ಬೆಂಗಳೂರು: ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮಮದ್ ಜಾರಿ ನಿರ್ದೇಶನಾಲಯದ (ಇ.ಡಿ) ವಿಚಾರಣೆ ಎದುರಿಸಬೇಕಾಗಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಹಿರಿಯ ಮುಖಂಡ, ಹಿರಿಯ ವಕೀಲ ಕಪಿಲ್ ಸಿಬಲ್ ಅವರಿಂದ ಕಾನೂನು ಸಲಹೆ ಪಡೆಯಲು ಶನಿವಾರ ದಿಲ್ಲಿಗೆ ತೆರಳಿದ್ದಾರೆ. ದಿಲ್ಲಿಗೆ ತೆರಳುವುದಕ್ಕೂ ಮುಂಚೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರನ್ನು ಶುಕ್ರವಾರ ರಾತ್ರಿ ಭೇಟಿ ಮಾಡಿ ಚರ್ಚೆ ನಡೆಸಿದ್ದರು. ವೈಯಕ್ತಿಕ ಕೆಲಸಕ್ಕೆ ತೆರಳುತ್ತಿರುವುದಾಗಿ ಮಾಧ್ಯಮಕ್ಕೆ ಜಮೀರ್ ತಿಳಿಸಿದ್ದಾರೆ. ಆದರೆ, ಇ.ಡಿ ಶೋಧ ಕಾರ್ಯ, ಪಡೆದ ದಾಖಲೆಗಳು, ಕೇಳಿದ ಪ್ರಶ್ನೆಗಳ ಬಗ್ಗೆ ಭಾನುವಾರ ಅಥವಾ ಸೋಮವಾರ ಕಪಿಲ್ ಸಿಬಲ್ ಜತೆ ವಿವರ ಚರ್ಚೆ ನಡೆಸಿ ಮುಂದಿನ ಕಾನೂನು ನಡೆ ಇಡಲಿದ್ದಾರೆ ಎಂದು ತಿಳಿದುಬಂದಿದೆ. ಡಿ.ಕೆ ಶಿವಕುಮಾರ್ ಕೂಡ ಈ ಹಿಂದೆ ಹಿರಿಯ ವಕೀಲ ಕಪಿಲ್ ಸಿಬಲ್ ಅವರಿಂದ ಕಾನೂನು ಸಲಹೆ ಪಡೆದುಕೊಂಡಿದ್ದರು. ಕಂಟೋನ್ಮೆಂಟ್ ಸಮೀಪದ ಬಂಬೂ ಬಜಾರ್ ಪ್ರದೇಶದಲ್ಲಿ ಜಮೀರ್ ನಿರ್ಮಿಸಿರುವ ಐಷಾರಾಮಿ ಮನೆ ನಿರ್ಮಾಣಕ್ಕೆ ಹಣಕಾಸಿನ ಹೂಡಿಕೆ ಮೂಲವನ್ನು ಬೆನ್ನತ್ತಿರುವ ಇ.ಡಿ, ಇದೇ ವಿಚಾರಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ಸದ್ಯದಲ್ಲಿಯೇ ನೋಟಿಸ್ ನೀಡುವ ಸಂಭವ ಇದೆ. ದಾಳಿ ವೇಳೆ ಭವ್ಯ ಬಂಗಲೆಯ ಒಳಾಂಗಣ ಮತ್ತು ಹೊರಾಂಗಣ ಚಿತ್ರೀಕರಿಸಿದ್ದ ಇ.ಡಿ ಹಣಕಾಸಿನ ಮೂಲವನ್ನು ಪ್ರಶ್ನಿಸಿತ್ತು. ಹಣಕಾಸಿನ ಸಂಪನ್ಮೂಲ?: ಮನೆ ನಿರ್ಮಾಣಕ್ಕೆ ಐಎಂಎ ಮೂಲದಿಂದ ಹಣಕಾಸಿನ ವ್ಯವಹಾರ ಜರುಗಿದೆಯೇ ಎಂಬುದನ್ನು ಇ.ಡಿ ಶಂಕಿಸಿದೆ. ಈ ವಿಚಾರವಾಗಿಯೇ ಇ.ಡಿ ಪ್ರಮುಖವಾಗಿ ತನಿಖೆ ನಡೆಸುತ್ತಿದೆ. ನಿರ್ಮಾಣಕ್ಕೆ ಖರ್ಚಿನ ಮೂಲ, ಇಂಟೀರಿಯರ್ ಡೆಕೋರೇಟ್ ಮಾಡಲು ಬಳಸಿರುವ ಅಮೂಲ್ಯ ವಸ್ತು, ಹಣ ಹಾಗೂ ಚಿನ್ನಾಭರಣಗಳ ಶೋಧ ನಡೆಸಿತ್ತು. ಬ್ಯಾಂಕ್ ಖಾತೆ ವಿವರ ಸೇರಿ ಪ್ರಮುಖ ದಾಖಲೆ ಪಡೆದಿತ್ತು. ಕಿರುಕುಳ ನೀಡುವ ಉದ್ದೇಶದ ದಾಳಿಗೆ ಹೆದರುವುದಿಲ್ಲ: ನನ್ನ ಆಸ್ತಿಯೆಂದರೆ ನನ್ನ ಜನ. ನನ್ನ ಜನ ತಲೆ ತಗ್ಗಿಸುವಂಥ ಯಾವ ಕೆಲಸವನ್ನು ಮಾಡುವುದಿಲ್ಲ ಎಂದು ಶಾಸಕ ಜಮೀರ್ ಅಹಮದ್ ಖಾನ್ ಹೇಳಿದ್ದಾರೆ. ಈ ಬಗ್ಗೆ 'ಫೇಸ್ಬುಕ್'ನಲ್ಲಿ, ‘ಇ.ಡಿ ದಾಳಿಯಿಂದ ಹಲವರ ಅನುಮಾನ ಪರಿಹಾರವಾದದ್ದೇ ನನಗೆ ಖುಷಿಯ ವಿಚಾರ. ಪ್ರಬಲ ಮುಸ್ಲಿಂ ನಾಯಕರ ಪಟ್ಟಿ ಸಿದ್ಧಪಡಿಸಿಕೊಂಡು ಅವರಿಗೆ ಕಿರುಕುಳ ನೀಡುವ ಪ್ರಯತ್ನ ನಡೆಯುತ್ತಿದೆ’ ಎಂದು ಆರೋಪಿಸಿದ್ದಾರೆ.
from India & World News in Kannada | VK Polls https://ift.tt/2XGrWjT