ನಾಗರಾಜು ಅಶ್ವತ್ಥ್, ಬೆಂಗಳೂರು ಗ್ರಾಮಾಂತರ ಬೆಂಗಳೂರು ಗ್ರಾಮಾಂತರ: ಬೆಂಗಳೂರು ಗ್ರಾಮಾಂತರ, ರಾಮನಗರ, ಕೋಲಾರ, ಚಿತ್ರದುರ್ಗ, ದಾವಣಗೆರೆ ಸೇರಿದಂತೆ ಬೆಸ್ಕಾಂ ವ್ಯಾಪ್ತಿಯ 8 ಜಿಲ್ಲೆಗಳಲ್ಲಿ ಪ್ರಾಬ್ಲಂ ನಿವಾರಣೆಗೆ ಸರ್ವಿಸ್ಚಾರ್ಜ್ ಬೇಡಿಕೆಯಿಡುತ್ತಿರುವ ಬಗ್ಗೆ ಗ್ರಾಹಕರಿಂದ ಆರೋಪಗಳು ಕೇಳಿಬಂದಿವೆ. ಪ್ರಮುಖವಾಗಿ ನೇಕಾರಿಕೆ ಅವಲಂಬಿತ ಕಾರ್ಯಪ್ರದೇಶಗಳಲ್ಲಿ ವಿದ್ಯುತ್ ಅನಿವಾರ್ಯವಾಗಿದ್ದು, ಇದನ್ನೇ ಬಂಡವಾಳವನ್ನಾಗಿಸಿಕೊಳ್ಳುವ ಬೆಸ್ಕಾಂನ ಕೆಲ ಸಿಬ್ಬಂದಿಗಳು 100ರಿಂದ 10ಸಾವಿರದವರೆಗೆ ಸರ್ವಿಸ್ ಚಾರ್ಜ್ ಪಡೆಯುತ್ತಿದ್ದಾರೆ. ಕೊಡಲಿಲ್ಲವೆಂದರೆ ತಡಬೆಸ್ಕಾಂ ಗ್ರಾಹಕರ ಸಹಾಯವಾಣಿ 1912ಗೆ ಕರೆ ಮಾಡಿದ ಕೂಡಲೇ ಸಮಸ್ಯೆ ನಿವಾರಣೆಗೆಂದು ಸ್ಥಳೀಯ ಕಚೇರಿಗೆ ವರ್ಗಾವಣೆ ಮಾಡಲಾಗುತ್ತದೆ. ಅಲ್ಲಿಂದ ಬೆಸ್ಕಾಂ ಸಿಬ್ಬಂದಿ ಸಮಸ್ಯೆ ಹುಡುಕಿ ಪರಿಹಾರವನ್ನು ಒದಗಿಸಬೇಕು. ಆದರೆ, ಕೆಲವೆಡೆ ಸಿಬ್ಬಂದಿ ಸ್ಥಳಕ್ಕೆ ಬಂದು ಸಮಸ್ಯೆ ನೋಡಿ ಹಣ ಕೊಡದಿದ್ದರೆ ನಾಳೆ, ನಾಡಿದ್ದು ಎಂದು ವಾಪಸಾಗುತ್ತಿದ್ದಾರೆ. ವಿದ್ಯುತ್ ಅನಿವಾರ್ಯವಿರುವ ಹಿನ್ನೆಲೆ ಜನರು ವಿಧಿಯಿಲ್ಲದೆ ಸಿಬ್ಬಂದಿಗೆ ಹಣ ನೀಡಿ, ಪರಿಹಾರ ಪಡೆದುಕೊಳ್ಳಬೇಕಾದ ಅನಿವಾರ್ಯ ಸ್ಥಿತಿ ನಿರ್ಮಾಣವಾಗಿದೆ. ವೋಲ್ಟೇಜ್ ವ್ಯತ್ಯಯ, ವಿದ್ಯುತ್ ಪೂರೈಕೆಯಲ್ಲಿ ತಾಂತ್ರಿಕ ಸಮಸ್ಯೆ, ಹೊಸ ವಿದ್ಯುತ್ ಪೋಲ್ ವ್ಯವಸ್ಥೆ, ಟ್ರಾನ್ಸ್ಫಾರಂ ಅಳವಡಿಕೆ ಸೇರಿದಂತೆ ನಾನಾ ಸಮಸ್ಯೆಗಳು ಏರ್ಪಟ್ಟಾಗ ಲೈನ್ಮನ್ಗಳು ಮಾಡಿದ್ದೇ ನಿಯಮ ಎಂಬಂತಾಗುತ್ತದೆ. ಫಲಕೊಡದ ಕುಂದುಕೊರತೆ ಸಭೆಬೆಸ್ಕಾಂನಿಂದ ಗ್ರಾಹಕ ಸ್ನೇಹಿ ವಾತಾವರಣ ನಿರ್ಮಾಣಕ್ಕೆಂದು ಪ್ರತಿ ತಿಂಗಳಿಗೊಮ್ಮೆ ಕುಂದುಕೊರತೆಗಳ ಸಭೆ ಆಯೋಜನೆ ಮಾಡಲಾಗುತ್ತದೆ. ಆದರೆ, ಈ ಸಭೆಗಳು ಕೇವಲ ನಾಮ್ ಕೇ ವಾಸ್ತೇಯೆಂಬಂತಾಗಿದೆ. ಮೂರು ಮತ್ತೊರ್ವರು ಮಾತ್ರ ಸಭೆಗಳಿಗೆ ಭೇಟಿ ನೀಡುತ್ತಿದ್ದು, ಸುಮ್ಮನೆ ಬಂದ ದಾರಿಯಲ್ಲಿ ಹಿಂದಿರುಗುವಂತಾಗಿದೆ. ಅಧಿಕಾರಿಗಳಿರುವ ದಿನ ಗ್ರಾಹಕರು ಬಂದಿರುವುದಿಲ್ಲ. ಗ್ರಾಹಕರಿದ್ದರೆ ಅಧಿಕಾರಿ, ಸಿಬ್ಬಂದಿಗಳಿರುವುದಿಲ್ಲ. ಹೀಗಿರುವಾಗ ಗ್ರಾಹಕರ ಮತ್ತು ಬೆಸ್ಕಾಂ ನಡುವೆ ಸೇತುವೆಯಾಗುವಂತಹ ವ್ಯವಸ್ಥೆಯೊಂದು ಜಾರಿಯಾಗಬೇಕಿದೆ. ಗ್ರಾಹಕರ ಸಮಸ್ಯೆಗಳನ್ನು, ದೂರುಗಳನ್ನು ಸ್ವೀಕರಿಸಲು ವಿನೂತನ ವ್ಯವಸ್ಥೆ ಅಳವಡಿಸಿದರೆ ಅನುಕೂಲ ಎನ್ನುವುದು ಜನರ ಆಶಯ. ಮಳೆಗಾಲದಲ್ಲಿ ಹೇಳತೀರದುಮಳೆಗಾಲ ಬಂತೆಂದರೆ ಕೆಲ ಭ್ರಷ್ಟ ಬೆಸ್ಕಾಂ ಸಿಬ್ಬಂದಿಗೆ ಸುಗ್ಗಿ ಬಂದಂತೆ. ನಗರ ಪ್ರದೇಶಗಳನ್ನು ಹೊರತುಪಡಿಸಿ, ಗ್ರಾಮಾಂತರ ಭಾಗದಲ್ಲಿಮಳೆಯಿಂದಾಗಿ ವಿದ್ಯುತ್ ಸಮಸ್ಯೆಗಳು ಎದುರಾದರೆ ಮೂರ್ನಾಲ್ಕು ದಿನಗಳು, ವಾರ ಕಳೆದರು ಪರಿಹಾರ ಸಿಗುವುದಿಲ್ಲ. ಗಾಳಿ, ಮಳೆಗೆ ವಿದ್ಯುತ್ ಕಂಬಗಳು ಧರೆಗುರುಳಿ ಹಳ್ಳಿಗಳಿಗೆ ವಿದ್ಯುತ್ ಸಂಪರ್ಕ ಕಡಿತಗೊಳ್ಳುತ್ತದೆ. ಈ ಸಮಸ್ಯೆಗಳಿಗೆ ಇಡೀ ಒಂದು ಹಳ್ಳಿಯಿಂದ ಪ್ರತಿ ಮನೆಗಿಷ್ಟು ಎಂಬಂತೆ ಹಣ ಸಂಗ್ರಹಕ್ಕೆ ಮುಂದಾಗುವ ಬೆಸ್ಕಾಂ ಸಿಬ್ಬಂದಿಯಿದ್ದಾರೆ. ವಿದ್ಯುತ್ ಮಗ್ಗಗಳಿರುವ ತಾಲೂಕುಗಳಲ್ಲಿ ಟ್ರಾನ್ಸ್ಫಾರಂ, ವಿದ್ಯುತ್ ಕಡಿತ, ವಿದ್ಯುತ್ ಕಂಬದ ಅಳವಡಿಕೆಗೆ ಒಂದಿಡೀ ಪ್ರದೇಶದ ನೇಕಾರರು ಹಣ ಸಂಗ್ರಹಿಸಿ 5ರಿಂದ 10ಸಾವಿರ ಹಣವನ್ನು ಕೊಡಬೇಕಾದ ದುಸ್ಥಿತಿಯಿದೆ. ದೂರು ನೀಡಿದರು ಸಮಸ್ಯೆಗೆ ಪರಿಹಾರ ಸಿಗದಂತಾಗಿದೆ ಎನ್ನುವುದು ನೇಕಾರ ಮುಖಂಡ ಪಿ.ಎ. ವೆಂಕಟೇಶ್ ಆರೋಪ. ಚಿಕ್ಕಸಮಸ್ಯೆಗಳಿಗೆ 100ರೂ.ನಿಂದ ಸಮಸ್ಯೆಯ ಗಂಭೀರತೆ ಅನುಸರಿಸಿ ಸಾವಿರಾರು ರೂ.ವರೆಗೆ ಬೆಸ್ಕಾಂ ಸಿಬ್ಬಂದಿ ಹಣಕ್ಕಾಗಿ ಬೇಡಿಕೆಯಿಡುತ್ತಿದ್ದಾರೆ. ಹಣ ಕೊಡದಿದ್ದರೆ ವಿನಾಕಾರಣ ಸಮಸ್ಯೆ ಜೀವಂತವಾಗಿ ಉಳಿಯುತ್ತದೆ. ರಮೇಶ್ರೆಡ್ಡಿ, ದೊಡ್ಡಬಳ್ಳಾಪುರ ನಿವಾಸಿ ಬೆಸ್ಕಾಂ ಸಿಬ್ಬಂದಿಗೆ ಗ್ರಾಹಕರ ಸಮಸ್ಯೆಗಳ ನಿವಾರಣೆಗೆಂದೇ ವೇತನ ನೀಡಲಾಗುತ್ತಿದ್ದು, ಹಣ ವಸೂಲಿಗೆ ಮುಂದಾಗುವ ಬಗ್ಗೆ ಗ್ರಾಹಕರು ನೇರವಾಗಿ ದೂರು ದಾಖಲಿಸಬಹುದಾಗಿದೆ. ಹಣಕ್ಕಾಗಿ ಒತ್ತಾಯಿಸಿ, ಬಗೆಹರಿಸುವಲ್ಲಿ ತಡಮಾಡುವ ಸಿಬ್ಬಂದಿ ಬಗ್ಗೆ ಮಾಹಿತಿ ನೀಡಿದರೆ ಕೂಡಲೇ ಭ್ರಷ್ಟ ಸಿಬ್ಬಂದಿ ಅಮಾನತು ಮಾಡಲಾಗುತ್ತದೆ. ಗಂಗಾಧರ್, ಕಾರ್ಯನಿರ್ವಾಹಕ ಎಂಜಿನಿಯರ್, ಬೆಸ್ಕಾಂ
from India & World News in Kannada | VK Polls https://ift.tt/38a8KxQ