
ಚಿಕ್ಕಮಗಳೂರು: ಗ್ರಾಮ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷ ಗಾದಿಯ ಮೀಸಲು ಪ್ರಕಟವಾಗಿದ್ದೇ ತಡ, ಕೆಲ ಗ್ರಾ.ಪಂ. ಸದಸ್ಯರು ಪಕ್ಕದ ಮನೆಯವರಿಗೂ ತಿಳಿಯದ ಹಾಗೆ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದಾರೆ. ಶಾಸಕರು ಮಾರ್ಗ ಹಾಕಿಕೊಟ್ಟಿರುವ ರೆಸಾರ್ಟ್ ರಾಜಕಾರಣಕ್ಕೆ ಇಲ್ಲವೆ ಪುಕ್ಕಟೆಯಾಗಿ ಧಾರ್ಮಿಕ ಕೇಂದ್ರ, ಪ್ರವಾಸಿ ತಾಣಗಳಲ್ಲಿ ಮೋಜುಮಸ್ತಿ ಮಾಡಲು ಹೋಗಿದ್ದಾರೆ ಎಂಬ ಗುಸುಗುಸು ಆರಂಭವಾಗಿದೆ. ಜಿಲ್ಲೆಯ ಕೆಲವು ಗ್ರಾಮ ಪಂಚಾಯಿತಿ ಸದಸ್ಯರು ಧಾರ್ಮಿಕ ಕೇಂದ್ರ ಮತ್ತು ಪ್ರವಾಸಿ ತಾಣಗಳಿಗೆ ತೆರಳಿದ್ದು ಖರ್ಚುವೆಚ್ಚವನ್ನೆಲ್ಲ ಅಧ್ಯಕ್ಷ ಆಕಾಂಕ್ಷಿಗಳು ಭರಿಸುತ್ತಿದ್ದಾರೆನ್ನಲಾಗಿದೆ. ಮತ್ತೆ ಕೆಲ ಆಕಾಂಕ್ಷಿಗಳು ಸ್ಥಳೀಯವಾಗಿ ಪ್ರಸಿದ್ಧಿ ಪಡೆದಿರುವ ಬಲಿಷ್ಠ ದೇವರ ಮೊರೆಹೋಗಿ ಸದಸ್ಯರಿಂದ ಆಣೆ, ಪ್ರಮಾಣ ಮಾಡಿಸಿ ಚುನಾವಣೆಯಲ್ಲಿ ತಮ್ಮನ್ನು ಕೈಬಿಡುವುದಿಲ್ಲ ಎಂಬ ಭರವಸೆ ಪಡೆಯುತ್ತಿದ್ದಾರೆ. ಮುಂಗಡ ಹಣ ನೀಡಿ ಉಳಿದದ್ದನ್ನು ಕೊಡುವುದಾಗಿ ಹೇಳಿ ದೇವಾಲಯದಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡಿರುವುದು ಬಹಿರಂಗ ಗುಟ್ಟಾಗಿದೆ. ಆಣೆ ಪ್ರಮಾಣದ ಧೈರ್ಯದಲ್ಲಿ ಸದಸ್ಯರನ್ನು ಸಾರ್ವಜನಿಕವಾಗಿ ಮುಕ್ತವಾಗಿ ಬಿಟ್ಟಿದ್ದರೆ, ಮತ್ತೆ ಕೆಲವರು ಪ್ರತಿಸ್ಪರ್ಧಿ ಯಾವ ಸಂದರ್ಭದಲ್ಲಿ ಯಾವ ದಾಳ ಉರುಳಿಸಬಹುದು ಎಂಬ ಆತಂಕದಲ್ಲಿ ಗುಟ್ಟಾಗಿ ವಸತಿ ಗೃಹ ಅಥವಾ ಹೋಂಸ್ಟೇಗಳಲ್ಲಿ ಬಂಧಿಯಾಗಿಸಿದ್ದಾರೆ. ತಾಲೂಕಿನ ಕೂದುವಳ್ಳಿ ಗ್ರಾಮ ಪಂಚಾಯಿತಿಯ 7 ಸದಸ್ಯರಲ್ಲಿ 6 ಸದಸ್ಯರ ಕುಟುಂಬ ಈಗಾಗಲೇ ಧಾರ್ಮಿಕ ಕೇಂದ್ರಗಳಿಗೆ ಪ್ರವಾಸ ಹೋಗಿದ್ದಾರೆ. ಆಡಂಬರ ಬಯಸದ ಅತೃಪ್ತ ಸದಸ್ಯರಿಗೆ ಕಾಫಿ ಎಸ್ಟೇಟ್ಗಳ ಕೂಲಿ ಲೈನಿನಲ್ಲಿ ಜಾಗದ ವ್ಯವಸ್ಥೆ ಮಾಡಿ, ಅವರ ಅಗತ್ಯತೆಗಳನ್ನು ಪೂರೈಸಲಾಗುತ್ತಿದೆ. ಮಠದಲ್ಲಿ ಬೀಡು ಉತ್ತರ ಕರ್ನಾಟಕ ಭಾಗದ ಗ್ರಾಮ ಪಂಚಾಯಿತಿ ಸದಸ್ಯರು ಚಿಕ್ಕಮಗಳೂರು ಜಿಲ್ಲೆಯ ಕೆಲವು ಪ್ರಸಿದ್ಧ ಧಾರ್ಮಿಕ ಕೇಂದ್ರಗಳಲ್ಲಿ ಬೀಡುಬಿಟ್ಟಿದ್ದಾರೆ. ಸದ್ಯ ಯಾವುದೇ ಜಾತ್ರೆ, ಮಹೋತ್ಸವ ಇಲ್ಲದಿದ್ದರೂ ವಸತಿಗೃಹಗಳು ತುಂಬಿ ತುಳುಕುತ್ತಿವೆ. ಪಕ್ಷಗಳ ಸ್ಥಳೀಯ ಮುಖಂಡರು ಅವರಿಗೆ ನೆರವಾಗಿದ್ದಾರೆ. ಮೀಸಲು ಯಾವುದೇ ಬಂದಿರಲಿ, ತಮ್ಮ ಪಕ್ಷದವವರೇ ಅಧ್ಯಕ್ಷರಾಗಬೇಕು ಎಂಬ ಹಠದಲ್ಲಿ ಕೆಲವು ಪಕ್ಷದ ಮುಖಂಡರು ಆಕಾಂಕ್ಷಿಗಳೊಂದಿಗೆ ಎಲ್ಲ ರೀತಿಯ ಕಾರ್ಯ ತಂತ್ರಗಳನ್ನು ಹೆಣೆಯುತ್ತಿದ್ದಾರೆ. ಕೆಲ ಸದಸ್ಯರು ಪಕ್ಷ ಯಾವುದಾದರೇನಂತೆ ಚುನಾವಣೆಯಲ್ಲಿ ಖರ್ಚು ಮಾಡಿದ್ದ ಹಣವಾದರೂ ವಾಪಸ್ ಬರುತ್ತದೆ ಎಂಬ ಆಸೆಯಿಂದ ಗಾಳಿ ಬೀಸಿದ ಕಡೆ ವಾಲುತ್ತಿದ್ದಾರೆ.
from India & World News in Kannada | VK Polls https://ift.tt/3caX6oV