ಬೆಳಗಾವಿ: ಕಾವೇರಿ ಮತ್ತು ಮಹದಾಯಿ ಕುಡಿಯುವ ನೀರಿನ ಯೋಜನೆಗಳಲ್ಲಿ ರಾಜಕೀಯ ಡ್ರಾಮಾ ನಡೆಸಬಾರದು. ಎರಡೂ ನದಿಗಳ ಯೋಜನೆಗಳ ವಿಷಯದಲ್ಲಿ ಸರಕಾರ ವಿಳಂಬ ನೀತಿ ಅನುಸರಿಸಿದರೆ ರೈತರಿಂದಲೇ ಅಡಿಗಲ್ಲು ಹಾಕಿ ಕಾಮಗಾರಿ ಆರಂಭಿಸುತ್ತೇವೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ ಸರಕಾರಕ್ಕೆ ಎಚ್ಚರಿಕೆ ನೀಡಿದರು. ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೃಷ್ಣಾ ಮೇಲ್ದಂಡೆ ಯೋಜನೆಗೆ ಸಂಬಂದಿಸಿದಂತೆ ಸಕಾಲಕ್ಕೆ ಯೋಜನೆ ಕೈಗೆತ್ತಿಕೊಳ್ಳಲಾಗುವುದು ಎಂದು ಈಗಾಗಲೇ ಸರಕಾರ ಹೇಳಿಕೊಂಡಿದೆಯಾದರೂ ಕೃಷ್ಣಾ ಯೋಜನೆಯ ನ್ಯಾಯಾಧೀಕರಣದ ತೀರ್ಪು ಬಂದು ವರ್ಷಗಳೇ ಉರುಳುತ್ತಿದ್ದರೂ ಸಮರ್ಪಕವಾಗಿ ಕೃಷ್ಣಾ ನೀರನ್ನು ಬಳಕೆ ಮಾಡಿಕೊಳ್ಳಲು ಇಂದಿಗೂ ಸಾಧ್ಯವಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಮಹದಾಯಿ ನದಿ ವಿಚಾರವನ್ನು ರಾಷ್ಟ್ರೀಯ ಸಮಸ್ಯೆಯಾಗಿ ಮಾರ್ಪಾಡು ಮಾಡಿದ್ದಾರೆ. ಆದ್ದರಿಂದ ಗೋವಾದವರು ಈಗ ಪ್ರಶ್ನೆ ಮಾಡಲು ಪ್ರಾರಂಭ ಮಾಡಿದ್ದಾರೆ. ಮಹದಾಯಿ ಮತ್ತು ಕಾವೇರಿ ವಿಚಾರದಲ್ಲಿ ಸರಕಾರದ ವಿಳಂಬ ನೀತಿ ಮುಂದುವರೆಸಿದರೆ ನಾವೇ ಅಡಿಗಲ್ಲು ಹಾಕಿ ಕಾಮಗಾರಿಯನ್ನು ಪ್ರಾರಂಭ ಮಾಡುವುದಾಗಿ ಸರಕಾರಕ್ಕೆ ಎಚ್ಚರಿಕೆ ನೀಡಿದರು. ಆ.27ರಂದು ಸಾರಿಗೆ ನೌಕರರ ಸಭೆ ಕೊರೊನಾ ಎರಡನೇ ಅಲೆಯನ್ನು ತಾತ್ಕಾಲಿಕವಾಗಿ ತಡೆಹಿಡಿದಿರುವ ಸರಕಾರ. ಸಾರಿಗೆ ನೌಕರರೊಂದಿಗೆ ಮಲತಾಯಿ ಧೋರಣೆ ಮುಂದುವರೆಸಿದ್ದಾರೆ. ಆ.27ರಂದು ಸಾರಿಗೆ ನೌಕರರ ಸಭೆ ಕರೆಯಲಾಗಿದ್ದು, ಸೆ.6ರಿಂದ ಯಾವ ರೀತಿ ಹೋರಾಟ ಮಾಡಬೇಕೆಂಬ ಚರ್ಚೆ ನಡೆಸಲಾಗುವುದು ಎಂದು ಕೋಡಿಹಳ್ಳಿ ಹೇಳಿದರು. ಸಾರಿಗೆ ನೌಕರರಿಗೆ ಪ್ರಮುಖ ಬೇಡಿಕೆಯನ್ನು ಯಡಿಯೂರಪ್ಪ ನೇತೃತ್ವದ ಸರಕಾರದಲ್ಲಿಯೇ ಈಡೇರಿಸುವುದಾಗಿ ಭರವಸೆ ನೀಡಿದ್ದರು. ಆದರೆ ಪ್ರತಿಭಟನೆಯಲ್ಲಿ ಗುರುತಿಸಿಕೊಂಡವರಿಗೆ ಸರಕಾರ ಅವರನ್ನು ಕೆಲಸದಿಂದ ವಜಾ ಮಾಡಿದ್ದು ಖಂಡನೀಯ. ಈ ಮೂಲಕ ಸರಕಾರ ತಪ್ಪು ನಿರ್ಧಾರ ಕೈಗೊಂಡಿತು. ಖಾಸಗಿ ಸಂಸ್ಥೆಯನ್ನು ಉದ್ದಾರ ಮಾಡುವಲ್ಲಿ ಸಂಘಟನಾ ಶಕ್ತಿಯನ್ನು ಹತ್ತಿಕ್ಕುವ ಹುನ್ನಾರ ಸರಕಾರ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕೃಷಿ ಮಸೂದೆ ತಡೆ ಹಿಡಿಯಿರಿ ಕೃಷಿ ಮಸೂದೆಯ ಕುರಿತು ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ತಿಳುವಳಿಕೆ ಹೇಳಿದ್ದರೂ ಕೃಷಿ ಮಸೂದೆ ಅಂಗಿಕಾರ ಮಾಡಿರುವುದು ದುರ್ದೈವದ ಸಂಗತಿ. ಕೇಂದ್ರ ಜಾರಿ ಮಾಡಿರುವ ಮೂರು ತಿದ್ದುಪಡಿ ಕೃಷಿ ಮಸೂದೆಗಳನ್ನು ಈ ಹಿಂದಿನ ಯಡಿಯೂರಪ್ಪ ಸರಕಾರ ರಾಜ್ಯದಲ್ಲೂ ಅನುಷ್ಠಾನಕ್ಕೆ ತಂದಿದೆ. ಅದನ್ನು ತಡೆ ಹಿಡಿಯುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೂ ಪತ್ರ ಬರೆಯಲಾಗಿದೆ ಎಂದರು. ಹೆಸರಿಗಷ್ಟೆ ಶಕ್ತಿಸೌಧಬೆಳಗಾವಿಯ ಸುವರ್ಣವಿಧಾನ ಸೌಧವನ್ನು ಹೆಸರಿಗಷ್ಟೆ ಶಕ್ತಿಸೌಧವಾಗಿಟ್ಟಿದ್ದಾರೆ. ಇಲ್ಲಿ ಅಧಿವೇಶನ ನಡೆಸಿದರೆ ಪ್ರತಿಭಟನೆಗಳ ಬಿಸಿ ತಟ್ಟುತ್ತದೆ ಎಂದು ಸರಕಾರಗಳು ಸುವರ್ಣವಿಧಾನ ಸೌಧದಲ್ಲಿ ಅಧಿವೇಶ ನಡೆಸುತ್ತಿಲ್ಲ. ಉತ್ತರ ಕರ್ನಾಟಕದವರೇ ಆದ ಸಿಎಂ ಬಸವರಾಜ್ ಬೊಮ್ಮಾಯಿ ಅವರಿಗೆ ಉತ್ತರ ಕರ್ನಾಟಕದ ಬಗ್ಗೆ ನಿಜವಾದ ಕಳಕಳಿ ಇದ್ದರೆ ಇಲ್ಲಿಯೇ ಅಧಿವೇಶನ ನಡೆಸಲಿ ಎಂದು ಕೋಡಿಹಳ್ಳಿ ಚಂದ್ರಶೇಖರ ಸವಾಲು ಹಾಕಿದರು.
from India & World News in Kannada | VK Polls https://ift.tt/3kqah7M