ಹೊಸದಿಲ್ಲಿ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಧ್ಯಕ್ಷ ಸೌರವ್ ಗಂಗೂಲಿ, ಬಾಲಿವುಡ್ ಹಾಡಿಗೆ ಹೆಜ್ಜೆ ಹಾಕುವ ಮೂಲಕ ಗಮನ ಸೆಳೆದಿದ್ದಾರೆ. ಖಾಸಗಿ ಟೆಲಿವಿಷನ್ ಕಾರ್ಯಕ್ರಮವೊಂದರಲ್ಲಿ ಮಾಜಿ ಸಹ ಆಟಗಾರ ಆಫ್ ಸ್ಪಿನ್ನರ್ ಜೊತೆಗೆ ಡ್ಯಾನ್ಸ್ ಮಾಡುವ ಮೂಲಕ ನೆರೆದಿದ್ದವರನ್ನು ರಂಜಿಸಿದರು. ಖ್ಯಾತ ಗಾಯಕಿ ಉಷಾ ಉತುಪ್ 'ಸೆನೊರಿಟಾ' ಎಂಬ ಬಾಲಿವುಡ್ ಹಾಡನ್ನು ಹಾಡುತ್ತಿದ್ದಂತೆಯೇ ಹರ್ಭಜನ್ ಸಿಂಗ್ ಹಾಗೂ ಸೌರವ್ ಗಂಗೂಲಿ ಡ್ಯುಯೆಟ್ ಹೆಜ್ಜೆ ಹಾಕಿದರು. ಈ ವೇಳೆಯಲ್ಲಿ ಭಾರತದ ಮಾಜಿ ದಿಗ್ಗಜರಾದ ಜಹೀರ್ ಖಾನ್, ವೀರೇಂದ್ರ ಸೆಹ್ವಾಗ್, ವಿವಿಎಸ್ ಲಕ್ಷ್ಮಣ್ ಹಾಗೂ ಮೊಹಮ್ಮದ್ ಕೈಫ್ ಉಪಸ್ಥಿತರಿದ್ದರು. 2000ನೇ ಇಸವಿಯಲ್ಲಿ ಮ್ಯಾಚ್ ಫಿಕ್ಸಿಂಗ್ ಕರಾಳ ಸಮಯದಲ್ಲಿ ಟೀಮ್ ಇಂಡಿಯಾ ನಾಯಕತ್ವ ವಹಿಸಿದ ಸೌರವ್ ಗಂಗೂಲಿ, ಭಾರತೀಯ ಕ್ರಿಕೆಟ್ ಪಾಲಿಗೆ ನೈಜ ಹೀರೊ ಎನಿಸಿದರು. ಜಹೀರ್, ಸೆಹ್ವಾಗ್, ಲಕ್ಷ್ಮಣ್, ಹರ್ಭಜನ್ ಹಾಗೂ ಕೈಫ್ ಮುಂತಾದ ಕ್ರಿಕೆಟಿಗರ ಯಶಸ್ಸಿನಲ್ಲಿ ಅಮೂಲ್ಯ ಪಾತ್ರ ವಹಿಸಿದ್ದರು. ಇದೀಗ ಬಿಸಿಸಿಐ ಅಧ್ಯಕ್ಷ ಗಾದಿಗೇರುವ ಮೂಲಕ ಸೌರವ್ ಗಂಗೂಲಿ ದ್ವಿತೀಯ ಇನ್ನಿಂಗ್ಸ್ ಆರಂಭಿಸಿದ್ದಾರೆ. ಇನ್ನೊಂದೆಡೆ ಟೀಮ್ ಇಂಡಿಯಾದಿಂದ ಕಳೆದ ಅನೇಕ ವರ್ಷಗಳಿಂದ ಹೊರಗುಳಿದಿರುವ ಹರ್ಭಜನ್ ಸಿಂಗ್ ಇನ್ನಷ್ಟೇ ನಿವೃತ್ತಿ ಸಲ್ಲಿಸಬೇಕಿದೆ. ಈ ಮಧ್ಯೆ ಬಿಸಿಸಿಐ ಅಧ್ಯಕ್ಷ ಪದವಿ ಹಾಗೂ ತಮ್ಮ ಆಡುವ ಕಾಲಘಟ್ಟವನ್ನು ಹೋಲಿಕೆ ಮಾಡಿರುವ ಗಂಗೂಲಿ, ಬಿಸಿಸಿಐ ಅಧ್ಯಕ್ಷ ಪದವಿಗಿಂತಲೂ ಒತ್ತಡದಲ್ಲಿ ಆಡುವುದು ತುಂಬಾನೇ ಕಠಿಣ ಎಂದಿದ್ದಾರೆ. "ಬ್ಯಾಟಿಂಗ್ ಮಾಡುವಾಗ ಒಂದು ಒಂದು ಅವಕಾಶವಿರುತ್ತದೆ. ಹಾಗಾಗಿ ಒತ್ತಡದಲ್ಲಿ ಆಡುವುದು ಅತ್ಯಂತ ಕಠಿಣವೆನಿಸುತ್ತದೆ. ಈಗ ಬಿಸಿಸಿಐ ಅಧ್ಯಕ್ಷರಾಗಿ ತಪ್ಪು ಎಸಗಿದರೂ ತಿದ್ದಿಕೊಳ್ಳಬಹುದಾಗಿದೆ. ಆದರೆ ಮೆಕ್ಗ್ರಾಥ್ ದಾಳಿಯಲ್ಲಿ ಚೆಂಡನ್ನು ಬ್ಯಾಟ್ ಸವರಿದರೆ..!" ಎಂದು ವಿವರಿಸಿದರು. ಮಾಜಿ ಬ್ಯಾಟಿಂಗ್ ದಿಗ್ಗಜ ಸುನಿಲ್ ಗವಾಸ್ಕರ್ ಕೂಡಾ ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. "ಹೌದು, ನಾನು ಕೂಡಾ 2014ರಲ್ಲಿ ಒಂದೆರಡು ತಿಂಗಳುಗಳ ಕಾಲ ಬಿಸಿಸಿಐ ಅಧ್ಯಕ್ಷ ಪದವಿಯನ್ನು ವಹಿಸಿರುತ್ತೇನೆ. ಮೈದಾನಕ್ಕಿಳಿದು ಆಡುವುದನ್ನು ಹೋಲಿಸಿದರೆ ಬಿಸಿಸಿಐ ಅಧ್ಯಕ್ಷ ಪದವಿ ತುಂಬಾನೇ ಸುಲಭ" ಎಂದರು. ಹಿಂದಿನ ಹಾಗೂ ಸಮಕಾಲೀನ ಕ್ರಿಕೆಟ್ ಹೋಲಿಸಿದ ಗವಾಸ್ಕರ್, ನಾವು ಆಡುವ ಕಾಲಘಟ್ಟಕ್ಕಿಂತಲೂ ಈಗಿನ ಆಟಗಾರರು ಹೆಚ್ಚು ಫಿಟ್ ಆಗಿದ್ದಾರೆ. ದೈಹಿಕವಾಗಿ ಸದೃಢವಾಗಿದ್ದಾರೆ. ಇದು ದೊಡ್ಡ ವ್ಯತ್ಯಾಸಕ್ಕೆ ಕಾರಣವಾಗಿದೆ ಎಂದರು.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2Nj6iub