ಬೆಂಗಳೂರು: ಹತ್ತಕ್ಕಿಂತ ಕಡಿಮೆ ಮಕ್ಕಳಿರುವ ಕನ್ನಡ ಮಾಧ್ಯಮ ಶಾಲೆಗಳನ್ನು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕರ್ನಾಟಕ ಪಬ್ಲಿಕ್ ಶಾಲೆಗೆ ವರ್ಗಾಯಿಸುವುದು ಸೂಕ್ತ ಎಂದು ರಾಜ್ಯ ಯೋಜನಾ ಮಂಡಳಿ ಸರಕಾರಕ್ಕೆ ಶಿಫಾರಸು ಮಾಡಿದೆ. ಆದರೆ ಮಂಡಳಿಯ ಈ ಸಲಹೆಯಿಂದ ಕಡಿಮೆ ಮಕ್ಕಳಿರುವ ಶಾಲೆಗಳನ್ನು ಮುಚ್ಚುವುದಕ್ಕೆ ಪರೋಕ್ಷವಾಗಿ ದಾರಿ ಮಾಡಿಕೊಟ್ಟಂತಾಗುತ್ತದೆ ಎಂಬ ಆತಂಕ ವ್ಯಕ್ತವಾಗಿದೆ. ಬಜೆಟ್ ಹಿನ್ನೆಲೆಯಲ್ಲಿ ಮಂಡಳಿಯಿಂದ ಸರಕಾರಕ್ಕೆ ಮಾಡಿರುವ ಶಿಫಾರಸುಗಳು ಹಾಗೂ ಸುಸ್ಥಿರ ಅಭಿವೃದ್ಧಿ ಗುರಿಯಲ್ಲಿರಾಜ್ಯ ಸರಕಾರದ ಸಾಧನೆಗಳ ಬಗ್ಗೆ ಮಾಹಿತಿ ನೀಡಲು ಕರೆದ ಪತ್ರಿಕಾಗೋಷ್ಠಿಯಲ್ಲಿ ಯೋಜನಾ ಮಂಡಳಿ ಉಪಾಧ್ಯಕ್ಷ ಬಿ.ಜೆ.ಪುಟ್ಟಸ್ವಾಮಿ ಈ ಪ್ರಸ್ತಾಪದ ಸುಳಿವು ನೀಡಿದ್ದಾರೆ. ಶಿಕ್ಷಣ ಗುಣಮಟ್ಟದ ಅಭಿವೃದ್ಧಿಗಾಗಿ ಮಂಡಳಿಯಿಂದ 13 ಸಲಹೆ ನೀಡಲಾಗಿದೆ. 10ಕ್ಕಿಂತ ಕಡಿಮೆ ಮಕ್ಕಳು ಇರುವಂಥ ಶಾಲೆಗಳನ್ನು ಗ್ರಾಮ ಪಂಚಾಯಿತ್ನ ಕರ್ನಾಟಕ ಪಬ್ಲಿಕ್ ಶಾಲೆಗೆ ವರ್ಗಾಯಿಸಬೇಕು. ಬೇರೆ ಬೇರೆ ಶಾಲೆಗಳಲ್ಲಿಇರುವ ಮಕ್ಕಳನ್ನು ಸರಕಾರಿ ಖರ್ಚಿನಲ್ಲೇ ಕರೆತರುವುದಕ್ಕೆ ವ್ಯವಸ್ಥೆ ಕಲ್ಪಿಸಬೇಕು. ಇದರಿಂದ ಕಡಿಮೆ ಮಕ್ಕಳಿರುವ ಶಾಲೆಯಲ್ಲಿಒಬ್ಬರೇ ಶಿಕ್ಷಕರು ಎಲ್ಲವಿಷಯ ಪಾಠ ಮಾಡುವುದು ತಪ್ಪುತ್ತದೆ. ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಲಭಿಸುತ್ತದೆ ಎಂದು ಹೇಳಿದರು. ಇದರಿಂದ ಪರೋಕ್ಷವಾಗಿ ಶಾಲೆ ಮುಚ್ಚುವುದಕ್ಕೆ ದಾರಿಯಾಗುವುದಿಲ್ಲವೇ ? ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಒಬ್ಬರೇ ಶಿಕ್ಷಕರು ಇರುವ ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣ ಸಾಧ್ಯವೇ ಎಂದು ಮರು ಪ್ರಶ್ನೆ ಹಾಕಿದರು. ಬಡವರ ಬಂಧು ಬದಲಾವಣೆ ಕುಮಾರಸ್ವಾಮಿ ಸರಕಾರದ ಅವಧಿಯಲ್ಲಿ ಜಾರಿಗೆ ತಂದಿದ್ದ ಬಡವರ ಬಂಧು ಯೋಜನೆ ಅನುಷ್ಠಾನದಲ್ಲೂ ತುಸು ಬದಲಾವಣೆ ಮಾಡುವಂತೆ ಶಿಫಾರಸು ಮಾಡಲಾಗಿದೆ. ಸಾಲವನ್ನು ಪ್ರತಿ ದಿನ ಹಿಂತಿರುಗಿಸುವ ನಿಯಮ ಈಗಿದೆ. ಆದರೆ, ಈ ಅವಧಿಯನ್ನು 3 ತಿಂಗಳಿಗೆ ವಿಸ್ತರಿಸಬೇಕು. ಸಮರ್ಪಕವಾಗಿ ಸಾಲ ಕಟ್ಟುವವರಿಗೆ ಕೊಡುವ ಸಾಲದ ಪ್ರಮಾಣ ಹೆಚ್ಚಿಸಬೇಕು. ಈ ಯೋಜನೆಗೆ ಮೀಸಲಿಟ್ಟಿರುವ 8 ಕೋಟಿ ರೂ. ಹಣವನ್ನು ಇನ್ನೂ ಜಾಸ್ತಿ ಮಾಡಬೇಕು. ಜತೆಗೆ ನಗರ, ಪಟ್ಟಣ, ಪಂಚಾಯಿತಿ ವ್ಯಾಪ್ತಿಯಲ್ಲಿ ಇರುವ ಬೀದಿ ಬದಿ ವ್ಯಾಪಾರಿಗಳ ಸಂಖ್ಯೆಯನ್ನು ಪ್ರತ್ಯೇಕವಾಗಿ ಪಟ್ಟಿ ಮಾಡುವಂತೆ ಸಲಹೆ ನೀಡಲಾಗಿದೆ ಎಂದರು. ಸುಸ್ಥಿರ ಅಭಿವೃದ್ಧಿ 6ನೇ ಸ್ಥಾನ ವಿಶ್ವಸಂಸ್ಥೆಯ ಸೂಚನೆ ಮೇರೆಗೆ ಸಿದ್ದಪಡಿಸಿರುವ ಸುಸ್ಥಿರ ಅಭಿವೃದ್ಧಿ ಗುರಿ (ಎಸ್ಡಿಜಿ ) ಸಾಧನೆಯಲ್ಲಿಕರ್ನಾಟಕ 6ನೇ ಸ್ಥಾನದಲ್ಲಿದೆ. ಹಲವು ವಿಚಾರಗಳಲ್ಲಿನಾವು ಪ್ರಗತಿ ಸಾಧಿಸಿದ್ದು, ಮುಂಬರುವ ದಿನಗಳಲ್ಲಿಎರಡು ಅಥವಾ ಮೂರನೇ ಸ್ಥಾನ ಗಳಿಸುವುದಕ್ಕೆ ಶ್ರಮ ಪಡುತ್ತೇವೆ. ಸಿಎಂ ಯಡಿಯೂರಪ್ಪ ಕಾಲಾವಧಿಯಲ್ಲಿರಾಜ್ಯ ಸರ್ವತೋಮುಖ ಅಭಿವೃದ್ಧಿ ಕಾಣುತ್ತದೆ ಎಂದು ಹೇಳಿದರು. ಅಕ್ಕಿ ಕೊಟ್ಟರೂ ಹಸಿವು ಕಡಿಮೆಯಾಗಿಲ್ಲ ಪುಕ್ಕಟೆ ಅಕ್ಕಿ ಕೊಟ್ಟರೂ ಹಸಿವು ನಿವಾರಣೆ ವಿಚಾರದಲ್ಲಿಕರ್ನಾಟಕ 17ನೇ ಸ್ಥಾನದಲ್ಲಿದೆ ಎಂದು ಹೇಳುವ ಮೂಲಕ ಸಿದ್ದರಾಮಯ್ಯ ಸರಕಾರದ ಅನ್ನಭಾಗ್ಯ ಯೋಜನೆ ಬಗ್ಗೆ ಯೋಜನಾ ಮಂಡಳಿ ಉಪಾಧ್ಯಕ್ಷ ಬಿ.ಜೆ.ಪುಟ್ಟಸ್ವಾಮಿ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 2018-19ರಲ್ಲಿಹಸಿವು ನಿವಾರಣೆಯಲ್ಲಿಕರ್ನಾಟಕ 13ನೇ ಸ್ಥಾನದಲ್ಲಿತ್ತು 2019-20ರಲ್ಲಿ 17ನೇ ಸ್ಥಾನಕ್ಕೆ ಏರಿದೆ. ಪುಕ್ಕಟೆ ಅಕ್ಕಿ ಕೊಟ್ಟರೂ ಈ ಪ್ರಮಾಣ ಶೇ.3ರಷ್ಟು ಹೆಚ್ಚಿದೆ. ಬಡತನ ಪ್ರಮಾಣ ಕಡಿಮೆಯಾಗಿದ್ದು, 19ರಿಂದ 16ನೇ ಸ್ಥಾನಕ್ಕೆ ರಾಜ್ಯ ಬಂದಿದೆ. ಸುಸ್ಥಿರ ಅಭಿವೃದ್ಧಿ ಗುರಿ ಸಾಧನೆಯಲ್ಲಿಮುಂಚೂಣಿಯಲ್ಲಿರುವ ಗುಜರಾತ್ ಹಾಗೂ ದಿಲ್ಲಿಗೆ ಇದೇ ತಿಂಗಳು ಭೇಟಿ ನೀಡಿ ಅಲ್ಲಿನ ಅಧಿಕಾರಿಗಳ ಜತೆಗೆ ಚರ್ಚೆ ನಡೆಸಲಾಗುವುದು ಎಂದು ಹೇಳಿದರು.
from India & World News in Kannada | VK Polls https://ift.tt/2tNNIDs