ಗುವಾಹಟಿ: ಸತತ ಗಾಯದ ಸಮಸ್ಯೆಗಳ ಬಳಿಕ ಟೀಮ್ ಇಂಡಿಯಾಗೆ ಕಮ್ಬ್ಯಾಕ್ ಮಾಡಿರುವ ಎಡಗೈ ಆರಂಭಿಕ ಬ್ಯಾಟ್ಸ್ಮನ್ ಶಿಖರ್ ಧವನ್ಗೆ ಇದೀಗ ತಮ್ಮ ಸ್ಥಾನ ಭದ್ರ ಪಡಿಸಿಕೊಳ್ಳುವ ಸವಾಲು ಎದುರಾಗಿದೆ. ಭಾರತ ತಂಡ ಈ ವರ್ಷ ತನ್ನ ಮೊದಲ ಅಭಿಯಾನವಾಗಿ ಪ್ರವಾಸಿ ಶ್ರೀಲಂಕಾ ಎದುರು ಮೂರು ಪಂದ್ಯಗಳ ಅಂತಾರಾಷ್ಟ್ರೀಯ ಟಿ20 ಸರಣಿಯನ್ನಾಡಲಿದೆ. ಜ.5ರಂದು ಗುವಾಹಟಿಯ ಬರ್ಸಾಪರ ಕ್ರೀಡಾಂಗಣದಲ್ಲಿ ನಡೆಯಬೇಕಿದ್ದ ಮೊದಲ ಟಿ20 ಹಣಾಹಣಿ ಮಳೆ ಮತ್ತು ಒದ್ದೆಯಾದ ಪಿಚ್ ಕಾರಣ ಕೇವಲ ಟಾಸ್ಗಷ್ಟೇ ಸೀಮಿತವಾಯಿತು. ಇನ್ನು ಭಾರತ ತಂಡದ ಮೊದಲ ಆಯ್ಕೆಯ ಓಪನ್ ರೋಹಿತ್ ಶರ್ಮಾ ಅವರಿಗೆ ಶ್ರೀಲಂಕಾ ವಿರುದ್ಧದ ಸರಣಿಯಿಂದ ವಿಶ್ರಾಂತಿ ನೀಡಲಾಗಿದ್ದು, ಜೊತೆಗೆ ಇನಿಂಗ್ಸ್ ಆರಂಭಿಸಲಿದ್ದಾರೆ. ಹೀಗಾಗಿ ರೋಹಿತ್ ಜೊತೆಗೆ ಇನಿಂಗ್ಸ್ ಆರಂಭಿಸುವ ಮತ್ತೊಬ್ಬ ಓಪನರ್ ಸ್ಥಾನಕ್ಕೆ ರಾಹುಲ್ ಮತ್ತು ಧವನ್ ನಡುವೆ ಭಾರಿ ಪೈಪೋಟಿ ಏರ್ಪಟ್ಟಿದೆ. ಆದರೆ, ಟಿ20 ಕ್ರಿಕೆಟ್ನಲ್ಲಿ ಶಿಖರ್ ಧವನ್ ಪ್ರದರ್ಶನ ಅಷ್ಟು ಹೇಳಿಕೊಳ್ಳುವಂತಿಲ್ಲ. ಏಕೆಂದರೆ ಕಳೆದ 12 ಇನಿಂಗ್ಸ್ಗಳಲ್ಲಿ 110.56ರ ಸ್ಟ್ರೈಕ್ರೇಟ್ನಲ್ಲಿ 272 ರನ್ಗಳನ್ನು ಮಾತ್ರ ಗಳಿಸಿದ್ದಾರೆ. ಇದೀಗ ಮುಂಬರುವ ಸರಣಿಗಳಲ್ಲಿ ದಿಟ್ಟ ಪ್ರದರ್ಶನ ನೀಡಿ ತಮ್ಮ ಸ್ಥಾನ ಭದ್ರ ಪಡಿಸಿಕೊಳ್ಳುವತ್ತ 'ಗಬ್ಬರ್' ಖ್ಯಾತಿಯ ಆಟಗಾರ ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಇದೇ ವರ್ಷ ನಡೆಯಲಿರುವ ಟೂರ್ನಿಯಲ್ಲಿ ಭಾರತಕ್ಕೆ ಪ್ರಶಸ್ತಿ ಗೆದ್ದು ಕೊಡುವುದು ತಮ್ಮ ಗುರಿ ಎಂದು ಹೇಳಿದ್ದಾರೆ. "ಕಳೆದ ವರ್ಷ ಹಲವು ಗಾಯದ ಸಮಸ್ಯೆಗಳನ್ನು ಎದುರಿಸಿದ್ದೇನೆ. ಇವೆಲ್ಲವೂ ಆಟದ ಒಂದು ಭಾಗ. ಆದರೆ ಇದು ಹೊಸ ವರ್ಷ. ಹೊಸ ಆರಂಭ ಪಡೆಯುವುದನ್ನು ಎದುರು ನೋಡುತ್ತಿದ್ದೇನೆ. ನನ್ನ ತಂಡಕ್ಕೆ ಪಂದ್ಯಗಳನ್ನು ಗೆದ್ದುಕೊಟ್ಟು ವಿಶ್ವಕಪ್ ಗೆಲ್ಲುವ ಕಡೆಗೆ ಪರಿಣಾಮಕಾರಿ ಆಟಗಾರನಾಗಲು ಶ್ರಮಿಸುತ್ತಿದ್ದೇನೆ," ಎಂದಿದ್ದಾರೆ. 34 ವರ್ಷದ ಅನುಭವಿ ಎಡಗೈ ಬ್ಯಾಟ್ಸ್ಮನ್ ಧವನ್ ಅನುಪಸ್ಥಿತಿಯಲ್ಲಿ ಭಾರತ ತಂಡಕ್ಕೆ ಇನಿಂಗ್ಸ್ ಆರಂಭಿಸುವ ಅವಕಾಶ ಪಡೆದುಕೊಂಡ ಕೆಎಲ್ ರಾಹುಲ್, ಅದರ ಸದ್ಬಳಕೆ ಮಾಡಿಕೊಳ್ಳುವ ಮೂಲಕ 9 ಇನಿಂಗ್ಸ್ಗಳಲ್ಲಿ 145+ ಸ್ಟ್ರೈಕ್ರೇಟ್ನಲ್ಲಿ 350+ ರನ್ಗಳನ್ನು ಬಾರಿಸಿದ್ದಾರೆ. ಈಗಾಗಲೇ ಮಾಜಿ ಕ್ರಿಕೆಟಿಗರಾದ ಕೃಷ್ಣಮಚಾರಿ ಶ್ರೀಕಾಂತ್ ಮತ್ತು ಗೌತಮ್ ಗಂಭೀರ್ ಆರಂಭಕಾರನಾಗಿ ಧವನ್ ಬದಲಿಗೆ ರಾಹುಲ್ ಅವರನ್ನು ಮೊದಲ ಆಯ್ಕೆಯಾಗಿ ಪರಿಗಣಿಸಬೇಕು ಎಂದು ಅಭಿಪ್ರಾಯ ಪಟ್ಟಿದ್ದಾರೆ. ಭಾರತ ಮತ್ತು ಶ್ರೀಲಂಕಾ ನಡುವಣ 2ನೇ ಟಿ20-ಐ ಪಂದ್ಯ ಇಂದೋರ್ನ ಹೋಳ್ಕರ್ ಕ್ರೀಡಾಂಗಣದಲ್ಲಿ ಜ.7ರಂದು ನಡೆಯಲಿದೆ.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2Qq2gC5