ಬಾದಾಮಿ: 'ಪರಿಹಾರ ಯಾರು ಕೊಡಬೇಕು' ಎಂಬ ವಿಚಾರವಾಗಿ ಬಾದಾಮಿಯಲ್ಲಿ ಸಂತ್ರಸ್ಥರಿಗೆ ಮಾಜಿ ಸಿಎಂ ಸಂತ್ರಸ್ತರಿಗೆ ಪಾಠ ಹೇಳಿದ ಘಟನೆ ಬಾದಾಮಿಯಲ್ಲಿ ನಡೆದಿದೆ. ಪರಿಹಾರವನ್ನು ತಹಶೀಲ್ದಾರ್ ಕೊಡಬೇಕು ಎಂದ ಸಂತ್ರಸ್ತರನ್ನು ತರಾಟೆಗೆ ತೆಗೆದುಕೊಂಡ ಸಿದ್ದರಾಮಯ್ಯ, 'ಪರಿಹಾರವನ್ನು ಸಿಎಂ ಯಡಿಯೂರಪ್ಪ ಕೊಡಬೇಕು. ಯಡಿಯೂರಪ್ಪ ಅವರೇ ಕೊಡದಿದ್ದರೆ ತಹಶೀಲ್ದಾರ್ ಎಲ್ಲಿಂದ ನಿಮಗೆ ಪರಿಹಾರ ಕೊಡುತ್ತಾರೆ?' ಎಂದು ಪ್ರಶ್ನಿಸಿದ್ದಾರೆ. ಸಿದ್ದರಾಮಯ್ಯ ಅವರು ಸ್ವಕ್ಷೇತ್ರ ಬಾದಾಮಿಯ ಕೃಷ್ಣಾ ಹೆರಿಟೇಜ್ ರೆಸಾರ್ಟ್ನಲ್ಲಿ ಶುಕ್ರವಾರ ನೆರೆ ಸಂತ್ರಸ್ತರ ಅಹವಾಲು ಸ್ವೀಕರಿಸುವ ವೇಳೆ ಮುಖ್ಯಮಂತ್ರಿಗಳ ವಿರುದ್ಧ ಏಕವಚನದಲ್ಲಿ ಹರಿಹಾಯ್ದಿದ್ದಾರೆ. ''ದುಡ್ಡು ಕೊಡೋವ್ರು ಯಾರ್ರೀ?" ಎಂದು ಸಂತ್ರಸ್ತರನ್ನು ಉದ್ದೇಶಿಸಿ ಪ್ರಶ್ನಿಸಿದ ಸಿದ್ದರಾಮಯ್ಯ ಅವರಿಗೆ ಹಾಗನೂರು ಗ್ರಾಮದ ನೆರೆ ಸಂತ್ರಸ್ತ "ತಹಶೀಲ್ದಾರ್ ಕೊಡ್ಬೇಕು ಸರ್'' ಎಂದು ಉತ್ತರಿಸಿದರು. ಇದರಿಂದ ಕೋಪಗೊಂಡ ಸಿದ್ದರಾಮಯ್ಯ, ''ತಹಶೀಲ್ದಾರ್ ಅವರಪ್ಪನ ಮನೆಯಿಂದ ದುಡ್ಡು ಕೊಡ್ಬೇಕಾ? ಯಡಿಯೂರಪ್ಪ ಕೊಡ್ಬೇಕು. ಅವನು (ಯಡಿಯೂರಪ್ಪ) ಕೊಡದೆ ಹೋದ್ರೆ ಇವನು(ತಹಶೀಲ್ದಾರ್) ಎಲ್ಲಿಂದ ಕೊಡ್ತಾನೆ. ಅವನಿಗೆ ಬೈಯಲ್ಲ ನೀವು. ಅನುದಾನ ಕೊಡದ ಯಡಿಯೂರಪ್ಪನಿಗೆ ಬಾಯಿಗೆ ಬಂದಂಗೆ ಬೈಯಬೇಕು ನೀವು'' ಎಂದು ಅಬ್ಬರಿಸಿದರು. ನೆರೆ ನೀರಿಗೆ ದವಸ ಧಾನ್ಯ ಕೊಚ್ಚಿ ಹೋಗಿವೆ. ಈ ಬಗ್ಗೆ ಅಧಿಕಾರಿಗಳು ಬಂದು ಪರಿಶೀಲನೆ ನಡೆಸಿ ಹೋಗಿದ್ದಾರೆ. ಶೀಘ್ರದಲ್ಲೇ ಪರಿಹಾರ ಕೊಡಿಸಿ ಎಂದು ಗ್ರಾಮಸ್ಥರು ಸಿದ್ದರಾಮಯ್ಯ ಅವರಲ್ಲಿ ವಿನಂತಿಸಿಕೊಂಡರು. ನೆರೆ ಸಂತ್ರಸ್ತರು ಹಾಗನೂರು ಗ್ರಾಮದ ಆಶ್ರಯ ಕಾಲೋನಿಯಲ್ಲಿ ಪ್ರವಾಹ ನೀರು ಬಂದು ರಸ್ತೆ ಹಾಳಾಗಿದ್ದರ ಬಗ್ಗೆಯೂ ಮಾಜಿ ಸಿಎಂ ಗಮನ ಸೆಳೆದರು. ಈ ನಡುವೆ ಬಾದಾಮಿ ತಹಶೀಲ್ದಾರ ಎಸ್ ಎಸ್ ಇಂಗಳೆ ಅವರನ್ನು ತರಾಟೆಗೆ ತೆಗೆದುಕೊಂಡ ಸಿದ್ದರಾಮಯ್ಯ, "ಅಂಗಡಿ ಮುಂಗಟ್ಟುಗಳಿಗೆ ಪರಿಹಾರ ಕೊಟ್ರಾ? ಅದು ಆದೇಶ ಬಂದಿಲ್ವಾ? ಕೈಮಗ್ಗಳಿಗೆ ಮಾತ್ರ ಕೊಟ್ಟಿದ್ದೀರಿ ಯಾಕೆ? ನಿನಗೆ ಕಷ್ಟ ಏನಪ್ಪಾ?" ಎಂದು ಪ್ರಶ್ನಿಸಿದರು. ಹಾಗನೂರ ಗ್ರಾಮದ ಆಶ್ರಯ ಕಾಲೋನಿಯಲ್ಲಿ ನಷ್ಟದ ಬಗ್ಗೆ ಸಿದ್ದರಾಮಯ್ಯ ವಿಚಾರಿಸಿದಾಗ "ಒಡ್ಡು ಒಡೆದು ನೀರು ಹೋಗಿತ್ತು" ಎಂದು ತಹಶೀಲ್ದಾರ್ ವಿವರಣೆ ನೀಡಿದ್ದಾರೆ.
from India & World News in Kannada | VK Polls https://ift.tt/2FApOhp