ಸೈಬರ್‌ ಖದೀಮರ ಬೆನ್ನತ್ತಿ ₹55.22 ಕೋಟಿ ವಸೂಲಿ; ನೀವು ವಂಚನೆಗೊಳಗಾಗಿದ್ರೆ ಇನ್ಮುಂದೆ ಚಿಂತೆ ಬೇಡ!

ಶಿವಾನಂದ ಹಿರೇಮಠ ಬೆಂಗಳೂರು: ಆನ್‌ಲೈನ್‌ ವಂಚನೆ ಜಾಲಕ್ಕೊಳಗಾಗಿ ಹಣ ಕಳೆದುಕೊಂಡವರು ವ್ಯಥೆ ಪಡುವ ಕಾಲ ಈಗ ದೂರವಾಗಿದೆ. ಸೈಬರ್‌ ಖದೀಮರ ಬೆನ್ನತ್ತಿರುವ ಬೆಂಗಳೂರು ಪೊಲೀಸರು ಕಳೆದ 7 ತಿಂಗಳಲ್ಲಿ55.22 ಕೋಟಿ ಹಣ ವಸೂಲಿ ಮಾಡಿದ್ದಾರೆ. ಇದುವರೆಗೆ ದಾಖಲಾದ 5497 ಪ್ರಕರಣಗಳಲ್ಲಿ 3326 ಪ್ರಕರಣಗಳನ್ನು ಪೊಲೀಸ್‌ ಇಲಾಖೆ ಪರಿಹರಿಸಿದೆ. ಇತ್ತೀಚೆಗೆ ಆರಂಭಿಸಿರುವ 'ಗೋಲ್ಡನ್‌ ಅವರ್‌' ಯೋಜನೆಯಿಂದಾಗಿ ಇದೆಲ್ಲವೂ ಸಾಧ್ಯವಾಗಿದೆ. ರಾಜ್ಯಾದ್ಯಂತ ಈ ಯೋಜನೆ ವಿಸ್ತರಿಸುವ ವ್ಯವಸ್ಥೆ ರೂಪುಗೊಳ್ಳುತ್ತಿದ್ದು, ಸದ್ಯದಲ್ಲಿಯೇ ಕೇಂದ್ರಿಕೃತ ಗೋಲ್ಡನ್‌ ಅವರ್‌ ವ್ಯವಸ್ಥೆ ಇತರೆ ಜಿಲ್ಲೆಗಳಿಗೂ ವಿಸ್ತರಣೆಯಾಗಲಿದೆ. ಸೈಬರ್‌ ಖದೀಮರು ಹೊಸಹೊಸ ರೂಪದಲ್ಲಿ ವಂಚನೆ ಮಾಡುತ್ತಿದ್ದಾರೆ. ಇದು ವಂಚಕರ ಕೃತ್ಯ ಎಂಬುದು ಅರಿವಿಗೆ ಬರುವುದು ಹಣ ಕಳೆದುಕೊಂಡ ಬಳಿಕವಷ್ಟೇ. ವಂಚಕರು ಉತ್ತರ ಭಾರತದ ಯಾವುದೋ ಒಂದು ಹಳ್ಳಿಯಲ್ಲಿ ಕುಳಿತು ವಂಚನೆ ಮಾಡುತ್ತಿರುವುದು ಇದುವರೆಗಿನ ಪ್ರಕರಣಗಳಲ್ಲಿ ಪತ್ತೆಯಾಗಿದೆ. ಕೇಸು ಬೆನ್ನತ್ತಿ ಹೋದ ಸಂದರ್ಭದಲ್ಲಿ ಪೊಲೀಸರಿಗೆ ಯಾಮಾರಿಸಿ ಅವರು ನಾಪತ್ತೆಯಾಗುತ್ತಿದ್ದರು. ಕೋವಿಡ್‌ ಲಾಕ್‌ಡೌನ್‌ ಬಳಿಕ ಸೈಬರ್‌ ವಂಚನೆ ಕೇಸುಗಳ ಸಂಖ್ಯೆ ಏರಿಕೆಯಾಗಿದೆ. ಅಮಾಯಕರನ್ನು ನಾನಾ ರೂಪದಲ್ಲಿ ವಂಚನೆ ಮಾಡಲಾಗುತ್ತಿದೆ. ಕಳೆದ ಏಳು ತಿಂಗಳಲ್ಲಿ ಬೆಂಗಳೂರು ನಗರದಲ್ಲೇ 5497 ಕೇಸುಗಳು ದಾಖಲಾಗಿವೆ. ಇದರಲ್ಲಿ ಬೆಂಗಳೂರು ದಕ್ಷಿಣದಲ್ಲೇ ಅತಿ ಹೆಚ್ಚು ಕೇಸು ದಾಖಲಾಗಿವೆ ಎಂದು ಪೊಲೀಸರು ಹೇಳುತ್ತಾರೆ. ದೂರು ದಾಖಲಿಸುವುದು ಹೇಗೆ?ಹಣ ಕಳೆದುಕೊಂಡ ಗಂಟೆಯೊಳಗೆ ದೂರು ದಾಖಲಿಸಿದರೆ ಪೊಲೀಸ್‌ ತನಿಖೆಗೆ ಅನುಕೂಲವಾಗುತ್ತದೆ. ಹೀಗಾಗಿ ವಂಚನೆಗೊಳಗಾದ ತಕ್ಷಣವೇ ಪೊಲೀಸ್‌ ಸಹಾಯವಾಣಿ 112ಕ್ಕೆ ಕರೆ ಮಾಡಿದರೆ ಯಾವ ಕೇಸು ದಾಖಲಿಸಬೇಕು ಎಂದು ಕೇಳಲಾಗುತ್ತದೆ. ಆಗ ನಂಬರ್‌ 3 ಅನ್ನು ಆಯ್ಕೆ ಮಾಡಿಕೊಂಡು ಸೈಬರ್‌ ವಂಚನೆ ಕುರಿತು ಮಾಹಿತಿ ನೀಡಬೇಕು. ಕಂಟ್ರೋಲ್‌ ರೂಂ ಸಿಬ್ಬಂದಿ ಕೇಳುವ ಎಲ್ಲ ಮಾಹಿತಿಗಳನ್ನು ಒದಗಿಸಬೇಕು. ಆನಂತರ ನಿಮ್ಮ ಮೊಬೈಲ್‌ಗೆ ಲಿಂಕ್‌ ಮತ್ತು ಒಟಿಪಿ ಹೊಂದಿರುವ ಸಂದೇಶ ಬರುತ್ತದೆ. ಲಿಂಕನ್ನು ಒತ್ತುವುದರಿಂದ ಇಲಾಖೆಗೆ ದೂರದಾರರು ನೀಡಿದ ಮಾಹಿತಿ ಲಭ್ಯವಾಗುತ್ತವೆ. ಮಾಹಿತಿಗಳು ಸರಿ ಇದ್ದರೆ ಒಟಿಪಿ ಸಂಖ್ಯೆ ದಾಖಲಿಸಬೇಕು. ತದನಂತರ ದೂರು ದಾಖಲಾದ ಬಗ್ಗೆ ಅಧಿಕೃತ ಸಿಐಆರ್‌ (ಸೈಬರ್‌ ಅಪರಾಧ ಘಟನಾ ವಿವಿರ) ದಾಖಲಾಗುತ್ತದೆ. ಈ ಬಗ್ಗೆ ದೂರುದಾರರಿಗೂ ಸಂದೇಶ ರವಾನೆ ಆಗುತ್ತದೆ. ಪೊಲೀಸ್‌ ಕಾರ್ಯಾಚರಣೆ ಹೇಗೆ?ದೂರು ನೀಡಿದ ನಿವಾಸಿ ಹತ್ತಿರದ ಪೊಲೀಸ್‌ ಠಾಣೆಯಲ್ಲಿ ಸಿಐಆರ್‌ ಆಧರಿಸಿ ಎಫ್‌ಐಆರ್‌ ದಾಖಲಿಸಬೇಕು. ಪರ್ಯಾಯವಾಗಿ ಅದೇ ಸಮಯದಲ್ಲಿ ಸೈಬರ್‌ ಕ್ರೈಂ ವಿಭಾಗದ ಪೊಲೀಸರು ಕಾರ್ಯಾಚರಣೆ ಆರಂಭಿಸುತ್ತಾರೆ. ಆರ್‌ಬಿಐ ಆದೇಶದನ್ವಯ ಸರಕಾರಿ ಸ್ವಾಮ್ಯದ ಹಾಗೂ ಖಾಸಗಿ ಬ್ಯಾಂಕ್‌ಗಳಲ್ಲಿ ಸಂಶಯಾಸ್ಪದ ಹಣ ವರ್ಗಾವಣೆ ತಡೆಹಿಡಿಯಲು ಅವಕಾಶ ಕಲ್ಪಿಸಲಾಗಿದೆ. ಇದೇ ನಿಯಮನುಸಾರ ಆರ್‌ಬಿಐ ಸಹಕಾರದೊಂದಿಗೆ ಹಣ ವರ್ಗಾವಣೆ ಆಗಿರುವ ಬ್ಯಾಂಕ್‌ ಖಾತೆ ಪತ್ತೆ ಹಚ್ಚಿ, ಆ ಖಾತೆಯನ್ನು ತಡೆ ಹಿಡಿಯಲು ಬ್ಯಾಂಕ್‌ ಅಧಿಕಾರಿಗಳಿಗೆ ತಿಳಿಸಲಾಗುತ್ತದೆ. ಈ ಸಂದರ್ಭದಲ್ಲಿ ಪೂರಕ ಮಾಹಿತಿಯನ್ನು ಪೊಲೀಸ್‌ ಸಿಬ್ಬಂದಿ ಬ್ಯಾಂಕ್‌ ಅಧಿಕಾರಿಗೆ ಸಲ್ಲಿಸಬೇಕು. ತನಿಖೆ ಮುಕ್ತಾಯಗೊಳ್ಳುವವರೆಗೂ ತಡೆ ಹಿಡಿದ ಖಾತೆ ಆ್ಯಕ್ಟಿವ್‌ ಆಗದು. ಹೀಗಾಗಿ, ಹಣ ವರ್ಗಾಯಿಸಿಕೊಂಡರೂ, ಸೈಬರ್‌ ವಂಚಕರಿಗೆ ಡ್ರಾ ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. ಈ ಹಂತದಲ್ಲಿಯೇ ಶೇ. 50 ರಷ್ಟು ಕಾರ್ಯಾಚರಣೆ ಯಶಸ್ವಿ ಆಗಿರುತ್ತದೆ. ಇದೇ ಆಧಾರದ ಮೇಲೆಯೇ ಬೆಂಗಳೂರಿನ ಪೊಲೀಸರು ಸಾವಿರಾರು ಕೇಸುಗಳನ್ನು ತ್ವರಿತವಾಗಿ ಬೆನ್ನತ್ತಲು ಸಾಧ್ಯವಾಗಿದೆ. ಮರು ಪಾವತಿ ಹೇಗೆ?ಸಿಐಆರ್‌ ಆಧರಿಸಿ ಎಫ್‌ಐಆರ್‌ ದಾಖಲಿಸಿದ ಪೊಲೀಸ್‌ ಠಾಣೆಗೆ ಬ್ಯಾಂಕ್‌ ಖಾತೆ ತಡೆಹಿಡಿದ ಬಗ್ಗೆ ಸೈಬರ್‌ ವಿಭಾಗದ ಮೂಲಕ ದಾಖಲೆ ಸಲ್ಲಿಕೆ ಆಗುತ್ತದೆ. ವಂಚನೆಗೊಳಗಾದ ವ್ಯಕ್ತಿಯೂ ಹಣ ಕಳೆದುಕೊಂಡ ಬಗ್ಗೆ ದಾಖಲೆ ಸಲ್ಲಿಸಬೇಕು. ಆನಂತರ ನ್ಯಾಯಾಲಯದ ಮೂಲಕ ವ್ಯಕ್ತಿಗೆ ಹಣ ಲಭಿಸುತ್ತದೆ. ಏನಿದು ಗೋಲ್ಡನ್‌ ಅವರ್‌? ಹಣ ಕಳೆದುಕೊಂಡು ಒಂದು ಗಂಟೆಯೊಳಗೆ ಪೊಲೀಸ್‌ ಇಲಾಖೆಯ 112 ನಂಬರ್‌ಗೆ ಕರೆ ಮಾಡಿ ದೂರು ದಾಖಲಿಸಲು ರೂಪಿಸಿರುವ ವ್ಯವಸ್ಥೆಯೇ ಗೋಲ್ಡನ್‌ ಅವರ್‌. ಎಷ್ಟು ಸಾಧ್ಯವೋ ಅಷ್ಟು ಬೇಗ ದೂರು ದಾಖಲಾದರೆ ವಂಚಕರನ್ನು ಪತ್ತೆ ಮಾಡಬಹುದು. ಹಣ ಕಳೆದುಕೊಂಡ ಪ್ರಕರಣಗಳ ತನಿಖೆಗೆ ವೇಗ ನೀಡುವ ಉದ್ದೇಶದೊಂದಿಗೆ 2020 ಡಿ.23 ರಂದು ಈ ಯೋಜನೆ ಬೆಂಗಳೂರಿನಲ್ಲಿ ಆರಂಭವಾಗಿದೆ. ಈ ಯೋಜನೆಯನ್ನು ರಾಜ್ಯಾದ್ಯಂತ ವಿಸ್ತರಿಸಲು ಸಿದ್ಧತೆ ನಡೆದಿದೆ.


from India & World News in Kannada | VK Polls https://ift.tt/3gwiTIQ

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...