎಳೆಯ ಆಟಗಾರರು, ಅವರು ಭಾರತೀಯರಾಗಿರಲಿ ಬ್ರಿಟಿಷರಾಗಿರಲಿ ಆಸ್ಪ್ರೇಲಿಯಾ, ಪಾಕಿಸ್ತಾನ ಅಥವಾ ಶ್ರೀಲಂಕಾದವರೇ ಆಗಿರಲಿ, ಕೊಹ್ಲಿ ಅವರ ಆಟವನ್ನು ನೋಡುತ್ತಾ ಬೆಳೆದವರು ಖಂಡಿತವಾಗಿಯೂ ಆವರನ್ನು ಅನುಸರಿಸಲು ಬಯಸುತ್ತಾರೆ ಎಂದು ಶಾಸ್ತ್ರಿ ಪ್ರತಿಪಾದಿಸಿದರು. ವೇಗದ ಬೌಲರ್‌ಗಳ ಪ್ರಭಾವ: ದೀರ್ಘ ಮಾದರಿಯಲ್ಲಿ ಅಗ್ರ ತಂಡದಲ್ಲೇ ಸ್ಥಿರವಾಗಿರಬೇಕೆಂಬ ತಮ್ಮ ಕನಸು ನನಸಾಗಲು ಜಸ್ಪ್ರೀತ್ ಬುಮ್ರಾ, ಮೊಹಮ್ಮದ್‌ ಶಮಿ, ಇಶಾಂತ್‌ ಶರ್ಮ ಮತ್ತು ಉಮೇಶ್‌ ಯಾದವ್‌ ಅವರನ್ನೊಳಗೊಂಡ ಬಲಿಷ್ಠ ಬೌಲಿಂಗ್‌ ಪಡೆ ನೆರವಿಗೆ ಬರುತ್ತಿದೆ ಎಂಬ ಸಂಗತಿ ಕೊಹ್ಲಿ ಮತ್ತು ಶಾಸ್ತ್ರಿ ದ್ವಯರಿಗೆ ಗೊತ್ತಿರದ ಸಂಗತಿಯೇನಲ್ಲ. ಇದೀಗ ಮತ್ತೊಮ್ಮೆ ಆತಿಥೇಯ ನ್ಯೂಜಿಲೆಂಡ್‌ ವಿರುದ್ದ ನ್ಯೂಜಿಲೆಂಡ್‌ನಲ್ಲಿ ನಡೆಯಲಿರುವ ಸರಣಿಯಲ್ಲಿ ಅದರಲ್ಲೂ ವಿಶೇಷವಾಗಿ ಟೆಸ್ಟ್‌ ಸರಣಿಯಲ್ಲಿ ಈ ನಾಲ್ವರ ನೆರವು ಟೀಮ್‌ ಇಂಡಿಯಾಗೆ ಬೇಕೇ ಬೇಕು. ನ್ಯೂಜಿಲೆಂಡ್‌ ಪಿಚ್‌ಗಳು ವೇಗದ ಬೌಲಿಂಗ್‌ಗೆ ನೆರವು ನೀಡುವ ಪಿಚ್‌ಗಳು. ಹಾಗಾದರೆ ಈ ಬೌಲರ್‌ಗಳ ದಂಡು ಟೀಮ್‌ ಇಂಡಿಯಾವನ್ನು ಅಗ್ರ ಪಟ್ಟದತ್ತ ಕೊಂಡೊಯ್ಯಬಹುದು ಎಂದು ಶಾಸ್ತ್ರಿಗೆ ಮನವರಿಕೆಯಾಗಿದ್ದು ಯಾವಾಗ? ಎಂಬ ಪ್ರಶ್ನೆಗೆ ಶಾಸ್ತ್ರಿ ಬಳಿ ಉತ್ತರ ಸಿದ್ಧವಿತ್ತು. ‘‘ಖಂಡಿತವಾಗಿಯೂ. ಆ ಬಗ್ಗೆ ಅನುಮಾನವೇ ಇಲ್ಲ. ಈ ಹಿಂದೆ ಕೇಪ್‌ ಟೌನ್‌ (ದ.ಆಫ್ರಿಕಾ)ನಲ್ಲಿ ನಡೆದ ಮೊದಲ ಟೆಸ್ಟ್‌ನ ಮೊದಲ ದಿನದಾಟದ ಬಳಿಕ ನಾವು ತಂಡದ ಸಭೆ ನಡೆಸಿದ್ದಾಗಲೇ ಸ್ಪಷ್ಟ ಚಿತ್ರಣ ದೊರಕಿತ್ತು. 2ನೇ ಇನಿಂಗ್ಸ್‌ನಲ್ಲಿ ಅದು ಸಾಬೀತಾಯಿತು. ಮುಂದೊಂದು ದಿನ ಸರಿಸಾಟಿಯಿಲ್ಲದ ಬೌಲಿಂಗ್‌ ಪಡೆಯಾಗಿ ರೂಪುಗೊಳ್ಳಲಿದೆ ಎಂಬುದು ಅಂದೇ ಮನವರಿಕೆಯಾಯಿತು. ಸಾಂಘಿಕ ಶಕ್ತಿಯಾಗಿ ಅವರು ರೂಪುಗೊಂಡಿದ್ದಾರೆ. ಇತ್ತೀಚಿನ ಪಂದ್ಯಗಳನ್ನು ನೋಡಿದರೆ ಅದು ನಿಮಗೇ ಅರಿವಾಗುತ್ತದೆ,’’.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/35fdCgx

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...